ಕೋವಿಡ್ 19 ಸೇವೆಗೆ ಗೈರಾದರೆ ಜೈಲುಶಿಕ್ಷೆ: ಕರ್ನಾಟಕ ಸರ್ಕಾರದ ಎಚ್ಚರಿಕೆ
ಬೆಂಗಳೂರು, ಜುಲೈ 8: ಕರ್ನಾಟಕದಲ್ಲಿ ನಿಯಂತ್ರಣಕ್ಕೆ ಸಿಗದಂತೆ ಕೊರೊನಾವೈರಸ್ ಸೋಂಕು ಹಬ್ಬುತ್ತಿದೆ. ಹೀಗಾಗಿ, ಹೆಚ್ಚಿನ ಮಟ್ಟದಲ್ಲಿ ಸರ್ಕಾರಿ ನೌಕರರರ ಅಗತ್ಯ ಎದುರಾಗಿದೆ. ಆದರೆ, ಕೊವಿಡ್ 19 ಸೇವೆ ಸಲ್ಲಿಸುವವರು ಅನಗತ್ಯವಾಗಿ ಗೈರಾಗುತ್ತಿರುವುದು, ಸಿಬ್ಬಂದಿ ಕೊರತೆ ಪರಿಸ್ಥಿತಿ ಎದುರಿಸುತ್ತಿರುವುದಕ್ಕೆ ಪರಿಹಾರವಾಗಿ ಕರ್ನಾಟಕ ಸರ್ಕಾರ ಖಡಕ್ ಅದೇಶ ಹೊರಡಿಸಿದೆ.
ಕೊರೊನಾವೈರಸ್ ನಿಯಂತ್ರಣ ಪ್ರಕ್ರಿಯೆಯಲ್ಲಿ ತೊಡಗಿರುವವರು ಕೆಲಸಕ್ಕೆ ಗೈರು ಹಾಜರಾದರೆ ಜೈಲುವಾಸ, ದಂಡ ವಿಧಿಸಲು ಸರ್ಕಾರ ಮುಂದಾಗಿದೆ. ಸೋಂಕಿತರು ಸೋಂಕಿತರ ಸಂಪರ್ಕಿತರ ಪತ್ತೆ ಕಾರ್ಯ ಮುಂತಾದ ಕಾರ್ಯದಲ್ಲಿ ತೊಡಗಿರುವ ಎಲ್ಲಾ ವರ್ಗದ ಸರ್ಕಾರಿ ನೌಕರರಿಗೆ ಈ ಆದೇಶ ಅನ್ವಯವಾಗಲಿದೆ.
ಬೆಂಗಳೂರಿನಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಆ್ಯಂಟಿಜೆನ್ ಟೆಸ್ಟ್!
ಕರ್ನಾಟಕ ಸರ್ಕಾರದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷ, ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಅವರ ಸಹಿಯಿರುವ ಸುತ್ತೋಲೆಯಂತೆ, ಸೋಂಕಿತರ ಸಂಪರ್ಕಿತರ ಪತ್ತೆಗೆ ವಿವಿಧ ಇಲಾಖೆಯ ಗ್ರೂಪ್ ಎ, ಬಿ, ಸಿ ಮತ್ತು ಡಿ ವರ್ಗದ 1013 ಸಿಬ್ಬಂದಿಗಳ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಕಾರ್ಯಪಡೆಯ ಸದಸ್ಯರು ಗೈರು ಹಾಜರಾದರೆ ಕಾರ್ಯಪಡೆಯ ಮುಖ್ಯಸ್ಥರಾದ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತೆ ಮಂಜುಳಾ ವರದಿ ಮಾಡಲಿದ್ದಾರೆ.
ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಂಪರ್ಕ ಪತ್ತೆ ಅತೀ ಪ್ರಮುಖವಾಗಿದ್ದು, ಇದಕ್ಕಾಗಿ ಹೆಚ್ಚುವರಿ ಮಾನವ ಸಂಪನ್ಮೂಲ ಒದಗಿಸಲು ವಿವಿಧ ಇಲಾಖೆಗಳ 1013 ಸಿಬ್ಬಂದಿಗಳನ್ನು ಸಂಪರ್ಕ ಪತ್ತೆ ಕಾರ್ಯಕ್ಕೆ ನೇಮಿಸಲಾಗಿದೆ. ಇವರುಗಳು ಸಂಪರ್ಕ ಪತ್ತೆ ಕಾರ್ಯ ತಂಡದ ನಾಯಕತ್ವ ವಹಿಸಿರುವ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಲಿದ್ದಾರೆ. pic.twitter.com/ZaJGtEAKuk
— Dr Sudhakar K (@mla_sudhakar) July 7, 2020
ಕರ್ತವ್ಯಕ್ಕೆ ಗೈರುಹಾಜರಾದ ವಿವಿಧ ಇಲಾಖೆಯ ಸಿಬ್ಬಂದಿಗಳ ವಿರುದ್ಧ ನೈಸರ್ಗಿಕ ವಿಪತ್ತು ನಿರ್ವಹಣೆ ಕಾಯ್ದೆ ಸೆಕ್ಷನ್ 56 ಅಡಿಯಲ್ಲಿ ಕೇಸ್ ದಾಖಲಿಸಲಾಗುತ್ತದೆ. ಪೂರ್ವಾನುಮತಿ(ಲಿಖಿತ ಪತ್ರದ ಮನವಿ) ಇಲ್ಲದೆ ಕರ್ತವ್ಯಕ್ಕೆ ಗೈರು ಹಾಜರಾಗಿರುವುದು, ಕರ್ತವ್ಯ ಲೋಪ ಕಂಡು ಬಂದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಭಾರಿ ದಂಡ ವಿಧಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿಹೇಳಲಾಗಿದೆ.