ಜ್ಯೋತಿಷಿಗಳು ಕೊರೊನಾ ಓಡಿ ಹೋಗುತ್ತೆ ಎಂದಿದ್ದ ದಿನ (ಮೇ 29, 30) ಬಂದೇ ಬಿಡ್ತು!
ಕೋಡಿಮಠದ ಶ್ರೀಗಳನ್ನು ಬಿಟ್ಟರೆ, ಕೊರೊನಾ ವೈರಸ್ ಊರೆಲ್ಲಾ ಹರಡಿದ ನಂತರವೇ, ಜ್ಯೋತಿಷಿಗಳಲ್ಲಿ ವಿಶ್ವಕ್ಕೆ ಕಂಟಕ ಕಾದಿದೆ ಎಂದು ಹೇಳಿದವರೇ ಹೆಚ್ಚು. ಅದರಲ್ಲಿ ಬಾಲ ಜ್ಯೋತಿಷಿ ನುಡಿದ ಭವಿಷ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಚಿತ್ರದುರ್ಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಇಂತಹ ಸಮಯದಲ್ಲಿ ಢೋಂಗಿ ಬಾಬಾಗಳು, ಹಸ್ತಮುದ್ರಿಕೆಯವರು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದಿದ್ದರು.
ಮಹಾಮಾರಿ ಕೊರೊನಾ: ಬ್ರಹ್ಮಾಂಡ ಗುರೂಜಿಗಳ ಭಯಾನಕ ಭವಿಷ್ಯ
ಅದೇನೇ ಇರಲಿ, ಜನಸಾಮಾನ್ಯರಿಗೆ ಜಾತಕ, ಭವಿಷ್ಯದ ನಂಬಿಕೆ ಇರುವವರೆಗೆ ಜ್ಯೋತಿಷ್ಯವೂ ಮುಂದುವರಿಯುತ್ತಿರುತ್ತಿದೆ, ಭವಿಷ್ಯವಾಣಿಯೂ ಹೊರಬೀಳುತ್ತಲೇ ಇರುತ್ತದೆ.
ಬ್ರಹ್ಮಾಂಡ ಗುರುಗಳು ಅದ್ಯಾವ ಮುಖ ಇಟ್ಟುಕೊಂಡು ಭವಿಷ್ಯ ನುಡಿದರೋ?
ಕೊರೊನಾ ವೈರಸ್ ಬಗ್ಗೆ ಭವಿಷ್ಯ ನುಡಿದ ಹೆಚ್ಚಿನವರು, ಮೇ ಮಾಸಾಂತ್ಯಕ್ಕೆ ಕೊರೊನಾ ಹಾವಳಿ ಕಮ್ಮಿಯಾಗುತ್ತದೆ ಎಂದಿದ್ದರು. ಆ ದಿನ ಬಂದೇ ಬಿಟ್ಟಿದೆ. ಏನು ಹೇಳಿದ್ದರು ಜ್ಯೋತಿಷಿಗಳು, ಒಂದು ಝಲಕ್..
ಪ್ರದ್ಯುಮಾನ್ ಭಟ್ ಎನ್ನುವ ಜ್ಯೋತಿಷಿ
ಅಹಮದಾಬಾದ್ ಮೂಲದ ಪ್ರದ್ಯುಮಾನ್ ಭಟ್ ಎನ್ನುವ ಜ್ಯೋತಿಷಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯ ನುಡಿದು, ಈ ವೈರಸಿನ ಕಾಟ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ ಎಂದು ಹೇಳಿದ್ದರು. ನವಗ್ರಹಗಳಲ್ಲಿ ಒಂದಾದ ರಾಹು, ಆದ್ರಾ ನಕ್ಷತ್ರ, ಮಿಥುನ ರಾಶಿಯನ್ನು 11.09.19 ರಂದು ಪ್ರವೇಶಿಸಿದ್ದ ಮತ್ತು 20.05.20 ಇಲ್ಲಿಂದ ಪಥ ಬದಲಾಯಿಸಲಿದ್ದಾನೆ. ಹಾಗಾಗಿ, ಈ ಅವಧಿಯವರೆಗೆ, ಅಂದರೆ ಮೇ ಅಂತ್ಯದ ವರೆಗೆ ಕೊರೊನಾ ಇಂಪ್ಯಾಕ್ಟ್ ಇರಲಿದೆ. ಅನಿಷ್ಟವೂ ದೂರವಾಗುತ್ತಾ ಬರುತ್ತದೆ ಎಂದು ಹೇಳಿದ್ದರು.
