ಹೈಕಮಾಂಡ್ ಮುಷ್ಠಿಯಲ್ಲಿದ್ದಾರಾ ರಾಜ್ಯ ಬಿಜೆಪಿ ನಾಯಕರು!?
Recommended Video
ಬೆಂಗಳೂರು, ಮಾರ್ಚ್ 08: ನರೇಂದ್ರಮೋದಿ ಪ್ರಧಾನಿಯಾದ ನಂತರ, ಅಮಿತ್ ಶಾ ರಾಷ್ಟ್ರಾಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಬಿಜೆಪಿ ಹೈಕಮಾಂಡ್ ಭದ್ರವಾಗಿದೆ. ಹೀಗಾಗಿ ರಾಜ್ಯ ನಾಯಕರು ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಇದುವರೆಗೆ ಎಗ್ಗಿಲ್ಲದೆ ತಾವು ಆಡಿದ್ದೇ ಆಟ ಎಂದು ತಿಳಿದುಕೊಂಡಿದ್ದ ನಾಯಕರಿಗೆ ಕಡಿವಾಣವಾದರೂ ಪಕ್ಷದ ಹಿತದೃಷ್ಠಿಯಿಂದ ಉತ್ತಮ ಬೆಳವಣಿಗೆಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹಾಗೆನೋಡಿದರೆ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದ ಕಾಲದಲ್ಲಿ ರಾಜ್ಯ ನಾಯಕರು ಆಡಿದ್ದೇ ಆಟವಾಗಿತ್ತು. ಹೀಗಾಗಿಯೇ ಭ್ರಷ್ಟಾಚಾರ ವ್ಯಾಪಕವಾಗಿ ನಡೆದು ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಾಣುವಂತಾಗಿತ್ತು. ಹೈಕಮಾಂಡ್ ಹಿಡಿತದಲ್ಲಿ ಯಾವ ನಾಯಕರೂ ಇರಲಿಲ್ಲ. ಜತೆಗೆ ಹೈಕಮಾಂಡ್ ಹಿಡಿತ ಸಾಧಿಸುವಷ್ಟು ಅವತ್ತು ಸ್ಟ್ರಾಂಗ್ ಇರಲಿಲ್ಲ.
ಲೇವಡಿಗೆ ಕಾರಣವಾಯ್ತೇ ಬಿಜೆಪಿಯ 'ಬೆಂಗಳೂರು ರಕ್ಷಿಸಿ' ಯಾತ್ರೆ?!
ಜನ ಅಧಿಕಾರಕ್ಕೆ ಅವಕಾಶ ನೀಡಿದ್ದರಾದರೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ರಾಜ್ಯ ನಾಯಕರು ವಿಫಲರಾಗಿದ್ದರಲ್ಲದೆ, ತಮ್ಮೊಳಗಿನ ಕಚ್ಚಾಟದಿಂದಾಗಿ ಪಕ್ಷವೇ ಒಡೆದು ಹೋಳಾಗಿ ಹೀನಾಯ ಸೋಲು ಕಂಡಿದ್ದು ಇತಿಹಾಸ.
ದೆಹಲಿಯಲ್ಲಿದ್ದಾರೆ ಸೂತ್ರಧಾರ!
ಬದಲಾದ ಕಾಲಘಟ್ಟದಲ್ಲಿ ಬಿಜೆಪಿ ಹೈಕಮಾಂಡ್ ಈಗ ಬಹಳಷ್ಟು ಗಟ್ಟಿಯಾಗಿದೆ. ದೆಹಲಿಯಲ್ಲೇ ಕುಳಿತುಕೊಂಡು ರಾಜ್ಯ ನಾಯಕರ ಮೇಲೆ ಹಿಡಿತ ಸಾಧಿಸುವಷ್ಟು ಶಕ್ತಿಯೂ ಇದೆ. ರಾಷ್ಟ್ರಾಧ್ಯಕ್ಷ ಅಮಿತ್ ಮತ್ತು ಮೋದಿ ಅವರು ಹೇಳಿದ್ದನ್ನು ತಲೆಬಾಗಿ ಸ್ವೀಕರಿಸುವಂತಹ ಸ್ಥಿತಿಯೂ ನಿರ್ಮಾಣವಾಗಿದೆ.
ಹೈಕಮಾಂಡ್ ಆಡಿದ್ದೇ ಆಟ!
