ಬಿ ಎಲ್ ಸಂತೋಷ್ ದೆಹಲಿಗೆ, ಬಿಎಸ್ವೈ ರಾಜ್ಯಕ್ಕೆ: ಶಾ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದದ್ದು ಹೀಗೆ!
Recommended Video
ಒಬ್ಬರು ರಾಜಕೀಯ ಚಾಣಾಕ್ಷ, ಇನ್ನೊಬ್ಬರು ಸಂಘಟನಾ ಚತುರ ಎಂದು ಕಾರ್ಯಕರ್ತರ ವಲಯದಲ್ಲಿ ಕರೆಯಲ್ಪಡುವವರು. ಬಿ. ಎಲ್. ಸಂತೋಷ್ ಅವರನ್ನು ಕರ್ನಾಟಕದಿಂದ ದೆಹಲಿಗೆ ಕರೆಸಿಕೊಂಡಿರುವ ಅಮಿತ್ ಶಾ ಅವರ ನಿರ್ಧಾರದಲ್ಲಿ ಎರಡು ಸ್ಪಷ್ಟ ವಿಷಯಗಳಿವೆ ಎಂಬುದು ಪಕ್ಷದ ಮೂಲಗಳ ವಿಶ್ಲೇಷಣೆ.
ಪಕ್ಷದ ಅಧಯಕ್ಷ ಅಮಿತ್ ಶಾ ಪಕ್ಷ ಸಂಘಟನೆ ಜತೆಗೆ ಆಯಕಟ್ಟಿನ ಗೃಹಖಾತೆಯನ್ನು ಸಂಬಾಳಿಸುತ್ತಿದ್ದಾರೆ. ಕಾಶ್ಮೀರದ ವಿಚಾರದಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ, ಪಕ್ಷ ಸಂಘಟನೆಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಕಾರ್ಯಾಧ್ಯಕ್ಷ ಹುದ್ದೆಯನ್ನು ಹುಟ್ಟುಹಾಕಲಾಗಿತ್ತು ಮತ್ತು ಅದಕ್ಕೆ ಜೆ. ಪಿ. ನಡ್ಡಾ ಅವರನ್ನು ನೇಮಿಸಲಾಗಿತ್ತು.
ಸರಳ ನಡೆ-ನುಡಿ, ಅಗಾಧ ವೈಚಾರಿಕ ಶಕ್ತಿ; ಇವರೇ ಬಿ. ಎಲ್. ಸಂತೋಷ್
ಪಕ್ಷ ಕಟ್ಟುವುದರಲ್ಲಿ ನಡ್ಡಾ ಅವರದ್ದು ಎತ್ತಿದ ಕೈ ಎಂಬುದು ಕೇಳಿ ಬರುವ ಮಾತುಗಳು. ಈಗ, ರಾಷ್ಟ್ರಮಟ್ಟದಲ್ಲಿ ಇನ್ನೊಂದು ಪ್ರಮುಖ ಬದಲಾವಣೆ ಮಾಡಿರುವ ಅಮಿತ್ ಶಾ, ಸಂಘಟನಾ ಚತುರ ಎಂದೇ ಕರೆಯಲ್ಪಡುವ ಆರ್ಎಸ್ಎಸ್ ಹಿನ್ನೆಲೆಯ ಬಿ. ಎಲ್. ಸಂತೋಷ್ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ.
"ಮತ್ತೆ ಕೆಲಸ ಮಾಡೋಣ" : ಬಿ.ಎಲ್.ಸಂತೋಷ್
ಸೂಕ್ಷ್ಮವಾಗಿ ಗಮನಿಸಿದರೆ, ಅಮಿತ್ ಶಾ ನಿರ್ಧಾರದಲ್ಲಿ ಎರಡು ಉದ್ದೇಶವಿದೆ ಎಂಬುದನ್ನು ಪಕ್ಷದ ಮೂಲಗಳು ವಿಶ್ಲೇಷಣೆಯನ್ನು ಮುಂದಿಡುತ್ತವೆ. ಸಂತೋಷ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಡುವಿನ ಸಂಬಂಧ ಅಷ್ಟಕಷ್ಟೇ ಇದ್ದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇವರಿಬ್ಬರ ನಡುವಿನ ಕೆಲಸದ ಮಧ್ಯೆ ಮುಂದಿನ ದಿನಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಬಾರದಿರಲೆಂದು ಅಮಿತ್ ಶಾ, ಸಂತೋಷ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. ಅಷ್ಟೆ ಅಲ್ಲ ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿಯೂ ಸಂತೋಷ್ ನೇಮಕಾತಿ ಹಿಂದೆ ಬೇರೆ ಲೆಕ್ಕಾಚಾರಗಳು ಇದ್ದಂತಿವೆ.
ದಕ್ಷಿಣಭಾರತದಲ್ಲಿ ಮತ್ತೆ ಬಾಗಿಲು ತೆರೆಯಬಹುದು ಎನ್ನುವ ಸ್ಪಷ್ಟ ಲೆಕ್ಕಾಚಾರ
2014ರದಲ್ಲಿ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತಾದರೂ ದಕ್ಷಿಣ ಭಾರತದಲ್ಲಿ ಅದರ ಬೇರುಗಳು ಅಷ್ಟಾಗಿ ಭೂಮಿಗೆ ಇಳಿಯಲಿಲ್ಲ. ಈ ಪರಿಸ್ಥಿತಿ 2019ರಲ್ಲಿಯೂ ಹೆಚ್ಚಿನ ಬದಲಾವಣೆ ಕಾಣಲಿಲ್ಲ. ಹೀಗಾಗಿ ದಕ್ಷಿಣಭಾರತದಲ್ಲಿ ಪಕ್ಷವನ್ನು ಬೆಳೆಸುವ ನಿಟ್ಟಿನಲ್ಲಿ ನೇಮಕಾತಿ ನಡೆದಿದೆ. ಜತೆಗೆ ಕರ್ನಾಟಕದ ಬಿಜೆಪಿ ನಾಯಕರ ನಡುವೆ ಡಿಫರೆನ್ಸ್ ಬರಬಾರದು ಎನ್ನುವ ನಿಟ್ಟಿನಲ್ಲಿ ಸಂತೋಷ್ ಅವರನ್ನು ದೆಹಲಿಗೆ ಕರೆಸಿಕೊಳ್ಳುವ ನಿರ್ಧಾರಕ್ಕೆ ಅಮಿತ್ ಶಾ ಬಂದರು ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಅಧ್ಯಕ್ಷರ ನಂತರದ ಪ್ರಮುಖ ಸ್ಥಾನ ಎಂದೇ ಪರಿಗಣಿತವಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ನೇಮಕಗೊಂಡಿರುವುದು ಸಹಜವಾಗಿಯೇ ಇಂತಹ ವಿಶ್ಲೇಷಣೆಗಳಿಗೆ ಆಹಾರವಾಗಿದೆ.
ಅಮಿತ್ ಶಾ ವಹಿಸಿದ್ದ ಕೆಲಸವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಸಂತೋಷ್
ಕಳೆದ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ವಹಿಸಿದ್ದ ಕೆಲಸವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಂತೋಷ್ ಯಶಸ್ವಿಯಾಗಿದ್ದರು. ಉಡುಪಿ ಮೂಲದವರಾದ ಸಂತೋಷ್ ಅವರನ್ನು ಪಕ್ಷದ ರಾಷ್ಟ್ರಸೇವೆಗೆ ನಿಯುಕ್ತಿಗೊಳಿಸುವ ಹಿಂದೆ ಎರಡು ಉದ್ದೇಶವನ್ನು ಅಮಿತ್ ಶಾ ಹೊಂದಿದ್ದಾರೆ. ಒಂದು, ಮುಂಬರುವ ದೇಶದ ಇತರ ರಾಜ್ಯಗಳಲ್ಲಿ ನಡೆಯುವ ಅಸೆಂಬ್ಲಿ ಚುನಾವಣೆಗೆ ಪಕ್ಷಬಲವೃದ್ದನೆ ಮತ್ತೊಂದು ಕರ್ನಾಟಕದಲ್ಲಿ ಯೋಜನೆಯಂತೆ ಬಿಜೆಪಿ ಅಧಿಕಾರ ರಚಿಸಿದರೆ, ಯಾವುದೇ ಅಡೆತಡೆಯಿಲ್ಲದೇ ಬಿಎಸ್ವೈ ಅಧಿಕಾರ ನಡೆಸುವುದು.
ಸಂತೋಷ್ ಪದೋನ್ನತಿಯನ್ನು ಯಡಿಯೂರಪ್ಪ ಬಹುಷಃ ಖುಷಿಯಿಂದಲೇ ಸ್ವೀಕರಿಸಿರಬಹುದು
ಸಂತೋಷ್ ಪದೋನ್ನತಿಯನ್ನು ಯಡಿಯೂರಪ್ಪ ಬಹುಷಃ ಖುಷಿಯಿಂದಲೇ ಸ್ವೀಕರಿಸಿರಬಹುದು. ದೆಹಲಿಗೆ ಹೋಗುವ ಮುನ್ನ ಸಂತೋಷ್, ಯಡಿಯೂರಪ್ಪನವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ತಮ್ಮ ಮನೆಯ ಗೇಟ್ ತನಕ ಬಂದು ಸಂತೋಷ್ ಅವರನ್ನು ಬಿಎಸ್ವೈ ಬೀಳ್ಕೊಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತಿನ ಪ್ರಕಾರ, ವರಿಷ್ಠರ ಉತ್ತಮ ನಿರ್ಧಾರ ಇದೆಂದು.
ಯಡಿಯೂರಪ್ಪ ವಿರೋಧಿಸಿಕೊಂಡು ಬರುತ್ತಲೇ ಇದ್ದರು
ಸಂತೋಷ್ ಅವರನ್ನು ಹಿಂದಿನಿಂದಲೂ ಯಡಿಯೂರಪ್ಪ ವಿರೋಧಿಸಿಕೊಂಡು ಬರುತ್ತಲೇ ಇದ್ದರು. ಹಲವು ಬಾರಿ ಅಮಿತ್ ಶಾಗೆ ದೂರನ್ನೂ ನೀಡಿದ್ದರು. ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲೂ ಇಬ್ಬರ ನಡುವಿನ ಮನಸ್ತಾಪ ಬಹಿರಂಗವಾಗಿತ್ತು. "ತಂಡಸ್ಫೂರ್ತಿ ಇಲ್ಲದವರು ಹಾಗೂ ಗೆಲುವಿನ ಕೀರ್ತಿಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲದವರು ಎಂದಿಗೂ ಗೆಲುವು ಸಾಧಿಸಲಾರರು" ಎನ್ನುವ ಮೂಲಕ, ಯಡಿಯೂರಪ್ಪ ಮತ್ತು ಅಶೋಕ್ ವಿರುದ್ದ ಸಂತೋಷ್ ಅಸಹನೆ ಹೊರಹಾಕಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಬಿಜೆಪಿ ಅಧಿಕಾರಕ್ಕೇರಲು ಸಜ್ಜಾಗಿ ಕೂತಿದೆ
ಕರ್ನಾಟಕ ರಾಜಕೀಯ ವಿದ್ಯಮಾನದ ಸ್ಪಷ್ಟ ಚಿತ್ರಣ ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ. ಬಿಜೆಪಿ ಅಧಿಕಾರಕ್ಕೇರಲು ಸಜ್ಜಾಗಿ ಕೂತಿದೆ. ಈ ಹಂತದಲ್ಲಿ ಸಂತೋಷ್ ಅವರು ರಾಜ್ಯದಲ್ಲಿದ್ದರೆ, ಮುಂದಿನ ದಿನಗಳಲ್ಲಿ ಅದು ಆಡಳಿತಾತ್ಮಕವಾಗಿಯೂ ಪಕ್ಷಕ್ಕೆ ಹಿನ್ನಡೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಬಿ ಎಲ್ ಸಂತೋಷ್ ಅವರನ್ನು ದೆಹಲಿಗೆ ನಿಯುಕ್ತಿಗೊಳಿಸಲಾಗಿದೆ ಎನ್ನುವ ಮಾತಿದೆ.