ಯಾವುದೇ ಪ್ರಮುಖ ನಿರ್ಧಾರ ಬೇಡ: ಮುಖ್ಯಕಾರ್ಯದರ್ಶಿಗೆ ರಾಜ್ಯಪಾಲರ ಸೂಚನೆ?
ಬೆಂಗಳೂರು, ಜುಲೈ 10: ರಾಜ್ಯ ರಾಜಕೀಯದ ಅಸ್ಥಿರತೆ ಮತ್ತು ದೈನಂದಿನ ಬೆಳವಣಿಗೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯಪಾಲರು ವರದಿ ನೀಡುತ್ತಿದ್ದಾರೆ ಎನ್ನುವ ಮಾಹಿತಿಯ ನಡುವೆ, ರಾಜ್ಯಪಾಲರು ಮುಖ್ಯಕಾರ್ಯದರ್ಶಿಗೆ (ಚೀಫ್ ಸೆಕ್ರೆಟರಿ) ಮಹತ್ವದ ಸೂಚನೆ ನೀಡಿದ್ದಾರೆಂದು ವರದಿಯಾಗಿದೆ.
ತುರ್ತಾಗಿ ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಮಾತ್ರ ಗಮನಹರಿಸಿ ಮತ್ತು ಅದರ ಬಗ್ಗೆ ರಾಜಭವನಕ್ಕೆ ಮಾಹಿತಿ ನೀಡಬೇಕೆಂದು ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಕೀಯ ಅನಿಶ್ಚಿತತೆ: ಪ್ರತೀದಿನ ಅಮಿತ್ ಶಾಗೆ ರಾಜ್ಯಪಾಲರಿಂದ ವರದಿ
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪ್ರಮುಖ ಅಥವಾ ಭಾರೀ ಯೋಜನೆಗಳಿಗೆ ಅನುಮೋದನೆ ನೀಡುವಂತಿಲ್ಲ ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಈ ಸಂಬಂಧ ಸಭೆ ಸೇರುವುದು ಸೂಕ್ತವಲ್ಲ ಎನ್ನುವ ಸೂಚನೆಯನ್ನು ರಾಜ್ಯಪಾಲರು ನೀಡಿದ್ದಾರೆ ಎನ್ನಲಾಗುತ್ತಿದೆ.
ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ಹದಿಮೂರು ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದ, ಮೇಲ್ನೋಟಕ್ಕೆ ಈ ಸರಕಾರ ಅಲ್ಪಮತಕ್ಕೆ ಕುಸಿದಿರುವ ಸಾಧ್ಯತೆಯಿದೆ. ಹೀಗಾಗಿ, ಈ ಸಂದರ್ಭದಲ್ಲಿ ಪ್ರಮುಖ ನಿರ್ಧಾರಗಳು ಬೇಡ ಎಂದು ರಾಜ್ಯಪಾಲರು ಸೂಚಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಗಳವಾರ (ಜು 9) ಗೃಹ ಕಚೇರಿ ಕೃಷ್ಣಾದಲ್ಲಿ ನೀರಾವರಿ ನಿಗಮಗಳ ಸಭೆಯ ನಂತರ ಹಲವು ಶಾಸಕರ ಜೊತೆಗೆ ಅವರ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಚರ್ಚಿಸಿದ್ದರು. ಜಲ ಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರು ಉಪಸ್ಥಿತರಿದ್ದರು.
ರಾಜೀನಾಮೆ ನೀಡಿದ ಅತೃಪ್ತರು ರಾಜ್ಯಪಾಲರಿಗೆ ನೀಡಿದ ಸ್ಪೋಟಕ ಮಾಹಿತಿ
ಇದಾದ ನಂತರ, ಕೃಷ್ಣಾ ಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ ಹಾಗೂ ಕರ್ನಾಟಕ ನೀರಾವರಿ ನಿಗಮಗಳ ನಿರ್ದೇಶಕ ಮಂಡಳಿಯ ಸದಸ್ಯರ ಜೊತೆ ಸಿಎಂ ಸಭೆ ನಡೆಸಿದ್ದರು.
ಇದಕ್ಕೂ ಮೊದಲು, ಕುಮಾರಸ್ವಾಮಿ ಅವರು ಸೋಮವಾರ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಕುರಿತಂತೆ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದರು. ಸಕ್ಕರೆ ಸಚಿವ ಆರ್.ಬಿ ತಿಮ್ಮಾಪುರ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾ.ರಾ.. ಮಹೇಶ್, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಮಂಡ್ಯ ಜಿಲ್ಲೆಯ ಶಾಸಕರು, ರೈತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.