ಮಾದರಿ ರಾಜಕಾರಣಕ್ಕೆ ಅಣಿಯಾಗಿರುವ ರವಿಕೃಷ್ಣಾ ರೆಡ್ಡಿ ಸಂದರ್ಶನ
Recommended Video
ಬೆಂಗಳೂರು, ಡಿಸೆಂಬರ್ 26 : ಇಂದಿನ ರಾಜಕಾರಣದಲ್ಲಿ ತತ್ವ, ಸಿದ್ದಾಂತ, ಆದರ್ಶಗಳು ಇನ್ನೂ ಉಳಿದಿವೆ. ಹಣ, ಹೆಂಡ ಹಂಚದೇ ಚುನಾವಣೆಗೆ ನಿಂತು ಗೆದ್ದೆಗೆಲ್ಲುವೆ ಎಂಬ ಆತ್ಮವಿಶ್ವಾಸದಿಂದ ಚುನಾವಣಾ ತಯಾರಿ ಆರಂಭಿಸಿದ್ದಾರೆ ರವಿ ಕೃಷ್ಣಾರೆಡ್ಡಿ.
ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯನ್ನು ಆರಂಭಿಸಿ ಅದರ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ರವಿ ಕೃಷ್ಣಾರೆಡ್ಡಿ. 2018ರ ಚುನಾವಣೆಗೆ ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. 43 ದಿನದಿಂದ ಕ್ಷೇತ್ರದಲ್ಲಿ ಸಂಚರಿಸಿ ಜನರನ್ನು ಭೇಟಿ ಮಾಡುತ್ತಿದ್ದಾರೆ.
ಸಿಎಂ ಬಗ್ಗೆ ಬಿಜೆಪಿ ಎಂಎಲ್ಎ ಹೇಳಿದ್ದೇನು: ವಿಜಯ್ ಕುಮಾರ್ ಸಂದರ್ಶನ
2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯನಗರ ಕ್ಷೇತ್ರದಿಂದ, 2013ರಲ್ಲಿ ಬಿಟಿಎಂ ಕ್ಷೇತ್ರದಿಂದ ಲೋಕಸತ್ತಾ ಅಭ್ಯರ್ಥಿಯಾಗಿ, 2014ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಜಯನಗರದಲ್ಲಿ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ಎಲೆಕ್ಷನ್ ಪ್ರಚಾರ ಶುರು
ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲೇಬೇಕು, ಗೆದ್ದು ರಾಜ್ಯದಲ್ಲಿ ಹೊಸ ರಾಜಕೀಯ ಮಾದರಿ ಸ್ಥಾಪಿಸಬೇಕು ಎಂಬ ಕನಸಿನೊಂದಿಗೆ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿರುವ ಅವರು ತಮ್ಮ ಕನಸು, ರಾಜಕೀಯ ಪರಿಸ್ಥಿತಿ, ಜಯನಗರದ ಸಮಸ್ಯೆ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ...
ಸಂದರ್ಶನ - ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ದೋಣಿ!
ಏನಿದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ?
2016ರ ಜುಲೈನಲ್ಲಿ ನಾವು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಆರಂಭಿಸಿದೆವು. ನಾಲ್ಕಾರು ಜಿಲ್ಲೆಗಳಲ್ಲಿ ಸಕ್ರಿಯವಾಗಿ ವೇದಿಕೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಸುಮಾರು 100 ಸದಸ್ಯರಿದ್ದಾರೆ. ಬೆಂಗಳೂರು ನಗರ, ತುಮಕೂರು, ಮಂಡ್ಯ, ಮೈಸೂರು, ಬೆಳಗಾವಿ, ಬಳ್ಳಾರಿಯಲ್ಲಿ ವೇದಿಕೆ ಸಕ್ರಿಯವಾಗಿದೆ.
ರಾಜ್ಯವನ್ನು ಲಂಚ ಮುಕ್ತವಾಗಿ ಮಾಡಲು ವೇದಿಕೆ ಸ್ಥಾಪನೆ ಮಾಡಲಾಗಿದೆ. ಸರ್ಕಾರಿ ಕಚೇರಿ, ಆಸ್ಪತ್ರೆಗಳನ್ನು ಲಂಚ ಮುಕ್ತವಾಗಿ ಮಾಡುವುದು ನಮ್ಮ ಗುರಿ. ಆರ್ಟಿಐ, ಸಕಾಲ ಬಗ್ಗೆ ಜನರಿಗೆ ಮಾಹಿತಿ ನೀಡಿ ಅದನ್ನು ಬಳಸುವಂತೆಯೂ ಅರಿವು ಮೂಡಿಸಲಾಗುತ್ತದೆ.
150 ಕಚೇರಿಗಳಿಗೆ ಹೋಗಿ ಸೋಶಿಯಲ್ ಆಡಿಟ್ ಮಾಡಿದ್ದೇವೆ. ಜನರು ಸರ್ಕಾರಿ ಕಚೇರಿಗೆ ಹೋದಾಗ ಯಾರನ್ನು ಭೇಟಿ ಮಾಡಬೇಕು ಎಂದು ಅರಿವು ಮೂಡಿಸಿದ್ದೇವೆ. ಲಂಚ ತೆಗೆದುಕೊಂಡ ವ್ಯಕ್ತಿ ಒಪ್ಪಿಕೊಂಡಾಗ ಅದನ್ನು ವಾಪಸ್ ನೀಡಿದ ಪ್ರಕರಣಗಳು ನಡೆದಿವೆ.
ಜನರು ನಿಮಗೆ ದೂರು ಕೊಡುವುದು ಹೇಗೆ?
ಜನರು ನಮ್ಮನ್ನು ಸಂಪರ್ಕಿಸಲು ಸಹಾಯವಾಣಿಯನ್ನು ಆರಂಭಿಸಲಾಗಿದೆ. 88842 77730 ನಂಬರ್ಗೆ ರಾಜ್ಯದ ಯಾವ ಭಾಗದಿಂದ ಬೇಕಾದರೂ ಕರೆ ಮಾಡಬಹುದು. ಅದನ್ನು ರೆಕಾರ್ಡ್ ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳುವ ವ್ಯವಸ್ಥೆ ನಮ್ಮಲ್ಲಿ ಇದೆ. ನಮಗೆ ಹಲವು ಜನರು ಕರೆ ಮಾಡಿ ಇಲ್ಲಿ ಭ್ರಷ್ಟಾಚಾರ ಇದೆ ಎನ್ನುತ್ತಾರೆ. ನೀವು ಯಾರಿಗಾದರೂ ಲಂಚ ಕೊಟ್ಟಿದ್ದೀರಾ? ಎಂದರೆ ಇಲ್ಲ ಎನ್ನುವರು.
ಜನರು ತಪ್ಪಿಸಿಕೊಳ್ಳುವ ಮಾತನಾಡುತ್ತಾರೆ. ಬಂದು ಧೈರ್ಯವಾಗಿ ಹೇಳುವ ಜನರ ದೂರವಾಣಿ ಸಂಖ್ಯೆಯನ್ನು ನಾವು ತೆಗೆದುಕೊಳ್ಳುತ್ತೇವೆ. ಎಸಿಬಿ ಅಧಿಕಾರಿಗಳ ಜೊತೆ ಮಾತನಾಡಿ ಅವರ ಮೂಲಕವೇ ಟ್ರಾಪ್ ಮಾಡಿಸುತ್ತೇವೆ. ಲಂಚ ತೆಗೆದುಕೊಳ್ಳುವುದನ್ನು ಸ್ಟಿಂಗ್ ಮಾಡುವುದು ಒಂದು, ಎಸಿಬಿ ಮೂಲಕ ಟ್ರಾಪ್ ಮಾಡಿಸುವುದು ಇನ್ನೊಂದು ಎಂಬ ವಿಧಾನಗಳಿವೆ.
ಸ್ಟಿಂಗ್ ಮಾಡಿದರೆ ಅದು ಇಲಾಖಾ ತನಿಖಾ ಮಟ್ಟದಲ್ಲಿಯೇ ಬಿದ್ದು ಹೋಗುತ್ತದೆ. ದೂರು ಕೊಟ್ಟವರು ಒಪ್ಪಿಕೊಂಡರೆ ನಮ್ಮ ಸಮಿತಿ ಸದಸ್ಯರು ಲಂಚ ಕೊಡುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳಿಂದ ರೈಡ್ ಮಾಡಿಸುತ್ತೇವೆ. ಎಸಿಬಿ ದಾಳಿಯಾದಾಗ ಲಂಚ ತೆಗೆದುಕೊಳ್ಳುವುದು ಗೊತ್ತಾಗುತ್ತಿದ್ದಂತೆ ತಕ್ಷಣ ಅಧಿಕಾರಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ. ಆದ್ದರಿಂದ, ಅದಕ್ಕೆ ಹೆಚ್ಚು ಒತ್ತು ನೀಡುತ್ತೇವೆ. ಎಸಿಬಿ ಪೊಲೀಸರು ಅದನ್ನು ತಾರ್ಕಿಕ ಅಂತ್ಯಕ್ಕೆ ತಗೆದುಕೊಂಡು ಹೋಗುತ್ತಾರೆ.
ಜಯನಗರ ಕ್ಷೇತ್ರದ ಜನರುನ್ನು ನಿಮ್ಮನ್ನು ಗುರುತಿಸಿದರೆ?
ಜಯನಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುವ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಜನರು ಹೆಚ್ಚಾಗಿ ಟಿವಿ ನೋಡುವುದಿಲ್ಲ, ನಮ್ಮ ಹೋರಾಟದ ಬಗ್ಗೆ ಗೊತ್ತಿಲ್ಲ ಎಂದುಕೊಂಡಿದ್ದೆ. ಆದರೆ, ಜನರಿಗೆ ನಮ್ಮ ಹೋರಾಟದ ಬಗ್ಗೆ ಗೊತ್ತಿದೆ.
ಹಿಂದಿನ ಮೂರು ಚುನಾವಣೆಗಳಲ್ಲಿ ಪ್ರತಿರೋಧ ತೋರಿಸುವ ಉದ್ದೇಶದಿಂದ ಸ್ಪರ್ಧೆ ಮಾಡಿದ್ದೆ. ಇಷ್ಟು ದಿನ ಆಶಯಗಳ ಬಗ್ಗೆ ಮಾತನಾಡಿದ್ದೆ. ಆದರೆ, ಈ ಬಾರಿ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಮಾದರಿ ಸೃಷ್ಟಿಮಾಡಬೇಕು ಎಂದು ಅಂದುಕೊಂಡಿದ್ದೇನೆ.
ಚುನಾವಣಾ ಪ್ರಚಾರಕ್ಕೆ ಜನರಿಂದ ಹಣ ಸಂಗ್ರಹಿಸುವಿರಾ?
ಕರ್ನಾಟಕದಲ್ಲಿ ಈ ತರಹದ ರಾಜಕಾರಣಕ್ಕೆ ಹಲವಾರು ಮಾದರಿಗಳಿವೆ. ಶಾಂತವೇರಿ ಗೋಪಾಲಗೌಡರು ಒಂದು ನೋಟು ಒಂದು ವೋಟು ಎಂದು ಹೇಳಿದ್ದರು. ಈ ಬಾರಿಯ ಚುನಾವಣೆಗೆ 27 ಲಕ್ಷ ಖರ್ಚು ಮಾಡಲು ಅವಕಾಶವಿದೆ. ಜನರಿಂದ ಸಮಾನ ಮನಸ್ಕರಿಂದ ಹಣ ಸಂಗ್ರಹಿಸಿ ಪ್ರಚಾರ ನಡೆಸುವ ಉದ್ದೇಶವಿದೆ.
ಜನರಿಂದ ದೇಣಿಗೆ ಸಂಗ್ರಹಿಸಲು ಆರಂಭಿಸಿಲ್ಲ. ಇನ್ನೂ ಚುನಾವಣೆಗೆ ನಿಲ್ಲುವ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಗೆಲ್ಲಲೇಬೇಕು ಎಂಬುದು ಉದ್ದೇಶ. ಗೆದ್ದರೆ ಮಾದರಿ ಸೃಷ್ಟಿ ಆಗುತ್ತದೆ, ಸೋತರೆ ಇಂತಹ ರಾಜಕಾರಣ ಕರ್ನಾಟಕಕ್ಕೆ ಅಲ್ಲ. ಹಣ, ಹೆಂಡ ಹಂಚದೇ, 5-10 ಕೋಟಿ ಖರ್ಚು ಮಾಡಿದರೆ ಮಾತ್ರ ಗೆಲುವು ಎನ್ನುವುದು ಸಾಬೀತಾಗುತ್ತದೆ.
ರಾಜಕೀಯದಲ್ಲಿ ಆದರ್ಶ ಉಳಿದಿದೆಯೇ?
ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳಿ ಇಡೀ ರಾಜ್ಯದಲ್ಲಿ ಜಯನಗರ ಸೇರಿದಂತೆ ಆಯೋಗದ ಮಿತಿಯನ್ನು ಮೀರಿ ಖರ್ಚು ಮಾಡಿದ್ದಾರೆ. ಅಭ್ಯರ್ಥಿಗಳು ಮಾಡದಿದ್ದರೆ ಅವರ ಬೆಂಬಲಿಗರು ಮಾಡುತ್ತಾರೆ. ಪ್ರಾಮಾಣಿಕವಾಗಿ ಗೆದ್ದು ಬಂದ ಕೆಲವರು ನಮ್ಮಲ್ಲಿ ಇದ್ದಾರೆ.
ಜಯನಗರ ಕ್ಷೇತ್ರದಿಂದ ನಾನು ಸ್ಪರ್ಧಿಸಲು ಇಚ್ಛಿಸಿರುವುದರಿಂದ ನನಗೆ ಗೆಲ್ಲುವ ವಿಶ್ವಾಸವಿದೆ. ವಿದ್ಯಾವಂತ, ಪ್ರಜ್ಞಾವಂತ ಜನರು ಇರುವ ಕ್ಷೇತ್ರ ಜಯನಗರ. ಇಲ್ಲಿಯೂ ಶೇ 15ರಷ್ಟು ಪ್ರದೇಶದಲ್ಲಿ ಹಣ, ಹೆಂಡ ಹಂಚುವವರು, ಆಮಿಷ ಒಡ್ಡುವವರು, ಬೆದರಿಕೆಯನ್ನು ಹಾಕುವವರು ಇದ್ದಾರೆ.
ಜನರು ತೀರ್ಮಾನ ಮಾಡಿದರೆ ನಮ್ಮ ಕ್ಷೇತ್ರದಲ್ಲಿ ಹಣ, ಹೆಂಡ ಹಂಚದೇ ನನ್ನಂತಹ ವ್ಯಕ್ತಿ ಗೆಲುವು ಸಾಧಿಸಬಹುದು. ನಮ್ಮ 40 ದಿನಗಳ ಯಾತ್ರೆಯಲ್ಲಿ ನಮಗೆ ಈ ಬಗ್ಗೆ ವಿಶ್ವಾಸ ಮೂಡುತ್ತಿದೆ. ಜನರ ಬೆಂಬಲ ನಮಗೆ ಉತ್ಸಾಹವನ್ನು ತುಂಬುತ್ತಿದೆ.
