ಸಿಎಂ ಅನಿಲ ಭಾಗ್ಯ ಯೋಜನೆ: ಡಿ.15 ರೊಳಗೆ ಜಾರಿ
ಬೆಂಗಳೂರು, ನವೆಂಬರ್ 29: ಸಿಎಂ ಅನಿಲ ಭಾಗ್ಯ ಯೋಜನೆಗಿದ್ದ ತೊಡಕುಗಳು ನಿವಾರಣೆಯಾಗಿದ್ದು ಡಿಸೆಂಬರ್ 15ರೊಳಗೆ ಈ ಯೋಜನೆ ಜಾರಿಯಾಗಲಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಪರ್ಯಾಯವಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿ ಮಾಡಲು ಹೊರಟಿದ್ದ ಸಿಎಂ ಅನಿಲ ಭಾಗ್ಯ ಯೋಜನೆಗೆ ಸಾಕಷ್ಟು ತೊಡಕುಗಳು ಎದುರಾಗಿತ್ತು. ಈ ಯೋಜನೆಯಲ್ಲಿ ಎರಡು ಗ್ಯಾಸ್ಸ್ಟವ್, ಅಡುಗೆ ಅನಿಲ ಸಹಿತ 4,450 ರೂಪಾಯಿ ಮೊತ್ತದ ಅನಿಲ ಭಾಗ್ಯದ ಕಿಟ್ ಒಂದು ಲಕ್ಷ ಫಲಾನುಭವಿಗಳ ಕೈ ಸೇರಲಿದೆ.
ಯೋಜನೆಯಡಿ 30 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಹಂತ ಹಂತವಾಗಿ ಯೋಜನೆಯ ಸೌಲಭ್ಯವನ್ನು ತಲುಪಿಸಲಾಗುವುದು, ಮೊದಲ ಹಂತದಲ್ಲಿ ಡಿಸೆಂಬರ್ 15ರೊಳಗೆ ಒಂದು ಲಕ್ಷ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರೆಯಲಿದೆ ಎಂದು ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ಉರುವಲು ಬಳಕೆ ತಪ್ಪಿಸಲು ಈ ಯೋಜನೆ
ಬಡ ಕುಟುಂಬಗಳು ಉರುವಲು ಬಳಕೆ ಮಾಡುವುದನ್ನು ತಪಪ್ಇಸಿಸ ಅಡುಗೆ ಅನಿಲ ಬಳಸುವಂತೆ ಮಾಡಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿಗಳ ಉಜ್ವಲ ಯೋಜನೆ ರೂಪಿಸಿತ್ತು. ಈ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಸಿಲಿಂಡರ್ಗೆ ಗ್ಯಾಸ್ ಸ್ಟವ್ ಉಚಿತವಾಗಿ ವಿತರಿಸಲಾಗುತ್ತಿದೆ.
ಸ್ಟವ್ ಮೇಲೆ ಅನಿಲ ಭಾಗ್ಯ ಯೋಜನೆ ಎಂದು ಮುದ್ರಣ
ಸ್ಟವ್ ಮೇಲೆ ಸಿಎಂ ಅನಿಲ ಭಾಗ್ಯ ಯೋಜನೆ ಎಂದು ಮುದ್ರಿಸಲು ಅವಕಾಶ ಕೇಳಳಾಗಿತ್ತು, ಈ ಪ್ರಸ್ಥಾವನೆ ನಿರಾಕರಿಸಿದ ಕೇಂದ್ರಕ್ಕೆ ಸೆಡ್ಡುಹೊಡೆದು ಹಿಂದಿನ ಸರ್ಕಾರ ಪರ್ಯಾಯವಾಗಿ ಸಿಎಂ ಅನಿಲಭಾಗ್ಯ ಯೋಜನೆ ಜಾರಿಗೆ ಮುಂದಾಗಿತ್ತು.
ಒಂದು ಲಕ್ಷ ಫಲಾನುಭವಿಗಳು
ಮೊದಲ ಹಂತದಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಅನಿಲ ಭಾಗ್ಯ ಯೋಜನೆ ತಲುಪಿಸುವಂತೆ ನಿರ್ದೇಶನ ನೀಡಿದರು. ಈ ಮೊದಲು ಗುರುತಿಸಲಾಗಿದ್ದ ಒಂದು ಲಕ್ಷ ಫಲಾನುಭವಿಗಳ ಪೈಕಿ 31 ಸಾವಿರ ಮಂದಿ ಉಜ್ವಲ ಯೋಜನೆ ಫಲಾನುಭವಿಗಳಾಗಿರುವ ಹಿನ್ನೆಲೆಯಲ್ಲಿ ಹೊಸ ಫಲಾನುಭವಿಗಳನ್ನು ಗುರುತಿಸಲು ನಿರ್ದೇಶನ ನೀಡಲಾಗಿದೆ.
580 ಕೋಟಿ ಉಳಿತಾಯ
ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆ ಬಳಿಕ ನಕಲಿ ಮತ್ತು ಬೋಗಸ್ ಕಾರ್ಡ್ ಗಳಿಗೆ ಕಡಿವಾಣ ಬಿದ್ದಿದ್ದು, ರಾಜ್ಯದ ಬೊಕ್ಕಸಕ್ಕೆ 580 ಕೋಟಿ ರೂ ಉಳಿತಾಯವಾಗಿದೆ ಎಂದು ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.