ಅರವಿಂದ್ ಬೆಲ್ಲದ್ ರಾಜ್ಯಾಧ್ಯಕ್ಷರಾದ್ರೆ; ಬೊಮ್ಮಾಯಿ ಸಿಎಂ ಸ್ಥಾನಕ್ಕೆ ತೊಂದ್ರೆ!
ಬೆಂಗಳೂರು, ಮೇ. 01: ಈ ಹಿಂದೆ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಬಿಜೆಪಿ ಹಿರಿಯ ನಾಯಕ ಅರವಿಂದ್ ಬೆಲ್ಲದ್ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಒಟ್ಟ ಒಲಿಯುವ ಸಾಧ್ಯತೆ. ಬೆಲ್ಲದ್ ಬಿಜೆಪಿ ರಾಜ್ಯಾಧ್ಯಕ್ಷರಾದರೆ ಸಿಎಂ ಹುದ್ದೆಯಿಂದ ಬೊಮ್ಮಾಯಿ ಅವರನ್ನು ಇಳಿಸಿ ಒಕ್ಕಲಿಗ ಸಮುದಾಯದ ನಾಯಕರೊಬ್ಬರನ್ನು ಸಿಎಂ ಖುರ್ಚಿಯಲ್ಲಿ ಕೂರಿಸಲಾಗುತ್ತದೆ! ಇದು ರಾಜಕೀಯ ಪಡಸಾಲೆಯಲ್ಲಿ ಬಲವಾಗಿ ಕೇಳಿ ಬರುತ್ತಿರುವ ಸುದ್ದಿ.
ಬಿಜೆಪಿ ಪಕ್ಷದಲ್ಲಿ ಎರಡು ದಿನದಿಂದ ಬಹು ಚರ್ಚಿತ ಸಂಗತಿಗಳಿವು. ರಾಜ್ಯದಲ್ಲಿ ಸಂಪುಟ ಬದಲಾವಣೆ ಅಲ್ಲ, ಸಿಎಂ ಬದಲಾವಣೆ ಆಗುವ ಸಾಧ್ಯತೆಗಳಿವೆ ಎಂದೇ ಹೇಳಲಾಗುತ್ತಿದೆ. ಅಧಿಕಾರ ಮತ್ತು ಪಕ್ಷದ ವಿಚಾರ ಬಂದರೆ ಬಿಜೆಪಿ ವರಿಷ್ಠರು ಅನಿರಿಕ್ಷಿತ ಅಚ್ಚರಿ ನಿರ್ಣಯ ಕೈಗೊಂಡಿರುವ ಸಾಕಷ್ಟು ಉದಾರಣೆಗಳಿವೆ. ಯಡಿಯೂರಪ್ಪ ಅವರನ್ನು ಸಿಎಂ ಖುರ್ಚಿಯಿಂದ ಕೆಳಗಿಸಿ ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ಹೈಕಮಾಂಡ್ ಅಚ್ಚರಿ ನಿರ್ಣಯವೇ. ಅಂತಹ ಮತ್ತೊಂದು ನಿರ್ಣಯ ಶೀಘ್ರದಲ್ಲಿ ಹೊರ ಬಳಲಿದೆ. ಹೈಕಮಾಂಡ್ ಈ ನಿರ್ಣಯದಿಂದ ಬಿಜೆಪಿ ಪಕ್ಷದಲ್ಲಿ ಬದಲಾವಣೆಯಾಗಲಿವೆ.
ಅಮಿತ್ ಶಾರಿಂದ ಮಹತ್ವದ ನಿರ್ಧಾರ
ಬಿಜೆಪಿ ರಾಜ್ಯ ಅಧ್ಯಕ್ಷ ಪಟ್ಟ ಮತ್ತು ಸಿಎಂ ಸ್ಥಾನವನ್ನಿಟ್ಟುಕೊಂಡು ಮಹತ್ವದ ಬದಲಾವಣೆ ತರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಮೇ. 3 ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬಂದು ಹೋದ ಬಳಿಕ ಆಡಳಿತ ರೂಢ ಪಕ್ಷದಲ್ಲಿ ಮಹತ್ವದ ಬದಲಾವಣೆ ಆಗಲಿವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಗಳಿಸುವ ಅಜೆಂಡಾ ಭಾಗವಾಗಿ ಈ ಮಹತ್ವದ ನಿರ್ಣಯ ಕೈಗೊಳ್ಳುವುದು ಹೈಕಮಾಂಡ್ ಗೆ ಅನಿವಾರ್ಯ ಎಂದೇ ಹೇಳಲಾಗುತ್ತಿದೆ.
ಒಕ್ಕಲಿಗ ಸಮುದಾಯಕ್ಕೆ ಆದ್ಯತೆ:
ಬಿಜೆಪಿ ಆಡಳಿತ ಅವಧಿಯಲ್ಲಿ ಅಲ್ಪ ಕಾಲದ ಸಿಎಂ ಸದಾನಂದಗೌಡ ಅವರನ್ನು ಬಿಟ್ಟರೆ, ಒಕ್ಕಲಿಗ ಸಮುದಾಯಕ್ಕೆ ಹೆಚ್ಚು ಆದ್ಯತೆ ನೀಡಿಲ್ಲ. ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಇಳಿದ ಬಳಿಕ ಒಕ್ಕಲಿಗ ಸಮುದಾಯದ ನಾಯಕರಿಗೆ ಸಿಎಂ ಪಟ್ಟ ನೀಡಬೇಕಿತ್ತು. ಪಕ್ಷದಲ್ಲಿ ಭಿನ್ನಮತ ಏಳದಂತೆ ಎಚ್ಚರಿಕೆ ತಂತ್ರ ಅನುಸರಿಸಿದ್ದ ಬಿಜೆಪಿ ವರಿಷ್ಠರು ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ಕಟ್ಟಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುದರಿಂದ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡದಿದ್ದರೆ ಬಿಜೆಪಿಗೆ ಹಿನ್ನಡೆಯಾಗುವುದು ಖಚಿತ. ಈ ಕುರಿತು ಮಾಹಿತಿ ತರಿಸಿಕೊಂಡಿರುವ ಬಿಜೆಪಿ ವರಿಷ್ಠರು ಒಕ್ಕಲಿಗ ಸಮುದಾಯಕ್ಕೆ ಸೇರಿದವ ನಾಯಕರಿಗೆ ಸಿಎಂ ಸ್ಥಾನ ಕೊಟ್ಟು ಸಂಪುಟ ಪುನಾರಚನೆ ಗೊಂದಲವಿಲ್ಲದೆ ಹೊಸ ಕ್ಯಾಬಿನೆಟ್ ರಚನೆ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಶೋಭಾ ಕರಂದ್ಲಾಜೆ ಅವರನ್ನು ಸಿಎಂ ಮಾಡಲು ಚಿಂತನೆ ನಡೆಸಿದ್ದಾರೆ ಎಂದೇ ಹೇಳಲಾಗುತ್ತಿದೆ. ಮಹಿಳೆಗೆ ಸಿಎಂ ಪಟ್ಟ ಕಟ್ಟಿದ್ದು, ಜತೆಗೆ ಒಕ್ಕಲಿಗರಿಗೆ ಅಧಿಕಾರ ನೀಡಿದ ಹೆಸರನ್ನು ಇಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತ ಗಳಿಕೆಗೆ ಬಿಜೆಪಿ ವರಿಷ್ಠರು ಪ್ಲಾನ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯಾಧ್ಯಕ್ಷ ಪಟ್ಟ ಬೆಲ್ಲದ್ಗೆ:
ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಮೂರು ವರ್ಷದ ಅವಧಿ ಮುಗಿದಿದೆ. ಸಿಎಂ ಪಟ್ಟವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಿದ್ರೆ, ರಾಜ್ಯಾಧ್ಯಕ್ಷ ಸ್ಥಾನವನ್ನು ಹಿರಿಯ ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಅವರಿಗೆ ನೀಡಲು ಹೈಕಮಾಂಡ್ ನಿರ್ಧರಸಿದೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಮತಗಳಿರುವ ಲಿಂಗಾಯುತ ಸಮುದಾಯವನ್ನು ಪ್ರತಿನಿಧಿಸಲು ಬೆಲ್ಲದ್ ಅವರಿಗೆ ಹೊಸ ಜವಾಬ್ದಾರಿ ನೀಡಲು ನೀಡಲಾಗುತ್ತಿದೆ. ಇದರಿಂದ ಒಕ್ಕಲಿಗ ಮತ್ತು ಲಿಂಗಾಯುತ ಸಮುದಾಯಕ್ಕೆ ಆದ್ಯತೆ ನೀಡಿದಂತಾಗುತ್ತದೆ. ಈ ಮೂಲಕ ಕರ್ನಾಟಕದ ಎರಡು ದೊಡ್ಡ ಸಮುದಾಯಗಳ ಮತ ಗಳಿಕೆಗೆ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.
ಸಂಪುಟ ಪುನಾರಚನೆ
ಒಂದು ವೇಳೆ ಬೊಮ್ಮಾಯಿ ಅವರನ್ನು ಸಿಎಂ ಆಗಿ ಮುಂದುವರೆಸಿದರೆ, ಸಂಪುಟ ಪುನಾರಚನೆಯಲ್ಲಿ ಮಹತ್ವದ ಸಚಿವ ಸ್ಥಾನಗಳನ್ನು ಒಕ್ಕಲಿಗ ಸಮುದಾಯಕ್ಕೆ ನೀಡಿ, ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕರಿಗೆ ಸಿಗಲಿದೆ. ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ಬಂದರೆ, ಒಕ್ಕಲಿಗ ಸಮುದಾಯದ ನಾಯಕರಿಗೆ ಸಿಎಂ ಪಟ್ಟ ಕಟ್ಟಲು ಹೈಕಮಾಂಡ್ ಚಿಂತನೆ ನಡೆಸಿದೆ. ಮೇ. 3 ರ ನಂತರ ಬಿಜೆಪಿಯಲ್ಲಿ ಭಾರೀ ಬದಲಾವಣೆಗಳು ಆಗುವುದು ಖಚಿತ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
Recommended Video