ಫಾರಿನ್ ಟೂರ್ ನಿಂದ ಬಂದ ಸಿಎಂ ಬಿಎಸ್ವೈಗೆ ಸ್ವಲ್ಪ ಉಸಿರಾಡಕ್ಕಾದ್ರೂ ಬಿಡಿ
ಮನಸ್ಸಿಲ್ಲದ ಮನಸ್ಸಿನಿಂದ ಸ್ವಿಜರ್ಲ್ಯಾಂಡಿನ ದಾವೋಸ್ ಪ್ರವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನಿಯೋಗ, ಬೆಂಗಳೂರಿಗೆ ಶುಕ್ರವಾರ (ಜ 24) ಮಧ್ಯಾಹ್ನ ವಾಪಸ್ ಆಗಿದೆ.
ಮುಖ್ಯಮಂತ್ರಿಗಳು ಕೆಂಪೇಗೌಡ ವಿಮಾನನಿಲ್ದಾಣಕ್ಕೆ ಲ್ಯಾಂಡ್ ಆದ ಕೂಡಲೇ, ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆ ಗರಿಗೆದರಿದೆ. ಇನ್ನು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎನ್ನುವ ಮೂಲಕ ಯಡಿಯೂರಪ್ಪ, ಸಚಿವಸ್ಥಾನದ ಆಕಾಂಕ್ಷಿಗಳು ಧುತ್ತೆಂದು ಎದ್ದೇಳುವ ಹಾಗೇ ಮಾಡಿದ್ದಾರೆ.
ಬೆಂಗಳೂರಿಗೆ ಬರ್ತಿದ್ದಂತೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಯಡಿಯೂರಪ್ಪ
76ವರ್ಷದ ಯಡಿಯೂರಪ್ಪನವರದ್ದು ಹೋರಾಟದ ಬದುಕು. ಈ ಇಳಿವಯಸ್ಸಿನಲ್ಲೂ ಯುವಕರೂ ನಾಚಿಸುವಂತೆ ಸಕ್ರಿಯವಾಗಿರುವ ಬಿಎಸ್ವೈ, ಮತ್ತೆ, ರಾಜಕೀಯ ಜಂಜಾಟಕ್ಕೆ ತಮ್ಮನ್ನು ತಡಮಾಡದೇ ಒಗ್ಗಿಕೊಳ್ಳಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಬೆಂಬಲಕ್ಕೆ ನಿಂತು ಸೋತವರನ್ನು ಕೆರಳಿಸಿತಾ ಬಿಎಸ್ ವೈ ಆಡಿದ 'ಆ' ಮಾತು?
ಮುಖ್ಯಮಂತ್ರಿಗಳು ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಅವರನ್ನು ಸ್ವಾಗತಿಸುವ ನೆಪದಲ್ಲಿ ಬಿಜೆಪಿ ಮುಖಂಡರು, ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಾರೆ. ಹೊಸದಾಗಿ ಆಯ್ಕೆಯಾದ ಶಾಸಕರೂ ಮತ್ತು ಬಿಜೆಪಿಯ ಮೂಲ ಶಾಸಕರೂ ಇದರಲ್ಲಿದ್ದಾರೆ.
ಸುಮಾರು ಎಂಟು ಗಂಟೆ ಪ್ರಯಾಣ
ದಾವೋಸ್ ನಗರ ಬೆಂಗಳೂರಿನಿಂದ ಸುಮಾರು 7,500 (ವಿಕಿಪಿಡಿಯಾ ಮಾಹಿತಿಯ ಪ್ರಕಾರ) ಕಿಲೋಮೀಟರ್ ದೂರದಲ್ಲಿದೆ. ವಿಮಾನ ಪ್ರಯಾಣದ ಮೂಲಕ ಅಲ್ಲಿಂದ ಇಲ್ಲಿಗೆ ಬರಲು ಸುಮಾರು ಎಂಟು ಗಂಟೆ ಬೇಕು. ಸತತ ಪ್ರಯಾಣದ ನಂತರ ಸಿಎಂ ಇಂದು ಬೆಂಗಳೂರಿಗೆ ಆಗಮಿಸಿದ್ದಾಗಿದೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸ
ಬೆಂಗಳೂರಿನ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಯಡಿಯೂರಪ್ಪ ಆಗಮಿಸುತ್ತಿದ್ದಂತೆಯೇ ಸಿಎಂ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಸಿಎಂಗೆ ಒಂದರ್ಧ ದಿನ ವಿಶ್ರಾಂತಿ ಕೊಟ್ಟು, ನಾಳೆಯಿಂದ ಸಚಿವ ಸ್ಥಾನದ ಆಕಾಂಕ್ಷಿಗಳು ಕದತಟ್ಟಬಹುದು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ಯಡಿಯೂರಪ್ಪ ಮುಖದಲ್ಲಿ ಆಯಾಸ ಎದ್ದು ಕಾಣುತ್ತಿತ್ತು
ಪ್ರವಾಸದಿಂದ ವಾಪಸ್ ಆದ ಯಡಿಯೂರಪ್ಪ, ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ, ಅವರ ಮುಖದಲ್ಲಿ ಆಯಾಸ ಎದ್ದು ಕಾಣುತ್ತಿತ್ತು. ಆದರೆ, ಬಿಎಸ್ವೈ ಆಗಮನವಾದ ಕೂಡಲೇ, ಶಾಸಕರು/ಮುಖಂಡರು ಹೂಗುಚ್ಚ ಹಿಡಿದುಕೊಂಡು ಧವಳಗಿರಿಗೆ ಆಗಮಿಸುತ್ತಿದ್ದಾರೆ.
ದೆಹಲಿಗೆ ಮತ್ತೆ ಹೋಗುವ ಅವಶ್ಯಕತೆಯಿಲ್ಲ
"ದೆಹಲಿಗೆ ಮತ್ತೆ ಹೋಗುವ ಅವಶ್ಯಕತೆಯಿಲ್ಲ. ಅಮಿತ್ ಶಾ ಅವರ ಬಳಿ ಮಾತನಾಡಿದ್ದೇನೆ. ಸಂಪುಟ ವಿಸ್ತರಣೆ ಸದ್ಯದಲ್ಲೇ ನಡೆಯಲಿದೆ" ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೂ, ನೂತನ ಅಧ್ಯಕ್ಷ ಜೆ.ಪಿ,ನಡ್ಡಾ ಅವರನ್ನು ಅಭಿನಂದಿಸಲು ಬಿಎಸ್ವೈ ದೆಹಲಿಗೆ ಹೋಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಸಂಪುಟ ವಿಸ್ತರಣೆಯ ಜಂಜಾಟದಿಂದ ವಿದೇಶ ಪ್ರವಾಸದಿಂದ ಬಂದ ಸಿಎಂಗೆ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.