ಮಂಡ್ಯಕ್ಕೆ ಅಶೋಕ, ಬೆಂಗಳೂರಿಗೆ ಡಿವಿಎಸ್ ಬಿಜೆಪಿ ಲೆಕ್ಕಾಚಾರ!
ಬೆಂಗಳೂರು, ಸೆಪ್ಟೆಂಬರ್ 07 : ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಆರ್. ಅಶೋಕ. ಬೆಂಗಳೂರು ನಗರದ ರಾಜಕಾರಣವನ್ನು ಅವರು ಚೆನ್ನಾಗಿ ಬಲ್ಲರು. ನಗರದ ರಾಜಕೀಯದಲ್ಲಿ ಸಾಕಷ್ಟು ಪ್ರಭಾವನ್ನು ಅವರು ಹೊಂದಿದ್ದಾರೆ.
ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಿಸಲು ತಂತ್ರ ರೂಪಿಸಿರುವ ಕರ್ನಾಟಕ ಬಿಜೆಪಿ ಹೊಸ ಲೆಕ್ಕಾಚಾರವನ್ನು ಹಾಕಿದೆ. ಆರ್.ಅಶೋಕ ಮಂಡ್ಯಕ್ಕೆ ಹೋಗಲಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಬೆಂಗಳೂರಿನ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ?.
ಮಂಡ್ಯದಿಂದ ದೇವೇಗೌಡರ ಸ್ಪರ್ಧೆ, ಹೊಸ ಸುದ್ದಿಯೊಂದು ಬಂತು!
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ನ ಒಕ್ಕಲಿಗರ ಮತ ಬ್ಯಾಂಕ್ಗೆ ಲಗ್ಗೆ ಹಾಕಲು ಬಿಜೆಪಿ ತಂತ್ರ ರೂಪಿಸಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸಿ, ಗೆಲುವು ಸಾಧಿಸಲು ಆರ್.ಅಶೋಕ್ ಅವರನ್ನು ಮಂಡ್ಯಕ್ಕೆ ಕಳಿಸಲಾಗುತ್ತಿದೆ?.
ರಮ್ಯಾ-ಅಂಬರೀಶ್ ಜಗಳದಲಿ ಮಂಡ್ಯ ಕಾಂಗ್ರೆಸ್ ಮಟಾಷ್!
ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ. ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಶಾಸಕರು ಜಯಗಳಿಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ಪ್ರಾಬಲ್ಯ ಮುರಿಯಲು ಬಿಜೆಪಿ ಮುಂದಾಗಿದೆ.
ಚುನಾವಣೆ ಫಲಿತಾಂಶ : ಮಂಡ್ಯದಲ್ಲಿ ಶಕ್ತಿ ಪ್ರದರ್ಶಿಸಿದ ಜೆಡಿಎಸ್!
20 ಕ್ಷೇತ್ರಗಳ ಟಾರ್ಗೆಟ್
2019ರ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಬೇಕು ಎಂಬುದು ಹೈಕಮಾಂಡ್ ಕರ್ನಾಟಕ ಬಿಜೆಪಿ ನಾಯಕರಿಗೆ ನೀಡಿರುವ ಟಾರ್ಗೆಟ್. ಹಳೆ ಮೈಸೂರು ಭಾಗದಲ್ಲಿ ಪಕ್ಷ ಪ್ರಬಲವಾಗಿಲ್ಲ. ಈ ಭಾಗದಲ್ಲಿ ಗೆಲುವು ಸಾಧಿಸಿದರೆ ಮಾತ್ರ ಹೆಚ್ಚು ಸ್ಥಾನಗಳಿಸಲು ಸಾಧ್ಯ.
ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಸದರು ಇಲ್ಲ. ಈ ಕ್ಷೇತ್ರಗಳಲ್ಲಿ ಕಮಲ ಅರಳಿಸುವುದು ಬಿಜೆಪಿಯ ತಂತ್ರ. ಅದಕ್ಕಾಗಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಆರ್.ಅಶೋಕ್ ಅವರನ್ನು ಮಂಡ್ಯಕ್ಕೆ ಕಳಿಸಲಾಗುತ್ತಿದೆ.
ಮಂಡ್ಯದಿಂದ ಆರ್.ಅಶೋಕ ಸ್ಪರ್ಧೆ?
