ಐಫೋನ್ ಕಂಪೆನಿ ಧ್ವಂಸ: ತಪ್ಪೊಪ್ಪಿಕೊಂಡು ಕಾರ್ಮಿಕರ ಕ್ಷಮೆ ಕೋರಿದ ವಿಸ್ಟ್ರಾನ್
ಬೆಂಗಳೂರು, ಡಿಸೆಂಬರ್ 19: ಕೋಲಾರದ ನರಸಾಪುರ ಸಮೀಪದ ಘಟಕದಲ್ಲಿ ಉಂಟಾದ ಲೋಪಗಳನ್ನು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳುವವರೆಗೂ ತೈವಾನ್ ಮೂಲದ ಉತ್ಪಾದನಾ ಕಂಪೆನಿ ವಿಸ್ಟ್ರಾನ್ಗೆ ಯಾವುದೇ ಹೊಸ ವ್ಯವಹಾರಗಳನ್ನು ನೀಡುವುದಿಲ್ಲ ಎಂದು ಆಪಲ್ ಕಂಪೆನಿ ತಿಳಿಸಿದೆ.
ವೇತನ ಪಾವತಿ ಮಾಡದ ಕಾರಣ ರೊಚ್ಚಿಗೆದ್ದಿದ್ದ ಕೆಲವು ಕೆಲಸಗಾರರು ಘಟಕದ ಮೇಲೆ ದಾಳಿ ನಡೆಸಿ ಕೈಗೆ ಸಿಕ್ಕ ವಸ್ತುಗಳನ್ನು ಪುಡಿಮಾಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ವಿಸ್ಟ್ರಾನ್ ಕಂಪೆನಿಯ ಭಾರತದ ಘಟಕದ ಉಪಾಧ್ಯಕ್ಷರನ್ನು ಕಂಪೆನಿ ವಜಾಗೊಳಿಸಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೋರಿದೆ.
ವಿಸ್ಟ್ರಾನ್ ಘಟಕದಲ್ಲಿ ಉಂಟಾದ ಹಿಂಸಾಚಾರದ ಬಳಿಕ ನಡೆಸಿದ ತನಿಖೆಯಲ್ಲಿ ತೈವಾನ್ನ ಕಂಪೆನಿಯು ತನ್ನ ಪೂರೈಕೆದಾರ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ ಎಂದು ಅಮೆರಿಕದ ತಾಂತ್ರಿಕ ದಿಗ್ಗಜ ಆಪಲ್ ಹೇಳಿಕೆ ನೀಡಿದೆ.
ವಿಸ್ಟ್ರಾನ್ ಘಟಕಕ್ಕೆ ಪೂರೈಕೆ ನಿಲ್ಲಿಸುವುದೇ ಆ್ಯಪಲ್ ಕಂಪನಿ?
ಇದಕ್ಕೂ ಮುನ್ನ ಹೇಳಿಕೆ ಬಿಡುಗಡೆ ಮಾಡಿದ್ದ ವಿಸ್ಟ್ರಾನ್, ನರಸಾಪುರ ಸಮೀಪದ ತನ್ನ ಘಟಕದಲ್ಲಿನ ಕೆಲವು ಕೆಲಸಗಾರರಿಗೆ ಸರಿಯಾಗಿ ವೇತನ ಪಾವತಿ ಮಾಡಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿತ್ತು. ಈ ತಪ್ಪಿಗಾಗಿ ಭಾರತದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಹಿರಿಯ ಕಾರ್ಯಕಾರಿ ಅಧಿಕಾರಿಯನ್ನು ತೆಗೆದುಹಾಕುತ್ತಿರುವುದಾಗಿ ಹೇಳಿತ್ತು. ಮುಂದೆ ಓದಿ.
ವಿಸ್ಟ್ರಾನ್ ಮೇಲೆ ನಿಗಾ
ವಿಸ್ಟ್ರಾನ್ ಕಂಪೆನಿಯು ಸೂಕ್ತ ಕೆಲಸ ಅವಧಿಯ ನಿರ್ವಹಣೆಯನ್ನು ಅಳವಡಿಸುವಲ್ಲಿ ವಿಫಲವಾಗಿತ್ತು. ಇದರಿಂದ ಕೆಲವು ಕೆಲಸಗಾರರಿಗೆ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ವೇತನ ಪಾವತಿ ವಿಳಂಬವಾಗಿತ್ತು. ವಿಸ್ಟ್ರಾನ್ನ ತಿದ್ದಿಕೊಳ್ಳುವ ಕ್ರಮಗಳನ್ನು ಆಪಲ್ ಪರಿಶೀಲಿಸುವುದನ್ನು ಮುಂದುವರಿಸಲಿದೆ ಎಂದು ಆಪಲ್ ಕಂಪೆನಿ ತಿಳಿಸಿದೆ.
ಘನತೆಯಿಂದ ನೋಡುವುದು ನಮ್ಮ ಉದ್ದೇಶ
'ಎಲ್ಲ ಕೆಲಸಗಾರರನ್ನೂ ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವುದು ಮತ್ತು ಪ್ರಾಮಾಣಿಕವಾಗಿ ಸಂಪೂರ್ಣ ಸವಲತ್ತು ನೀಡುವುದು ನಮ್ಮ ಮುಖ್ಯ ಉದ್ದೇಶ' ಎಂದು ಕ್ಯುಪೆರ್ಟಿನೊ-ಕ್ಯಾಲಿಫೋರ್ನಿಯಾ ಮೂಲದ ಕಂಪೆನಿ ಶನಿವಾರ ಹೇಳಿಕೆ ನೀಡಿದೆ.
ವಿಸ್ಟ್ರಾನ್ ಕಾರ್ಖಾನೆಯಲ್ಲಿ ಕಾರ್ಮಿಕರ ಹಕ್ಕುಗಳ ಉಲ್ಲಂಘನೆಯಾಗಿದೆ: ಕರ್ನಾಟಕ ಕಾರ್ಮಿಕ ಇಲಾಖೆ
ಕ್ಷಮೆ ಕೋರುತ್ತೇವೆ
'ನಮ್ಮ ನರಸಾಪುರ ಘಟಕದಲ್ಲಿ ನಡೆದ ದುರದೃಷ್ಟಕರ ಘಟನೆಯ ಬಳಿಕ ನಾವು ತನಿಖೆ ನಡೆಸುತ್ತಿದ್ದು, ಕೆಲವು ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ ಎನ್ನುವುದು ಗೊತ್ತಾಗಿದೆ. ಇದಕ್ಕಾಗಿ ನಾವು ತೀವ್ರ ವಿಷಾದಿಸುತ್ತೇವೆ ಮತ್ತು ನಮ್ಮ ಎಲ್ಲ ಕೆಲಸಗಾರರ ಕ್ಷಮೆ ಕೋರುತ್ತೇವೆ' ಎಂದು ಅದು ತಿಳಿಸಿದೆ.
ಕೆಲವು ಪ್ರಕ್ರಿಯೆ ಆರಂಭಿಸಿದ್ದೇವೆ
'ಕಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸಲು ನಾವು ಕೆಲವು ಪ್ರಕ್ರಿಯೆಗಳನ್ನು ಆರಂಭಿಸಿದ್ದೇವೆ. ಸಂಬಳ ಪಾವತಿ ವ್ಯವಸ್ಥೆಯು ಗಟ್ಟಿಯಾಗಬೇಕು ಮತ್ತು ಉನ್ನತೀಕರಣವಾಗಬೇಕು. ಇದನ್ನು ಸರಿಪಡಿಸಲು ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಜತೆಗೆ ಶಿಸ್ತು ಕ್ರಮಗಳನ್ನು ಕೂಡ ಕೈಗೊಳ್ಳುತ್ತೇವೆ' ಎಂದು ಹೇಳಿದೆ.
ಐಫೋನ್ ಕಾರ್ಖಾನೆ ಮೇಲೆ ದಾಳಿ: ಉಂಟಾದ ನಷ್ಟವೆಷ್ಟು ಗೊತ್ತೇ?
ಉದ್ಯೋಗಿಗಳ ಕುಂದುಕೊರತೆಗೆ ಹಾಟ್ಲೈನ್
ಎಲ್ಲ ನೌಕರರಿಗೂ ತಕ್ಷಣವೇ ಸಂಪೂರ್ಣ ಪರಿಹಾರ ನೀಡುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕಠಿಣವಾಗಿ ಶ್ರಮಿಸುತ್ತಿದ್ದೇವೆ. ಕೆಲಸಗಾರರು ತಮ್ಮ ಗುರುತನ್ನು ಬಹಿರಂಗಪಡಿಸದೆಯೇ ದಿನದ 24 ಗಂಟೆಯೂ ತಮ್ಮ ಅಹವಾಲುಗಳನ್ನು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಸಲ್ಲಿಸುವ ಹಾಟ್ಲೈನ್ ವ್ಯವಸ್ಥೆಯನ್ನು ಜಾರಿಗೆ ಆರಂಭಿಸಲಾಗಿದೆ. ಭಾರತದಲ್ಲಿ ನಮ್ಮ ಉದ್ದಿಮೆ ಮತ್ತು ಉದ್ಯೋಗಿಗಳಿಗೆ ನಾವು ತೀವ್ರವಾಗಿ ಬದ್ಧರಾಗಿದ್ದೇವೆ. ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದೆ.