ಕೋಡಿಶ್ರೀಗಳ ಭವಿಷ್ಯ: ಸಿದ್ದು ವಿರೋಧಿಗಳಿಗೆ ಮುಂದೆಯೂ ಆಷಾಢ!
ಬಾಗಲಕೋಟೆ, ಜುಲೈ 18: ಸಿಎಂ ಸಿದ್ದರಾಮಯ್ಯನವರನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಬೇಕೆಂದು ಕಾಂಗ್ರೆಸ್ ನಲ್ಲಿನ ಅತೃಪ್ತ ಬಣಗಳ ಪ್ರಯತ್ನ ಪರದೆಯ ಹಿಂದೆ ನಡೆಯುತ್ತಲೇ ಇದೆ. ಇವರ ಪ್ರಯತ್ನಕ್ಕೆ ಕೋಡಿಮಠದ ಶ್ರೀಗಳ ಭವಿಷ್ಯ ತಣ್ಣೀರೆರಚಿದೆ.
ಬಹುತೇಕ ಹಿಂದೂಗಳಲ್ಲಿ ಆಷಾಢ ಮಾಸ 'ಅಶುಭ ಮಾಸ' ಎನ್ನುವ ಕಲ್ಪನೆಯಿದೆ. ಕೋಡಿಮಠದ ಶ್ರೀಗಳು ಭಾನುವಾರ (ಜುಲೈ 17) ನುಡಿದ ಭವಿಷ್ಯದ ಪ್ರಕಾರ ಸಿದ್ದರಾಮಯ್ಯನವರ ವಿರೋಧಿಗಳಿಗೆ (ಮುಂದಿನ ಮಾಸಗಳು ಕೂಡ) ಶುಭವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.(ಹೊಸವರ್ಷದಲ್ಲಿ ಕೋಡಿಶ್ರೀಗಳು ನುಡಿದ ಮೊದಲ ಭವಿಷ್ಯ)
ಬಾಳೆಹೊನ್ನೂರಿನಲ್ಲಿ ಈ ಹಿಂದೆ ನುಡಿದಿದ್ದ ಭವಿಷ್ಯವನ್ನೇ ಮತ್ತೆ ಪುನರುಚ್ಚರಿಸಿದ ಕೋಡಿಶ್ರೀಗಳು, ಮುಂದಿನ ಎರಡು ವರ್ಷ ಸಿದ್ದರಾಮಯ್ಯ ನಿರಾಂತಕವಾಗಿ ಸಿಎಂ ಆಗಿ ಮುಂದುವರಿಯಲಿದ್ದಾರೆಂದು ಹೇಳಿದ್ದಾರೆ.
ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಗಳೂ ನಡೆಯುತ್ತಲೇ ಇರುತ್ತದೆ. ಆದರೆ ಈ ಯಾವ ಪ್ರಯತ್ನಕ್ಕೂ ಫಲ ಸಿಗದು ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವನಾಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯನವರಿಗೆ ಹಲವಾರು ತೊಂದರೆ ಎದುರಾಗಲಿದೆ. ಆದರೆ, ಹಾಲುಮತಸ್ಥ ಸಮುದಾಯಕ್ಕೆ ಭಗವಂತನ ಕೃಪೆಯಿರುವುದರಿಂದ ಎದುರಾಗುವ ಎಲ್ಲಾ ಸಮಸ್ಯೆಯಿಂದ ಸಿಎಂ ಹೊರಬರಲಿದ್ದಾರೆಂದು ಈ ಹಿಂದೆ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. (ಕೋಡಿಶ್ರೀಗಳು ನುಡಿದ ಭವಿಷ್ಯ ನಿಜವಾಯಿತೇ)
ಬಾಗಲಕೋಟೆಯಲ್ಲಿ ಭಾನುವಾರ ಶ್ರೀಗಳು ನುಡಿದ ಭವಿಷ್ಯದ ಸಂಕ್ಷಿಪ್ತ ಪಾಠ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯನವರಿಗೆ ಏನೇ ತೊಂದರೆ ಎದುರಾದರೂ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅವರ ಕುರ್ಚಿಗೆ ಸಂಚಕಾರವಿಲ್ಲ. ಸರಕಾರ ಅಸ್ಥಿರಗೊಳಿಸುವ ಕೆಲಸ ಮುಂದಿನ ಎರಡು ವರ್ಷಗಳಲ್ಲೂ ಅವರ ವಿರೋಧಿಗಳಿಂದ ಮುಂದುವರಿಯಲಿದೆ - ಕೋಡಿಶ್ರೀ ಭವಿಷ್ಯ.
