ಪಂಚರಾಜ್ಯ ಫಲಿತಾಂಶ: ಅಧಿವೇಶನದಲ್ಲಿ ಬಿಜೆಪಿ- ಕಾಂಗ್ರೆಸ್ ನಾಯಕರ ಪರಸ್ಪರ ಕಾಲೆಳೆತ
ಬೆಂಗಳೂರು, ಮಾ.11: ಉತ್ತರ ಪ್ರದೇಶ ಸಹಿತ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮತ್ತು ಬಿಜೆಪಿಯ ಮೇಲುಗೈ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ, ಪರಸ್ಪರ ಕಾಲೆಳೆತ, ರಾಜಕೀಯ ಮೇಲಾಟ, ವಾಗ್ಝರಿಗೆ ಕಾರಣವಾಯಿತು.
135 ಸೀಟು ಗೆಲ್ಲುತ್ತೇವೆ
ಸದನದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, 'ಬಿಜೆಪಿ 2023ರಲ್ಲಿಯೂ ಸಹ ಅಧಿಕಾರಕ್ಕೆ ಬರುತ್ತದೆ. ಅಲ್ಲದೆ, ಕನಿಷ್ಠ 135 ಸೀಟುಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ನಾವು ಬರುತ್ತೇವೆ. ಪಂಚರಾಜ್ಯ ಚುನಾವಣಾ ಫಲಿತಾಂಶ ಕರ್ನಾಟದಕ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಅಧಿವೇಶನ ಮುಗಿದ ಬಳಿಕ ರಾಜ್ಯದಾದ್ಯಂತ ಪ್ರವಾಸ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮನೆಮನೆಗೆ ತಲುಪಿಸಲಾಗುವುದು' ಎಂದು ಹೇಳಿದರು.
'ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ. ಆದರೆ ಸಿದ್ದರಾಮಯ್ಯನವರಿಗೆ ಹೇಳುತ್ತಿದ್ದೇನೆ. ಈಗಾಗಲೇ ಚುನಾವಣೆ ನಡೆದ ಐದೂ ರಾಜ್ಯಗಳಲ್ಲಿ ಜನರು ಕಾಂಗ್ರೆಸ್ನ್ನು ಮನೆಗೆ ಕಳುಹಿಸಿದ್ದಾರೆ. ಮುಂದಿನ ವರ್ಷ ಕರ್ನಾಟಕದಲ್ಲಿಯೂ ಇದು ಪುನರಾವರ್ತನೆಯಾಗುತ್ತದೆ. ನೀವು ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಕೂಡುವುದು ಖಚಿತ. ಕರ್ನಾಟಕವೂ ಸಹ ಕಾಂಗ್ರೆಸ್ ಮುಕ್ತ ಆಗುತ್ತದೆ' ಎಂದು ಅಬ್ಬರಿಸಿದರು.
ಈ ವೇಳೆ ರಾಮಲಿಂಗಾರೆಡ್ಡಿ ಮಧ್ಯ ಪ್ರವೇಶಿಸಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಮುಂದಿನ ಚುನಾವಣೆಯ ಬಗ್ಗೆ ಚರ್ಚೆ ಎಕೆ ಎಂದು ಪ್ರಶ್ನಿಸಿದರು.
ಜನ ನಿಮ್ಮನ್ನು ಹೊರಹಾಕಲು ಕಾಯುತ್ತಿದ್ದಾರೆ
ಆಗ ಎದ್ದು ನಿಂತ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 'ಯಡಿಯೂರಪ್ಪ ಅವರು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಮುಕ್ತ ಮಾಡಿದೆ' ಎಂದು ಕಾಲೆಳೆದರು.
ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದ್ದರೂ 2018ರಲ್ಲಿ ನೀವು ಸ್ಪಷ್ಟ ಬಹುಮತ ತರಲು ಸಾಧ್ಯವಾಗಿಲ್ಲ. ಈಗ 135 ಸೀಟುಗಳನ್ನು ಗೆಲ್ಲುವ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಇತ್ತೀಚೆಗೆ ಜನರ ಬಳಿ ಹೋಗಿಲ್ಲ ಎಂದು ಕಾಣುತ್ತಿದೆ. ಹೋಗಿ ಜನರನ್ನು ಮಾತನಾಡಿಸಿ ಕೇಳಿ, ನಿಮ್ಮ ರಾಜ್ಯ ಸರ್ಕಾರದಿಂದ ಜನರಿಗೆ ಬೇಸರಿಕೆ ಬಂದಿದ್ದು, ನಿಮ್ಮನ್ನು ಹೊರ ಹಾಕಲು ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದರು.
ನಿಮ್ಮ ನಾಯಕರು ಯಾರು ಸ್ವಾಮಿ?
ಆಗ ಮತ್ತೆ ಎದ್ದು ನಿಂತ ಯಡಿಯೂರಪ್ಪ, 'ನೀವು ಹೇಳಿದಂತೆ ಅಧಿಕಾರದಿಂದ ಯಾರೂ ನನ್ನನ್ನು ಕೆಳಗೆ ಇಳಿಸಿಲ್ಲ, ನಾನೇ ಸ್ವಯಂ ಪ್ರೇರಿತನಾಗಿ ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ್ದೇನೆ. ಯಾವುದೇ ಒತ್ತಡಗಳು ನನ್ನ ಮೇಲೆ ಇರಲಿಲ್ಲ. ಈ ವಿಚಾರ ರಾಜ್ಯದ ಜನರಿಗೂ ಗೊತ್ತಿದೆ' ಎಂದು ಹೇಳಿದರು.
ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟ ಆಗುತ್ತಿದೆ. ಸಿದ್ದರಾಮಯ್ಯನವರೇ ನೀವು ವಿರೋಧ ಪಕ್ಷದ ಸ್ಘಾನದಲ್ಲಿಯೇ ಕುಳಿತಿದ್ದರೆ ರಾಜ್ಯದಲ್ಲಿಯೂ ಧೂಳಿಪಟ ಆಗುತ್ತದೆ. ಆ ನೋವು ನನಗೂ ಇದೆ. ಆದರೆ, ನಿಮಗೆ ಆ ನೋವು ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಕಾಲೆಳೆದರು.
ಕಾಂಗ್ರೆಸ್ಗೆ ದೇಶದಲ್ಲಿ ಅಡ್ರೆಸ್ ಇಲ್ಲದಂತೆ ಆಗಿದೆ. ನಿಮ್ಮ ನಾಯಕರು ಯಾರು ಸ್ವಾಮಿ ಈಗ? ಎಂದು ಯಡಿಯೂರಪ್ಪ ಅವರು ಸಿದ್ದರಾಮಯ್ಯನವರನ್ನು ವ್ಯಂಗ್ಯ ಮಾಡಿದರು. ಕರ್ನಾಟಕದಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಉಸಿರಾಡುತ್ತಿದ್ದೀರಿ ಎಂದರು.
ಯಡಿಯೂರಪ್ಪ ಜನಮಾನಸದ ನಾಯಕ
ಆಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಸಿದ್ದರಾಮಯ್ಯ ನಾಯಕರು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ, ನಮ್ಮ ನಾಯಕ ಯಡಿಯೂರಪ್ಪ ಜನಮಾನಸದ ನಾಯಕ. ಅಧಿಕಾರದಲ್ಲಿ ಇದ್ದರೂ, ಇಲ್ಲದಿದ್ದರೂ ಅವರು ಜನರ ಮನಸ್ಸಿನಲ್ಲಿ ಸದಾ ಇರುತ್ತಾರೆ. ಅವರ ಮನಸ್ಸಿನಲ್ಲಿ ಎಷ್ಟೇ ನೋವು ಇದ್ದರೂ ಗಟ್ಟಿತನದಿಂದ ಇರುತ್ತಾರೆ' ಎಂದು ಹೇಳಿದರು.
Recommended Video