ಆಂಧ್ರ, ತೆಲಂಗಾಣ, ಜೆಡಿಎಸ್ ಶಾಸಕರನ್ನು ನಮಗೆ ಒಪ್ಪಿಸಿ, ಚಿಂತೆ ಬಿಡಿ: ಕೆಸಿಆರ್, ನಾಯ್ಡು
ಚುನಾವಣೆಯಲ್ಲಿ ಗೆಲ್ಲುವುದು ಒಂದು ಸಾಹಸವಾದರೆ, ಗೆದ್ದ ಶಾಸಕರನ್ನು ಹಿಡಿದಿಟ್ಟು ಕೊಳ್ಳುವುದು ಮತ್ತೊಂದು ದೊಡ್ಡ ಸವಾಲು. ಈಗ ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಬೇಕಾಗಿರುವ ಜೆಡಿಎಸ್ ಪಕ್ಷಕ್ಕೆ ಪಕ್ಕದ ರಾಜ್ಯದವರು ಸಹಾಯ ಹಸ್ತ ಚಾಚಿದ್ದಾರೆ.
ನಿಮ್ಮ ಶಾಸಕರನ್ನು ಹೈದರಾಬಾದಿಗೆ ತಂದು ಬಿಡಿ, ನೀವು ಮಿಕ್ಕ ಕೆಲಸದತ್ತ ಗಮನಹರಿಸಿ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖಂಡರು, ಜೆಡಿಎಸ್ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚುನಾವಣೆಯಲ್ಲಿ 38ಸ್ಥಾನವನ್ನು ಮಾತ್ರ ಗೆದ್ದು, ಕಾಂಗ್ರೆಸ್ ಪಕ್ಷದ ಜೊತೆಗೆ ಸರಕಾರ ರಚಿಸುವ ಸದಾವಕಾಶ ಸಿಕ್ಕಿರುವ ಈ ಹೊತ್ತಿನಲ್ಲಿ, ತಮ್ಮ ಶಾಸಕರು ಬಿಜೆಪಿ ಪಾಲಾಗುವ ಭೀತಿಯಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೆ ಆಂಧ್ರ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಬೆಂಬಲಕ್ಕೆ ನಿಂತಿದ್ದಾರೆ ಎನ್ನುವ ಸುದ್ದಿಯಿದೆ.
ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲು ಮುಂದಿನ ಹದಿನೈದು ದಿನ ಅತ್ಯಂತ ನಿರ್ಣಾಯಕವಾಗಿರುವ ಈ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರಿಗೆ ಕ್ರಮವಾಗಿ ಈಗಲ್ಟನ್ ರಿಸಾರ್ಟ್ ಮತ್ತು ಶಂಘ್ರೆಲಾ ಹೊಟೇಲ್ ನಲ್ಲಿ ವ್ಯವಸ್ಥೆ ಮಾಡಿದೆ.
ಆದರೆ, ಈ ಎರಡೂ ಸ್ಥಳಗಳು ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ಸೂಕ್ತವಲ್ಲ, ಬೇರೆಡೆಗೆ ತಮ್ಮ ಶಾಸಕರನ್ನು ಶಿಫ್ಟ್ ಮಾಡಬೇಕು ಎನ್ನುವ ಗಂಭೀರ ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲಿ, ಜೆಡಿಎಸ್ ಶಾಸಕರ ಜವಾಬ್ದಾರಿ ನಮಗೆ ಬಿಡಿ ಎಂದು ಎರಡೂ ರಾಜ್ಯದ ಮುಖ್ಯಮಂತ್ರಿಗಳ ಆಫರ್ ನೀಡಿದ್ದಾರೆ ಎಂದು ತೆಲುಗು ವಾಹಿನಿಗಳು ವರದಿ ಮಾಡಿವೆ. ಮುಂದೆ ಓದಿ..
