ಕ್ರಿಮಿನಲ್ ಕೇಸ್, ಪದತ್ಯಾಗ ಬಗ್ಗೆ ಆನಂದ್ ಮಹತ್ವದ ಹೇಳಿಕೆ
Recommended Video
ಬೆಂಗಳೂರು, ಫೆಬ್ರವರಿ 15: "ನಮ್ಮದು ಗಣಿ ಕುಟುಂಬ ಗಣಿ ಕಂಪೆನಿ ಅಂದರೆ ಅರಣ್ಯ ನಿಯಮ ಉಲ್ಲಂಘನೆ ಸಹಜ'' ಎಂದಿದ್ದ ಅರಣ್ಯ ಸಚಿವ ಆನಂದ್ ಸಿಂಗ್ ಅವರು ತಮ್ಮ ಮೇಲಿರುವ ಕ್ರಿಮಿನಲ್ ಕೇಸ್ ಹಾಗೂ ಸಚಿವ ಸ್ಥಾನ ತ್ಯಾಗದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನನ್ನ ಮೇಲೆ ನಂಬಿಕೆಯಿಟ್ಟು ಈ ಹುದ್ದೆ ನೀಡಿದ್ದಾರೆ. ಅವರು ಒಂದು ಮಾತು ಹೇಳಿದರೆ, ನಾನು ಸಚಿವ ಸ್ಥಾನ ತೊರೆಯಲು ಸಿದ್ಧ ಎಂದಿದ್ದಾರೆ.
ಕ್ರಿಮಿನಲ್ ಪ್ರಕರಣದಲ್ಲಿ ನನ್ನ ಹೆಸರು ಮುಂಚೂಣಿಗೆ ಬರುವಂತೆ ಮಾಡಲಾಗಿದೆ. ನಾನು ಅಸಲಿಗೆ ಯಾವುದೇ ಗಣಿ ಕಂಪನಿ ಹೊಂದಿಲ್ಲ, ನನ್ನ ಕುಟುಂಬಸ್ಥರು, ತಂದೆಯವರ ಮಾಲೀಕತ್ವ ಸೇರಿದ 8 ಜನರ ಒಡೆತನದ ಗಣಿ ಕಂಪನಿಗಳಿವೆ. ತಂದೆಯವರ ಬಳಿಕ ನಾನು ಆ ಕಂಪನಿ ಸೇರಿದ್ದೇನೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ವಿವರ ನೀಡಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ.
ಅರಣ್ಯ ಒತ್ತುವರಿ ಆರೋಪ: ಸಚಿವ ಆನಂದ್ ಸಿಂಗ್ ಧಿಮಾಕಿನ ಮಾತು
ಕಾನೂನು ಪ್ರಕಾರ ನನ್ನ ಮೇಲಿರುವ ಆರೋಪಗಳು, ಪ್ರಕರಣಗಳ ವಿವರಗಳನ್ನು ಅಫಿಡವಿಟ್ ಮೂಲಕ ಸಲ್ಲಿಸಿದ್ದೇನೆ. ನನ್ನ ಮೇಲೆ ದಾಖಲಾಗಿರುವ್ಚ ದೂರಿನಲ್ಲಿ ಅರಣ್ಯ ಒತ್ತುವರಿ ಬಗ್ಗೆ ಮಾಹಿತಿ ಇದ್ದರೆ ತಿಳಿಸಲಿ, ಜನತೆ ಬಯಸಿದರೆ, ಬಿಎಸ್ವೈ ಹೇಳಿದರೆ ನನ್ನ ಖಾತೆ ಬದಲಾಯಿಸಲಿ ಎಂದು ಆನಂದ್ ಸಿಂಗ್ ಹೇಳಿದರು.
