ಜ್ಯೋತಿಷಿಗಳ ಸಲಹೆಯಂತೆ ಜ.15ಕ್ಕೆ ಅಸ್ನೋಟಿಕರ್ ಜೆಡಿಎಸ್ಗೆ!
ಕಾರವಾರ, ಜನವರಿ 14 : ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರಿಗೆ ದೇವರು, ಜ್ಯೋತಿಷ್ಯ, ಜಾತಕಗಳ ಮೇಲೆ ಭಾರೀ ನಂಬಿಕೆ ಎಂಬ ಗುಮಾನಿ ಕ್ಷೇತ್ರದಲ್ಲಿತ್ತು. ಆದರೆ, ಈಗ ಅದು ನಿಜ ಎಂಬುದು ಸಾಬೀತಾಗಿದೆ.
ಮಾಜಿ ಸಚಿವ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರುವುದು ಖಚಿತವಾಗಿದೆ. ಹೌದು, ಅವರು ಪಕ್ಷ ಸೇರಲು ಪುರೋಹಿತರು ಮುಹೂರ್ತ ನಿಗದಿ ಮಾಡಿಕೊಟ್ಟಿದ್ದಾರೆ.
ಕಾರವಾರದ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರ್ಪಡೆ ಖಚಿತ, ಇದು ಅಧಿಕೃತ
ನಿಗದಿತ ಮುಹೂರ್ತದಂತೆ ಜ.15ರ ಸೋಮವಾರ ಬೆಂಗಳೂರಿನಲ್ಲಿ ಆನಂದ್ ಅಸ್ನೋಟಿಕರ್ ಎಚ್.ಡಿ.ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರಿದ್ದಾರೆ.
ಆನಂದ್ ಅಸ್ನೋಟಿಕರ್ ಹೇಳಿದ್ದೇನು? : 'ಬೆಂಬಲಿಗರ ಹಾಗೂ ಕುಟುಂಬದ ಪುರೋಹಿತರ ಸಲಹೆಯಂತೆ, ಬೆಂಗಳೂರಿನಲ್ಲಿ ಜ.15ರಂದು ಬೆಳಗ್ಗೆ 11.30 ಕ್ಕೆ ವಿದ್ಯುಕ್ತವಾಗಿ ಜೆಡಿಎಸ್ ಗೆ ಸೇರ್ಪಡೆಯಾಗುತ್ತೇನೆ' ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
'ಕಾರವಾರದಲ್ಲಿ ಜ.20 ರಂದು ಬೆಳಗ್ಗೆ 10 ಕ್ಕೆ ಕೋಡಿಬಾಗದ ಮಾರುತಿ ದೇವಸ್ಥಾನದಿಂದ ನಗರಕ್ಕೆ ಬೆಂಬಲಿಗರ ಬೈಕ್ ಜಾಥಾ ನಡೆಸುತ್ತೇನೆ. ಅದೇ ದಿನ ಅಂಕೋಲಾದಲ್ಲಿ ಮಧ್ಯಾಹ್ನ 3.30 ಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದೇನೆ. ಎರಡೂ ಕಾರ್ಯಕ್ರಮಗಳಲ್ಲಿ ಜೆಡಿಎಸ್ನ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಭಾಗವಹಿಸುವರು' ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕೂವರೆ ವರ್ಷಗಳಿಂದ ಆನಂದ್ ಅಸ್ನೋಟಿಕರ್ ಅವರು ರಾಜಕೀಯ ಹಾಗೂ ಸಾರ್ವಜನಿಕ ಜೀವನದಿಂದ ದೂರ ಉಳಿಯೋಕು ಕೂಡ ಈ ನಂಬಿಕೆಗಳೆ ಕಾರಣವಂತೆ.
ಈ ಬಗ್ಗೆ ಅವರೇ ಹೇಳಿಕೊಂಡಿದ್ದರು. "ನನಗೆ ಸಾಡೇ ಸಾತ್ ಇದೆ" ಅಂತ ಅವರೇ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದರು. ಈ ಬಗ್ಗೆ ಶಿರಸಿಯ ಜ್ಯೋತಿಷಿಯೊಬ್ಬರ ಬಳಿ ತಮ್ಮ ಮುಂದಿನ ನಡೆಗಳ ಬಗ್ಗೆ ಕೂಡ ತಿಳಿದುಕೊಂಡಿದ್ದರಂತೆ.
ಇದೀಗ ಅದೇ ಸಂಪ್ರದಾಯ, ನಂಬಿಕೆಗಳು ಮುಂಬರುವ ವಿಧಾನಸಭಾ ಚುನಾವಣೆಗೂ ವರ್ಕೌಟ್ ಆಗುತ್ತಾ ಕಾದು ನೋಡಬೇಕಿದೆ.