ಅಂಬಾನಿ ಪುತ್ರನ ಮದುವೆಯನ್ನೂ ಮೀರಿಸಲಿದೆ ಸಚಿವ ಶ್ರೀರಾಮುಲು ಪುತ್ರಿ ವಿವಾಹ!
ಬೆಂಗಳೂರು, ಫೆ. 28: ಬಡವರು ಸಾಂಪ್ರದಾಯಕ್ಕೆ ಮದುವೆ ಮಾಡಿದ್ರೆ, ಶ್ರೀಮಂತರು ತಮ್ಮ ಆಡಂಬರ ತೋರಿಸಲು ಮದುವೆ ಮಾಡುತ್ತಾರೆ. ಹಿಂದೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರಿಯ ವಿವಾಹದ ಸಂದರ್ಭದಲ್ಲಿ ಇಡೀ ಗಂಧರ್ವ ಲೋಕವೇ ಭೂಮಿಗೆ ಬಂದಂತಿತ್ತು. ಇದೀಗ ಜನಾರ್ದನ ರೆಡ್ಡಿ ಅವರ ಆತ್ಮೀಯ ಸ್ನೇಹಿತ, ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಪುತ್ರಿಯ ವಿವಾಹ ಕೂಡ ಅದ್ದೂರಿಯಾಗಿ ನಡೆಯುತ್ತಿದೆ.
ಶ್ರೀರಾಮುಲು ಅವರ ಮಗಳ ಮದುವೆ ಶಾಸ್ತ್ರ 9 ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಮದುವೆ ಕಾರ್ಯಗಳು ನಿನ್ನೆಯಿಂದಲೇ ಶುರುವಾಗಿದ್ದು, ಈಗಾಗಲೇ ದೇಶಾದ್ಯಂತ ಇರುವ ಆಪ್ತರು, ರಾಜಕಾರಣಿಗಳು, ಚಿತ್ರರಂಗದ ಗಣ್ಯರಿಗೆ ಸ್ವತಃ ಸಚಿವ ಶ್ರೀರಾಮುಲು ಅವರೇ ಖುದ್ದಾಗಿ ಆಮಂತ್ರಣ ಕೊಟ್ಟು ಮದುವೆಗೆ ಆಹ್ವಾನಿಸಿದ್ದಾರೆ.
ಇತ್ತ ಖಾತೆ ಹಂಚಿಕೆ; ಅತ್ತ ಅಮಿತ್ ಶಾ, ಶ್ರೀರಾಮುಲು ಭೇಟಿ!
ಮಾರ್ಚ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ವಿವಾಹದ ವೈಶಿಷ್ಟ್ಯಗಳು ಬಹಳಷ್ಟಿವೆ. ಮದುವೆಯ ಎಲ್ಲ ಕಾರ್ಯಗಳು, ಸಂಪ್ರದಾಯಗಳು ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಸಲಹೆ, ಸೂಚನೆ, ಮಾರ್ಗದರ್ಶನದ ಮೇರೆಗೆ ನಡೆಯುತ್ತಿವೆ.
ಅದ್ದೂರಿ ವಿವಾಹಕ್ಕೆ ಒಂದು ಲಕ್ಷ ಆಹ್ವಾನ ಪತ್ರಿಕೆ ಮುದ್ರಣ
ತಮ್ಮ ಪುತ್ರಿಯ ವಿವಾಹಕ್ಕೆ ಶ್ರೀರಾಮುಲು ಅವರು ಒಂದು ಲಕ್ಷ ಆಹ್ವಾನ ಪತ್ರಿಕೆ ಮುದ್ರಣ ಮಾಡಿಸಿದ್ದಾರೆ. ವದೆಹಲಿಯಲ್ಲಿ ಲಗ್ನ ಪತ್ರಿಗಳನ್ನು ಡಿಸೈನ್ ಮಾಡಲಾಗಿದೆ. ಜತೆಗೆ ಆಹ್ವಾನ ಪತ್ರಿಕೆಯಲ್ಲಿ ಆರೋಗ್ಯದ ಥೀಮ್ ಇಟ್ಟುಕೊಂಡು ಕೇಸರಿ ಮತ್ತು ಏಲಕ್ಕಿ ಹಾಕಲಾಗಿದೆ. ಅರಿಶಿಣ ಕುಂಕುಮ ಮತ್ತು ಅಕ್ಷತೆಯೂ ಆಹ್ವಾನ ಪತ್ರಿಕೆಯೊಳಗಿದೆ. ಸಚಿವ ಶ್ರೀರಾಮುಲು ಅವರೇ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಮಗಳು ರಕ್ಷಿತಾ ವಿವಾಹಕ್ಕೆ ಆಹ್ವಾನಿಸಿದ್ದಾರೆ. ಇದರ ಜೊತೆಗೆ ಕರ್ನಾಟಕದ ಎಲ್ಲ ಶಾಸಕರು ಮತ್ತು ಸಂಸದರಿಗೆ ಪಕ್ಷ ಬೇಧ ಮರೆತು ಆಹ್ವಾನ ನೀಡಿದ್ದಾರೆ. ಶ್ರೀರಾಮುಲು ಅವರಿಗೆ ಸಿನಿಮಾ ನಟ, ನಟಿಯರೂ ಸಹ ಆತ್ಮೀಯರಾಗಿದ್ದು, ಅವರಿಗೂ ಸಹ ಆಹ್ವಾನ ತಲುಪಿದೆ.
