ಮೈಸೂರ್ ಪಾಕ್ ತನ್ನದೆಂದ ತಮಿಳುನಾಡು! ಏನಿದು ವಿವಾದ?
ಬೆಂಗಳೂರು, ಸೆಪ್ಟೆಂಬರ್ 16: ಜಗತ್ತಿನಲ್ಲೇ ಪ್ರಸಿದ್ಧವಾಗಿರುವ ಕರ್ನಾಟಕದ ಮೈಸೂರು ಪಾಕ್ನ ಭೌಗೋಳಿಕ ಸೂಚ್ಯಂಕವನ್ನು ತಮಿಳುನಾಡು ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಈ ಮಹತ್ವದ ಗುರುತನ್ನು ತಮಿಳುನಾಡಿಗೆ ನೀಡಿದ್ದಾರೆ. ತಮಿಳುನಾಡಿನ ಅಂಕಣಕಾರ, ಲೇಖಕ ಆನಂದ್ ರಂಗನಾಥನ್ ಎಂಬ ಏಕಸದಸ್ಯ ಸಮಿತಿ ಮೈಸೂರ್ ಪಾಕ್ನ ಭೌಗೋಳಿಕ ಸೂಚ್ಯಂಕವನ್ನು ತಮಿಳುನಾಡಿಗೆ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಟ್ವಿಟ್ಟರ್ನಲ್ಲಿ ಪ್ರಕಟಗೊಂಡ ಒಂದು ಟ್ವೀಟ್, ಇನ್ನೊಂದು ಆಯಾಮದಲ್ಲಿ ಅರ್ಥ ಪಡೆದು ದೊಡ್ಡ ಮಟ್ಟದ ಚರ್ಚೆಯೇ ನಡೆದಿದೆ. ಇದರಿಂದ ಆತುರಕ್ಕೆ ಬಿದ್ದ ಮಾಧ್ಯಮಗಳು ಕೂಡ ಅದರ ಸತ್ಯಾಸತ್ಯತೆ ಅರಿಯದೆ ನಮ್ಮ ರಾಜ್ಯದ ಹೆಮ್ಮೆಯ ಮೈಸೂರ್ ಪಾಕ್ನ ಹಕ್ಕನ್ನು ತಮಿಳುನಾಡು ಕಸಿದುಕೊಂಡಿವೆ ಎಂದು 'ಬ್ರೇಕಿಂಗ್ ನ್ಯೂಸ್' ಬಿತ್ತರಿಸಿದವು.
ರಂಗರಾಜನ್ ಅವರು ಮಾಡಿದ ಟ್ವೀಟ್ ತಮಾಷೆಯಿಂದ ಕೂಡಿತ್ತು. ಮೈಸೂರು ಪಾಕ್ ನಮ್ಮ ರಾಜ್ಯದ ಹೆಗ್ಗರುತುಗಳಲ್ಲಿ ಒಂದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಿರುವಾಗ ಅದಕ್ಕೆ ಭೌಗೋಳಿಕ ಸೂಚ್ಯಂಕ ನೀಡಲು ಯಾರು ಸಮಿತಿ ರಚಿಸಿರುವುದು? ಒಂದು ವೇಳೆ ಕೇಂದ್ರ ಸರ್ಕಾರ ಸಮಿತಿ ರಚಿಸಿದ್ದರೆ ಯಾವಾಗ ರಚಿಸಿದ್ದು? ಭೌಗೋಳಿಕ ಸೂಚ್ಯಂಕ ನೀಡುವಂತಹ ಸಮಿತಿಯನ್ನು ರಾಜ್ಯಗಳ ಅಭಿಪ್ರಾಯವಿಲ್ಲದೆ ರಚಿಸಲು ಹೇಗೆ ಸಾಧ್ಯ? ಅದರಲ್ಲಿಯೂ ತಮಿಳುನಾಡಿನವರೇ ಆದ ರಂಗನಾಥನ್ ಅವರ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚಿಸಲು ಸಾಧ್ಯವೇ? ಎಂಬಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಪ್ರಯತ್ನಕ್ಕೂ ಮುಂದಾಗಲಿಲ್ಲ.
ಒಡಿಶಾ ಸೋಲಿಸಿ ರಸಗುಲ್ಲಾ ಸವಿದ ಪಶ್ಚಿಮ ಬಂಗಾಳ
ಇದಕ್ಕೆ ಕಾರಣವೂ ಇದೆ. ಏಕೆಂದರೆ ಆನಂದ್ ರಂಗನಾಥನ್ ಈ ರೀತಿಯ ಕಿಡಿಗೇಡಿತನ ಮಾಡಿರುವುದು ಇದು ಮೊದಲ ಸಲವೇನಲ್ಲ. ಮೈಸೂರು ಪಾಕ್ ಮೂಲತಃ ತಮಿಳುನಾಡಿನದ್ದು ಎಂಬುದಕ್ಕೆ ಅಧಿಕೃತ ದಾಖಲೆ ಇದೆ ಎಂದು ಅವರು 2015ರಲ್ಲಿ ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ವಿವಾದ ಸೃಷ್ಟಿಸಿದ ಟ್ವೀಟ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದ ಆನಂದ್ ರಂಗನಾಥನ್ ಅವರು ಅವರೊಂದಿಗೆ ಮೈಸೂರ್ ಪಾಕ್ ಹಂಚಿಕೊಂಡಿದ್ದಾರೆ. ಈ ತಮಿಳುನಾಡಿಗೆ ಮೈಸೂರು ಪಾಕ್ ಜಿಐ (ಭೌಗೋಳಿಕ ಸೂಚ್ಯಂಕ) ನೀಡಿದ ಏಕ ಸದಸ್ಯ ಸಮಿತಿಯ ಪರವಾಗಿ ಪ್ರಶಂಸೆಯ ಕುರುಹಾಗಿ ಇದನ್ನು ಪಡೆದುಕೊಂಡಿದ್ದೇನೆ. ಮಾತುಕತೆಗಳು ಸರಾಗವಾಗಿ ನಡೆಯುತ್ತಿವೆ ಎಂದು ಟ್ವೀಟ್ ಮಾಡಿದ್ದರು.
ಆನಂದ್ ವಿರುದ್ಧ ಆಕ್ರೋಶ
ಇದಕ್ಕೆ ಕನ್ನಡದ ವಾಹಿನಿಗಳು ಮುಗಿಬಿದ್ದಿದ್ದವು. ಆನಂದ್ ಅವರಲ್ಲದೆ ನಿರ್ಮಲಾ ಸೀತಾರಾಮನ್ ವಿರುದ್ಧವೂ ಟೀಕಾಪ್ರಹಾರ ನಡೆಸಿದ್ದವು. ತಮಿಳುನಾಡು ಹೊಸ ಕ್ಯಾತೆ ತೆಗೆದಿದೆ. ಕಾವೇರಿಯನ್ನು ತನ್ನದು ಎನ್ನುವ ತಮಿಳುನಾಡು, ಈಗ ಮೈಸೂರ್ ಪಾಕ್ ಮೇಲೂ ಕಣ್ಣುಹಾಕಿದೆ ಎಂದು ವಾಹಿನಿಗಳು ವರದಿ ಮಾಡಿದ್ದವು. ಟ್ವಿಟ್ಟರಿಗರೂ ಆನಂದ್ ಮತ್ತು ನಿರ್ಮಲಾ ವಿರುದ್ಧ ಮುಗಿಬಿದ್ದಿದ್ದರು. ಆನಂದ್ ರಂಗನಾಥನ್ ತಮ್ಮ ಟ್ವೀಟ್ಗೆ ಸ್ಪಷ್ಟನೆ ನೀಡಿದ್ದರೂ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಭಾವನೆಗಳ ಜತೆ ಚೆಲ್ಲಾಟವಾಡಿರುವುದಕ್ಕೆ ಕಿಡಿಕಾರಿದ್ದಾರೆ.
ಮೈಸೂರ್ ಪಾಕ್ ಅಂದರೆ ಕೋಲಾರದ ಲಕ್ಷ್ಮೀವೆಂಕಟೇಶ್ವರ ಸ್ವೀಟ್ಸ್
ಆನಂದ್ ರಂಗನಾಥ್ ಸ್ಪಷ್ಟನೆ
ಕನ್ನಡ ಸುದ್ದಿವಾಹಿನಿಗಳಲ್ಲಿ ತಮ್ಮ ವಿರುದ್ಧ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ಆನಂದ್ ರಂಗನಾಥನ್ ಅವರು ತಮ್ಮ ವ್ಯಂಗ್ಯವನ್ನು ಅರ್ಥಮಾಡಿಕೊಳ್ಳಲಾಗದೆ ಈ ರೀತಿ ಮನಬಂದಂತೆ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಹಾಸ್ಯಾಸ್ಪದ ಮತ್ತು ಹೃದಯಹೀನರಾಗಬೇಡಿ. ಏನಾದರೂ ಮಾಡಿ. ಈ ಮಧ್ಯೆ, ನನ್ನ ಗೌರವಾನ್ವಿತ ಕನ್ನಡಿಗ ಸ್ನೇಹಿತರೇ, ನಾನು ಮೈಸೂರುಪಾಕ್ಅನ್ನು ಪ್ರೀತಿಸುವುದಕ್ಕಿಂತಲೂ ನಿಮ್ಮನ್ನು ಪ್ರೀತಿಸುತ್ತೇನೆ. ನನ್ನ ಮೂಲ ಟ್ವೀಟ್ ಒಂದು ಜೋಕ್ ಅಷ್ಟೇ. ಹಾಗಾಗಿ ದಯವಿಟ್ಟು ಇದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.
ಮೈಸೂರಿನ ಕಕಾಸುರ ಮಾದಪ್ಪ ಮೈಸೂರು ಪಾಕ್ ಜನಕ
ತೇಜಸ್ವಿ ಸೂರ್ಯ ಉತ್ತರ
ಸಂಸದ ತೇಜಸ್ವಿ ಸೂರ್ಯ ಅವರು ಆನಂದ್ ಅವರಿಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದು, 'ಸಂಬಂಧಿತ ಟಿವಿ ಚಾನೆಲ್ ಜತೆ ಮಾತನಾಡಿದ್ದೇನೆ. ಅವರು ಅದನ್ನು ಸ್ಥಗಿತಗೊಳಿಸುತ್ತಿದ್ದಾರೆ. ಈಗ ಚಿಲ್ ಆಗಿ. ಅದರಾಚೆಗೆ ಮೈಸೂರು ಪಾಕ್ ಮೈಸೂರಿನದ್ದು ಎಂದೂ ಒಪ್ಪಿಕೊಳ್ಳಿ. (ದಯವಿಟ್ಟು ಗಮನಿಸಿ: ನಮ್ಮ ಸಾರ್ವಜನಿಕ ಸಂಭಾಷಣೆಗಳಿಂದ ಹಾಸ್ಯ ಮತ್ತು ವಿಡಂಬನೆ ಮಾಯವಾದರೆ ಅದು ಬಹುದೊಡ್ಡ ನಷ್ಟ) ಎಂದು ಹೇಳಿದ್ದರು.
ಹಾಸ್ಯದಂತೆ ಕಾಣಿಸುತ್ತದೆಯೇ?
ರಂಗನಾಥನ್ ಅವರೇ, ನೀವು ತಮಾಷೆಯನ್ನೇ ಮಾಡಿರಬಹುದು. ಆದರೆ ಸಾಮಾನ್ಯ ಮನುಷ್ಯ ಅದನ್ನು ಹಾಸ್ಯವೆಂದು ಅರ್ಥಮಾಡಿಕೊಳ್ಳಲಾರ. ಒಬ್ಬ ಸಾಮಾನ್ಯ ಮನುಷ್ಯ ಅದನ್ನು ಓದಿದಾಗ ಅದು ಹಾಸ್ಯದಂತೆ ಕಾಣಿಸುವುದಿಲ್ಲ. ಅದು ನಿಜಕ್ಕೂ ಹಾಸ್ಯವೇ ಅಥವಾ ಆಕ್ರೋಶವನ್ನು ತಣಿಸುವ ಪ್ರಯತ್ನವೇ? ಎಂದು ಜಿ.ಪಿ. ಜಯಂತ್ ಪ್ರಶ್ನಿಸಿದ್ದಾರೆ.
ಮೈಸೂರು ಪಾಕ್ ವಿವಾದ ಬಂದಿದ್ದೇಕೆ?
ಮೈಸೂರ್ ಪಾಕ್ ವಿವಾದ ಇಂದು ನಿನ್ನೆಯದ್ದೇನಲ್ಲ. ಕರ್ನಾಟಕ ಮತ್ತು ತಮಿಳುನಾಡುಗಳು ಮೈಸೂರು ಪಾಕ್ ತಮ್ಮದೆಂದು ಕಿತ್ತಾಡಿಕೊಳ್ಳುತ್ತಿವೆ ಎಂದು ಹಿಂದೆಯೂ ಸುದ್ದಿಯಾಗಿತ್ತು. ಈ ವಿವಾದ ಕೂಡ ವದಂತಿಯಿಂದ ಸೃಷ್ಟಿಯಾಗಿತ್ತು. ಆನಂದ್ ರಂಗನಾಥನ್ ಅವರು ಆಗ ಮೈಸೂರು ಪಾಕ್ ತಮಿಳಿನ ತಿನಿಸು ಎಂಬುದಕ್ಕೆ ಅಧಿಕೃತ ದಾಖಲೆ ಇದೆ ಎಂದು 2015ರಲ್ಲಿ ಟ್ವೀಟ್ ಮಾಡಿದ್ದರು. 2017ರಲ್ಲಿ ಇದು ಮತ್ತೆ ಚರ್ಚೆಗೆ ಬಂದಿತ್ತು. ಹೀಗಾಗಿ ಆನಂದ್ ರಂಗನಾಥನ್ ಮಾಡಿರುವುದು ತಮಾಷೆಯ ಟ್ವೀಟ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.