ದರ್ಶನವಿತ್ತಳು ಕಾವೇರಿ ತೀರ್ಥರೂಪಿಣಿಯಾಗಿ....
ಮಡಿಕೇರಿ, ಅ.18: ಕರ್ನಾಟಕದ ಜೀವನದಿ, ಕೊಡವರ ಕುಲದೇವಿ ಕಾವೇರಿ ಮಾತೆ ಉಗಮಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಶನಿವಾರ ಮಧ್ಯರಾತ್ರಿ 12.16ಕ್ಕೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸುವುದರೊಂದಿಗೆ ನೆರೆದ ಸಹಸ್ರಾರು ಭಕ್ತರನ್ನು ಪುನೀತಗೊಳಿಸಿದಳು.
ತೀರ್ಥೋದ್ಭವದ ಭವ್ಯ ಕ್ಷಣಕ್ಕಾಗಿ ಕಾತರದಿಂದ ಬ್ರಹ್ಮಕುಂಡಿಕೆ ಬಳಿ ಕಾದು ನಿಂತಿದ್ದ ಭಕ್ತರು ಕಾವೇರಮ್ಮನ ಪಾದಾರವಿಂದಗಳಿಗೆ ಗೋವಿಂದ ಎಂದು ಘೋಷಣೆ ಕೂಗುತ್ತಿದ್ದರೆ, ಅರ್ಚಕರು ಮಂತ್ರ ಪಠಿಸುತ್ತಾ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. [ಕಾವೇರಿ ತೀರ್ಥೋದ್ಭವದ ಪೌರಾಣಿಕ ಹಿನ್ನೆಲೆ]
ಇದಕ್ಕೂ ಮೊದಲು ಭಾಗಮಂಡಲದಿಂದ ಭಂಡಾರನ್ನು ತಂದು ಕಾವೇರಿ ಮಾತೆಗೆ ಆಭರಣಗಳನ್ನು ತೊಡಿಸಿ ಮಹಾಪೂಜೆಯನ್ನು ನೆರವೇರಿಸಲಾಯಿತು.
ಬಳಿಕ ಅರ್ಚಕರು ತೀರ್ಥಕುಂಡಿಕೆ ಬಳಿ ಮಂತ್ರ ಪಠಿಸುತ್ತಾ ಕುಂಡಿಕೆಗೆ ಕುಂಕುಮ, ಪುಷ್ಪಾರ್ಚನೆಯನ್ನು ನೆರವೇರಿಸಿದರು. ಮೊದಲೇ ನಿಗದಿ ಮಾಡಿದ್ದ ಸಮಯಕ್ಕೆ ಸರಿಯಾಗಿ ಕುಂಡಿಕೆಯಲ್ಲಿ ಕಾವೇರಿ ಉದ್ಭವಿಸತೊಡಗಿ 12.16ಕ್ಕೆ ತೀರ್ಥರೂಪಿಣಿಯಾಗಿ ಉಕ್ಕಿ ಹರಿಯತೊಡಗಿದಳು.
ಈ ಸಂದರ್ಭದಲ್ಲಿ ನೆರೆದಿದ್ದ ಅರ್ಚಕರು ತೀರ್ಥ ಉಕ್ಕಿ ಹೊರ ಹೋಗದಂತೆ ಕುಂಡಿಕೆಯಿಂದ ತೀರ್ಥವನ್ನು ತೆಗೆದು ಭಕ್ತರ ಮೇಲೆ ಪ್ರೋಕ್ಷಣೆ ಮಾಡಿದರು. ಭಾವಪರವಶಗೊಂಡ ಭಕ್ತರು ಸ್ನಾನಕೊಳಕ್ಕೆ ಧುಮುಕಿ ತೀರ್ಥಕ್ಕೆ ಮುಗಿ ಬಿದ್ದರು.