ತತ್ವ, ಮೌಲ್ಯ, ಆದರ್ಶದ ರಾಜಕಾರಣಕ್ಕೆ ಇಂದು ಬೆಲೆ ಇದೆಯೇ?
ಚುನಾವಣಾ ರಾಜಕಾರಣದಲ್ಲಿ ಇವುಗಳಿಗೆ ಬೆಲೆ ಇಲ್ಲ. ಚುನಾವಣಾ ಸಮಯ ಹೊರತು ಪಡಿಸಿ ಉಳಿದ ಸಮಯದಲ್ಲಿ ಪಕ್ಷಗಳು ತತ್ವ, ಸಿದ್ಧಾಂತವನ್ನು ಮಾತನಾಡುತ್ತವೆ. ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇವೆ ಎಂದು ಹೇಳುತ್ತಾರೆ. ಇವು ನಡತೆಯಲ್ಲಿ ಇಲ್ಲ. ಆದರೆ, ಮಾತುಗಳಲ್ಲಿ ಇವೆ.
ರಾಜಕಾರಣದಲ್ಲಿ ಇನ್ನೂ ತತ್ವ, ಆದರ್ಶಗಳಿಗೆ ಬೆಲೆ ಇದೆ. ಚುನಾವಣಾ ಸಮಯದಲ್ಲಿ ಅಕ್ರಮ ನಡೆಯುವುದರಿಂದ ಅದಕ್ಕೆ ಬೆಲೆ ಇಲ್ಲ ಎಂದುಕೊಂಡಿದ್ದೇವೆ. ದುಡ್ಡು ಹಾಕಿ ಗೆಲ್ಲಬಹುದು ಎಂದು ಅನ್ನಿಸಿದ್ದರಿಂದ ಹಲವು ಜನರು ರಾಜಕೀಯಕ್ಕೆ ಬರುತ್ತಾರೆ. ಚುನಾವಣಾ ಅಕ್ರಮ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಹಣ, ಹೆಂಡ ಹಂಚುವುದಕ್ಕೆ ತಡೆ ಬೀಳಲಿದೆ ಎಂಬ ವಿಶ್ವಾಸವಿದೆ.
ಜಯನಗರ ಕ್ಷೇತ್ರದಲ್ಲಿ ನೀವು ಕಂಡುಕೊಂಡ ಸಮಸ್ಯೆಗಳೇನು?
ಜಯನಗರ ಕ್ಷೇತ್ರದಲ್ಲಿ ಪುರಾತನವಾದ ಜನರಲ್ ಆಸ್ಪತ್ರೆ ಇದೆ. ಅಲ್ಲಿ ಲಂಚ ಮುಕ್ತ ಅಭಿಯಾನ ನಡೆಸುವಾಗ ಹೆರಿಗೆ ವಾರ್ಡ್ನಲ್ಲಿ ಲಂಚದ ಬಗ್ಗೆ ದೂರು ಬಂದಿತ್ತು. ಬಡವರು, ದಲಿತರು, ಅಲ್ಪಸಂಖ್ಯಾತ ಮಹಿಳೆಯರು ಹೋಗುವ ಆಸ್ಪತ್ರೆಯಲ್ಲಿ ಲಂಚದ ಹಾವಳಿ ಇತ್ತು.