ಸದ್ಯದ ಸ್ಥಿತಿಯಲ್ಲಿ ಹೈಕಮಾಂಡ್ ಆಡಿಸಿದ ರೀತಿಯಲ್ಲಿ ರಾಜ್ಯ ಬಿಜೆಪಿ ನಾಯಕರು ಆಡುವ ಸ್ಥಿತಿ ಬಂದೊದಗಿದೆ. ರಾಷ್ಟ್ರೀಯ ನಾಯಕರ ಮಾತಿಗೆ ಎದುರಾಡದೆ ಅವರು ಹೇಳಿದ್ದಷ್ಟನ್ನೆ ಮಾಡಬೇಕಾಗಿದೆ. ಸ್ವತಂತ್ರವಾಗಿ ಯಾವ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಹಲವು ನಾಯಕರು ಕೈ ಹಿಸುಕಿಕೊಳ್ಳುವಂತಾಗಿದೆ.
ಶೀತಲ ಸಮರ ನಿಂತಿಲ್ಲ!
ಯಾವುದೇ ವಿಚಾರವಾದರೂ ನೇರವಾಗಿ ಅದನ್ನು ಕೈಗೊಳ್ಳಲಾಗದೆ ಹೈಕಮಾಂಡ್ ಸೂಚನೆ ಬಳಿಕವೇ ಮಾಡುವಂತಾಗಿದೆ. ಇದು ಒಂದು ರೀತಿಯಲ್ಲಿ ಉತ್ತಮ ಬೆಳವಣಿಗೆ. ಇದುವರೆಗೆ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದುದನ್ನು ನಾವು ನೋಡಿದ್ದೇವೆ. ಈಗಲೂ ಅಷ್ಟೆ ಇಬ್ಬರು ನಾಯಕರು ಒಂದಾದಂತೆ ಕಾಣುತ್ತಿದ್ದರೂ ಶೀತಲ ಸಮರ ಮುಂದುವರೆದಿದೆ. ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಹಾಗೂ ಪಿಯೂಶ್ ಗೋಯಲ್ ರಾಜ್ಯ ವಿಧಾನಸಭೆ ಚುನಾವಣೆ ಉಸ್ತುವಾರಿ, ಸಹ ಉಸ್ತುವಾರಿಯಾಗಿ ಜವಬ್ದಾರಿ ವಹಿಸಿಕೊಂಡಿದ್ದಾರೆ. ಇದು ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಮುರಳೀಧರ್ ರಾವ್ ಅವರಿಗೆ ಬಲ ನೀಡಿದೆ.
ತಂತ್ರ ರೂಪಿಸಿದ ಹೈಕಮಾಂಡ್
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕೆಂಬ ಟಾರ್ಗೆಟ್ ಅನ್ನು ರಾಜ್ಯ ನಾಯಕರಿಗೆ ನೀಡಿರುವುದರಿಂದ ತುಟಿಪಿಟಿಕ್ ಎನ್ನದೆ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ. ಪರಿವರ್ತನೆ ಯಾತ್ರೆಯಿಂದ ಆರಂಭವಾಗಿರುವ ಬಿಜೆಪಿ ಯಾತ್ರೆ ಬೆಂಗಳೂರು ರಕ್ಷಿಸಿ ಯಾತ್ರೆ, ಜನಸುರಕ್ಷಾ ಪಾದಯಾತ್ರೆ, ಕಮಲ ಯಾತ್ರೆ, ಮುಷ್ಠಿ ಧಾನ್ಯ ಅಭಿಯಾನ ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡಿ ಮುಗಿಸಿದೆ. ಇನ್ನು ಹಲವು ಕಾರ್ಯಕ್ರಮಗಳ ಮೂಲಕ ತಳಮಟ್ಟದ ಕಾರ್ಯಕರ್ತರಿಂದ ಪಕ್ಷವನ್ನು ಬಲಿಷ್ಠಗೊಳಿಸಲು ಹೈಕಮಾಂಡ್ ತಂತ್ರ ರೂಪಿಸಿದ್ದು, ಅದನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಬಿಜೆಪಿಯ ರಾಜ್ಯ ನಾಯಕರದ್ದಾಗಿದೆ.
ಯಾರ ಆಟವೂ ನಡೆಯುತ್ತಿಲ್ಲ!
ರಾಜ್ಯ ನಾಯಕರೆಲ್ಲ ಹೈಕಮಾಂಡ್ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವುದರಿಂದ ಇಲ್ಲಿ ಯಾರ ಆಟವೂ ನಡೆಯದಂತಾಗಿದೆ. ಇದನ್ನೆಲ್ಲ ನೋಡುತ್ತಿರುವ ಸಾಮಾನ್ಯ ಜನರಲ್ಲಿ ಆಶಾಭಾವನೆ ಚಿಗುರಿದೆ. ಒಂದು ವೇಳೆ ಬಿಜೆಪಿ ಆಡಳಿತಕ್ಕೆ ಬಂದರೆ ನಿಯತ್ತಾಗಿ ಆಡಳಿತ ನಡೆಸಬಹುದೇನೋ ಎಂದು ಜನ ಯೋಚನೆ ಮಾಡುತ್ತಿದ್ದಾರೆ.