'ಕೈ' ಹಿಡಿದ ಖೇಣಿ, ಬೀದರ್ ದಕ್ಷಿಣದ ರಾಜಕೀಯ ಚಿತ್ರಣ ಬದಲು!
ಬೀದರ್, ಮಾರ್ಚ್ 06 : ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದಾರೆ. ಇದರಿಂದಾಗಿ ಬೀದರ್ ದಕ್ಷಿಣ ಕ್ಷೇತ್ರದ ಚುನಾವಣಾ ಕಣದ ಚಿತ್ರಣ ಬದಲಾಗಿದೆ. ಜಿಲ್ಲಾ ಕಾಂಗ್ರೆಸ್ ನಾಯಕರು ಖೇಣಿ ಅವರನ್ನು ವಿರೋಧಿಸುತ್ತಿದ್ದರೂ ಅನಿವಾರ್ಯವಾಗಿ ಅವರನ್ನು ಒಪ್ಪಿಕೊಳ್ಳಬೇಕಾಗಿದೆ.
ಕ್ಷೇತ್ರ ಪರಿಚಯ : 'ನೈಸ್' ಮುಖ್ಯಸ್ಥರನ್ನು ಗೆಲ್ಲಿಸಿದ ಕ್ಷೇತ್ರವಿದು!
ಅಶೋಕ್ ಖೇಣಿ ಕಾಂಗ್ರೆಸ್ ಸೇರಲು ಬೀದರ್ ಜಿಲ್ಲಾ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ವಿರೋಧಿಸಲು ಸಾಧ್ಯವಾಗದೇ ಒಪ್ಪಿಕೊಂಡಿದ್ದಾರೆ.
'ಕೈ' ಹಿಡಿದ ಖೇಣಿ, ಕಾಂಗ್ರೆಸ್ ಕಾಲೆಳೆದ ಟ್ವಿಟ್ಟಿಗರು!
ಇಷ್ಟು ದಿನ ಅಶೋಕ್ ಖೇಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜಿಲ್ಲಾ ನಾಯಕರು ಈಗ ಅವರನ್ನು ಅಭ್ಯರ್ಥಿ ಎಂದು ಒಪ್ಪಿಕೊಳ್ಳಬೇಕಾಗಿದೆ. ಅಶೋಕ್ ಖೇಣಿ ಅವರ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಜಿಲ್ಲೆ ಮತ್ತು ಬೀದರ್ ದಕ್ಷಿಣ ಕ್ಷೇತ್ರದ ಚುನಾವಣಾ ಕಣದ ಚಿತ್ರಣ ಬದಲಾಗಿದೆ.
ಕಾಂಗ್ರೆಸ್ ಸೇರಿದ ನೈಸ್ ಮುಖ್ಯಸ್ಥ ಅಶೋಕ್ ಖೇಣಿ
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಅಳಿಯ ಚಂದ್ರಾಸಿಂಗ್ ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪ್ರಚಾರ ಕಾರ್ಯವನ್ನು ಆರಂಭಿಸಿದ್ದರು. ಆದರೆ, ಖೇಣಿ ಸೇರ್ಪಡೆಯಿಂದಾಗಿ ಟಿಕೆಟ್ ಕೈ ತಪ್ಪಿದೆ. ಇದರಿಂದಾಗಿ ಧರಂಸಿಂಗ್ ಅವರ ಕುಟುಂಬ ಅಸಮಾಧಾನಗೊಂಡಿದೆ...
ಚಂದ್ರಾಸಿಂಗ್ ಹೇಳುವುದೇನು?
'ನಾಲ್ಕೂವರೆ ವರ್ಷದಿಂದ ಅಶೋಕ್ ಖೇಣಿ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ಈಗ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡಲಾಗುತ್ತದೆ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆ ಮಾಡಿದಂತೆ ಆಗುವುದಿಲ್ಲವೇ?. ಯಾವ ಮುಖವಿಟ್ಟುಕೊಂಡು ಹೋಗಿ ಮತ ಕೇಳಬೇಕು?' ಎಂದು ಚಂದ್ರಾಸಿಂಗ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಇದುವರೆಗೂ ಗೆದ್ದಿಲ್ಲ
2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡನೆ ಬಳಿಕ ಬೀದರ್ ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಆದರೆ, ಎರಡು ಚುನಾವಣೆ ನಡೆದರೂ ಸಹ ಕಾಂಗ್ರೆಸ್ ಗೆದ್ದಿಲ್ಲ. ಒಂದು ಬಾರಿ ಜೆಡಿಎಸ್, ಮತ್ತೊಂದು ಸಲ ಕರ್ನಾಟಕ ಮಕ್ಕಳ ಪಕ್ಷದ ಅಶೋಕ್ ಖೇಣಿ ಜಯಗಳಿಸಿದ್ದಾರೆ.
2013ರ ಫಲಿತಾಂಶ
2013ರ ಚುನಾವಣೆಯಲ್ಲಿ ಅಶೋಕ್ ಖೇಣಿ ಜೆಡಿಎಸ್ ಪಕ್ಷದ ಬಂಡೆಪ್ಪ ಕಾಶೆಂಪುರ ಅವರನ್ನು 15,788 ಮತಗಳಿಂದ ಸೋಲಿಸಿದ್ದರು. ಅಶೋಕ್ ಖೇಣಿ 47,763 ಮತ, ಬಂಡೆಪ್ಪ ಕಾಶೆಂಪುರ 31,975 ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ಸಂಗ್ರಾಮ ಕೇವಲ 5,105 ಮತಗಳನ್ನು ಮಾತ್ರ ಪಡೆದಿದ್ದರು.
ಈಶ್ವರ ಖಂಡ್ರೆ ಮೌನ
ಧರಂಸಿಂಗ್ ನಿಧನದ ಬಳಿಕ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಹ ಅಶೋಕ್ ಖೇಣಿ ಪಕ್ಷ ಸೇರ್ಪಡೆ ವಿಚಾರದಲ್ಲಿ ಮೌನವಾಗಿದ್ದರು. ಚಂದ್ರಾಸಿಂಗ್ಗೆ ಬೆಂಬಲ ನೀಡಲಿಲ್ಲ ಎಂದು ಆರೋಪಿಸಲಾಗುತ್ತಿದೆ.
ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿದೆ
'ಅಶೋಕ್ ಖೇಣಿ ಅವರು ಕಾಂಗ್ರೆಸ್ ಸೇರಿದ್ದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ. ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳು ಸಿಗುವುದರಿಂದ ಅಭ್ಯರ್ಥಿ ಗೆಲುವು ಸುಲಭವಾಗಲಿದೆ' ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಬಸವರಾಜ ಜಾಬಶೆಟ್ಟಿ ಹೇಳಿದ್ದಾರೆ.