ಇಂದು ಮಧ್ಯರಾತ್ರಿಯಿಂದಲೇ ಲಾಕ್ಡೌನ್ ಸಡಿಲಿಸಿ ಹೊಸ ಮಾರ್ಗಸೂಚಿ
ಬೆಂಗಳೂರು, ಏ. 22: ಮಾರಣಾಂತಿಕ ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕಳೆದ ಮಾರ್ಚ್ 24 ರಿಂದ ಲಾಕ್ಡೌನ್ ಜಾರಿಯಲ್ಲಿದೆ. ಇದೀಗ ರಾಜ್ಯದಲ್ಲಿ ಲಾಕ್ಡೌನ್ಗೆ ಕೆಲವು ರಿಯಾಯತಿಗಳನ್ನು ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಲಾಕ್ಡೌನ್ ಸಡಿಲಗೊಳಿಸುವ ತೀರ್ಮಾನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇವತ್ತು ಮಧ್ಯರಾತ್ರಿಯಿಂದಲೇ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ. ರೆಡ್ ಜೋನ್, ಕಂಟೇನ್ಮೆಂಟ್ ಜೋನ್ ಹಾಗೂ ಕೊರೊನಾ ವೈರಸ್ ಹಾಟ್ಸ್ಪಾಟ್ ಪ್ರದೇಶಗಳಲ್ಲಿ ಲಾಕ್ಡೌನ್ ಸಡಿಲಿಕೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೆ ರಾಜ್ಯದಲ್ಲಿ ಲಾಕ್ಡೌನ್ ನಿಯಮಗಳು ಸಡಿಲವಾಗಲಿವೆ. ಆದರೆ ಜಿಲ್ಲಾ ಮಟ್ಟದಲ್ಲಿ ಮಾತ್ರ ನಿಯಮಗಳು ಸಡಿಲವಾಗಲಿದ್ದು ಅಂತರ್ ಜಿಲ್ಲಾ ಸಂಚಾರ, ಸಾರ್ವಜನಿಕ ಸಾರಿಗೆಗೆ ಅವಕಾಶವಿರುವುದಿಲ್ಲ. ಈ ಮಧ್ಯೆ ಕೊರೊನಾ ವೈರಸ್ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬರದೇ ಲಾಕ್ಡೌನ್ ಸಡಿಲಿಕೆ ಕುರಿತು ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಮೇ 3ರವರೆಗೆ ಧಾರಕ ವಲಯ(containment zone)ನಲ್ಲಿ ಲಾಕ್ಡೌನ್ ಮುಂದುವರೆಯಲಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯ ಪ್ರಕಾರ ರಾಜ್ಯದಲ್ಲಿ ಇವತ್ತು ಮಧ್ಯರಾತ್ರಿಯಿಂದ ಲಾಕ್ಡೌನ್ ಸಡಿಲಿಕೆಯಾಗಲಿದೆ. ಆದರೆ ಲಾಕ್ಡೌನ್ ಸಡಿಲಿಕೆ ಮಾಡುವ ಮುನ್ನ ಬಿಬಿಎಂಪಿ, ಆಯಾ ಜಿಲ್ಲಾಡಳಿತಗಳು ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ಅವರು ಆದೇಶದಲ್ಲಿ ಸೂಚಿಸಿದ್ದಾರೆ.
ಪ್ರಮುಖವಾಗಿ ದೇಶಿಯ ವಾಯುಯಾನ, ರೈಲು, ಸಾರ್ವಜನಿಕ ಬಸ್ ಸೇವೆ, ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಹೋಟೆಲ್ಗಳಲ್ಲಿ ಕುಳಿತು ಊಟ ಮಾಡಲು ಅವಕಾಶವಿಲ್ಲ, ಹೋಟೆಲ್ಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅನುಮತಿ. ಶಾಲಾ ಕಾಲೇಜುಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಎಸ್ಎಸ್ಎಲ್ಸಿ, PUC ಪರೀಕ್ಷೆ ಕುರಿತು ಯಾವುದೇ ತೀರ್ಮಾನವನ್ನು ಮಾಡಲಾಗಿಲ್ಲ. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ. ಕೇಬಲ್, ಡಿಟಿಹೆಚ್ ಆಪರೇಟರ್ಗಳು ಎಂದಿನಂತೆ ಕೆಲಸ ಮಾಡಬಹುದಾಗಿದೆ. ಸಧ್ಯ ಇರುವಂತೆಯೆ ಈಗಿನಂತೆಯೇ ತುರ್ತುಸ್ಥಿತಿಯಲ್ಲಿ ಬೇರೆ ಜಿಲ್ಲೆಗಳಿಗೆ ಹೋಗಲು ಪಾಸ್ ಅತ್ಯಗತ್ಯ ಬೇಕಾಗುತ್ತದೆ. ಆರೋಗ್ಯ ಸೇವೆಗಳು, ಇತರೆ ತುರ್ತು ಸೇವೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ.
ಬಹುಮುಖ್ಯವಾಗಿ ಮೇ 3ರವರೆಗೆ ಐಟಿ-ಬಿಟಿ ವಲಯಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ. ನೂತನ ಆದೇಶದಲ್ಲಿ ಐಟಿ-ಬಿಟಿ ವಲಯಕ್ಕೆ ವಿನಾಯಿತಿ ಕೊಟ್ಟಿಲ್ಲ. ಐಟಿ, ಬಿಟಿ ಕಂಪನಿಗಳಲ್ಲಿ ಶೇ.33ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಣೆಗೆ ಅವಕಾಶವಿರುವುದಿಲ್ಲ. ಬಸ್ ಸಂಚಾರ, ರೈಲು ಸಂಚಾರ, ಮೆಟ್ರೋ, ವಿಮಾನ ಸಂಚಾರ ಇರುವುದಿಲ್ಲ. ಆಟೋ, ಕ್ಯಾಬ್, ಚಿತ್ರಮಂದಿರ, ಮಾಲ್ಗಳು ತೆರೆಯುವುದಿಲ್ಲ. ಜೊತೆಗೆ ಮದ್ಯ ಮಾರಾಟ ಮೇ 3ರವರೆಗೆ ಸಂಪೂರ್ಣ ಬಂದ್ ಮಾಡಲು ಸೂಚಿಸಲಾಗಿದೆ. ಧಾರ್ಮಿಕ ಸಭೆ-ಸಮಾರಂಭಗಳು, ಸಾರ್ವಜನಿಕ ಹಾಗೂ ಖಾಸಗಿ ಪ್ರದೇಶಗಳಲ್ಲಿ ಜನಸಂದಣಿ ಸೇರಲು ನಿರ್ಬಂಧ ಮುಂದುವರೆದಿದೆ.
ಕೃಷಿ ಮತ್ತು ಮೀನುಗಾರಿಕೆ ವಲಯಕ್ಕೆ ಸಂಪೂರ್ಣ ಸಡಿಲಿಕೆ ಕೊಡಲಾಗಿದೆ. ರಸಗೊಬ್ಬರ, ಬಿತ್ತನೆ ಬೀಜ, ಔಷಧಿ ಪೂರೈಕೆಗೆ ನಿರ್ಬಂಧವಿರುವುದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡಲಾಗಿದ್ದು, ರಸ್ತೆ ನಿರ್ಮಾಣಕ್ಕೆ ಅಗತ್ಯವಸ್ತುಗಳ ಸಾಗಣೆಗೆ ನಿರ್ಬಂಧವನ್ನು ತೆರವು ಮಾಡಲಾಗಿದೆ. ಕಟ್ಟಡ, ರಸ್ತೆ ನಿರ್ಮಾಣ ವಸ್ತುಗಳ ಸಾಗಣೆಗೆ ಅನುಮತಿಯನ್ನು ಕೊಡಲಾಗಿದೆ.