ಮಠಗಳಿಗೆ ಅನ್ನ ದಾಸೋಹ ಯೋಜನೆ ಪುನರ್ ಆರಂಭ!
ಬೆಂಗಳೂರು. ಫೆ. 25: ಅನ್ನ ದಾಸೋಹ ಯೋಜನೆಯಡಿ ಸಿದ್ದಗಂಗಾ, ಸುತ್ತೂರು ಹಾಗೂ ಆದಿಚುಂಚನಗಿರಿ ಮಠಗಳು ಸೇರಿದಂತೆ ಕಲ್ಯಾಣ ಸಂಸ್ಥೆಗಳಿಗೆ ಕೊಡುತ್ತಿದ್ದ ಅಕ್ಕಿ ಹಾಗೂ ಗೋದಿ ಸರಬರಾಜು ಪುನರ್ ಪ್ರಾರಂಭಿಸಲಾಗಿದೆ ಎಂದು ಆಹಾರ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ್ದಾರೆ. ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಅಹಾರ ಸಚಿವರಾಗಿದ್ದಾಗ ಮಠಗಳಿಗೆ ಸರಬರಾಜು ಆಗುತ್ತಿದ್ದ ಆಹಾರ ಧಾನ್ಯ ನಿಲ್ಲಿಸಿದ್ದರಿಂದ ವಿವಾದ ಉಂಟಾಗಿತ್ತು.
ಇದೀಗ ಮೊದಲಿನಂತೆಯೆ ಆಹಾರ ಧಾನ್ಯ ಸರಬರಾಜು ಆರಂಭಿಸಲಾಗಿದೆ ಎಂದು ಆಹಾರ ಸಚಿವ ಗೋಪಾಲಯ್ಯ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಫೆಬ್ರವರಿ ತಿಂಗಳಿನ ಆಹಾರ ಧನ್ಯವನ್ನೂ ಈಗಾಗಲೇ ಸರಬರಾಜು ಮಾಡಿದ್ದೇವೆ ಎಂದು ಹೇಳಿದ್ದಾರೆ. ಮೊದಲಿನಂತೆಯೆ ಯತಾವತ್ತಾಗಿ ಯೋಜನೆ ಮುಂದುವರೆಯಲಿದೆ ಎಂದು ಗೋಪಾಲಯ್ಯ ಅವರು ಭರವಸೆ ಕೊಟ್ಟಿದ್ದಾರೆ.
ಸಿದ್ದಗಂಗಾ ಮಠದ ಆಹಾರಕ್ಕೆ ಕತ್ತರಿ; ದಾಖಲೆಗಳು ಬಿಚ್ಚಿಟ್ಟ ಲೆಕ್ಕ
ಅನ್ನ ದಾಸೋಹ ಯೋಜನೆ ಯೋಜನೆ ಪುನರಾರಂಭ
ಫೆಬ್ರವರಿ ಮೊದಲ ವಾರದಿಂದಲೇ ಈ ಹಿಂದೆ ಕೊಡುತ್ತಿದ್ದ ಎಲ್ಲಾ ಕಲ್ಯಾಣ ಸಂಸ್ಥೆಗಳಿಗೆ, ಮಠ-ಮಾನ್ಯಗಳಿಗೆ ಅಕ್ಕಿ ಹಾಗೂ ಗೋಧಿ ಮೊದಲಿನಂತೆ ಅನ್ನದಾಸೋಹ ಯೋಜನೆಯಡಿ ಸರಬರಾಜು ಮಾಡಲಾಗಿದೆ. 91 ಅನುದಾನಿತ, 16 ಅನುದಾನೇತರ, 222 ಖಾಸಗಿ ಮತ್ತು 22 ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಒಟ್ಟು 351 ಸರ್ಕಾರೇತರ ಕಲ್ಯಾಣ ಸಂಸ್ಥೆಗಳ 32,077 ಫಲಾಭವಿಗಳಿಗೆ ಅಕ್ಕಿ ಹಾಗೂ ಗೋದಿ ನೀಡಿಕೆ ಮೊದಲಿನಂತೆ ಯತಾವತ್ತಾಗಿ ಮುಂದುವರಿಸಲು ಆದೇಶಿಸಲಾಗಿದೆ ಎಂದು ಗೋಪಾಲಯ್ಯ ಹೇಳಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದ್ದ ಸಚಿವೆ ಜೊಲ್ಲೆ ಆದೇಶ