ಅವರಾಗಿಯೇ ಬಿಟ್ಟರೆ ಮಾತ್ರ
ಮುಖ್ಯಮಂತ್ರಿ ಹುದ್ದೆಯನ್ನು ಅವರಾಗಿಯೇ ತ್ಯಜಿಸಲು ಇಚ್ಛಿಸಿದರೆ ಮಾತ್ರ ಸಿದ್ದರಾಮಯ್ಯ ಕೆಳಗಿಳಿಯಲು ಸಾಧ್ಯ. ಯಾವುದೇ ಅತೃಪ್ತರ ಚಟುವಟಿಕೆಗಳು, ರಾಜಕೀಯ ವಿದ್ಯಮಾನಗಳು, ಹೋರಾಟಗಳು ಸಿದ್ದರಾಮಯ್ಯನವರ ಸಿಎಂ ಭವಿಷ್ಯಕ್ಕೆ ಮುಂದಿನ ಎರಡು ವರ್ಷದಲ್ಲಿ ತೊಂದರೆ ತರದು ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಅವಘಡ ಸಂಭವಿಸಿದರೂ ಜನರಿಗೆ ತೊಂದರೆಯಿಲ್ಲ
ದುರ್ಮುಖಿ ನಾಮ ಸಂವತ್ಸರದಲ್ಲಿ ವಾತಾವರಣದಲ್ಲಿ ಏರುಪೇರು ಸಂಭವಿಸುವ ಸಾಧ್ಯತೆ ಹೆಚ್ಚು. ಬೆಂಕಿ, ಗಾಳಿಯಿಂದ ಅವಘಡ ಸಂಭವಿಸಬಹುದಾದರೂ, ಜನರಿಗೆ ತೊಂದರೆಯಾಗುವುದಿಲ್ಲ - ಕೋಡಿಶ್ರೀ
ಪ್ರಧಾನಿ ಮೋದಿ
ಪ್ರಧಾನಿ ಮೋದಿ ಒಬ್ಬ ಸಜ್ಜನ ರಾಜಕಾರಣಿ ಜೊತೆಗೆ ಧರ್ಮದಿಂದ ನಡೆದುಕೊಳ್ಳುತ್ತಿರುವುದರಿಂದ ಎದುರಾಗುವ ಯಾವುದೇ ತೊಂದರೆಗಳನ್ನು ಎದುರಿಸುವ ಶಕ್ತಿ ಅವರಿಗಿದೆ ಎಂದು ಕೋಡಿಶ್ರೀಗಳು ಯುಗಾದಿಗೆ ಮುನ್ನ ಭವಿಷ್ಯ ನುಡಿದಿದ್ದರು.
ಗುಜರಾತ್ ನಲ್ಲಿ ಬಿಜೆಪಿಗೆ ಸೋಲು
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಲವು ಚುನಾವಣೆ ಸೋತಿರುವ ಮೋದಿ, ಗುಜರಾತಿನಲ್ಲೂ ಸೋಲು ಅನುಭವಿಸಲಿದ್ದಾರೆಂದು ಕೋಡಿಶ್ರೀಗಳು ಹೇಳುವ ಮೂಲಕ ಬಿಜೆಪಿಯನ್ನು ಎಚ್ಚರಿಸಿದ್ದಾರೆ. ಗುಜರಾತ್ ಚುನಾವಣೆ ಬರುವ ವರ್ಷಾಂತ್ಯದಲ್ಲಿ ನಡೆಯಲಿದೆ.