30 ಜಿಲ್ಲೆಯ ಎಲ್ಲ ಅಧಿಕಾರಿಗಳಿಗೂ, ಬಿಜೆಪಿಯ ಎಲ್ಲ ಪದಾಧಿಕಾರಿಗಳಿಗೂ, ಇತರ ಪಕ್ಷಗಳ ಸ್ನೇಹಿತರು, ಬಂಧುಗಳಿಗೂ ಆಹ್ವಾನ ಪತ್ರಿಕೆಯನ್ನು ಕೊಟ್ಟಿದ್ದಾರೆ.
ಫೆ.27ರಿಂದಲೇ ಶುರುವಾಗಿವೆ ರಕ್ಷಿತಾ, ಲಲಿತ್ ವಿವಾಹ ಶಾಸ್ತ್ರಗಳು
ಫೆಬ್ರವರಿ 27 ಗುರುವಾರದಿಂದಲೇ ಮದುವೆಯ ಶಾಸ್ತ್ರಗಳು ಆರಂಭವಾಗಿದ್ದು, 9 ದಿನ ಸತತವಾಗಿ ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನ ವರನ ಕಡೆಯವರು ಬಳ್ಳಾರಿಗೆ ಬಂದು ಆಹ್ವಾನ ಪತ್ರಿಕೆಯನ್ನು ಬದಲಾಯಿಸಿಕೊಂಡು ಹೋಗಿದ್ದಾರೆ. ಬೆಂಗಳೂರಿನಿಂದ ಬಾಣಸಿಗರನ್ನು ಕರೆಸಿ ಬೀಗರಿಗಾಗಿ ವಿಶೇಷವಾದ ತಿಂಡಿ, ತಿನಿಸುಗಳನ್ನು ಸಚಿವ ರಾಮುಲು ಮಾಡಿಸಿದ್ದರು. ಈ ಸಂದರ್ಭದಲ್ಲಿ ಮನೆ, ತುಳಸಿಕಟ್ಟೆ, ಸಾಲಿಗ್ರಾಮ ಇರುವ ದೇವರ ಕೋಣೆ ಹೀಗೆ ಪ್ರತಿಯೊಂದನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು.
ಫೆ.28ಕ್ಕೆ ಬಳ್ಳಾರಿಯಲ್ಲಿ ಚಪ್ಪರದ ಶಾಸ್ತ್ರ ನಡೆದಿದೆ. ಜತೆಗೆ ಗಣಪತಿ ಹೋಮ ನಡೆದಿದೆ. ಫೆ.29ರಂದು ಮನೆ ದೇವರ ಪೂಜೆ ನೆರವೇರಲಿದ್ದು, ಮಾರ್ಚ್ 1ಕ್ಕೆ ಹಳದಿ ಮೆಹಂದಿ, ಬಳೆ ಶಾಸ್ತ್ರದ ಕಾರ್ಯಗಳು ನಡೆಯಲಿವೆ. ಮಾರ್ಚ್ 2 ರಂದು ಮಧುಮಗಳಿಂದ ಬಳ್ಳಾರಿಯ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿ, ನಂತರ ಸಂಜೆ ಬೆಂಗಳೂರಿಗೆ ತೆರಳಲಿದ್ದಾರೆ.
ಪಂಚತಾರಾ ಹೋಟೆಲ್ನಲ್ಲಿ ನಡೆಯಲಿದೆ ಮೆಹಂದಿ ಕಾರ್ಯಕ್ರಮ!
ಮಾರ್ಚ್ 3ಕ್ಕೆ ಮದುಮಗಳು ರಕ್ಷಿತಾ ಅವರ ಸ್ನೇಹಿತೆಯರಿಗಾಗಿ ರೇಸ್ಕೋರ್ಸ್ ರಸ್ತೆಯ ಪಂಚತಾರಾ ಹೋಟೆಲ್ ತಾಜ್ವೆಸ್ಟೆಂಡ್ನಲ್ಲಿ ಮೆಹಂದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ. 4ರಂದು ವರನ ಬಂಧುಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಬಂಧಿಕರೆಲ್ಲರಿಗೂ ಪಂಚತಾರ ಹೊಟೇಲ್ಗಳಲ್ಲಿ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ವಿಶೇಷವೆಂದರೆ ಮದುವೆಗೆ ಒಂದು ದಿನ ಮುಂಚಿತವಾಗಿ ಬರುವ ಕಾರ್ಯಕರ್ತರು, ಅಭಿಮಾನಿಗಳು, ಪ್ರಮುಖ ನಾಯಕರಿಗೂ ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಬೆಂಗಳೂರಿನ ನಾಲ್ಕೂ ಮೂಲೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳಿಗೆ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಊಟ, ಹೊದಿಕೆ, ಹಾಸಿಗೆ, ಪೇಸ್ಟ್, ಬ್ರೆಷ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ. ಮದುವೆಗೆ ಸುಮಾರು 500 ಜನ ಸ್ವಾಮೀಜಿಗಳು ಬರುವ ಸಾಧ್ಯತೆ ಇದೆ. ಅವರಿಗೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಾರ್ಚ್ 4 ರ ರಾತ್ರಿ ಅರಮನೆಯಲ್ಲಿ (ವಸಂತನಗರ ಗೇಟ್) ಲಗ್ನ ಕಟ್ಟಿಸುವುದು, ವರ ಪೂಜೆ, ವಿವಾಹ ಶಾಸ್ತ್ರಗಳು ನಡೆಯಲಿವೆ. ಈ ವೇಳೆ ಕರ್ನಾಟಕದ ಸಾಂಸ್ಕೃತಿಕ ವಾದ್ಯಗಳ ಮೂಲಕ ವರನನ್ನು ಬರಮಾಡಿಕೊಳ್ಳಲಾಗುವುದು. ಕರ್ನಾಟಕದ ಕಲೆ, ಸಂಗೀತಕ್ಕೆ, ಕಲಾವಿದರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ಶ್ರೀರಾಮುಲು ಅವರ ಮೂಲ ಉದ್ದೇಶ. ಅವರ ಇಷ್ಟಾನುಸಾರ ನಟರಾಜ್ ಸಂಯೋಜನೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ನೇತೃತ್ವದಲ್ಲಿ ಅಖಿಲಾ ಪಜಿಮನ್ನು, ಅಜಯ್ ವಾರಿಯರ್, ಸುಹಾನಾ ಸೈಯ್ಯದ್, ಸಿಪ್ರೀತ್ ಪಲ್ಗುಣ, ಗೌರೀ ದೇವ, ಸಂತೋಷ್ ದೇವ್ ಹಾಗೂ ಸಂಗಡಿಗರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿವೆ.
ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಮೇಲೆ ಮುನಿಸಿಕೊಂಡರಾ ಸಚಿವ ಶ್ರೀರಾಮುಲು...
ಮೇಲುಕೋಟೆಯ ಕಲ್ಯಾಣಿ ಪರಿಕಲ್ಪನೆಯಲ್ಲಿ ಮದುವೆ ಮಂಟಪ
ಮಾರ್ಚ್ 5ಕ್ಕೆ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ವಿವಾಹ ಮುಹೂರ್ತ ನಡೆಯಲಿದೆ. ಇದಕ್ಕಾಗಿ ಮೇಲುಕೋಟೆಯ ಕಲ್ಯಾಣಿ ಪರಿಕಲ್ಪನೆಯಲ್ಲಿ ಮದುವೆ ಮಂಟಪ ಸಿದ್ಧವಾಗುತ್ತಿದೆ. ಕಲ್ಯಾಣಿಯ ಮಧ್ಯದಲ್ಲಿ ಮುಹೂರ್ತ ಕಾರ್ಯ ನಡೆಯಲಿದೆ. ಜೊತೆಗೆ ಈ ಮುಹೂರ್ತವನ್ನು 4 ಸಾವಿರ ಮಂದಿ ನೋಡುವಂತೆ ವ್ಯವಸ್ಥೆ ಮಾಡಲಾಗಿದೆ.
ಇಡೀ ಕಲ್ಯಾಣ ಮಂಟಪವನ್ನು ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಮೇಲುಕೋಟೆಯ ಕಲ್ಯಾಣಿ ಪರಿಕಲ್ಪನೆಯಲ್ಲಿ ಮದುವೆ ಮಂಟಪ ಮಾಡಲು 3 ತಿಂಗಳಿನಿಂದ ಕರ್ನಾಟಕದ ಕೆಲ ದೇವಸ್ಥಾನಗಳನ್ನು ನೋಡಿ ಯೋಜನೆ ಮಾಡಲಾಗಿದೆ. ಅದರಲ್ಲಿ ಹಂಪಿ ವಿರೂಪಾಕ್ಷನ ದೇವಸ್ಥಾನವೂ ಸೇರಿದೆ. ಮದುವೆ ಮಂಟಪ ಹಾಕಲು 300 ಕಲಾವಿದರು ಕೆಲಸ ಮಾಡಲಿದ್ದಾರೆ. ಜೊತೆಗೆ ಕರ್ನಾಟಕದ 200 ಮಂದಿ ಹೂವಿನ ಅಲಂಕಾರ ಮಾಡಲೆಂದೇ ನಿಯೋಜನೆಗೊಂಡಿದ್ದಾರೆ.
ಅರಮನೆ ಮೈದಾನದಲ್ಲಿ 40 ಎಕರೆ ಜಾಗದಲ್ಲಿ ಅದ್ಧೂರಿ ಮಂಟಪ
ಅರಮನೆ ಮೈದಾನದ 40 ಎಕರೆ ಜಾಗದಲ್ಲಿ ಅದ್ಧೂರಿ ಸೆಟ್ ನಿರ್ಮಾಣವಾಗುತ್ತಿದೆ. 15 ಎಕರೆ ಪಾರ್ಕಿಂಗ್ಗೆ ಮೀಸಲಿಡಲಾಗುತ್ತಿದೆ. 27 ಎಕರೆಯಲ್ಲಿ ಮದುವೆ ಕಾರ್ಯ ನಡೆಯಲಿದೆ. ಮುಹೂರ್ತದ ಮದುವೆ ಮಂಟಪವನ್ನು ಸುಮಾರು 4 ಎಕರೆ ಜಾಗದಲ್ಲಿ ಹಾಕಲಾಗುತ್ತಿದೆ. ವಿವಾಹ ಆರತಕ್ಷತೆಗೆ ಮೂರೂವರೆ ಎಕರೆ ಜಾಗೆ ಬಳಸಿಕೊಳ್ಳಲಾಗುತ್ತಿದೆ. ಊಟಕ್ಕಾಗಿ 6 ಎಕರೆಯನ್ನು ಮೀಸಲಿಡಲಾಗುತ್ತಿದೆ.
ಮಾ.5ನೇ ತಾರೀಖಿನಂದು ಬೆಳಗ್ಗೆ 7ರಿಂದ 9 ಗಂಟೆವರೆಗೆ ವಿವಾಹ ಮಹೂರ್ತವಿದೆ. ವಿವಾಹದ ನಂತರ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ರವರೆಗೂ ಆರತಕ್ಷತೆ ನಡೆಯಲಿದೆ. ಈ ವೇಳೆ ಕರ್ನಾಟಕದ ಮೂಲೆ ಮೂಲೆಯಿಂದ ಬರುವ ಅಭಿಮಾನಿಗಳು, ಕಾರ್ಯಕರ್ತರು, ಗಣ್ಯರು ವಧು ವರರಿಗೆ ಶುಭ ಹಾರೈಸಲು ಇಲ್ಲ ಅವಕಾಶ ಕಲ್ಪಿಸಲಾಗಿದೆ. ಮುಂಬೈನಿಂದ ಬಂದಿರುವ ಬಾಲಿವುಡ್ ಕಲಾನಿರ್ದೇಶಕರು ಮತ್ತು ಕರ್ನಾಟಕದ ಖ್ಯಾತ ಕಲಾ ನಿರ್ದೇಶಕರು ಆರತಕ್ಷತೆಗೆ ಸೆಟ್ ಹಾಕುತ್ತಿದ್ದಾರೆ.
ಅಂಬಾನಿ ಪುತ್ರನ ವಿವಾಹದಲ್ಲಿ ವಿಡಿಯೊಗ್ರಫಿ ಮಾಡಿದವರಿಂದ ಚಿತ್ರೀಕರಣ
ಬಾಲಿವುಡ್ ಸ್ಟಾರ್ ವಸ್ತ್ರವಿನ್ಯಾಸಕಿ ಸಾನಿಯಾ ಸರ್ದಾರಿಯಾ ವಧುವಿಗೆ ಬಟ್ಟೆ ಡಿಸೈನ್ ಮಾಡಿದ್ದಾರೆ. ನಟಿ ದೀಪಿಕಾ ಪಡುಕೋಣೆ ಮದುವೆಯಲ್ಲಿ ಆಕೆಗೆ ಮೇಕಪ್ ಮಾಡಿದವರೇ, ಶ್ರೀರಾಮುಲು ಪುತ್ರಿ ರಕ್ಷಿತಾ ಅವರಿಗೂ ಮೇಕಪ್ ಮಾಡುತ್ತಿದ್ದಾರೆ. ಮದುವೆ ಚಿತ್ರೀಕರಣ ಮಾಡುತ್ತಿರುವುದು ಅಂಬಾನಿ ಮಗನ ಮದುವೆಗೆ ಚಿತ್ರೀಕರಣ ಮಾಡಿದ ಜಯರಾಮನ್ ಪಿಳ್ಳೈ.
ಊಟಕ್ಕಾಗಿ ಉತ್ತರ ಕರ್ನಾಟಕದಿಂದ ಬಾಣಸಿಗರನ್ನು ಕರೆತರಲಾಗುತ್ತಿದೆ. ಗದಗ, ಹುಬ್ಬಳ್ಳಿ ಶೈಲಿಯ ವಿಶೇಷ ಊಟವನ್ನು ಬಾಳೆ ಎಲೆಯಲ್ಲಿ ಬಡಿಸಲಾಗುವುದು. ಸುಮಾರು 7000 ಜನರಿಗೆ ಒಂದೇ ಬಾರಿ ಊಟ ಬಡಿಸುವಂತ ಸುಸಜ್ಜಿತ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ 500 ಜನ ಊಟ ಬಡಿಸುವವರು, 1000 ಮಂದಿ ಬಾಣಸಿಗರು ಕೆಲಸ ಮಾಡಲಿದ್ದಾರೆ.
ತವರಿನವರಿಗಾಗಿ ಮಾ. 5ರಂದು ಬಳ್ಳಾರಿಯಲ್ಲಿ ಆರತಕ್ಷತೆ
ವಿವಾಹದ ನಂತರ ಅದೇ ದಿನ ಮಾ. 5ರಂದು ವಧು-ವರರು ಬಳ್ಳಾರಿಗೆ ತೆರಳಲಿದ್ದಾರೆ. ಸಂಜೆ ಬಳ್ಳಾರಿಯಲ್ಲಿ 6 ಗಂಟೆಯಿಂದ ಸ್ಥಳೀಯರಿಗಾಗಿ ಆರತಕ್ಷತೆಯನ್ನು ಏರ್ಪಡಿಸಲಾಗಿದ್ದು, ಅಲ್ಲಿ ಸುಮಾರು 12 ಸಾವಿರ ಮಂದಿ ಸೇರಲಿದ್ದಾರೆ. ತಮ್ಮ ಮಗಳಿಗೆ ತನ್ನೂರಿನ ಜನ ಮತ್ತು ಕರ್ನಾಟಕದ ಜನರ ಆಶೀರ್ವಾದ ಇರಲಿ ಎಂದು ಶ್ರೀರಾಮುಲು ಈ ಎಲ್ಲ ತಯಾರಿಗಳನ್ನು ಮಾಡುತ್ತಿದ್ದಾರೆ.