ರಾಜ್ಯ ಕಾಂಗ್ರೆಸ್ ಸಹವಾಸ ಸಾಕು: ರಾಹುಲ್ ಗೆ ಮೊರೆಯಿಟ್ಟ ಕೆ ಸಿ ವೇಣುಗೋಪಾಲ್?
Recommended Video
ಒಬ್ಬರನ್ನು ಹಾಗೋಹೀಗೋ ಸಮಾಧಾನ ಪಡಿಸಿ ಉಸ್ಸಪ್ಪಾ ಎಂದು ಕೂತಾಗ, ಇನ್ನೊಬ್ಬರಿಂದ ಅಸಮಾಧಾನದ ಹೊಗೆ. ಇನ್ನೊಂದು ಕಡೆ, ಸಮ್ಮಿಶ್ರ ಸರಕಾರಕ್ಕೆ ಕಾಂಗೆಸ್ಸಿನಿಂದ ಯಾವುದೇ ತೊಂದರೆ ಬರಬಾರದು ಎನ್ನುವ ಎಐಸಿಸಿ ಅಧ್ಯಕ್ಷರ ಕಟ್ಟುನಿಟ್ಟಿನ ಸೂಚನೆ.
ಮತ್ತೊಂದು ಕಡೆ, ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ ಪಕ್ಷದ ಲೆಕ್ಕಾಚಾರ. ಕಳೆದ ಕೆಲವು ವರ್ಷಗಳಿಂದ ರಾಜ್ಯ ಕಾಂಗ್ರೆಸ್ಸಿನ ಉಸ್ತುವಾರಿ ವಹಿಸಿಕೊಂಡಿರುವ ಕೆ ಸಿ ವೇಣುಗೋಪಾಲ್ ಗೆ ಸವಾಲಿನ ಮೇಲೆ ಸವಾಲು.
ಈ ಎಲ್ಲಾ ಕಿರಿಕಿರಿಗಳನ್ನು ಸರಿಪಡಿಸುತ್ತಾ ಸಾಗಲು ಇನ್ನು ನನ್ನಿಂದ ಸಾಧ್ಯವಿಲ್ಲ ಎಂದು ವೇಣುಗೋಪಾಲ್, ರಾಜ್ಯದ ಕಾಂಗ್ರೆಸ್ ಚಟುವಟಿಕೆಯಿಂದ ದೂರ ಸರಿಯಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕಾಂಗ್ರೆಸ್ನ 'ಟ್ರಬಲ್ ಶೂಟರ್' ಕೆ.ಸಿ. ವೇಣುಗೋಪಾಲ್ ವ್ಯಕ್ತಿಚಿತ್ರ
ತನ್ನ ಬಾಸ್ ರಾಹುಲ್ ಗಾಂಧಿಯ ಬಳಿ ತನ್ನ ಸಂಕಷ್ಟವನ್ನು ತೋಡಿಕೊಂಡಿರುವ ವೇಣುಗೋಪಾಲ್, ಉಸ್ತುವಾರಿ ಜವಾಬ್ದಾರಿಯಿಂದ ಕೆಳಗಿಳಿಸುವಂತೆ ಮನವಿ ಮಾಡಿದ್ದಾರೆಂದು ವರದಿಯಾಗಿದೆ.
ಕೆ ಸಿ ವೇಣುಗೋಪಾಲ್ ಅದೆಷ್ಟು ದಿನ ತಾಳ್ಮೆಯಿಂದ ಇರಲು ಸಾಧ್ಯ
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಮುಂತಾದ ವಿಚಾರಗಳಲ್ಲಿ, ದಿನಂಪ್ರತಿ ಒಂದಲ್ಲಾ ಒಂದು ಮುಜುಗರವನ್ನು ಎರಡೂ ಪಕ್ಷದ ಮುಖಂಡರು ಎದುರಿಸಿಕೊಂಡು ಬರುತ್ತಲೇ ಇದ್ದಾರೆ. ಇಂತಹ ಪ್ರತೀ ವಿದ್ಯಮಾನಕ್ಕೂ ದೆಹಲಿಯಿಂದ ಬೆಂಗಳೂರಿಗೆ ದೌಡಾಯಿಸುವ ಕೆ ಸಿ ವೇಣುಗೋಪಾಲ್ ಅದೆಷ್ಟು ದಿನ ತಾಳ್ಮೆಯಿಂದ ಇರಲು ಸಾಧ್ಯ ಎನ್ನುವುದು ಅವರನ್ನು ಪ್ರೀತಿಸುವ ಕೆಲವೇ ಕೆಲವರ ವಾದ.
ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಕಾರಣ ಮೂವರು.
ಕೆಲವೊಂದು ಮಾಹಿತಿಯ ಪ್ರಕಾರ, ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಕಾರಣ ಮೂವರು. ಒಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಉಸ್ತುವಾರಿ ವೇಣುಗೋಪಾಲ್. ಈ ಮೂವರಿಂದಲೇ ಪಕ್ಷಕ್ಕೆ ತೊಂದರೆ ಎನ್ನುವುದನ್ನು ಹಿರಿಯ ಕಾಂಗ್ರೆಸ್ ಮುಖಂಡರೇ ಬಹಿರಂಗವಾಗಿ ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ಬಹುತೇಕ ಅಂತಿಮ: ಈ ಇಬ್ಬರಲ್ಲಿ ಯಾರಿಗೆ ಪಟ್ಟ?
ವೇಣುಗೋಪಾಲ್ ಅವರನ್ನು ಬಫೂನ್ ಎಂದು ಜರಿದಿದ್ದ ಬೇಗ್
ಪಕ್ಷದ ಹಿರಿಯ ಮುಖಂಡ ರೋಶನ್ ಬೇಗ್ ಖುಲ್ಲಂಖುಲ್ಲಾ ದಿನೇಶ್, ಸಿದ್ದು ಮತ್ತು ವೇಣು ವಿರುದ್ದ ಕೆಲವೇ ಕೆಲವು ದಿನಗಳ ಹಿಂದೆ ತಿರುಗಿ ಬಿದ್ದಿದ್ದರು. ವೇಣುಗೋಪಾಲ್ ಅವರನ್ನು ಬಫೂನ್ ಎಂದು ಜರಿದಿದ್ದ ಬೇಗ್, ರಾಜ್ಯದಲ್ಲಿ ಪಕ್ಷದ ಇಂದಿನ ಸ್ಥಿತಿಗೆ ಈ ಮೂವರೇ ಕಾರಣ ಎಂದು ಹೇಳಿದ್ದರು. ನೀವು ಸಚಿವ ಸ್ಥಾನ ಕೊಟ್ಟರೂ, ನನಗೆ ಬೇಡವೆಂದಿದ್ದರು.
ಹಿರಿಯ ಕಾಂಗ್ರೆಸ್ಸಿಗರಿಂದ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಿಂದಲೇ ವಿರೋಧವಿತ್ತು
ವೇಣುಗೋಪಾಲ್ ಅವರ ಕಾರ್ಯವೈಖರಿಗೆ ಕೆಲವು ಹಿರಿಯ ಕಾಂಗ್ರೆಸ್ಸಿಗರಿಂದ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲೇ ವಿರೋಧವಿತ್ತು. ಅವರನ್ನು ಬದಲಿಸುವಂತೆ ಹೈಕಮಾಂಡಿಗೆ ಒತ್ತಡ ಹೇರುತ್ತಲೇ ಬರಲಾಗುತ್ತಿತ್ತು. ಹಿರಿಯರ ಒತ್ತಡಕ್ಕೆ ಏನಾದರೂ ಸಬೂಬ್ ಹುಡುಕಿ ಮುಂದೂಡಿಕೊಂಡು ಬರಲಾಗುತ್ತಿತ್ತು. ಈಗ ಖುದ್ದು ಕೆ ಸಿ ವೇಣುಗೋಪಾಲ್ ಅವರೇ ಕರ್ನಾಟಕ ಕಾಂಗ್ರೆಸ್ಸಿನಿಂದ ಮುಕ್ತಿಗೊಳಿಸುವಂತೆ ರಾಹುಲ್ ಗಾಂಧಿಯ ಹಿಂದೆ ಬಿದ್ದಿದ್ದಾರೆ ಎನ್ನುವ ಮಾಹಿತಿಯಿದೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಿಂದ ಮುಕ್ತಗೊಳಿಸಿ
ದಿನದಿಂದ ದಿನಕ್ಕೆ ಏನಾದರೂ ಸಮಸ್ಯೆ, ಭಿನ್ನಮತ ಕರ್ನಾಟಕ ಕಾಂಗ್ರೆಸ್ ಘಟಕದಲ್ಲಿ ಎದ್ದೇಳುತ್ತಲೇ ಇದೆ. ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವೇಣುಗೋಪಾಲ್ ಗೆ ಎರಡನ್ನೂ ನಿಭಾಯಿಸುವುದು ಕಷ್ಟವಾಗುತ್ತಿದೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಿಂದ ಮುಕ್ತಗೊಳಿಸಿ ಎಂದು ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.