ಸ್ಪೀಕರ್ ಸ್ಥಾನಕ್ಕೆ ಬಲ ತುಂಬಿದ ಸುಪ್ರೀಂ: ಆದೇಶದಲ್ಲಿ ಏನಿದೆ?
"... ಸದ್ಯ ಈ ಪ್ರಕರಣದಲ್ಲಿ ಸ್ಪೀಕರ್ ಅಧಿಕಾರಯುತವಾಗಿ ತೆಗೆದುಕೊಳ್ಳುವ ತೀರ್ಮಾನವನ್ನು ನ್ಯಾಯಾಲಯ ಯಾವುದೇ ಸೂಚನೆಗಳ ಮೂಲಕ ಕಟ್ಟಿಹಾಕಲು ಸಾಧ್ಯವಿಲ್ಲ ಮತ್ತು ಗೌರವಾನ್ವಿತ ಸಭಾಧ್ಯಕ್ಷರು ಸಂವಿಧಾನದ ಆರ್ಟಿಕಲ್ 190 ಅಡಿಯಲ್ಲಿ ನಿರ್ಣಯ ತೆಗೆದುಕೊಳ್ಳಲು ಸ್ವತಂತ್ರರು..."
ಇದು ಬುಧವಾರ ಹೊರಬಿದ್ದ ಬಹಿನಿರೀಕ್ಷತ ಸುಪ್ರಿಂ ಕೋರ್ಟ್ನ ಮಧ್ಯಂತರ ಆದೇಶದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷರ ಅಧಿಕಾರದ ಕುರಿತು ಉಲ್ಲೇಖವಾಗಿರುವ ಸಾಲುಗಳು.
ಕ್ಲೈಮ್ಯಾಕ್ಸ್ ಹಂತಕ್ಕೆ ಕರ್ನಾಟಕ ರಾಜೀನಾಮೆ ಪ್ರಹಸನ: ಸಾಧ್ಯಾಸಾಧ್ಯತೆಗಳು
ಕರ್ನಾಟದಲ್ಲಿ ಕೆಲವು ದಿನಗಳ ಹಿಂದೆ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸುವ ಮೂಲಕ ಕುಮಾರಸ್ವಾಮಿ ನೇತೃತ್ವದ ಸರಕಾರಕ್ಕೆ ಸಂಕಷ್ಟ ತಂದೊಡ್ಡಿದ್ದರು. ಅಷ್ಟೆ ಅಲ್ಲದೆ ತಮ್ಮ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ಅಂಗೀಕರಿಸುತ್ತಿಲ್ಲ ಎಂದು ದೂರಿ, ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಇದು ರಾಜ್ಯದಲ್ಲಿ ಸಾಂವಿಧಾನ ಬಿಕ್ಕಟ್ಟೊಂದನ್ನು ಸೃಷ್ಟಿಸಿತ್ತು ಜತೆಗೆ ಸಾಮಾಜಿಕವಾಗಿ ಅಸಹ್ಯಕರ ವಾತಾವರಣಕ್ಕೆ ನಾಂದಿ ಹಾಡಿತ್ತು.
ಕರ್ನಾಟಕ ವಿಧಾನಸಸಭೆಯ ಈ ಹೊಣೆಗಾರಿಕೆ ಮರೆತ ನಡೆತೆಗೆ ಹೆಚ್ಚಿನ ಸಾರ್ವಜನಿಕ ಪ್ರತಿರೋಧ ವ್ಯಕ್ತವಾಗಿರಲಿಲ್ಲ. ಬುಧವಾರದ ವೇಳೆಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ, ಸಾಮಾಜಿಕ ಹೋರಾಟಗಾರ ರವಿ ಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಎರಡು ಪ್ರತ್ಯೇಕ ಪ್ರತಿಭಟನೆಗಳು ನಡೆದವು. ಇದರ ನಡುವೆಯೇ ಸುಪ್ರಿಂ ಕೋರ್ಟ್ ಮಧ್ಯಂತರ ಆದೇಶ ನೀಡುವ ಮೂಲಕ ಎದುರಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಲು ಚೌಕಟ್ಟೊಂದನ್ನು ಕಟ್ಟಿಕೊಟ್ಟಿದೆ.
ಸ್ಪೀಕರ್ ಸ್ವತಂತ್ರ:
ಕರ್ನಾಟಕದ ವಿಧಾನ ಸಭೆಯ ಸ್ಪೀಕರ್ ಸ್ಥಾನ ಆಗಾಗ್ಗೆ ವಿವಾದವನ್ನು ಮೈಮೇಲೆ ಎಳೆದುಕೊಂಡೇ ಬಂದಿದೆ. ಹಿಂದೆ ಯಡಿಯೂರಪ್ಪ ನೇತೃತ್ವದಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರವನ್ನು ರಾಜ್ಯದಲ್ಲಿ ಆರಂಭಿಸಿತ್ತು. ಈ ಸಮಯದಲ್ಲಿ ಸ್ಪೀಕರ್ ಆಗಿದ್ದ ಕೆ. ಜಿ. ಬೋಪಯ್ಯ ಒಟ್ಟು 11 ಶಾಸಕರನ್ನು ಅಂದಿನ ಸಿಎಂ ಯಡಿಯೂರಪ್ಪ ಮನವಿ ಹಿನ್ನೆಲೆಯಲ್ಲಿ ಅನರ್ಹಗೊಳಿಸಿದ್ದರು. ಇದನ್ನು ರಾಜ್ಯ ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. 2011ರಲ್ಲಿ ನಡೆದಿದ್ದ ಈ ಬೆಳವಣಿಗೆ ಕೂಡ ಸುಪ್ರಿಂ ಕೋರ್ಟ್ ಮೆಟ್ಟಿಲೇರಿತ್ತು.
ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?
ಈ ಸಮಯದಲ್ಲಿ ನಡೆದ ವಾದ ವಿವಾದಗಳನ್ನು ಆಲಿಸಿದ್ದ ನ್ಯಾಯಪೀಠ ಅಂತಿಮವಾಗಿ ಸ್ಪೀಕರ್ ಏಕಪಕ್ಷೀಯ ನಿರ್ಧಾರವನ್ನು ಅಸಂವಿಧಾನಿಕ ಎಂದು ಜರಿದಿತ್ತು ಮತ್ತು ವಿಧಾನಸಭೆಗಳ ಕಲಾಪಗಳ ವಿಚಾರಗಳಲ್ಲಿ ಸ್ಪೀಕರ್ ಪಕ್ಷಾತೀತವಾಗಿರಬೇಕು ಎಂದು ತಿಳಿಸಿತ್ತು.
ಇಂತಹದ್ದೇ ಒಂದು ತೀರ್ಮಾನವನ್ನೂ ಸುಮಾರು ಎಂಟು ವರ್ಷಗಳ ನಂತರ ಬಿಜೆಪಿ ಮತ್ತು ಅತೃಪ್ತ ಶಾಸಕರು ಸುಪ್ರಿಂ ಕೋರ್ಟ್ನಿಂದ ನಿರೀಕ್ಷೆ ಮಾಡಿದ್ದರು.
ಆದರೆ, ಮಂಗಳವಾರ ಇಡೀ ದಿನ ವಾದಗಳನ್ನು ಆಲಿಸಿದ ಸುಪ್ರಿಂ ಕೋರ್ಟ್ ಬುಧವಾರ ತೀರ್ಪು ನೀಡಿದೆ. ವಿಶೇಷವಾಗಿ ಸದಸ್ಯರ ರಾಜೀನಾಮೆ ಅಂಗೀಕಾರದ ವಿಚಾರದಲ್ಲಿ ಸ್ಪೀಕರ್ ಅಥವಾ ಸಭಾಧ್ಯಕ್ಷರು ನಿರ್ಣಯ ತೆಗೆದುಕೊಳ್ಳಲು ಸ್ವತಂತ್ರರು ಎಂದು ಹೇಳಿದೆ. ಈ ಸಮಯದಲ್ಲಿ ಸ್ಪೀಕರ್ ಅವರ ತೀರ್ಮಾನ ತೆಗೆದುಕೊಳ್ಳುವ ವಿವೇಚನೆಯನ್ನು 'ಕಟ್ಟಿ ಹಾಕಲು ಸಾಧ್ಯವಿಲ್ಲ' ಎನ್ನುವ ಮೂಲಕ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗದ ಘನತೆಯನ್ನು ಎತ್ತಿ ಹಿಡಿದಿದೆ.
ಎಚ್ಡಿಕೆ ವಿಶ್ವಾಸಮತ ಯಾಚನೆಗೂ ಮುನ್ನ ವಿಧಾನಸಭೆ ಸಂಖ್ಯಾಬಲವೇನು?
"ಇದೊಂದು ಶಾಸಕಾಂಗದ ವಿಚಾರ. ಅದರಲ್ಲೂ ವಿಧಾನಸಭೆ ಸಂಗತಿ ಆಗಿರುವುದರಿಂದ ನ್ಯಾಯಾಂಗ ಸಹಜವಾಗಿಯೇ ಅಂತರ ಕಾಯ್ದುಕೊಂಡಿದೆ. ವ್ಯವಸ್ಥೆಯ ದೃಷ್ಟಿಯಿಂದ ಇದೊಂದು ಉತ್ತಮ ನಡೆ,'' ಎನ್ನುತ್ತಾರೆ ಹೈಕೋರ್ಟ್ ವಕೀಲ ಜೆ. ಡಿ. ಕಾಶೀನಾಥ್. "ಸಂವಿಧಾನದ ಆರ್ಟಿಕಲ್ ಆರ್ಟಿಕಲ್ 190 ಈ ಹಿನ್ನಲೆಯಲ್ಲಿ ಮಹತ್ವ ಪಡೆದುಕೊಳ್ಳುತ್ತದೆ ಮತ್ತು ಅದನ್ನೇ ಸುಪ್ರಿಂ ಕೋರ್ಟ್ ತನ್ನ ತೀರ್ಪುನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ,'' ಎಂದವರು ಗಮನ ಸೆಳೆಯುತ್ತಾರೆ.
ಏನಿದು ಆರ್ಟಿಕಲ್ 190?:
ಸುಪ್ರಿಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪೀಕರ್ ವಿವೇಚನೆ ಅಥವಾ ನಿರ್ಣಯಗಳಿಗೆ ಆರ್ಟಿಕಲ್ 190 ಅಡಿಯಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ ಎಂದಿದೆ.
ಆರ್ಟಿಕಲ್ 190, ಜನಪ್ರತಿನಿಧಿಗಳ ಆಯ್ಕೆಯ ಜತೆಗೆ ಅವರ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸುತ್ತದೆ. ಅದರಲ್ಲೂ ಸದಸ್ಯರು ರಾಜೀನಾಮೆ ನೀಡಿದರೆ, ಸ್ಪೀಕರ್ ವಿವೇಚನೆಯಿಂದ ಪರಿಶೀಲನೆ ನಂತರವೇ ರಾಜೀನಾಮೆ ಅಂಗೀಕರಿಸುವ ಅವಕಾಶವನ್ನು ಇಲ್ಲಿ ನೀಡಲಾಗಿದೆ.