ಸಿಇಟಿ ಬರೆಯುವ ವಿದ್ಯಾರ್ಥಿಗಳಿಗೆ ಸರ್ಕಾರದ ಮಹತ್ವದ ಸೂಚನೆ!
ಬೆಂಗಳೂರು, ಜು. 30: ಸಿಇಟಿ ಪರೀಕ್ಷೆ ನಡೆಸಲು ರಾಜ್ಯ ಉಚ್ಛ ನ್ಯಾಯಾಲಯ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಕೋವಿಡ್ ಪಾಸಿಟಿವ್ ಇರಲಿ, ಇರದೇ ಇರಲಿ ಹಾಲ್ ಟಿಕೆಟ್ ಹೊಂದಿರುವ ಎಲ್ಲ ವಿದ್ಯಾರ್ಥಿಗಳಿಗೂ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಹೈಕೋರ್ಟ್ ಸೂಚನೆಯಂತೆ ಸರ್ಕಾರ ಕೂಡ ಮಹತ್ವದ ಆದೇಶವನ್ನು ಹೊರಡಿಸಿದೆ.
Recommended Video
ಸಿಟಿಟಿ ಪರೀಕ್ಷೆ ನಡೆಸದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿ ವಿಲೇವಾರಿ ಮಾಡಿದ ಹೈಕೋರ್ಟ್, ಸರಕಾರಕ್ಕೆ ಮಹತ್ವದ ಸೂಚನೆಗಳನ್ನು ನೀಡಿದೆ. ಹೈಕೋರ್ಟ್ ಸೂಚನೆಗಳ ಬಳಿಕ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ನ್ಯಾಯಾಲಯ ನೀಡಿರುವ ಆದೇಶದಂತೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಏನಾದರೂ ಸಮಸ್ಯೆಗಳಾದಲ್ಲಿ ಸಂಪರ್ಕಿಸಲು ಉನ್ನತ ಶಿಕ್ಷಣ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ. ಜೊತೆಗೆ ಕೋವಿಡ್ ಸೋಂಕಿನ ರೋಗ ಲಕ್ಷಣಗಳಿದ್ದರೂ ಸಿಇಟಿ ಪರೀಕ್ಷೆ ಬರೆಯಲು ಹಾಲ್ಟಿಕೆಟ್ ಇದ್ದಲ್ಲಿ, ದಾರಿಮಧ್ಯೆ ಯಾರೂ ಅಂಥವರನ್ನು ತಡೆಯಬಾರದು ಎಂದು ಸರ್ಕಾರ ಮಹತ್ವದ ಆದೇಶ ಮಾಡಿದೆ. ಸರ್ಕಾರದ ಸೂಚನೆಗಳ ಸಂಪೂರ್ಣ ವಿವರ ಇಲ್ಲಿದೆ.
ಮೈಸೂರಿನಲ್ಲಿ ಪೂರ್ವ ಸಿದ್ಧತೆಗಳೊಂದಿಗೆ 26 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ
ಫಿಟ್ನೆಸ್ ಸರ್ಟಿಫಿಕೇಟ್
ಕಂಟೇನ್ಮೆಂಟ್ ಝೋನ್ಗಳಿಂದ ಬರುವ ವಿದ್ಯಾರ್ಥಿಗಳ ಫಿಟ್ನೆಸ್ ಸರ್ಟಿಫಿಕೇಟ್ನ್ನು ಪರೀಕ್ಷಾ ಕೇಂದ್ರಗಳಲ್ಲಿ ಕೇಳುವಂತಿಲ್ಲ, ಅದನ್ನು ಕಡ್ಡಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿದ್ಯಾರ್ಥಿಗಳು ಆ ಸರ್ಟಿಫಿಕೇಟ್ ಅನ್ನು ತರಲಿ, ತರದೇ ಇರಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಪ್ರವೇಶ ಪತ್ರ ಹೊಂದಿರುವ ಯಾವುದೇ ವಿದ್ಯಾರ್ಥಿ ಪರೀಕ್ಷೆ ಬರೆಯುವುದನ್ನು ತಡೆಯುವಂತಿಲ್ಲ. ಅವರು ಕೊವಿಡ್ ಪಾಸಿಟಿವ್ ಇರಲಿ ಅಥವಾ ಕೊರೊನಾವೈರಸ್ ಲಕ್ಷಣಗಳನ್ನು ತೋರಿಸದೆ ಇರಲಿ, ಇಲ್ಲವೇ ಶೀತ-ಕೆಮ್ಮು ಮತ್ತಿತರೆ ಲಕ್ಷಣಗಳಿದ್ದರೂ ಅವರನ್ನು ಕಡ್ಡಾಯವಾಗಿ ಪರೀಕ್ಷೆ ಬರೆಯಲು ಅವಕಾಶ ಕೊಡಲೇಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಹೀಗಾಗಿ ಸೋಂಕಿತರಿಗೆ ಮತ್ತು ಸೋಂಕಿನ ಲಕ್ಷಣಗಳು ಇರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಲಾಗುವುದು. ಈ ಎಲ್ಲ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೂ ತಿಳಿಸಲಾಗಿದೆ. ಕೊವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್ಓಪಿ ಪಾಲನೆ
