ಅಶ್ಲೀಲ ವಿಡಿಯೊ ನಕಲಿ, ಸಂಪುಟ ಸೇರಲು ಸಜ್ಜಾದ ಲಿಂಬಾವಳಿ
ಬೆಂಗಳೂರು, ಡಿ.10: ಡಿಸಿಎಂ ಸ್ಥಾನದ ಆಕಾಂಕ್ಷಿ ಎನಿಸಿಕೊಂಡಿದ್ದ ಬಿಜೆಪಿ ಪ್ರಮುಖ ಮುಖಂಡ ಅರವಿಂದ ಲಿಂಬಾವಳಿಗೆ ಅಡ್ಡಗಾಲು ಹಾಕಿದ್ದ ಅಶ್ಲೀಲ ವಿಡಿಯೊದಿಂದ ಮುಕ್ತಿ ಪಡೆದಿದ್ದಾರೆ. ಸಂಪುಟ ಸೇರಲು ತಡೆಯೊಡ್ಡಿದ್ದ ವಿಡಿಯೋ ನಕಲಿ ಎಂದು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕೃತವಾಗಿ ದೃಢೀಕರಿಸಿದೆ.
ಮೈತ್ರಿ ಸರ್ಕಾರ ಉರುಳುವ ಮುನ್ನಾ ಕೆಲವು ದಿನಗಳ ಮುಂಚೆಯವರೆಗೂ ಅರವಿಂದ ಲಿಂಬಾವಳಿ ಅವರಿಗೆ ಮಹತ್ವದ ಹುದ್ದೆ ಸಿಗುತ್ತದೆ ಎಂದೇ ಹೇಳಲಾಗಿತ್ತು. ಮೈತ್ರಿ ಸರ್ಕಾರ ಉರುಳುವುದಕ್ಕೆ ಕೆಲವೇ ದಿನಗಳ ಮುಂಚೆ ಬಿಡುಗಡೆಯಾಗಿದ್ದ ಅರವಿಂದ ಲಿಂಬಾವಳಿಯವರದ್ದು ಎನ್ನಲಾದ ಖಾಸಗಿ ವಿಡಿಯೋ ಸಹ ಲಿಂಬಾವಳಿ ಅವರ ಹಿನ್ನಡೆಗೆ ಕಾರಣ ಎನ್ನಲಾಗಿತ್ತು. ಆದರೆ ಈಗ ವಿಡಿಯೋ ನಕಲಿ ಎಂಬುದು ದೃಢಪಟ್ಟಿದೆ. ಹೀಗಾಗಿ ಮತ್ತೊಮ್ಮೆ ಲಿಂಬಾವಳಿ ಅವರನ್ನು ಸಂಪುಟಕ್ಕೆ ಸೇರಿಸಲು ಅವರ ಅಭಿಮಾನಿಗಳು ಕಾದಿದ್ದಾರೆ.
ಯಡಿಯೂರಪ್ಪಗೆ ತಲೆನೋವಾದ ಸಂಪುಟ ವಿಸ್ತರಣೆ: ಆಕಾಂಕ್ಷಿಗಳು ಯಾರ್ಯಾರು?
ಲಿಂಬಾವಳಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ತಪ್ಪಿಸಲೆಂದು ಸ್ವಪಕ್ಷದವರೇ ವಿಡಿಯೋ ಬಿಡುಗಡೆ ಮಾಡಿಸಿದ್ದರು ಎಂಬ ಸುದ್ದಿ ಹಬ್ಬಿತ್ತು. ಆ ವಿಡಿಯೋ ಬಗ್ಗೆ ವಿಧಾನಸಭೆಯಲ್ಲಿ ಭಾವುಕರಾಗಿ ಮಾತನಾಡಿದ್ದ ಲಿಂಬಾವಳಿ, ಆ ವಿಡಿಯೋ ವೈರಲ್ ಮಾಡಿದವರು ಸ್ವಪಕ್ಷದವರೂ ಆಗಿರಬಹುದು ಎಂದಿದ್ದರು.
ನಕಲಿ ವಿಡಿಯೊ ಎಂದು ವರದಿ ನೀಡಿದೆ
ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯವು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ನಕಲಿ ವಿಡಿಯೊ ಎಂದು ವರದಿ ನೀಡಿದೆ. ಅನರ್ಹ ಶಾಸಕರನ್ನು ಕಾಯ್ದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಅರವಿಂದ ಲಿಂಬಾವಳಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ, ಅವರನ್ನು ಅಧಿಕಾರದಿಂದ ದೂರ ಉಳಿಯುವಂತೆ ಮಾಡುವಲ್ಲಿ ಕೆಲವರು ಯಶಸ್ವಿಯಾಗಿದ್ದರು. ಆದರೆ ಈಗ ಕಳಂಕ ರಹಿತರಾಗಿದ್ದು, ಸಂಪುಟ ಸೇರಲು ಯಾವುದೇ ಅಡ್ಡಿ ಕಂಡು ಬರುತ್ತಿಲ್ಲ.