ಚಂದ್ರಬಾಬು ನಾಯ್ಡು, ಕೆ ಚಂದ್ರಶೇಖರ್ ರಾವ್
ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣದ ಸಿಎಂ ಕೆ ಚಂದ್ರಶೇಖರ್ ರಾವ್, ಜೆಡಿಎಸ್ ಪಕ್ಷದ 38 ಶಾಸಕರನ್ನು ಮುಂದಿನ 10-15ದಿನ ಹೈದರಾಬಾದಿಗೆ ಕರೆದುಕೊಂಡು ಬನ್ನಿ. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ಎನ್ನುವ ಅಭಯವನ್ನು ನೀಡಿದ್ದಾರೆಂದು ತೆಲುಗು ವಾಹಿನಿಗಳು ಹೇಳಿವೆ.
ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರಬೇಕು ಎನ್ನುವ ನಿಲುವು
ಕಾಂಗ್ರೆಸ್ ಪಕ್ಷಕ್ಕೆ ಈ ಆಫರ್ ನೀಡದಿರುವ ನಾಯ್ಡು ಮತ್ತು ಕೆಸಿಆರ್, ಜೆಡಿಎಸ್ ಶಾಸಕರನ್ನು ಮಾತ್ರ ಆಹ್ವಾನಿಸಿರುವುದು ವಿಶೇಷ. ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರಬೇಕು ಎನ್ನುವ ನಿಲುವವನ್ನು ಹೊಂದಿರುವ ಟಿಡಿಪಿ ಮತ್ತು ಟಿಆರ್ ಎಸ್, ಕರ್ನಾಟಕದಲ್ಲಿ ಕುಮಾರಸ್ವಾಮಿ ಸರಕಾರ ಅಧಿಕಾರಕ್ಕೆ ಬರಲಿ ಎನ್ನುವ ನಿಲುವನ್ನು ಹೊಂದಿದ್ದಾರೆ.
ಬಿಜೆಪಿ ವಿರುದ್ದ ಕಿಡಿಕಾರುತ್ತಿರುವ ಆಂಧ್ರ ಸಿಎಂ ನಾಯ್ಡು
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಚಾರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರದಿಂದ ಹೊರಬಂದ ನಂತರ, ಬಿಜೆಪಿ ವಿರುದ್ದ ಕಿಡಿಕಾರುತ್ತಿರುವ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು, ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ ಸಾಧಿಸಬಾರದು ಎಂದು ಹಲವು ಪ್ರಯತ್ನಕ್ಕೆ ಚುನಾವಣೆಯ ವೇಳೆ ಪ್ರಯತ್ನಿಸಿದ್ದು ಗೊತ್ತೇ ಇದೆ.
ಮುಂದಿನ ನಿರ್ಧಾರದ ತನಕೆ ಹೈದರಾಬಾದಿಗೆ
ಶಂಘ್ರೆಲಾ ಹೊಟೇಲ್ ನಲ್ಲಿ ಜೆಡಿಎಸ್ ಶಾಸಕರಿದ್ದರೂ, ಬಿಜೆಪಿಯವರು ಅವರನ್ನು ಸಂಪರ್ಕಿಸಬಹುದು ಎನ್ನುವ ಭೀತಿಯಲ್ಲಿರುವ ಕುಮಾರಸ್ವಾಮಿ, ಬೆಂಗಳೂರಿನಿಂದ ಮುಂದಿನ ನಿರ್ಧಾರದ ತನಕ ಹೈದರಾಬಾದಿಗೆ ಕಳುಹಿಸುವ ಸಾಧ್ಯತೆ ದಟ್ಟವಾಗಿದೆ. ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಚ್ಡಿಕೆ ಈ ಬಗ್ಗೆ ನಿರ್ಧರಿಸಬಹುದು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮ್ಮ ನಿಷ್ಠೆಯನ್ನು ಬದಲಿಸಬಹುದು
ಕ್ಷಣಕ್ಷಣಕ್ಕೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ರಾಜ್ಯ ರಾಜಕೀಯದ ವಿದ್ಯಮಾನಗಳಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮ್ಮ ನಿಷ್ಠೆಯನ್ನು ಬದಲಿಸಬಹುದು ಎನ್ನುವ ಚಿಂತೆಯಲ್ಲಿರುವ ಕುಮಾರಸ್ವಾಮಿ, ಅಂಧ್ರ ಮತ್ತು ತೆಲಂಗಾಣದ ಸಿಎಂಗಳು ನೀಡಿರುವ ಆಫರ್ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.