ಈಗಾಗಲೇ ಜಾರಿಯಲ್ಲಿರುವ ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಕಂಟೇನ್ಮೆಂಟ್ ಝೋನ್ನಲ್ಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಬಂದು ಪರೀಕ್ಷೆಗೆ ಹಾಜರಾಗಬಹುದು. ಇವರು ತಮ್ಮ ಮನೆಯಿಂದ ಹೊರಬಂದ ಕೂಡಲೇ ಯಾರೇ ತಡೆದರೂ ಪ್ರವೇಶ ಪತ್ರ ತೋರಿಸಿದರೆ ಸಾಕು, ಅವರನ್ನು ಯಾರೂ ತಡೆಯುವುದಿಲ್ಲ ಎಂದು ಸೂಚಿಸಿದ್ದಾರೆ.
ಇನ್ನು ಕೊವಿಡ್ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಾಹನದಲ್ಲಿ ಕರೆತಂದು, ಪರೀಕ್ಷೆ ಮುಗಿದ ನಂತರ ವಾಪಸ್ ಅವರ ಜಾಗಕ್ಕೆ ಬಿಡಲಾಗುವುದು. ಬೆಂಗಳೂರು ಸೇರಿ ರಾಜ್ಯ ಎಲ್ಲ ಜಿಲ್ಲೆಗಳಲ್ಲಿ ಎಲ್ಲ ಕಡೆಗಳಿಂದಲೂ ಪರೀಕ್ಷಾ ಕೇಂದ್ರಗಳಿಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಮುಖ್ಯಸ್ಥರು ಸೇರಿದಂತೆ ಸಾರಿಗೆ, ಪೊಲೀಸ್, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಉನ್ನತಮಟ್ಟದ ತಂಡವನ್ನು ರಚಿಸಲಾಗಿದೆ. ಆ ತಂಡದ ಉಸ್ತುವಾರಿಯಲ್ಲಿ ಪರೀಕ್ಷೆ ನಿರಾತಂಕವಾಗಿ ನಡೆಯಲಿದೆ ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದರು.
ಸಿಇಟಿ ಪರೀಕ್ಷೆ ಬಗ್ಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ ಸ್ಪಷ್ಟನೆ!
ಪಾಸಿಟಿವ್ ವಿದ್ಯಾರ್ಥಿಗಳು
ರಾಜ್ಯಾದ್ಯಂತ 40 ಮಂದಿ ಕೋವಿಡ್-19 ಪಾಸಿಟಿವ್ ಆಗಿರುವ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಇವರೆಲ್ಲರನ್ನೂ ಪ್ರತ್ಯೇಕ ಕೋಣೆಯಲ್ಲಿ ಕೂರಿಸಿ ಪರೀಕ್ಷೆ ನಡೆಸಲಾಗುವುದು. ಇತರ ವಿದ್ಯಾರ್ಥಿಗಳ ಜತೆ ಇವರ ಸಂಪರ್ಕಕ್ಕೆ ಅವಕಾಶವೇ ಇರುವುದಿಲ್ಲ. ಎಲ್ಲರೂ ಹಾಜರಾಗುವ ನಿಗದಿತ ಕೇಂದ್ರದ ಬದಲು ಬೇರೆ ಜಾಗದಲ್ಲಿ ಅವರನ್ನು ಕೂರಿಸಲಾಗುವುದು.
ಸಿಇಟಿ ಸಹಾಯವಾಣಿ
ಸಿಇಟಿ ಪರೀಕ್ಷೆ ಸಂಬಂಧ ಏನೇ ಅನುಮಾನಗಳು, ತೊಂದರೆ ಇದ್ದರೆ ಈ ದೂರವಾಣಿ ಸಂಖ್ಯೆಗಳಿಗೆ ದೂರವಾಣಿ ಕರೆ ಮಾಡಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಿದರು. ಸಹಾಯವಾಣಿ ಸಂಖ್ಯೆ: 080 23460460 ಅಥವಾ 080 23564583 ಕರೆ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಅಥವಾ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.