ಅಪೆಕ್ಸ್ ಬ್ಯಾಂಕ್ 2 ಸಾವಿರ ಕೋಟಿ ಹಗರಣ; ತನಿಖೆ ಆರಂಭ?
ಬೆಂಗಳೂರು, ನವೆಂಬರ್ 26 : ಕರ್ನಾಟಕದಲ್ಲಿ ಅತಿ ದೊಡ್ಡ ಹಗರಣವೊಂದರ ತನಿಖೆ ಆರಂಭವಾಗುವ ಸಾಧ್ಯತೆ ಇದೆ. ಆದರೆ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರೊಬ್ಬರು ಇದರಲ್ಲಿ ಶಾಮೀಲಾಗಿರುವ ಆರೋಪವಿದ್ದು, ರಾಜ್ಯ ಸರ್ಕಾರ ತನಿಖೆಗೆ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕು.
ಅಪೆಕ್ಸ್ ಬ್ಯಾಂಕ್ನ 2 ಸಾವಿರ ಕೋಟಿ ರೂ. ಹಗರಣದ ತನಿಖೆ ಆರಂಭವಾಗುವ ಸಾಧ್ಯತೆ ಇದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ. ಎನ್. ರಾಜಣ್ಣ. ಕಾಂಗ್ರೆಸ್ ಪಾಳಯದಲ್ಲಿದ್ದ ಅವರು ಲೋಕಸಭಾ ಚುನಾವಣೆ ಸಮಯದಿಂದ ಯಡಿಯೂರಪ್ಪಗೆ ಆಪ್ತರಾಗಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಕೊಡಗು ಡಿಸಿಸಿ ಬ್ಯಾಂಕ್ ಸಾಲ ನೀಡಿಲ್ಲವಂತೆ...
ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಶಾಸಕರು, ರಾಜಕೀಯದ ಪ್ರಭಾವಿ ನಾಯಕರ ಒಡೆತನದ ಸಕ್ಕರೆ ಕಾರ್ಖಾನೆಗಳಿಗೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಮೂಲಕ ನಿಯಮ ಬಾಹಿರವಾಗಿ 2 ಸಾವಿರ ಕೋಟಿ ರೂ. ಮೊತ್ತದ ಸಾಲ ನೀಡಲಾಗಿದೆ ಎಂಬುದು ಹಗರಣವಾಗಿದೆ.
ಸಾಲ ಪಾವತಿಸದ ರೈತರಿಗೆ ವಾರೆಂಟ್!: ಆತಂಕದಲ್ಲಿ ಪ್ರವಾಹಪೀಡಿತ ರೈತರು
ಸಹಕಾರ ಸಂಘಗಳ ರಿಜಿಸ್ಟ್ರಾರ್ ಪ್ರಕರಣದ ತನಿಖೆ ನಡೆಸಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ನವೆಂಬರ್ 30ರೊಳಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಆದ್ದರಿಂದ, ಹಗರಣದ ತನಿಖೆಯಾಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.
ವಿಜಿ ಸಿದ್ಧಾರ್ಥ ಮಾಡಿದ್ದ ಸಾಲ 8000 ಕೋಟಿ ರೂ.ಗೂ ಅಧಿಕ, ಇಲ್ಲಿದೆ ಪಟ್ಟಿ
ಪತ್ರದಲ್ಲಿ ಹಗರಣದ ಪ್ರಸ್ತಾಪ
2019ರ ಅಕ್ಟೋಬರ್ 28ರಂದು ಸಹಕಾರ ಸಂಘಗಳ ರಿಜಿಸ್ಟ್ರಾರ್ ಬರೆದಿರುವ ಪತ್ರದ ಮೂಲಕ ಅಪೆಕ್ಸ್ ಬ್ಯಾಂಕ್ನಲ್ಲಿ ನಡೆದಿರುವ ಹಗರಣ ಬೆಳಕಿಗೆ ಬಂದಿದೆ. ಇದಕ್ಕೂ ಮೊದಲು ಸಕ್ಕರೆ ಕಾರ್ಖಾನೆಗಳಿಗೆ ಅಪೆಕ್ಸ್ ಬ್ಯಾಂಕ್ ನಿಯಮ ಬಾಹಿರವಾಗಿ 2 ಸಾವಿರ ಕೋಟಿ ಸಾಲ ನೀಡಿದೆ. ಈ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಉದ್ಯೋಗಿಗಳು ಮತ್ತು ಅಧಿಕಾರಿಗಳ ಒಕ್ಕೂಟ ಕೇಂದ್ರ ಹಣಕಾಸು ಸಚಿವರಿಗೆ 2019ರ ಫೆಬ್ರವರಿ 4ರಂದು ದೂರು ಸಲ್ಲಿಸಿತ್ತು.
ಗಂಭೀರ ಆರೋಪಗಳು
ಅಪೆಕ್ಸ್ ಬ್ಯಾಂಕ್ ಮೂಲಕ ಶಾಸಕರು, ರಾಜಕೀಯ ವ್ಯಕ್ತಿಗಳು ಮಾಲೀಕರಾಗಿರುವ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಲಾಗಿದೆ. ಸಾಲ ವಸೂಲಿಯಾಗಿಲ್ಲ, ಬ್ಯಾಂಕ್ ಹಾಲಿ ಅಧ್ಯಕ್ಷ ಕೆ. ಎನ್. ರಾಜಣ್ಣ, ಹಿಂದಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದೇವರಾಜ್, ಮುಖ್ಯ ವ್ಯವಸ್ಥಾಪಕ ಜಂಗಮಪ್ಪ ಮತ್ತು ಇತರ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ.
ಮೌನವಾಗಿದ್ದ ಮೈತ್ರಿ ಸರ್ಕಾರ
ಅಪೆಕ್ಸ್ ಬ್ಯಾಂಕ್ ಉದ್ಯೋಗಿಗಳು, ಅಧಿಕಾರಿಗಳ ಒಕ್ಕೂಟ ಹಣಕಾಸು ಸಚಿವರ ಜೊತೆ ನಬಾರ್ಡ್, ಆರ್ಬಿಐಗೆ ಸಹ ದೂರು ನೀಡಿತ್ತು. ಆರ್ಬಿಐ ನಬಾರ್ಡ್ ಮುಖ್ಯ ವ್ಯವಸ್ಥಾಪಕರಿಗೆ 2019ರ ಏಪ್ರಿಲ್ 8ರಂದು ಪತ್ರ ಬರೆದು ದೂರು ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು. ಆದರೆ, ರಾಜ್ಯದಲ್ಲಿದ್ದ ಮೈತ್ರಿ ಸರ್ಕಾರ ಈ ಬಗ್ಗೆ ಮೌನವಾಗಿತ್ತು.
ನೂರಾರು ಕೋಟಿ ಸಾಲ ನೀಡಿಕೆ
ಕೆ. ಎನ್. ರಾಜಣ್ಣ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದಾಗಲೇ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಪ್ರಭಾವಿಗಳ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೂಲಕ ನೂರಾರು ಕೋಟಿ ರೂ. ಸಾಲವನ್ನು ನೀಡಲಾಗಿದೆ.
ತುಮಕೂರು ಬ್ಯಾಂಕ್ ಸೂಪರ್ ಸೀಡ್
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗಲೇ ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸೂಪರ್ ಸೀಡ್ ಆಗಿತ್ತು. ಈ ಬೆಳವಣಿಗೆ ರಾಜಕೀಯ ರೂಪ ಪಡೆದುಕೊಂಡಿತ್ತು. ಇದರಿಂದ ಕೆರಳಿದ್ದ ಕೆ. ಎನ್. ರಾಜಣ್ಣ ಕಾಂಗ್ರೆಸ್ ಬಿಟ್ಟು ಬಿಜೆಪಿ ಪಾಳಯಕ್ಕೆ ಜಿಗಿದಿದ್ದರು.