2019ರ ನವೆಂಬರ್ 12ರಿಂದ ಡಿಸೆಂಬರ್ 27ವರೆಗೆ ಎರಡು ತಿಂಗಳಲ್ಲಿ 3 ಅಧಿಸೂಚನೆ ಹೊರಡಿಸಿದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಯೋಜನೆಯಿಂದ ಕಲ್ಯಾಣ ಸಂಸ್ಥೆಗಳನ್ನು ಕೈಬಿಟ್ಟಿದ್ದರಿಂದ ಉಟಾದ ವಿವಾದದಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರವಾಗಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಆರಂಭಿಸಲಾಗಿದ್ದ ಯೋನೆಯನ್ನು ಕೈಬಿಟ್ಟು ಮಠಗಳಿಗೆ ಆಹಾರ ಧಾನ್ಯ ಪೂರೈಕೆ ಸ್ಥಗಿತಗೊಳಿಸಲಾಗುತ್ತು. ಇದಕ್ಕೆ ಕಲ್ಯಾಣ ಸಂಸ್ಥೆಗಳೂ ಸೇರಿದಂತೆ ರಾಜ್ಯದ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸಿಎಂ ಯಡಿಯೂರಪ್ಪ ಆದೇಶ ತಡೆಹಿಡಿದ ಸಚಿವೆ ಶಶಿಕಲಾ ಜೊಲ್ಲೆ
ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದ ಸಿದ್ದಲಿಂಗ ಶ್ರೀಗಳು
ಯೋಜನೆ ಸ್ಥಗಿತಗೊಳಿಸಲಾಗುತ್ತಿದೆ ಎಂಬ ಸೂಚನೆ ಬಂದ ತಕ್ಷಣವೇ ಕನಿಷ್ಠ ರಿಯಾಯತಿ ದರದಲ್ಲಿ ಆಹಾರ ಧಾನ್ಯ ಸರಬರಾಜು ಮಾಡುವಂತೆ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ, ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಆಹಾರ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮಠದಿಂದ ಪತ್ರ ಬರೆಯಲಾಗಿತ್ತು. ಆದರೂ ಯೋಜನೆ ಸ್ಥಗಿತಗೊಳಿಸಿದ್ದನ್ನು ಮಾಜಿ ಆಹಾರ ಸಚಿವ ಯು.ಟಿ. ಖಾದರ್ ಪ್ರಶ್ನೆ ಮಾಡಿದ್ದರು. ಆ ಬಳಿಕ ವಿವಾದ ಉಂಟಾಗಿತ್ತು.
ಸಚಿವೆ ಶಶಿಕಲಾ ಜೊಲ್ಲೆ ತರಾಟೆಗೆ ತೆಗೆದುಕೊಂಡಿದ್ದ ಸಿಎಂ
ಮಠಗಳ ಅನ್ನಕ್ಕೆ ಬಿಜೆಪಿ ಸರ್ಕಾರದ ಕತ್ತರಿ ಹಾಕಿದ್ದರಿಂದ ಉಂಟಾದ ವಿವಾದದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಹಾರ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ತಕ್ಷಣವೇ ಹಿಂದಿನಂತೆ ಯೋಜನೆ ಜಾರಿ ಮಾಡುವ ಭರವಸೆಯನ್ನು ಕೊಟ್ಟಿದ್ದರು. ಜೊತೆಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಎಲ್ಲ ಅಡೆತಡೆಗಳನ್ನು ನಿವಾರಿಸುವ ಭರವಸೆಯನ್ನು ಸಿಎಂ ಯಡಿಯೂರಪ್ಪ ಕೊಟ್ಟಿದ್ದರು. ಅದರಂತೆ ಇದೀಗ ಯೋಜನೆ ಪುನರಾರಂಭವಾಗಿದೆ.