ಹೊಸ ಬೇಡಿಕೆ: ಮಹಾರಾಷ್ಟ್ರದ ಸೊಲ್ಲಾಪುರ, ಜತ್ ಭಾಗ ಕರ್ನಾಟಕಕ್ಕೆ ಸೇರಬೇಕು
ಬೆಂಗಳೂರು, ನ 18: ಮಹಾರಾಷ್ಟ್ರದಲ್ಲಿ ತಮ್ಮ ಮಿತ್ರಪಕ್ಷ ಎನ್ಸಿಪಿ ಮುಖಂಡ ಮತ್ತು ಡಿಸಿಎಂ ಅಜಿತ್ ಪವಾರ್ ಹೇಳಿಕೆಯನ್ನು, ಕರ್ನಾಟಕ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. "ಕರ್ನಾಟಕದ ಒಂದಿಂಚೂ ಭಾಗವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ"ಎಂದು ಕೆಪಿಸಿಸಿ ಮುಖಂಡರು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಿದ್ದ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, "ಮಹಾಜನ್ ವರದಿಯ ಅನ್ವಯ ಸೊಲ್ಲಾಪುರ ಮತ್ತು ಜತ್ ಪ್ರದೇಶಗಳು ಕರ್ನಾಟಕಕ್ಕೆ ಸೇರ ಬೇಕಾಗುತ್ತದೆ. ಮಹಾರಾಷ್ಟ್ರ- ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ"ಎಂದು ಹೇಳಿದರು.
ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ: ಕಿಡಿ ಹಚ್ಚಿಸಿದ ಅಜಿತ್ ಪವಾರ್ಗೆ ಬಿಎಸ್ವೈ ತಿರುಗೇಟು
"ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆ ನೀಡುವುದನ್ನು ಅಜಿತ್ ಪವಾರ್ ನಿಲ್ಲಿಸಬೇಕು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ"ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಬೆಳಗಾವಿ - ಕಾರವಾರ ಸೇರಿದಂತೆ ಕರ್ನಾಟಕದ ಒಂದಿಂಚು ಭೂಮಿಯನ್ನೂ ಯಾರೂ ಪಡೆಯಲು ಸಾಧ್ಯವಿಲ್ಲ. ರಾಜಕೀಯ ತೆವಲಿಗಾಗಿ ಇಂತಹ ಹೇಳಿಕೆಯನ್ನು ಮಹಾರಾಷ್ಟ್ರ ಅಥವಾ ಯಾವುದೇ ಮುಖಂಡರು ನೀಡುವುದನ್ನು ನಿಲ್ಲಿಸಬೇಕು"ಎಂದು ಈಶ್ವರ ಖಂಡ್ರೆ ಆಗ್ರಹಿಸಿದರು.
ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಬಗ್ಗೆ ಮಾತನಾಡುತ್ತಾ, " ಬಿಜೆಪಿ ಸರಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಘೋಷಿಸಿದೆ. ಇದಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸಿ ₹5000 ಕೋಟಿ ಅನುದಾನ ಮೀಸಲಿಡಲಿ" ಎಂದು ಈಶ್ವರ ಖಂಡ್ರೆ ಒತ್ತಾಯಿಸಿದರು .
"ಯೋಜನೆ ಅನುಷ್ಠಾನದ ಬಗೆಗೆ ನೀಲನಕ್ಷೆ ತಯಾರಿಸಿ ಅನುದಾನ ಬಿಡುಗಡೆ ಮಾಡಲಿ. ಈಗ ಉಪ ಚುನಾವಣೆ ಬಂದಿರುವ ಕಾರಣಕ್ಕೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುವುದು ಬೇಡ. ಅವು ಕರ್ನಾಟಕದ ಅವಿಭಾಜ್ಯ ಅಂಗ"ಎಂದು ಈಶ್ವರ ಖಂಡ್ರೆ ಹೇಳಿದರು.
Recommended Video
"ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಮೂಲಕ ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಕನಸನ್ನು ಸಾಕಾರಗೊಳಿಸಬೇಕು" ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದರು.