ಬಲಿಷ್ಟ ಹೈಕಮಾಂಡ್ ಎದುರು ಮಂಡಿಯೂರಿದ ಬಿಜೆಪಿ ಅತೃಪ್ತರು
ಹೈಕಮಾಂಡ್ ಬಲಿಷ್ಟವಾಗಿದ್ದರೆ ಯಾವುದೇ ಪಕ್ಷ ವಿರೋಧಿ ಅಥವಾ ಪಕ್ಷಕ್ಕೆ ಮುಜುಗರ ತರುವ ಚಟುವಟಿಕೆಗಳಿಗೆ ಆಸ್ಪದವಿರುವುದಿಲ್ಲ ಎನ್ನುವುದಕ್ಕೆ ಕರ್ನಾಟಕ ರಾಜ್ಯ ಬಿಜೆಪಿ ಘಟಕದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ.
ಸಂಪುಟ ರಚನೆ, ಖಾತೆ ಹಂಚಿಕೆ ಮತ್ತು ಉಪಮುಖ್ಯಮಂತ್ರಿ ಹುದ್ದೆ ನೇಮಕ, ಎಲ್ಲವೂ, ರಾಜ್ಯ ಬಿಜೆಪಿ ಘಟಕದ ಹಿರಿಯರು ಮತ್ತು ಮುಖ್ಯಮಂತ್ರಿಗಳ ಕೈಮೀರಿ ನಡೆದಿರುವುದು ಎನ್ನುವುದು ಅತ್ಯಂತ ಸ್ಪಷ್ಟ. ತಾನು ನಡೆದಿದ್ದೇ ದಾರಿ ಎನ್ನುವಂತೆ, ಅಮಿತ್ ಶಾ, ಒಟ್ಟಾರೆಯಾಗಿ ರಾಜ್ಯ ಬಿಜೆಪಿ ಘಟಕದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಾ ಸಾಗುತ್ತಿದ್ದಾರೆ.
ಕೆಲವರಿಗೆ ಬಯಸದೇ ಬಂದ ಭಾಗ್ಯ, ಇನ್ನು ಕೆಲವರಿಗೆ ಬಯಸಿದ್ದೂ ಸಿಗದಿದ್ದ ನಂತರ, ಖಾತೆ ಹಂಚಿಕೆ ಬಿಕ್ಕಟ್ಟು ಭುಗಿಲೇಳುತ್ತೆ ಎನ್ನುವಷ್ಟರಲ್ಲಿ ಅಸಮಾದಾನಿತರು ಗಪ್ ಚುಪ್ ಆಗಿದ್ದಾರೆ. ಎಲ್ಲರೂ ಸೈಲೆಂಟ್ ಆಗಿದ್ದಾರೆ.
ಹೆಚ್ಚಿದ ಅಸಮಾಧಾನ: ಹೈಕಮಾಂಡ್ನಿಂದ ಬಂತು ಖಡಕ್ ಆದೇಶ
"ಬಿಜೆಪಿ ತಮಗೆ ತಾಯಿ ಇದ್ದ ಹಾಗೇ, ತಾಯಿಗೆ ಯಾರಾದರೂ ನೋವು ಮಾಡುತ್ತಾರಾ" ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ. ಇಲ್ಲಿ ಯಾರು ಯಾರಿಗೆ ನೋವು ಮಾಡುತ್ತಾರೆ ಎನ್ನುವುದಕ್ಕಿಂತ, ಬಿಜೆಪಿ ಹೈಕಮಾಂಡ್ ತನ್ನ ಸಾಮರ್ಥ್ಯವನ್ನು ಖಾತೆ ಅತೃಪ್ತರಿಗೆ ತೋರಿಸಿದೆ.
ಸೋನಿಯಾ ಪ್ರಬಲ ಹೈಕಮಾಂಡ್ ಆಗಿದ್ದಾಗ
ತಮ್ಮ ರಾಜಕೀಯದ ಆರಂಭದ ದಿನಗಳಲ್ಲಿ, ಸೋನಿಯಾ ಗಾಂಧಿ ಎಐಸಿಸಿಯ ಅಧ್ಯಕ್ಷೆಯಾಗಿದ್ದಾಗ, ಇದೇ ರೀತಿ ಕಾಂಗ್ರೆಸ್ಸಿನ ಹೈಕಮಾಂಡ್ ಪ್ರಬಲವಾಗಿತ್ತು. ಈಗ ಅದನ್ನು ಬಿಜೆಪಿಯಲ್ಲಿ ನೋಡಬಹುದಾಗಿದೆ. ಕರ್ನಾಟಕದಲ್ಲಿನ ಖಾತೆ ಹಂಚಿಕೆ ಮತ್ತು ಉಪ ಮುಖ್ಯಮಂತ್ರಿ ಹುದ್ದೆಯ ನೇಮಕದ ವಿಚಾರದಲ್ಲಿ ಅಮಿತ್ ಶಾ ನಿರ್ಧಾರವನ್ನು ಬಿಜೆಪಿಯ ಮಾತೃ ಸಂಘಟನೆ ಆರ್ಎಸ್ಎಸ್ ಕೂಡಾ ಬೆಂಬಲಿಸಿದ್ದರಿಂದ, ಎಲ್ಲಾ ಅಸಮಾಧಾನಿತರು ಸುಮ್ಮನಾಗಿದ್ದಾರೆ.
ಯಡಿಯೂರಪ್ಪ ಮತ್ತು ಬಿ ಎಲ್ ಸಂತೋಷ್
ತಮ್ಮ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿರುವುದರ ಹಿಂದೆ, "ತಮ್ಮ ಪಾತ್ರವೇನೂ ಇಲ್ಲ" ಎಂದು ಅಸಮಾಧಾನಿತರು ಟ್ವಿಟ್ಟರ್ನಲ್ಲಿ ಸ್ಟೇಟಸ್ ಹಾಕುತ್ತಿದ್ದಾರೆ. ಯಡಿಯೂರಪ್ಪ ಮತ್ತು ಬಿ. ಎಲ್. ಸಂತೋಷ್ ಬಳಿ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದರೂ, ಪಕ್ಷದ ವರಿಷ್ಠರ ವಿರುದ್ದ ಬಂಡಾಯ ಏಳುವ ಧೈರ್ಯ ತೋರದೇ, ಕೊಟ್ಟ ಖಾತೆಯನ್ನು ನಿಭಾಯಿಸುವತ್ತ ಮುಖ ಮಾಡುತ್ತಿದ್ದಾರೆ.
ಆರ್ ಅಶೋಕ್ಗೆ ಡಿಸಿಎಂ ಪಟ್ಟ ತಪ್ಪಿದ್ದು ಏಕೆ ? ಇಲ್ಲಿದೆ ಕಾರಣ
ಸಿಟ್ಟಾದ ವೇಗದಲ್ಲೇ ತಣ್ಣಗಾಗಿದ್ದಾರೆ
ಆರ್. ಅಶೋಕ್, ಶ್ರೀರಾಮುಲು, ಸಿ. ಟಿ. ರವಿ, ರಾಮದಾಸ್ ಮುಂತಾದವರು ಸಿಟ್ಟಾದ ವೇಗದಲ್ಲೇ ತಣ್ಣಗಾಗಿದ್ದಾರೆ ಅಥವಾ ಅನಿವಾರ್ಯತೆಯಿಂದ ಸುಮ್ಮನಾಗಿದ್ದಾರೆ. ಯಾಕೆಂದರೆ, ಅಂತಹ ಖಡಕ್ ಸಂದೇಶ ಬಿಜೆಪಿ ಹೈಕಮಾಂಡ್ನಿಂದ ಬಂದಿದೆ ಎನ್ನುತ್ತವೆ ಮೂಲಗಳು. ಸದ್ಯ, ಬಹುತೇಕ ಎಲ್ಲರನ್ನೂ ತಣ್ಣಗಾಗಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ಶಿಸ್ತು ಉಲ್ಲಂಘಿಸುವ ಶಾಸಕರು/ ಸಚಿವರುಗಳಿಂದ ರಾಜೀನಾಮೆ ಪಡೆಯಿರಿ
ಶಿಸ್ತು ಉಲ್ಲಂಘಿಸುವ ಶಾಸಕರಿಂದ ರಾಜೀನಾಮೆ ಪಡೆಯಿರಿ ಎನ್ನುವ ಸಂದೇಶ, ದೆಹಲಿಯಿಂದ ಯಡಿಯೂರಪ್ಪನವರಿಗೆ ರವಾನೆಯಾಗಿದೆ ಎಂದು ಹೇಳಲಾಗಿದೆ. ಅತೃಪ್ತಿಯನ್ನು ಹೊರಹಾಕುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಮತ್ತು ಹೈಕಮಾಂಡ್ ನಿರ್ಧಾರವನ್ನು ಪ್ರಶ್ನೆ ಮಾಡುವ, ನಾಯಕರು ನಮಗೆ ಬೇಕಾಗಿಲ್ಲ ಎನ್ನುವ ಎಚ್ಚರಿಕೆ, ಬಿಜೆಪಿ ವರಿಷ್ಟರಿಂದ ಬಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಶಾ ತನ್ನ ವರ್ಕಿಂಗ್ ಸ್ಟೈಲ್ ಅನ್ನು ರಾಜ್ಯ ಬಿಜೆಪಿ ಮುಖಂಡರಿಗೆ ತೋರಿಸಿದ್ದಾರೆ
ಒಟ್ಟಿನಲ್ಲಿ, ಖಾತೆ ಹಂಚಿಕೆಯ ನಂತರ, ರಾಜ್ಯ ಬಿಜೆಪಿಯಲ್ಲಿನ ಸಮನ್ವಯ ಅಲ್ಲೋಲಕಲ್ಲೋಲ ಆಗಬಹುದು ಎನ್ನುವ ರಾಜಕೀಯ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಸಂಘ ಪರಿವಾರವೂ, ಮೂವರು ಡಿಸಿಎಂ ನೇಮಕದ ಅಮಿತ್ ಶಾ ನಿರ್ಧಾರವನ್ನು ಸಮರ್ಥಿಸಿಕೊಂಡಿರುವುದರಿಂದ, ಖಾತೆಯ ಅತೃಪ್ತರು ಸುಮ್ಮನಾಗಿದ್ದಾರೆ. ಆ ಮೂಲಕ, ಅಮಿತ್ ಶಾ ತನ್ನ ವರ್ಕಿಂಗ್ ಸ್ಟೈಲ್ ಅನ್ನು ರಾಜ್ಯ ಬಿಜೆಪಿ ಮುಖಂಡರಿಗೆ ತೋರಿಸಿದ್ದಾರೆ.