ಖಾತೆ ಹಂಚಿಕೆ ಕಗ್ಗಂಟು; ವರದಿ ಕೇಳಿದ ಬಿಜೆಪಿ ಹೈಕಮಾಂಡ್!
ಬೆಂಗಳೂರು, ಫೆಬ್ರವರಿ 14: ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿ ಖಾತೆ ಹಂಚಿಕೆ ಮಾಡಿದ ಬಳಿಕ ಹಲವಾರು ಗೊಂದಲಗಳು ಸೃಷ್ಟಿಯಾಗಿವೆ. ಅದರಲ್ಲೂ ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಹೈಕಮಾಂಡ್ ಈ ಬಗ್ಗೆ ವರದಿ ಕೇಳಿದೆ.
ವಿಜಯನಗರ ಶಾಸಕ ಆನಂದ್ ಸಿಂಗ್ ಸೇರಿದಂತೆ 10 ಶಾಸಕರನ್ನು ಯಡಿಯೂರಪ್ಪ ಸಂಪುಟ ಸೇರಿಸಿಕೊಂಡಿದ್ದರು. ಸೋಮವಾರ ಖಾತೆ ಹಂಚಿಕೆ ಮಾಡಿದ್ದರು. ಮಂಗಳವಾರ ಕೆಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದರು.
ನೂತನ ಸಚಿವರ ಖಾತೆ ಮತ್ತೆ ಬದಲಾವಣೆ ಮಾಡಿದ ಯಡಿಯೂರಪ್ಪ
ಮೊದಲು ಯಡಿಯೂರಪ್ಪ ಅವರು ಆನಂದ್ ಸಿಂಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಣೆಯನ್ನು ನೀಡಿದ್ದರು. ಆದರೆ, ಮರುದಿನ ಖಾತೆ ಬದಲಾವಣೆ ಮಾಡಿ ಅರಣ್ಯ ಮತ್ತು ಜೈವಿಕ ಖಾತೆ ನೀಡಿದ್ದರು.
ಯಡಿಯೂರಪ್ಪ ಸರ್ಕಾರವೊ? ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಂಪುಟವೊ?
ಖಾತೆ ಬದಲಾವಣೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳು ಸಹ ಅರಣ್ಯ ಖಾತೆಯನ್ನು ಆನಂದ್ ಸಿಂಗ್ಗೆ ನೀಡಿರುವುದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಆದ್ದರಿಂದ, ಖಾತೆ ಬದಲಾವಣೆ ಮಾಡಿರುವ ಬಗ್ಗೆ ಹೈಕಮಾಂಡ್ ವರದಿ ಕೇಳಿದೆ.
ಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ ಅಧಿಕೃತ ಪಟ್ಟಿ
ವಿವಾದಕ್ಕೆ ಕಾರಣವಾಗಿದ್ದೇನು?
ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ವಿರುದ್ಧ ಅರಣ್ಯ ಕಾಯ್ದೆ ಉಲ್ಲಂಘನೆಯ ಎರಡು ಪ್ರಕರಣಗಳು ದಾಖಲಾಗಿವೆ. ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೂ ಆನಂದ್ ಸಿಂಗ್ ಇದನ್ನು ಉಲ್ಲೇಖಿಸಿದ್ದಾರೆ. ಅರಣ್ಯ ನಿಯಮ ಉಲ್ಲಂಘನೆ ಮಾಡಿದವರಿಗೆ ಖಾತೆ ನೀಡಿರುವುದಕ್ಕೆ ಟೀಕೆಗಳು ಕೇಳಿ ಬರುತ್ತಿವೆ.
ಆನಂದ್ ಸಿಂಗ್ ಹೇಳುವುದೇನು?
ಖಾತೆ ಹಂಚಿಕೆ ಬಗ್ಗೆ ಚರ್ಚೆಗಳು ಆರಂಭವಾಗುತ್ತಿದ್ದಂತೆ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮದು ಗಣಿ ಕುಟುಂಬ. ಗಣಿ ಅಂದ ಮೇಲೆ ಅರಣ್ಯ ಉಲ್ಲಂಘನೆ ಪ್ರಕರಗಳು ಸಹಜ. ಇದು ಹಿತಾಸಕ್ತಿಗಳ ಸಂಘರ್ಷವಲ್ಲ. ವಾಹನ ಇದ್ದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಇದ್ದಂತೆ, ನಮ್ಮ ಗಣಿ ಕಂಪನಿ ವಿರುದ್ಧ ಕೇಸ್ ದಾಖಲಾಗಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಸಮರ್ಥವಾಗಿ ನಿಭಾಯಿಸುತ್ತೇನೆ
ಸಚಿವ ಆನಂದ್ ಸಿಂಗ್ ಅವರು, "ಈ ಪ್ರಕರಣಗಳಿಂದ ಯಾವುದೇ ತೊಂದರೆ ಆಗುವುದಿಲ್ಲ. ಅರಣ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಖಾತೆ ಬದಲಾವಣೆಗಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿಲ್ಲ. ಯಾವ ಖಾತೆ ನೀಡಿದರೂ ನಿಭಾಯಿಸುವ ಶಕ್ತಿ ಇದೆ ಎಂದು ಅವರಿಗೆ ತಿಳಿದಿದೆ. ಆದ್ದರಿಂದ, ಖಾತೆ ನೀಡಿದ್ದಾರೆ" ಎಂದು ಹೇಳಿದ್ದಾರೆ.
ವರದಿ ಕೇಳಿದ ಹೈಕಮಾಂಡ್
ಆನಂದ್ ಸಿಂಗ್ ಖಾತೆ ವಿವಾದಕ್ಕೆ ಕಾರಣವಾಗಿದ್ದು ಬಿಜೆಪಿ ಹೈಕಮಾಂಡ್ ಈ ಬಗ್ಗೆ ವರದಿ ನೀಡಿದೆ. ಕರ್ನಾಟಕ ಬಿಜೆಪಿ ಘಟಕ ವರದಿ ನೀಡುವುದಕ್ಕೂ ಮೊದಲು ಆನಂದ್ ಸಿಂಗ್ ಖಾತೆಯನ್ನು ಮತ್ತೆ ಬದಲಾವಣೆ ಮಾಡುತ್ತದೆಯೇ? ಕಾದು ನೋಡಬೇಕು.