ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಕುರಿತು ಕುಮಾರಸ್ವಾಮಿ ಹೇಳಿಕೆಗೆ ಅರುಣ್ ಸಿಂಗ್ ಸ್ಪಷ್ಟನೆ!
ಬೆಂಗಳೂರು, ಸೆ. 02: ದೇಶದಲ್ಲಿ ಯಾವುದೇ ವಸ್ತುಗಳ ಬೆಲೆ ಏರಿಕೆ ಆಗುತ್ತಿಲ್ಲ. ಈ ಹಿಂದೆ ಯುಪಿಎ ಸರ್ಕಾರದಲ್ಲಿ ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಬೆಲೆ ಏರಿಕೆ ಆಗಿತ್ತು. ಬೆಲೆ ಏರಿಕೆಯನ್ನು ನೂರು ದಿನಗಳಲ್ಲಿ ನಿಯಂತ್ರಣ ಮಾಡುವುದಾಗ ಮನಮೋಹನ ಸಿಂಗ್ ಹೇಳಿದ್ದರು. ಆದರೆ ಅವರು ಹೇಳಿದಂತೆ ಮಾಡಿರಲಿಲ್ಲ. ಆಗ ಶೇಕಡಾ 15ರಷ್ಟು ಬೆಲೆ ಏರಿಕೆ ಆಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಅವಧಿಯಲ್ಲಿ ಬೆಲೆ ನಿಯಂತ್ರಣದಲ್ಲಿ ಇದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿವೆ. ಹೀಗಾಗಿ ಡಬಲ್ ಎಂಜಿನ್ ಸರ್ಕಾರ ನಡೆಯುತ್ತಿದೆ. ಇಡೀ ದೇಶದಲ್ಲಿ ಅಭಿವೃದ್ಧಿ ಆಗುತ್ತಿದೆ. ಹೀಗೆ ಹೇಳಿದ್ದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ಒಂದೊಂದಾಗಿ ವಿವರಿಸಿದ್ದಾರೆ. ಜೊತೆಗೆ ಜೆಡಿಎಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದ್ದಾರೆ. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಬಗ್ಗೆಯೂ ಅರುಣ್ ಸಿಂಗ್ ಮಾತನಾಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಪಕ್ಷದವನ್ನು ಬಲಪಡಿಸಲು ಸ್ವತಃ ಅರುಣ್ ಸಿಂಗ್ ಪ್ರವಾಸ ಮಾಡಿದ್ದನ್ನು ವಿವರಿಸಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆಗೆ ಸೇರಿಕೊಂಡು ಪಕ್ಷವನ್ನು ಬಲಪಡಿಸುತ್ತೀರಾ? ಎಂಬ ಪ್ರಶ್ನೆಗೆ ಅರುಣ್ ಸಿಂಗ್ ಅವರು ಉತ್ತರಿಸಿದ್ದು ಹೀಗೆ.
ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಅರುಣ್ ಸಿಂಗ್ ಹೇಳಿಕೆ!
"ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲಪಡಿಸುವ ಸಲುವಾಗಿ ಪ್ರವಾಸ ಮಾಡಿದ್ದೇನೆ. ನಂತರ ಆ ಭಾಗದ ಬಿಜೆಪಿ ನಾಯಕರೊಂದಿಗೆ ಸಭೆ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ. ಹಾಗೆ ಗುರಿ ಇಟ್ಟುಕೊಂಡು ಪ್ರಧಾನಿ ಮೋದಿ ಅವರು ಜನರಿಗಾಗಿ ಜಾರಿಗೆ ತಂದಿರುವ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಕಾರ್ಯಕರ್ತರಿಗೆ ತಿಳಿಸಿದ್ದೇವೆ. ನಮ್ಮ ಗುರಿಯನ್ನು ನಾವು ತಲುಪುತ್ತೇವೆ" ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಇದೇ ವೇಳೆ ಜೆಡಿಎಸ್ ಜೊತೆಗೆ ಮೈತ್ರಿಯ ಬಗ್ಗೆಯೂ ಸ್ಪಷ್ಟವಾಗಿ ಹೇಳಿದ್ದಾರೆ.