ಆರ್.ಅಶೋಕ ಅವರು ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಹಾಲಿ ಶಾಸಕರು. ಇದೇ ಕ್ಷೇತ್ರದಿಂದ ಸತತವಾಗಿ ಜಯಗಳಿಸುತ್ತಿರುವ ಅವರು ಉಪಮುಖ್ಯಮಂತ್ರಿಯೂ ಆಗಿದ್ದರು. ಆದರೆ, ಈಗ ಅವರು ಮಂಡ್ಯ ಜಿಲ್ಲೆಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆ?.
ಮಂಡ್ಯದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿದೆ. ಆದ್ದರಿಂದ, ಆರ್.ಅಶೋಕ ಅವರನ್ನು ಕ್ಷೇತ್ರದಿಂದ ಕಣಕ್ಕೆ ಇಳಿಸಿ ಒಕ್ಕಲಿಗರ ಮತ ಸೆಳೆಯುವುದು ಮತ್ತು ಜೆಡಿಎಸ್ ಪ್ರಾಬಲ್ಯ ಮುರಿಯುವುದು ಬಿಜೆಪಿಯ ತಂತ್ರವಾಗಿದೆ. 2014ರ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
ರಾಜ್ಯ ರಾಜಕಾರಣಕ್ಕೆ ಸದಾನಂದ ಗೌಡ?
ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ರಾಜ್ಯ ರಾಜಕಾರಣಕ್ಕೆ ವಾಪಸ್ ಅಗಲಿದ್ದಾರೆ?. ಅದಕ್ಕಾಗಿಯೇ ಅವರನ್ನು ಬೆಂಗಳೂರು ನಗರದ ಉಸ್ತುವಾರಿಯನ್ನಾಗಿ ನೇಮಿಸಲಾಗುತ್ತದೆ.
ಬೆಂಗಳೂರು ನಗರದಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಸೇರಿ ಮೂರು ಲೋಕಸಭಾ ಕ್ಷೇತ್ರಗಳಿವೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿಯ ಸಂಸದರಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಪುನಃ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಪಕ್ಷದ ಮುಂದಿರುವ ಸವಾಲು. ಈ ಜವಾಬ್ದಾರಿಯನ್ನು ಸದಾನಂದ ಗೌಡರಿಗೆ ನೀಡಲಾಗುತ್ತದೆ.
ಹೈಕಮಾಂಡ್ಗೆ ವರದಿ
ಸೆ.8 ಮತ್ತು 9ರಂದು ದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯಲಿದೆ. ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ತೆರಳಲಿದ್ದಾರೆ. ಆಗ ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ವರದಿ ನೀಡಲಿದ್ದಾರೆ.
ಈ ಸಮಯದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಮಾಡಿಕೊಂಡಿರುವ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಮಿತ್ ಶಾ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಅಭ್ಯರ್ಥಿಗಳ ಆಯ್ಕೆಯಾಗಿ ಪಕ್ಷದಿಂದಲೂ ಈಗಾಗಲೇ ಸಮೀಕ್ಷೆ ನಡೆಸಲಾಗುತ್ತಿದೆ. ಆರ್.ಅಶೋಕ ಅವರನ್ನು ಲೋಕಸಭೆ ಚುನಾವಣಾ ಕಣಕ್ಕಿಳಿಸುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಮಂಡ್ಯದಿಂದ ದೇವೇಗೌಡ ಸ್ಪರ್ಧೆ?
2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದ್ದರಿಂದ, ಅವರ ವಿರುದ್ಧ ಆರ್.ಅಶೋಕ ಕಣಕ್ಕಿಳಿಸಬೇಕು ಎಂಬುದು ಪಕ್ಷದ ತಂತ್ರ.
ಮಂಡ್ಯದಲ್ಲಿ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಶಿವರಾಮೇ ಗೌಡ ಸೇರಿದಂತೆ ಜೆಡಿಎಸ್ ನಾಯಕರ ದೊಡ್ಡ ಪಡೆಯೆ ಇದೆ.
ಆದರೆ, ಮಂಡ್ಯ ಬಿಜೆಪಿ ನಾಯಕರ ಕೊರತೆ ಎದುರಿಸುತ್ತಿದೆ. ಆದ್ದರಿಂದ, ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ಇದು ಪುನರಾವರ್ತನೆ ಆಗಬಾರದು ಎಂಬುದು ಪಕ್ಷ ಆಶಯ.