ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ತೆಗೆದುಕೊಂಡರು ಮತ್ತೊಂದು ಮಹತ್ವದ ನಿರ್ಧಾರ!
ಬೆಂಗಳೂರು, ಜೂ. 23: ತಮ್ಮ ದೂರವಾಣಿ ಕದ್ದಾಲಿಕೆ ಪ್ರಕರಣದ ಕುರಿತು ನಡೆಯುತ್ತಿರುವ ತನಿಖೆಯಿಂದ ಹಿಂದೆ ಸರಿಯದಿರಲು ಶಾಸಕ ಅರವಿಂದ ಬೆಲ್ಲದ ನಿರ್ಧರಿಸಿದ್ದಾರೆ. "ದೂರವಾಣಿ ಕದ್ದಾಲಿಕೆ ಆಗಿರುವುದರ ಕುರಿತು ಗೃಹ ಇಲಾಖೆಗೆ ದೂರು ಸಲ್ಲಿಸಿದ್ದೇನೆ. ಆ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ" ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಟ್ವಿಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
"ಆದರೆ, ಕೆಲವು ಮಾಧ್ಯಮಗಳಲ್ಲಿ ನಾನು ಕೊಟ್ಟಿದ್ದ ದೂರನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ ಎಂಬ ಸುದ್ದಿಗಳು ಪ್ರಕಟವಾಗುತ್ತಿವೆ. ಅಂತಹ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ನನ್ನ ದೂರವಾಣಿ ಟ್ಯಾಪ್ ಆಗಿರುವ ಕುರಿತು ಸಂಪೂರ್ಣ ತನಿಖೆಯಾಗಿ ಸತ್ಯ ಹೊರಬರಬೇಕಿದೆ. ಹೀಗಾಗಿ ದೂರು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ" ಎಂದು ಶಾಸಕ ಅರವಿಂದ ಬೆಲ್ಲದ ಅವರು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆ ಚರ್ಚೆ ತೀವ್ರವಾಗಿದ್ದ ಸಂದರ್ಭದಲ್ಲಿಯೇ ತಮ್ಮ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಮಾಡಿದ್ದರು. ಏನಿದು ಪ್ರಕರಣ? ಇಲ್ಲಿದೆ ಮಾಹಿತಿ!
ಏನಿದು ಶಾಸಕರ ದೂರವಾಣಿ ಕದ್ದಾಲಿಕೆ?
ಕಳೆದ ವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು, "ನನ್ನ ದೂರವಾಣಿ ಕದ್ದಾಲಿಕೆ ಆಗುತ್ತಿದೆ. ದೂರವಾಣಿ ಕರೆ ಆಧರಿಸಿ ನನ್ನನ್ನು ಗಮನಿಸಲಾಗುತ್ತಿದೆ" ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತವಿರುವಾಗ, ಆಡಳಿತ ಪಕ್ಷದ ಶಾಸಕರಿಂದಲೇ ದೂರವಾಣಿ ಕದ್ದಾಲಿಕೆ ಆರೋಪ ಬಂದಿದ್ದು ಸಂಚಲನ ಮೂಡಿಸಿತ್ತು. ಇದೇ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಬೆಲ್ಲದ್ ಅವರು ದೂರು ಸಲ್ಲಿಸಿದ್ದರು.
ದೂರವಾಣಿ ಕದ್ದಾಲಿಕೆ ಶಾಸಕ ಬೆಲ್ಲದ ದೂರು
ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದ ಶಾಸಕ ಅರವಿಂದ ಬೆಲ್ಲದ್ ಅವರು ಈ ಕುರಿತು ತನಿಖೆ ನಡೆಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರಿಗೆ ದೂರು ಸಲ್ಲಿಸಿದ್ದಾಗಿ ಹೇಳಿದ್ದರು. ಜೊತೆಗೆ ಈ ಬಗ್ಗೆ ಪೊಲೀಸರಿಗೂ ದೂರು ಸಲ್ಲಿಸಿದ್ದರು. ಹೀಗೆ ದೂರು ಸಲ್ಲಿಸುವಾಗ ಶಾಸಕ ಬೆಲ್ಲದ್ ಅವರು ಕೆಲವು ಸಾಕ್ಷಿಗಳನ್ನೂ ನೀಡಿದ್ದರು. ಜೊತೆಗೆ ಪ್ರಮುಖ ಕಾರಣವನ್ನು ವಿವರಿಸಿದ್ದರು.
ಶಾಸಕ ಬೆಲ್ಲದ ವಿರುದ್ಧ ಸಂಚು?
"ರಾಜ್ಯದಲ್ಲಿ ಬಹಳಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ" ಎಂದು ಹೇಳಿದ್ದ ಶಾಸಕ ಅರವಿಂದ ಬೆಲ್ಲದ ಅವರು, "ನನಗೆ ಯುವರಾಜ ಸ್ವಾಮಿ ಎಂಬುವರು ಪದೇ ಪದೇ ದೂರವಾಣಿ ಕರೆ ಮಾಡಿದ್ದರು" ಎಂದಿದ್ದರು. "ಯುವರಾಜ ಸ್ವಾಮಿ ಎಂಬುವರ ಬಗ್ಗೆ ನನಗೆ ಗೊತ್ತಿಲ್ಲ. ನನ್ನಲ್ಲಿ ಯಾವುದೇ ರೀತಿಯ ತಪ್ಪು ಇಲ್ಲ. ಆದ್ದರಿಂದ ನನ್ನನ್ನು ಯಾವುದೋ ಪ್ರಕರಣದಲ್ಲಿ ಸಿಕ್ಕಿಹಾಕಿಸಲು ಸಂಚು ಮಾಡಲಾಗುತ್ತಿದೆ" ಎಂಬ ಗಂಭೀರ ಆರೋಪವನ್ನು ಬೆಲ್ಲದ್ ಮಾಡಿದ್ದರು. "ಜೈಲಿನಲ್ಲಿ ಇರುವ ವ್ಯಕ್ತಿಯೊಬ್ಬ ಯಾಕೆ ನನಗೆ ಕಾಲ್ ಮಾಡುತ್ತಾನೆ? ಎಂದು ಪ್ರಶ್ನಿಸಿದ್ದ ಬೆಲ್ಲದ ಅವರು, ಜೊತೆಗೆ ಆ ದೂರವಾಣಿ ಕರೆ ಹಿಂದೆ ದೊಡ್ಡ ಪಿತೂರಿ ಇದೆ" ಎಂದು ಆರೋಪಿಸಿದ್ದರು.
Recommended Video
ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಚರ್ಚೆ
ಶಾಸಕ ಅರವಿಂದ ಬೆಲ್ಲದ ಅವರ ಫೋನ್ ಕದ್ದಾಲಿಕೆ ಬಗ್ಗೆ ತನಿಖೆ ಆಗಲಿ ಎಂದು ವಿರೋಧ ಪಕ್ಷಗಳ ನಾಯಕರೂ ಒತ್ತಾಯಿಸಿದ್ದರು. ಅದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಭಾರಿ ಚರ್ಚೆಗಳು ಬಿಜೆಪಿಯಲ್ಲಿ ನಡೆದಿದ್ದವು. ಅದೇ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ದೆಹಲಿಗೆ ತೆರಳಿದ್ದಕ್ಕೂ ನಾಯಕತ್ವ ಬದಲಾವಣೆಗೂ ಏನಾದರೂ ಸಂಬಂಧ ಇರಬಹುದಾ? ಎಂಬ ಚರ್ಚೆಗಳು ನಡೆದಿದ್ದವು.
ಶಾಸಕ ಅರವಿಂದ ಬೆಲ್ಲದ ಅವರು ಕೊಟ್ಟಿದ್ದ ದೂರಿನ ತನಿಖೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ತನಿಖೆಯಿಂದ ಹಿಂದೆ ಸರಿಯುತ್ತಿರುವ ಸುದ್ದಿಗಳು ಹರಿದಾಡಿದ್ದವು. ಅದಕ್ಕೆ ಅರವಿಂದ ಬೆಲ್ಲದ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಈ ಪ್ರಕರಣ ಬಿಜೆಪಿಯಲ್ಲಿ ಮತ್ತೊಂದು ಹಂತದ ರಾಜಕೀಯ ವಿಪ್ಲವಕ್ಕೆ ಕಾರಣವಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.