ರಸ್ತೆಯಲ್ಲಿ ಉಳುಮೆ ಮಾಡಿದ ಅಂಕೋಲಾ ಗ್ರಾಮಸ್ಥರು
ಕಾರವಾರ, ಜುಲೈ 27 : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಆವರ್ಸಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಷ್ಮೀನಾರಾಯಣ ದೇವಾಲಯದಿಂದ ದಂಡೆಬಾಗಕ್ಕೆ ಹೋಗುವ ರಸ್ತೆಯ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ರಸ್ತೆಯಲ್ಲಿ ಸಸಿನೆಟ್ಟು, ಉಳುಮೆ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಹದಗೆಟ್ಟ ರಸ್ತೆಯ ಬಗ್ಗೆ ಹಲವು ಬಾರಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗ್ರಾಮಸ್ಥರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ ಅಂತ ಆವರ್ಸಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಆವರ್ಸಾ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಶಾಸಕರಾದ ಸತೀಶ್ ಕೆ ಸೈಲ್, ತಹಶೀಲ್ದಾರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಮೂರು ತಿಂಗಳಲ್ಲಿ ರಸ್ತೆ ದುರಸ್ತಿ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ತಾವೇ ರಸ್ತೆ ದುರಸ್ತಿ ಮಾಡಿಕೊಂಡ ಗ್ರಾಮಸ್ಥರು :
ಇನ್ನೊಂದೆಡೆ ಯಲ್ಲಾಪುರ ತಾಲ್ಲೂಕಿನ ನಾಯಕನಕೇರಿ ಬಳಿ ರಾಷ್ಟ್ರೀಯ ಹೆದ್ದಾರಿ ಹಾಗೂ ಪಟ್ಟಣ ಪಂಚಾಯತಿ ರಸ್ತೆಯ ಮಧ್ಯೆ 17 ಕಿ.ಮೀ. ರಸ್ತೆ ಕೆಸರುಗದ್ದೆಯಾಗಿ ನಿರ್ಮಾಣವಾಗಿದ್ದು, ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರೇ ರಸ್ತೆಗೆ ಡಾಂಬರ್ ತುಣುಕುಗಳನ್ನು ಹಾಕುವುದರ ಮೂಲಕ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ.
ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳಿಗೆ ಜನರ ನೆನಪಾಗುತ್ತದೆ. ಅಲ್ಲಿಯವರೆಗೆ ಅವರಿಗೆ ನಮ್ಮ ಕಾಳಜಿ ಇರುವುದಿಲ್ಲ. ಈ ಬಾರಿ ಮತ ಕೇಳಲು ಬಂದವರಿಗೆ ಮಂಗಳಾರತಿ ಮಾಡುತ್ತೇವೆ ಅಂತ ಕಿಡಿಕಾರಿದರು.