ಹೊಸಬರಿಗೆ ಅವಕಾಶ ನೀಡುವ ಮುನ್ಸೂಚನೆ
ಮುಖ್ಯಮಂತ್ರಿ ಯಡಿಯೂರಪ್ಪರನ್ನು ಸೇರಿಸಿದಂತೆ 18 ಸಚಿವರುಗಳು ಸಚಿವ ಸಂಪುಟದಲ್ಲಿದ್ದಾರೆ. ಒಟ್ಟು 34 ಸ್ಥಾನಗಳ ತನಕ ಕ್ಯಾಬಿನೆಟ್ ಗರಿಷ್ಠ ಮಿತಿಯಿದೆ. ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ. 15 ಕ್ಷೇತ್ರಗಳಲ್ಲಿನ ಫಲಿತಾಂಶದ ನಂತರ 12 ಹೊಸ ಶಾಸಕರು ಪ್ಲಸ್ ಶಂಕರ್ ಸೇರಿದಂತೆ 13 ಸ್ಥಾನ ತುಂಬಬೇಕಿದೆ. ಇತ್ತೀಚೆಗೆ ಬಿಜೆಪಿ ಸೇರಿದವರ ಪೈಕಿ ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಖಾತ್ರಿಯಾಗಿದೆ. ಒಂದು ವೇಳೆ ಸೋಲು ಅನುಭವಿಸಿದರೂ ಹಾಲಿ ಎಂಎಲ್ಸಿಗಳ ಸ್ಥಾನಗಳನ್ನು ಖಾಲಿ ಮಾಡಿಸಿಯಾದರೂ ಹೊಸಬರಿಗೆ ಅವಕಾಶ ನೀಡುವ ಮುನ್ಸೂಚನೆ ಸಿಕ್ಕಿದೆ.
ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಕ್ರಮವಾಗಿ ಒಕ್ಕಲಿಗ, ಲಿಂಗಾಯತ ಹಾಗೂ ದಲಿತ ಸಮುದಾಯದ ಓಲೈಕೆ ಇದಾಗಿದೆ. ಆದರೆ, ಹಿಂದುಳಿದ ನಾಯಕರಾಗಿರುವ, ಡಿಸಿಎಂ ಸ್ಥಾನ ಆಕಾಂಕ್ಷಿಗಳಾಗಿದ್ದ ಕೆಎಸ್ ಈಶ್ವರಪ್ಪ ಹಾಗೂ ಬಿ ಶ್ರೀರಾಮುಲುಗೆ ನಿರಾಶೆಯಾಗಿದೆ. ಸಂಪುಟದಲ್ಲಿ ಬಸವರಾಜ ಬೊಮ್ಮಾಯಿ ಬಡ್ತಿ ಸಿಕ್ಕಿದ್ದು ಗೃಹ ಸಚಿವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಿಂದಲೂ ಮುಂದಿನ ಡಿಸಿಎಂ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಇವರಿಬ್ಬರಂತೆ ಲಿಂಬಾವಳೀ ಕೂಡಾ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು.
ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ
ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ ಉಳಿಸಿಕೊಂಡಿದ್ದಾರೆ. ಬಹುಶಃ ಅತೃಪ್ತರಾಗಿ ಅನರ್ಹರಾಗಿ ಮುಂದೆ ಬಿಜೆಪಿ ಸೇರಿದ ಶಾಸಕರಿಗೆ ಈ ಖಾತೆಗಳು ಮೀಸಲಾಗಿಡಲಾಗಿದೆ. ಇಂಧನ, ಜಲಸಂಪನ್ಮೂಲ, ಕೃಷಿ, ರೇಷ್ಮೆ, ತೋಟಗಾರಿಕೆ, ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ, ಅರಣ್ಯ, ಸಹಕಾರ, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಪೌರಾಡಳಿತ, ಹಣಕಾಸು, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಮೂಲಸೌಕರ್ಯ, ಆಹಾರ, ಕಾರ್ವಿುಕ, ಕೌಶಲಾಭಿವೃದ್ಧಿ, ಕಾರ್ವಿುಕ, ಅಲ್ಪಸಂಖ್ಯಾತ ಕಲ್ಯಾಣ, ಡಿಪಿಎಆರ್, ಗುಪ್ತವಾರ್ತೆ ಖಾತೆ ಸಿಎಂ ಬಳಿಯಿವೆ