ಊಹಾಪೋಹಗಳಿಗೆ ತೆರೆ, ಜ. 31ರಂದು ಆನಂದ್ ಸಿಂಗ್ ಕಾಂಗ್ರೆಸ್ ಸೇರ್ಪಡೆ
ಬಳ್ಳಾರಿ, ಜನವರಿ 30: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆನಂದ್ ಬಿ. ಸಿಂಗ್ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದೆ. ಅವರು ಜನವರಿ 31 ರ ಬುಧವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ.
ಆನಂದ್ ಬಿ. ಸಿಂಗ್ ಫೆಬ್ರವರಿ 10 ರಂದು ರಾಹುಲ್ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎನ್ನುವ ಲೆಕ್ಕಾಚಾರಗಳಿದ್ದವು. ಆದರೆ ಅವರು ಖಗ್ರಾಸ ಚಂದ್ರಗ್ರಹಣದ ದಿನದಂದೇ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ.
ಶಾಸಕ ಸ್ಥಾನಕ್ಕೆ ಬಳ್ಳಾರಿಯ ಆನಂದ್ ಸಿಂಗ್ ರಾಜೀನಾಮೆ!
ಕಳೆದ ನಾಲ್ಕೈದು ತಿಂಗಳಿನಿಂದ ನಡೆದಿದ್ದ ತೆರೆಮರೆಯ ರಾಜಕೀಯಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಆನಂದ್ ಸಿಂಗ್ ತೆರೆ ಎಳೆದಿದ್ದರು. ಈಗ ಬುಧವಾರ ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಪಕ್ಷದ ಬಾವುಟವನ್ನು ಹಿಡಿಯುವ ಮೂಲಕ ತಮ್ಮ ಭವಿಷ್ಯದ ರಾಜಕೀಯ ನಡೆಯನ್ನು ಅವರು ಸ್ಪಷ್ಟಪಡಿಸಲಿದ್ದಾರೆ.
ಅಷ್ಟೇ ಅಲ್ಲ, ಬುಧವಾರದಿಂದಲೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ರಾಹುಲ್ ಗಾಂಧಿ ಅವರ ಫೆಬ್ರವರಿ 10ರ ಹೊಸಪೇಟೆ ಬಹಿರಂಗ ಸಭೆಯನ್ನು ಯಶಸ್ವಿಗೊಳಿಸಲು ಶ್ರಮಿಸಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ಬಿಜೆಪಿ ತೊರೆಯುವ ಬಗ್ಗೆ ಆನಂದ್ ಸಿಂಗ್ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ಕೆಸಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸಮ್ಮುಖದಲ್ಲಿ ಆನಂದ್ ಸಿಂಗ್ ಕಾಂಗ್ರೆಸ್ ಧ್ವಜ ಹಿಡಿಯಲಿದ್ದಾರೆ.