ಆ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ
"ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ನಾನು ಈಗಾಗಲೇ ಮಾತಾಡಿದ್ದೇನೆ. ಆ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ. ಅದನ್ನೇ ಮತ್ತೆ ನೀವೂ ಪ್ರಶ್ನೆ ಕೇಳಬೇಡಿ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗೌರವದಿಂದ ಮಾತನಾಡಬೇಕು. ಸುಖಾಸುಮ್ಮನೇ ಏನೇನೊ ಹೇಳಬಾರದು. ಹಳೆ ಮೈಸೂರು ಭಾಗದಲ್ಲಿ ನಾವು ಹೆಚ್ಚು ಸೀಟ್ ಗೆಲ್ಲಲು ಸಂಪೂರ್ಣ ಶ್ರಮ ಹಾಕುತ್ತೇವೆ. ಮುಂದೆ ಬರಲಿರುವ ಪಂಚಾಯತಿ ಚುನಾವಣೆಯಲ್ಲಿ ನಮ್ಮ ಹೋರಾಟ ಇರಲಿದೆ. ಹೀಗಾಗಿ ಬೇರೆ ಯಾವುದೇವ ಪಕ್ಷದೊಂದಿಗೆ ನಾವು ಚುನಾವಣಾ ಅಥವಾ ಇನ್ಯಾವುದೇ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ" ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿವರಿಸಿದ್ದಾರೆ. ಬೆಲೆ ಏರಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದು ಹೀಗೆ.
ಬಡವರ ಅಭಿವೃದ್ಧಿಗೆ ತೆರಿಗೆ ಹೆಚ್ಚಾಗಿದೆ ಅಷ್ಟೇ!
"ಬಡವರ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದೆ. ರೈತರ ಖಾತೆಗೆ 6 ಸಾವಿರ ರೂಪಾಯಿಗಳನ್ನು ಹಾಕುತ್ತಿದ್ದಾರೆ. ಜೊತೆಗೆ ಆಯುಷ್ಮಾನ್ ಭಾರತ್ ಯೋಜನೆಯಿಂದ ಜನರಿಗೆ ಅನುಕೂಲ ಆಗಿದೆ. ಪ್ರತಿ ಮನೆಗೂ ನಲ್ಲಿ ನೀರು ಕೊಡಲು ಜಲ್ ಜೀವನ್ ಮಿಷನ್ ಯೋಜನೆ ಮಾಡಲಾಗಿದೆ. ಈ ಎಲ್ಲಾ ಯೋಜನೆಗಳಿಂದ ಬಡವರಿಗೆ ಅನುಕೂಲ ಆಗಿದೆ. ಹೀಗಾಗಿ ಸರ್ಕಾರಕ್ಕೆ ತೆರಿಗೆ ಸಂಗ್ರಹ ಆಗಬೇಕಿದೆ, ಅದು ಆಗುತ್ತಿದೆ. ಹೀಗಾಗಿ ಈ ಬಗ್ಗೆ ಹೆಚ್ಚಿನದೇನೂ ಇಲ್ಲ ಎಂದು ಅರುಣ್ ಸಿಂಗ್ ಹೇಳಿದ್ದಾರೆ.
Recommended Video
ಯುಪಿಎ ಸರ್ಕಾರದಲ್ಲಿ ಬೆಲೆ ಏರಿಕೆ, ಈಗಿಲ್ಲ!
ಹಿಂದೆ ಯುಪಿಎ ಸರ್ಕಾರ ಇದ್ದಾಗಲೂ ಬೆಲೆ ಏರಿಕೆ ಆಗಿತ್ತು ಆಗ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಬೆಲೆ ಇಳಿಕೆ ಮಾಡುವುದಾಗಿ ಹೇಳಿದ್ದರು. ಆದರೆ ಅದಾಗಿರಲಿಲ್ಲ. ಆದರೆ ಪ್ರಧಾನಿ ಮೋದಿ ಅವರು ಬೆಲೆ ಏರಿಕೆ ನಿಯಂತ್ರಣದಲ್ಲಿ ಇಟ್ಟಿದ್ದಾರೆ. ಈಗಿನ ಡಿಸೆಲ್-ಪೆಟ್ರೋಲ್ ಬೆಲೆ ತಾತ್ಕಾಲಿಕ ಏರಿಕೆ ಅಷ್ಟೆ. ಮುಂದಿನ ದಿನಗಳಲ್ಲಿ ಬೆಲೆ ಕಡಿಮೆ ಆಗಲಿದೆ. ನೀವು ಟೊಮೆಟೊ, ಪೆಟ್ರೊಲ್, ಡೀಸೆಲ್, ಈರುಳ್ಳಿ ಒಂದು ವಸ್ತುವಿನ ಬೆಲೆ ಮೇಲೆ ಮಾತ್ರ ಪ್ರಶ್ನೆ ಮಾಡುತ್ತಿದ್ದರೆ ನಾನು ಉತ್ತರ ಕೊಡುವುದಕ್ಕೆ ಆಗುವುದಿಲ್ಲ" ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅರುಣ್ ಸಿಂಗ್ ಉತ್ತರಿಸಿದ್ದಾರೆ.