ಸಣ್ಣ-ಪುಟ್ಟ ಪ್ರಕರಣಗಳು ಇರುತ್ತವೆ
'ಪೂರ್ವಜರಿಂದಲೂ ಗಣಿಗಾರಿಕೆ ಮಾಡುತ್ತಿರುವ ಕುಟುಂಬ ನಮ್ಮದು ಆದ್ದರಿಂದ ಸಣ್ಣ-ಪುಟ್ಟ ಪ್ರಕರಣಗಳು ಇರುತ್ತವೆ. ಈ ಪ್ರಕರಣಗಳಿಂದ ಯಾವುದೇ ತೊಂದರೆ ಆಗುವುದಿಲ್ಲ, ನನಗೆ ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ' ಎಂದು ಆನಂದ್ ಸಿಂಗ್ ಹೇಳಿದರು.
15 ಕ್ರಿಮಿನಲ್ ಕೇಸ್ ಸ್ಥಿತಿ ಗತಿ
ವಿಪಕ್ಷ ಮುಖಂಡರು ನನ್ನ ಮೇಲೆ ಆರೋಪ ಮಾಡುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡ ಬಯಸುತ್ತೇನೆ. ನನ್ನ ಮೇಲೆ 15 ಕ್ರಿಮಿನಲ್ ಕೇಸ್ ಗಳಿವೆ ನಿಜ, ಈ ಪೈಕಿ 12 ಕೇಸ್ ಗಳಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. 3 ಪ್ರಕರಣಗಳು ಮಾತ್ರ ವಿಚಾರಣೆ ಹಂತದಲ್ಲಿವೆ ಎಂದಿದ್ದಾರೆ. ವಿಪಕ್ಷದಲ್ಲಿ ಅನೇಕರು ವಕೀಲರಿದ್ದಾರೆ, ನನ್ನ ವಿರುದ್ಧ ಇರುವ ಚಾರ್ಜ್ ಶೀಟ್ ಒಮ್ಮೆ ಪರಿಶೀಲಿಸಲಿ, ನನ್ನ ಮೇಲೆ ನೇರ ದೋಷಾರೋಪ ಸಲ್ಲಿಕೆಯಾಗಿದ್ದರೆ ನಂತರ ಮಾತನಾಡಲಿ ಎಂದು ಸವಾಲು ಹಾಕಿದರು.
ಭ್ರಷ್ಟಾಚಾರಕ್ಕೆ ಸರ್ಕಾರ ಕುಮ್ಮಕ್ಕು
ಆದರೆ ಸಚಿವ ಆನಂದ್ ಸಿಂಗ್ ಅನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಸಚಿವರಾದ ಸಿ.ಟಿ.ರವಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಮರ್ಥಿಸಿಕೊಂಡಿದ್ದಾರೆ.ಭ್ರಷ್ಟಾಚಾರಕ್ಕೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಸಿ.ಟಿ ರವಿ ಖಂಡಿಸಿದ್ದಾರೆ.
ಖಾತೆ ಬದಲಾವಣೆ ಸಾಧ್ಯತೆ ಕಡಿಮೆ
ಅರಣ್ಯ ಸಚಿವ ಆನಂದ್ ಸಿಂಗ್ ಅವರ ಖಾತೆ ಬದಲಾವಣೆ ಬಗ್ಗೆ ಒತ್ತಡ ಹೆಚ್ಚಿದ್ದರೂ ಸದ್ಯಕ್ಕೆ ಖಾತೆ ಬದಲಾವಣೆ ಸಾಧ್ಯತೆ ಕಡಿಮೆ ಎಂದು ಮೂಲಗಳಿಂದ ತಿಳಿದು ಬಂದಿದೆ. "ನಾನು ಅರಣ್ಯ ಖಾತೆ ಕೇಳಿರಲಿಲ್ಲ, ನೀವೇ ಕೊಟ್ಟಿದ್ದು, ಈಗ ನೀವೆ ಹಿಂಪಡೆದರೆ ತಪ್ಪು ಸಂದೇಶ ಹೊರಡಿಸಿದ್ದಂತಾಗುತ್ತದೆ" ಎಂದು ಯಡಿಯೂರಪ್ಪ ಅವರಿಗೆ ಪ್ರಶ್ನೆ ಎಸೆದಿರುವ ಆನಂದ್ ಸಿಂಗ್ ಅವರು ತಮ್ಮ ಖಾತೆ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.