ಅನ್ನಭಾಗ್ಯ ಯೋಜನೆಯೂ ದುರುಪಯೋಗವಾಗುತ್ತಿದೆ. ಯೋಜನೆ ಅನುಷ್ಠಾನದಲ್ಲಿ ವಿಫಲವಾಗಿದೆ. ಏಳು ಜನರು ಇರುವ ಕುಟುಂಬದರು ನ್ಯಾಯಬೆಲೆ ಅಂಗಡಿಗೆ ಹೋದರೆ 38 ರೂ.ಗೆ 1 ಕೆಜಿ ಬೇಳೆ. 21 ಕೆಜಿ ಅಕ್ಕಿ ನೀಡಬೇಕು. ಎಲ್ಲೂ ಇದು ನಡೆಯುತ್ತಿಲ್ಲ 50, 100 ರೂ. ತೆಗೆದುಕೊಳ್ಳುತ್ತಿದ್ದಾರೆ. 50 ರೂ.ಗಿಂತ ಹೆಚ್ಚು ತೆಗೆದುಕೊಂಡರೆ ಸೋಪು, ಎಣ್ಣೆ ಕೊಡುತ್ತಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಬಡವರ ಮಕ್ಕಳು ಹೋಗುತ್ತಿದ್ದಾರೆ. ಉತ್ತಮವಾದ ಶಿಕ್ಷಕರು ಇದ್ದಾರೆ. ಆದರೆ, ಮೂಲ ಸೌಕರ್ಯಗಳು ಸರಿಯಾಗಿಲ್ಲ. ಬೆಂಗಳೂರಿನಂತಹ ಪ್ರದೇಶದಲ್ಲಿ ಇಂಟರ್ನ್ಯಾಷನಲ್ ಶಾಲೆ ನೋಡಿ, ಸರ್ಕಾರಿ ಶಾಲೆ ನೋಡಿದರೆ ಶಾಲೆಯ ವಾತಾವರಣವೇ ಇಲ್ಲ ಅನ್ನಿಸುತ್ತದೆ.
ಜಯನಗರದ ಸೈಕಲ್ ಟ್ರಾಕ್ ಯೋಜನೆ ಹಳ್ಳ ಹಿಡಿದಿದೆ ಅಲ್ಲವೇ?
'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ' ಎಂಬಂತೆ ಆಗಿದೆ ಸೈಕಲ್ ಟ್ರಾಕ್ ಯೋಜನೆ. ಜನರು ಸೈಕಲ್ ಬಳಸುತ್ತಿಲ್ಲ, ಟ್ರಾಕ್ ಪಾರ್ಕಿಂಗ್ಗೆ ಬಳಕೆಯಾಗುತ್ತಿದೆ. ಟ್ರಾಕ್ ಇದೆ ಎನ್ನುವ ಅರಿವು ಸಹ ಜನರಿಗೆ ಇಲ್ಲ. ಅರಿವು ಮೂಡಿಸುವ ಯೋಜನೆಯೂ ಆಗಿಲ್ಲ. ಸರಿಯಾದ ವ್ಯವಸ್ಥೆ ಮಾಡಿದರೆ ಜನರು ಸೈಕಲ್ ಬಳಸುತ್ತಾರೆ.
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಾಗಿಲು ತೆರೆಯುವುದು ಯಾವಾಗ?
ಈ ಬಗ್ಗೆ ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ. ಶಾಪಿಂಗ್ ಕಾಂಪ್ಲೆಕ್ಸ್ ಉದ್ಘಾಟನೆಯಾಗಿ ಎರಡು ವರ್ಷ 2 ತಿಂಗಳು ಕಳೆದಿದೆ. ಆದರೆ, ಬಾಗಿಲು ತೆರೆದಿಲ್ಲ. ವ್ಯಾಪಾರಿಗಳಿಗೆ ಹಂಚಿಕೆಯಾಗಿಲ್ಲ. ಇದರ ಒಂದು ವರ್ಷದ ಆದಾಯ ಸುಮಾರು 7 ಕೋಟಿ. ಬಾಗಿಲು ಮುಚ್ಚಿರುವುದರಿಂದ ಬಿಬಿಎಂಪಿಗೆ ಆದಾಯ ಬರುತ್ತಿಲ್ಲ. ಇದನ್ನು ಮುಕ್ತಗೊಳಿಸಿ ಎಂದು ಜುಲೈನಲ್ಲಿ ಧರಣಿ ಮಾಡಿದೆವು. ಆದರೆ, ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ, ಲೋಕಾಯುಕ್ತರಿಗೆ ದೂರು ನೀಡಿದೆವು.
ಲೋಕಾಯುಕ್ತರು ಬಿಬಿಎಂಪಿ ಆಯುಕ್ತರು, ಬಿಡಿಎ ಅಧಿಕಾರಿಗಳನ್ನು ಕರೆಸಿ ಹಲವು ಆದೇಶಗಳನ್ನು ಕೊಟ್ಟಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದೇವೆ. ಸುಮಾರು 60 ಕೋಟಿ ವೆಚ್ಚದ ಕಾಂಪ್ಲೆಕ್ಸ್ ಅನೈತಿಕ ಚುಟಿವಟಿಕೆಗಳ ತಾಣವಾಗುತ್ತಿದೆ. ಜನವರಿ 5ರಂದು ಇದರ ವಿಚಾರಣೆ ನಡೆಯಲಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಮೌನ ವಹಿಸಿದ್ದಾರೆ. ಬಿಬಿಎಂಪಿ ಸದಸ್ಯರು ಸಹ ಈ ಬಗ್ಗೆ ಚಕಾರ ಎತ್ತುತ್ತಿಲ್ಲ.
ಉಪೇಂದ್ರ ಅವರ ಜೊತೆ ಕೈ ಜೋಡಿಸುವಿರಾ?
ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದಾಕ್ಷಣ ನಮಗೆ ಎಚ್.ಎಸ್.ದೊರೆಸ್ವಾಮಿ, ಸಂತೋಷ ಹೆಗಡೆ, ಎಸ್.ಆರ್.ಹಿರೇಮಠ ನೆನಪಿಗೆ ಬರುತ್ತಾರೆ. ಈ ಮೂವರ ಜೊತೆ ಸೇರಿ ನಾನು ಹಲವು ಹೋರಾಟ ಮಾಡಿದ್ದೇನೆ. ಆದ್ದರಿಂದ ನಾನು ಒಂಟಿಯಾಗಿ ಹೋರಾಟ ಮಾಡುತ್ತಿಲ್ಲ. ರಾಜಕೀಯವಾಗಿ ಒಂಟಿಯಾಗಿಲ್ಲ. ರಾಜಕೀಯವಾಗಿ ಇವರು ಯಾವ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ. ಆದರೆ, ಅವರ ಸಹಕಾರ ಇರುತ್ತದೆ.
ಕರ್ನಾಟಕದ ರಾಜಕೀಯದಲ್ಲಿ ದೊಡ್ಡ ಅವಕಾಶವಿದೆ. ಪಕ್ಷದ ಕಠೋರ ಭಕ್ತರಿಗೂ ಇಂದು ಈ ರಾಜಕಾರಣ ಸರಿಇಲ್ಲ ಎಂಬ ಭಾವನೆ ಬಂದಿದೆ. ಉಪೇಂದ್ರ ಅವರು ಕರ್ನಾಟಕದ ಜನಪ್ರಿಯ ನಟರು. ಇಡೀ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಉತ್ತಮವಾಗಿ ಪಕ್ಷ ಕಟ್ಟಿದ್ದರೆ ಅವಕಾಶವಿದೆ. ಒಂದು ಸಾಂಸ್ಥಿಕ ರೂಪ ಕೊಟ್ಟು ಮುನ್ನಡೆದರೆ ಉತ್ತಮವಾದ ಅವಕಾಶಗಳು ಸಿಗುತ್ತವೆ. ಉಪೇಂದ್ರ ಸೇರಿದಂತೆ ಇನ್ನೂ ಹಲವರು ಸಾಮಾಜಿಕವಾಗಿ, ರಾಜಕೀಯವಾಗಿ ಸಕ್ರಿಯರಾಗಲಿ ಎಂದು ಬಯಸುತ್ತೇನೆ.