ಆಗ
ನೂಕಾಟ,
ತಳ್ಳಾಟ
ನಡೆಯಿತ್ತಾದರೂ,
ಸನ್ನಿಧಿಯಲ್ಲಿ
ನೆರದಿದ್ದ
ಅರ್ಚಕರು
ಹಾಗೂ
ಪೊಲೀಸ್
ಸಿಬ್ಬಂದಿ
ತೀರ್ಥವನ್ನು
ಎಲ್ಲಾ
ಭಕ್ತರಿಗೆ
ತಲುಪಿಸುವಲ್ಲಿ
ಯಶಸ್ವಿಯಾದರು.
ಭಕ್ತರು
ಬಕೆಟ್,
ಬಿಂದಿಗೆ,
ಖಾಲಿ
ಬಾಟಲಿಗಳಲ್ಲಿ
ತೀರ್ಥವನ್ನು
ತಮ್ಮ
ತಮ್ಮ
ಮನೆಗೆ
ಕೊಂಡೊಯ್ದರು.
ಭಕ್ತರಿಂದ ತ್ರಿವೇಣಿ ಸಂಗಮದಲ್ಲಿ ಸ್ನಾನ
ಶನಿವಾರ ಸಂಜೆಯೇ ದೂರದ ಊರುಗಳಿಂದ ಭಾಗಮಂಡಲಕ್ಕೆ ಆಗಮಿಸಿದ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿಕೊಂಡು ತಲಕಾವೇರಿಗೆ ಆಗಮಿಸಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ತೀರ್ಥೋದ್ಭವದ ಬಳಿಕ
ತೀರ್ಥೋದ್ಭವದ ಬಳಿಕ ತೀರ್ಥಗಳನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದು ದೇವರ ಮನೆಯಲ್ಲಿಟ್ಟು ಕುಟುಂಬದವರೆಲ್ಲ ತೀರ್ಥ ಪೂಜೆ ನೆರವೇರಿಸಿ ಬಳಿಕ ಬಂಧು ಬಾಂಧವರಿಗೆ ವಿತರಿಸಿದರು. ಸಂಪ್ರದಾಯದಂತೆ ದೋಸೆ ಮಾಡಿ ಗದ್ದೆಯಲ್ಲಿ ಹಾಕಲಾಗಿದ್ದ ಬೆಚ್ಚುವಿನಲ್ಲಿಟ್ಟು ಭೂಮಿ ತಾಯಿಗೆ ಪೂಜೆ ನೆರವೇರಿಸಲಾಯಿತು.
ಹಿರಿಯರಿಗೆ ಪಿತೃಕರ್ಮ (ಪಿಂಡ)
ಜಿಲ್ಲೆಯಾದ್ಯಂತ ಭಕ್ತರು ಭಾಗಮಂಡಲಕ್ಕೆ ತೆರಳಿ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಿ ಹಿರಿಯರಿಗೆ ಪಿತೃಕರ್ಮ (ಪಿಂಡ) ನೆರವೇರಿಸಿ ಬಳಿಕ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ತಲಕಾವೇರಿಗೆ ತೆರಳುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಬೆಳ್ಳಿ ಕವಚಕ್ಕೆ ಸ್ವಲ್ಪ ಹಾನಿಯಾಗಿದೆ
ಕಾವೇರಿ ಕುಂಡಿಕೆ ಬಳಿ ತೀರ್ಥಕ್ಕಾಗಿ ನೂಕು ನುಗ್ಗಲು ಉಂಟಾದ ಹಿನ್ನಲೆಯಲ್ಲಿ ಕುಂಡಿಕೆಯ ಬೆಳ್ಳಿ ಕವಚಕ್ಕೆ ಸ್ವಲ್ಪ ಹಾನಿಯಾಗಿದೆ. ಇದರ ಹೊರತು ಪಡಿಸಿದಂತೆ ಇನ್ಯಾವುದೇ ತೊಂದರೆ ಉಂಟಾಗಲಿಲ್ಲ. ಈ ಪವಿತ್ರ ಕ್ಷಣಕ್ಕೆ ಸಂಸದ ಪ್ರತಾಪ್ ಸಿಂಹ ಸಾಕ್ಷಿಯಾದರು.