ಬಿಎಸ್ವೈ, ಎಚ್ಡಿಕೆ ಇಬ್ಬರಿಗೂ ದೇವರು ಬಲಗಡೆಯಿಂದ ಹೂವು ಕೊಟ್ಟಾಗ!
ಬೆಂಗಳೂರು, ಜುಲೈ 22: ಬಿಜೆಪಿಯವರಿಗೆ ವಿಶ್ವಾಸಮತ ಅದ್ಯಾವಾಗ ಮತಕ್ಕೆ ಹೋಗುತ್ತೆ ಎನ್ನುವ ಅವಸರವಾದರೆ, ಮೈತ್ರಿ ಪಕ್ಷದವರಿಗೆ ಇವತ್ತಿನ ಸದನದ ಸಮಯವನ್ನು ಹೇಗೆ ಮುಗಿಸುವುದು ಎನ್ನುವ ಚಿಂತೆ.
ಅದಕ್ಕಾಗಿಯೇ, ಸಚಿವ ಕೃಷ್ಣ ಭೈರೇಗೌಡರಿಂದ ಸುದೀರ್ಘ ಭಾಷಣದ ನಂತರ ಈಗ, ಅರಕಲಗೂಡು ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿಯವರ ಸರದಿ. ತಮ್ಮ ಭಾಷಣದಲ್ಲಿ ವ್ಯಂಗ್ಯವಾಗಿ ದೇವರು ಹೂವು ಕೊಟ್ಟಿದ್ದನ್ನು ರಾಮಸ್ವಾಮಿ ಪ್ರಸ್ತಾವಿಸಿದರು.
LIVE ಸದನದಲ್ಲಿ ಕಣ್ಣೀರಿಟ್ಟ ಅರವಿಂದ ಲಿಂಬಾವಳಿ
ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲೆಂದು ಬಿಜೆಪಿಯವರು ದೇವಸ್ಥಾನಕ್ಕೆ ಹೋಗುತ್ತಾರೆ. ಅತ್ತ, ಕುಮಾರಸ್ವಾಮಿಯವರು ಸಿಎಂ ಆಗಿ ಮುಂದುವರಿಯಬೇಕೆಂದು ಜೆಡಿಎಸ್ಸಿನವರೂ ದೇವಾಲಯಕ್ಕೆ ಹೋಗುತ್ತಾರೆ. ಇಬ್ಬರಿಗೂ, ಅಸ್ತು ಅಂದು, ದೇವರು ಬಲಗಡೆಯಿಂದ ಹೂವು ಕೊಡುತ್ತಾನೆ.
ಇದೇ ನೋಡಿ, ಜನರನ್ನು ಮರಳು ಮಾಡುವ ಕಲೆ. ಅಲ್ಲ ಸ್ವಾಮೀ.. ಬಲಗಡೆಯಲ್ಲಿ ಹೂವು ಜಾಸ್ತಿಯಿಟ್ಟರೆ, ಅದು ಭಾರಕ್ಕೆ ಕೆಳಗೆ ಬೀಳದೇ ಇರುತ್ತಾ? ನಾನು ಆಸ್ತಿಕನೂ ಅಲ್ಲ, ನಾಸ್ತಿಕನೂ ಅಲ್ಲ. ಏನ್ ಸ್ವಾಮಿ ಬೊಮ್ಮಾಯಿ ಸಾಹೇಬ್ರೇ ಏನು ಹೇಳುತ್ತೀರಿ, ನಿಮ್ಮಲ್ಲಿ ಕೂಡಾ ಜೆಡಿಎಸ್ ರಕ್ತವಿದೆ ಎಂದು ಎ ಟಿ ರಾಮಸ್ವಾಮಿ ಹೇಳಿದರು.
ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ನಾನೂ ದೇವಸ್ಥಾನಕ್ಕೆ ಹೋಗಿದ್ದೆ. ಆದರೆ, ನನಗೆ ದೇವರು ಸೆಂಟ್ರಲ್ ನಲ್ಲಿ ಹೂವು ಕೊಟ್ಟ ಎಂದಾಗ ಸದನ ನಗೆಗಡಲಲ್ಲಿ ತೇಲಿತು. ಮುಂದುವರಿಯುತ್ತಾ, ಇಬ್ಬರಿಗೂ ದೇವರು ಬಲಗಡೆಯಿಂದ ಹೂವು ಕೊಟ್ಟಿದ್ದಾನೆ, ದೇವರನ್ನೇ ಸಿಎಂ ಮಾಡಿಬಿಡೋಣ ಎಂದು ಸ್ಪೀಕರ್ ಹೇಳಿದರು.
ಸದನದೊಳಗೆ ಘಮ ಘಮಿಸಿದ 'ಮನ್ಸೂರ್ ಬಿರಿಯಾನಿ'!
ಸುಪ್ರೀಂಕೋರ್ಟ್ ಆದೇಶದಂತೆ ಅತೃಪ್ತ ಶಾಸಕರು ಬೆಂಗಳೂರಿಗೆ ಸ್ಪೀಕರ್ ಅವರನ್ನು ಭೇಟಿ ಮಾಡಲು ಬಂದಾಗ, ವಿಮಾನ ನಿಲ್ದಾಣದಿಂದ ಝೀರೋ ಟ್ರಾಫಿಕ್ ನಲ್ಲಿ ಅವರನ್ನು ಕರೆತರುವ ಅವಶ್ಯಕತೆ ಏನಿತ್ತು ಎಂದು ಶಾಸಕ ಎ ಟಿ ರಾಮಸ್ವಾಮಿ, ಗೃಹಸಚಿವ ಎಂ ಬಿ ಪಾಟೀಲರನ್ನು ಪ್ರಶ್ನಿಸಿದರು.