ತನ್ನನ್ನು ಕಡೆಗಣಿಸುತ್ತಿರುವ ವರಿಷ್ಠರಿಗೆ ಭರ್ಜರಿ ಸಡ್ಡು ಹೊಡೆದ ಯಡಿಯೂರಪ್ಪ?
ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಚ್ಚರಿಯ ನಡೆಯನ್ನು ಇಟ್ಟಿದ್ದಾರೆ. 28 ವಿವಿಧ ನಿಗಮ ಮಂಡಳಿಗೆ ಅಧ್ಯಕ್ಷರು ನೇಮಕಗೊಂಡಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಿಎಂ ಅವರನ್ನು ಭೇಟಿಯಾದ ಬೆನ್ನಲ್ಲೇ ಸಿಎಂ ಈ ಆದೇಶ ಹೊರಡಿಸಿದ್ದಾರೆ.
ಸಂಪುಟ ವಿಸ್ತರಣೆಯ ಸಂಬಂಧ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಬಂದು ಹತ್ತು ದಿನದ ಮೇಲಾದರೂ, ಈ ಬಗ್ಗೆ ಗ್ರೀನ್ ಸಿಗ್ನಲ್ ಬಿಎಸ್ವೈಗೆ ಸಿಕ್ಕಿಲ್ಲ. ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ವರಿಷ್ಠರಿಂದ ಕಡೆಗಣಿಸಲ್ಪಡುತ್ತಿರುವ ಬಿಎಸ್ವೈ, ನಿಗಮ ಮಂಡಳಿ ನೇಮಕಾತಿಯಲ್ಲಿ ಮೇಲುಗೈ ಸಾಧಿಸಿದ್ದಾರೆ.
ಕೆಲವೊಂದು ಮೂಲಗಳ ಪ್ರಕಾರ, ರಾಜ್ಯಾಧ್ಯಕ್ಷ ನಳಿನ್ ಕಟೀಲ್ ನೀಡಿದ್ದ ಪಟ್ಟಿಯಲ್ಲಿ ಹೆಚ್ಚಿನವರಿಗೆ ಯಡಿಯೂರಪ್ಪ ಮಣೆಹಾಕಿಲ್ಲ ಎಂದು ಹೇಳಲಾಗುತ್ತಿದೆ. ಆ ಮೂಲಕ, ರಾಜ್ಯದ ಕೆಲವೊಂದು ಮುಖಂಡರಿಗೆ ಮತ್ತು ಹೈಕಮಾಂಡಿಗೂ ಸಂದೇಶ ರವಾನಿಸುವ ಉದ್ದೇಶ ಬಿಎಸ್ವೈಗೆ ಹೊಂದಿದ್ದಾರೆಯೇ ಎನ್ನುವ ಪ್ರಶ್ನೆ ಮೂಡುವಂತಾಗಿದೆ.
ತೀವ್ರ ಕುತೂಹಲ ಮೂಡಿಸಿದ ಸಿಎಂ ಯಡಿಯೂರಪ್ಪ ಅವರ ನಡೆ!
ಒಂದು ಕಡೆ ಪಕ್ಷ ಮತ್ತು ಸಂಘಟನೆ ಬಲವೃದ್ದನೆಗೆ ಅವಕಾಶ ನೀಡಿ, ಜೊತೆಗೆ, ತಮ್ಮಾಪ್ತರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ, ಯಡಿಯೂರಪ್ಪ ಒಂದು ರೀತಿಯಲ್ಲಿ ಶಕ್ತಿಪ್ರದರ್ಶನ ಮಾಡಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ.
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ
ಕಳೆದ ಸೋಮವಾರ (ನ 23) ಯಡಿಯೂರಪ್ಪನವರನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿಯಾಗಿದ್ದರು. ಇದಾದ ನಂತರ, ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಕೂಡಾ ಬಿಎಸ್ವೈ ಜೊತೆ ಚರ್ಚಿಸಿದ್ದರು. ಈ ವೇಳೆ, ಪಕ್ಷದ ಪರವಾಗಿ ನಿಗಮ ಮಂಡಳಿ ಅಧ್ಯಕ್ಷಗಿರಿಗೆ ಪಟ್ಟಿಯನ್ನು ನೀಡಿದ್ದರು. ಪಟ್ಟಿಯಲ್ಲಿದ್ದ ಕೆಲವು ಹೆಸರುಗಳನ್ನು ಮಾತ್ರ ಬಿಎಸ್ವೈ ಆಯ್ಕೆ ಮಾಡಿ, ತಾವು ಫೈನಲ್ ಮಾಡಿದ ಪಟ್ಟಿಗೇ ಹೆಚ್ಚಿನ ಆದ್ಯತೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ
ಎಲ್ಲರೂ ಬಯಸುವ ಪ್ರತಿಷ್ಠಿತ ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷಗಿರಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪಾಲಾಗಿದೆ. ಸಿಎಂ ಕಾರ್ಯದರ್ಶಿಯಾಗಿದ್ದ ವಿಶ್ವನಾಥ್, ಬಿಎಸ್ವೈ ಪರಮಾಪ್ತರಲ್ಲಿ ಒಬ್ಬರು. ಇದರ ಜೊತೆಗೆ, ರಾಮನಗರದ ಮುಖಂಡ, ಬಿ.ವೈ.ವಿಜಯೇಂದ್ರ ಅವರ ಆಪ್ತ ಎಂ.ರುದ್ರೇಶ್ ಅವರಿಗೂ ಸ್ಥಾನ ಲಭಿಸಿದೆ.
ತಾರಾ ಅನುರಾಧ, ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ
ಇನ್ನು, ತಾರಾ ಅನುರಾಧ, ತಮ್ಮೇಶ್ ಗೌಡ, ಈಶ್ವರಗೌಡ ಚಿಕ್ಕನಗೌಡ್ರು, ಎಸ್.ಆರ್.ಗೌಡ, ಮಹದೇವಸ್ವಾಮಿ, ಬಿ.ಸಿ.ನಾಗೇಶ್ ಮುಂತಾದವರು ಬಿಎಸ್ವೈ/ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇನ್ನು ಶಿರಾ ಉಪಚುನಾವಣೆಯಲ್ಲಿ ವಿಜಯೇಂದ್ರ ಬೆನ್ನಿಗೆ ನಿಂತು ಪಕ್ಷಕ್ಕೆ ದುಡಿದಿದ್ದ ಬಿ.ಕೆ.ಮಂಜುನಾಥ್ ಮತ್ತು ಎಸ್.ಆರ್.ಗೌಡ ಅವರಿಗೂ ಅಧ್ಯಕ್ಷಗಿರಿ ಲಭಿಸಿದೆ.
ಕಡೆಗಣಿಸುತ್ತಿರುವ ವರಿಷ್ಠರಿಗೆ ಸಡ್ಡು ಹೊಡೆದ ಯಡಿಯೂರಪ್ಪ
ಸಂಘ ಪರಿವಾರದ ಹೆಚ್ಚಿನವರಿಗೆ ಈ ಬಾರಿ ಯಡಿಯೂರಪ್ಪ ಪ್ರಾಶಸ್ತ್ಯ ನೀಡಿಲ್ಲ ಎನ್ನುವ ಮಾತಿನ ನಡುವೆ, ಎರಡನೇ ಹಂತದ ಮುಖಂಡರಿಗೂ ಯಡಿಯೂರಪ್ಪ ಆದ್ಯತೆ ನೀಡಿದ್ದಾರೆ. ಆ ಮೂಲಕ, ತಮ್ಮ ವೈಯಕ್ತಿಕ ವರ್ಚಸ್ಸನ್ನೂ ಹೆಚ್ಚಿಸಿಕೊಳ್ಳುವ ಮೂಲಕ, ಹೈಕಮಾಂಡಿಗೂ ಬಿಸಿಮುಟ್ಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.