ಸಿದ್ಧಲಿಂಗೇಶ್ವರ ಗದ್ದುಗೆ ಮಠ ಹಾಗೂ ಶ್ರೀ ಶಾಸ್ತ್ರ ಪೀಠ
ಗುರು ಗ್ರಹವು ದಿನಾಂಕ ಮೇ 30ರಂದು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ಕೊರೊನಾ ಬಲಹೀನವಾಗಿ ಕಾಲಕ್ರಮೇಣ ನಶಿಸಲಿದೆ. ಹಾಗೂ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳಲಿದೆ. ನಂತರ ಸ್ವಸ್ಥಾನದಲ್ಲಿರುವ ಶನಿಯು ಗುರು ನಂತರ ಅಗ್ನಿಕಾರಕನಾದ ಮಂಗಳ ಗ್ರಹ ಸಂಯೋಗದಿಂದ ಅನೇಕ ಬದಲಾವಣೆಗಳು ಕಾಣಲಿವೆ. ಈ ಚಂದ್ರಗ್ರಹವು ಜನರಿಗೆ ಆತ್ಮಸ್ಥೈರ್ಯ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ನೀಡಲಿದೆ ಎಂದು ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠ ಹಾಗೂ ಶ್ರೀ ಶಾಸ್ತ್ರ ಪೀಠದ ಶ್ರೀ ಡಾ. ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಹೇಳಿದ್ದರು.
ಮುಂಬೈ ಮೂಲದ ಆಶಿಸ್ ಮೆಹ್ತಾ
ಗುರು ಮತ್ತು ಕೇತು ರಾಶಿಯ ಹೊಂದಾಣಿಕೆ ಇರುವವರೆಗೆ ಕೊರೊನಾದಿಂದ ಮುಕ್ತಿ ಸಿಗುವುದು ಅಸಂಭವ. ಇದೇ ತಿಂಗಳು ಮೂವತ್ತನೇ ತಾರೀಖಿಗೆ ಗುರು ಮಕರ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಹಾಗಾಗಿ, ಈ ವೈರಸ್ ಪ್ರಭಾವದಿಂದ ವಿಶ್ವಕ್ಕೆ ಸ್ವಲ್ಪಸ್ವಲ್ಪ ಮುಕ್ತಿ ಸಿಗಲು ಆರಂಭವಾಗುತ್ತದೆ ಎಂದು ಮುಂಬೈ ಮೂಲದ ಆಶಿಸ್ ಮೆಹ್ತಾ ಹೇಳಿದ್ದರು.
ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್
ಚಂದ್ರ ಮತ್ತು ರಾಹುವೂ ಈ ಅವಧಿಯಲ್ಲಿ ಸಂಯೋಗಗೊಳ್ಳಲಿದೆ. ಮಾರ್ಚ್ 31ರಿಂದ ಏಪ್ರಿಲ್ 1ರ ಅವಧಿಯಲ್ಲಿ ಮಂಗಳ ಮತ್ತು ಶನಿ ಸಂಪೂರ್ಣವಾಗಿ ಸಂಯೋಗಗೊಳ್ಳಲಿದೆ. ಈ ಅವಧಿಯಲ್ಲಿ ಮಾರಣಾಂತಿಕ ಕಾಯಿಲೆ ಅತಿಹೆಚ್ಚು ಹರಡುವ ಸಮಯವಾಗಬಹುದು. ಒಂದು ಕಡೆ ಚಂದ್ರ, ರಾಹು ಮತ್ತು ಇನ್ನೊಂದೆಡೆ ಗುರು ಮತ್ತು ಮಂಗಳ, ಅನಿಷ್ಠ ತರಲಿದೆ. ಮೇ 29ರ ನಂತರ ಈ ವೈರಾಣುವಿನ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ. ಈ ಅವಧಿಯಲ್ಲಿ ಕಾಳಸರ್ಪಯೋಗವೂ ಬರುವುದರಿಂದ, ಕೊರೊನಾ ಪ್ರಭಾವ ಕಮ್ಮಿಯಾಗುತ್ತಾ ಬರುತ್ತದೆ ಎಂದು ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್ ಹೇಳಿದ್ದ.
ಕೋಡಿ ಶ್ರೀಗಳು
ಕಳೆದ ಫೆಬ್ರವರಿ ಎಂಟರಂದು ಗದಗ್ ನಲ್ಲಿ ಮಾತನಾಡುತ್ತಿದ್ದ ಕೋಡಿ ಶ್ರೀಗಳು, "ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಭಾರೀ ಗಂಡಾಂತರ ಎದುರಾಗಲಿದೆ. ಆ ಮೂಲಕ, ಪ್ರಕೃತಿಯ ಮುಂದೆ ಎಲ್ಲರೂ ಹುಲು ಮಾನವರು ಎನ್ನುವುದು ಸಾಬೀತಾಗುತ್ತದೆ. ಪ್ರಕೃತಿ ದತ್ತವಾದ ಕಾಯಿಲೆಗಳು ಮಾನವ ಸಮಾಜವನ್ನು ಆವರಿಸುತ್ತದೆ" ಎಂದು ಕೋಡಿ ಶ್ರೀಗಳು ಹೇಳಿದ್ದರು.