ಜೆಡಿಎಸ್ ಸೇರಿದ ಬಳಿಕ ಆನಂದ್ ಅಸ್ನೋಟಿಕರ್ ಹೇಳಿದ್ದೇನು?
ಬೆಂಗಳೂರು, ಜನವರಿ 15 : 'ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಾಗಬೇಕು ಎಂಬ ಕಾರಣಕ್ಕೆ ಜೆಡಿಎಸ್ ಸೇರಿದ್ದೇನೆ. ಕ್ಷೇತ್ರದ ಯುವಕರಿಗೆ ಉದ್ಯೋಗ ಕೊಡಬೇಕಿತ್ತು. ಆದರೆ, ಅವರ ಕೈಗೆ ತಲ್ವರ್ ಮತ್ತು ಕತ್ತಿ ಕೊಟ್ಟಿದ್ದಾರೆ' ಎಂದು ಆನಂದ್ ಅಸ್ನೋಟಿಕರ್ ಹೇಳಿದರು.
ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸೋಮವಾರ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು. ಈ ಮೂಲಕ ಐದು ವರ್ಷಗಳ ಬಳಿಕ ಹೊಸ ರಾಜಕೀಯ ಇನ್ನಿಂಗ್ಸ್ ಆರಂಭಿಸಿದರು.
ಅಧಿಕೃತವಾಗಿ ಜೆಡಿಎಸ್ ಸೇರಿದ ಆನಂದ್ ಅಸ್ನೋಟಿಕರ್
ಆನಂದ್ ಅಸ್ನೋಟಿಕರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಎಚ್.ಡಿ.ದೇವೇಗೌಡರು. 'ಸಂಕ್ರಾಂತಿ ಶುಭದಿನ ಅಸ್ನೋಟಿಕರ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಹಲವು ಕಾರ್ಯಕರ್ತರನ್ನು ಪಕ್ಷಕ್ಕೆ ಕರೆ ತಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 4-5 ಸ್ಥಾನ ಗೆಲ್ಲುವ ಅವಕಾಶವಿದೆ' ಎಂದರು.
ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?
ಬಿಜೆಪಿ ಸರ್ಕಾರದಲ್ಲಿ ಮೀನುಗಾರಿಕೆ ಸಚಿವರಾಗಿದ್ದ ಆನಂದ್ ಅಸ್ನೋಟಿಕರ್ 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾರವಾರ ಕ್ಷೇತ್ರದಲ್ಲಿ ಸೋತಿದ್ದರು. ಬಳಿಕ ರಾಜಕೀಯದಿಂದ ದೂರವಾಗಿದ್ದರು. ಈಗ ಚುನಾವಣೆ ಕಾಲದಲ್ಲಿ ಜೆಡಿಎಸ್ ಸೇರಿದ್ದಾರೆ. 2018ರ ಚುನಾವಣೆಗೆ ಅವರು ಕಾರವಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಶಾಂತಿಪ್ರಿಯ ಜಿಲ್ಲೆಯಲ್ಲಿ ಕೊಲೆಗಳಾಗುತ್ತಿವೆ
ಪಕ್ಷ ಸೇರಿದ ಬಳಿಕ ಮಾತನಾಡಿದ ಆನಂದ್ ಅಸ್ನೋಟಿಕರ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಟಿತವಾಗಿದೆ. ಜಿಲ್ಲೆಯಲ್ಲಿ ಆಗಿರುವ ಘಟನೆ ಬೇಸರ ತರಿಸಿದೆ. ಶಾಂತಿಪ್ರಿಯ ಜಿಲ್ಲೆಯಲ್ಲಿ ಕೊಲೆಗಳು ಆಗುತ್ತಿವೆ. ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿ ಆಗಬೇಕಿತ್ತು ಆದರೆ ಆಗಿಲ್ಲ ಎಂದರು.
ತತ್ವ, ಸಿದ್ದಾಂತ ಒಪ್ಪಿ ಬಂದದ್ದಾರೆ
ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, 'ನಮ್ಮ ತತ್ವ ಸಿದ್ದಾಂತ ಒಪ್ಪಿ ಪಕ್ಷ ಸೇರ್ಪಡೆ ಆಗಿದ್ದಾರೆ. ಪಕ್ಷೇತರರಾಗಿ ಆಯ್ಕೆ ಆಗಿ ಬಿಜೆಪಿಗೆ ಬೆಂಬಲ ಕೊಟ್ಟರು. ಐದು ವರ್ಷ ಆಡಳಿತ ಅವರಿಗೆ ಆದ ಅನುಭವ ಬಹಳ ನೋವು ತರಿಸಿದೆ. ಹೀಗಾಗಿ ಜನತಾದಳ ಬೆಂಬಲಿಸುವ ಕೆಲಸ ಮಾಡಿದ್ದಾರೆ' ಎಂದರು.
ಲಘುವಾಗಿ ಮಾತನಾಡಲ್ಲ
'ಈಗಿನ ಸರ್ಕಾರದಿಂದ ಬಹಳಷ್ಟು ಜನರಿಗೆ ಭ್ರಮನಿರಸನವಾಗಿದೆ. ಹಲವು ಬದಲಾವಣೆಗಳ ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಸರ್ವೇ ರಿಪೋರ್ಟ್ ಆಧರಿಸಿ ಪಕ್ಷಕ್ಕೆ ಬರುತ್ತಿದ್ದಾರೆ ಅನ್ನೋದು ಸರಿಯಲ್ಲ. ಸಮೀಕ್ಷೆಗಳ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ' ಎಂದು ಕುಮಾರಸ್ವಾಮಿ ಹೇಳಿದರು.
ಪಕ್ಷೇತರರಾಗಿ ಸ್ಪರ್ಧಿಸಿ
'ಸಿದ್ದರಾಯ್ಯ ಅವರು ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ನಿಮ್ಮಿಂದ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ ಅನ್ನೋ ಭ್ರಮೆಯಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿ' ಎಂದು ಎಚ್.ಡಿ.ಕುಮಾರ ಸ್ವಾಮಿ ಸವಾಲು ಹಾಕಿದರು.
ಮಗನಿಗೆ ಟಿಕೆಟ್ ಕೊಡಿಸಲು ಹೋರಾಟ ಏಕೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, 'ನಮ್ಮದು ಅಪ್ಪ-ಮಕ್ಕಳ ಪಕ್ಷ ಅಂತ ಹೇಳಿದ್ದಾರೆ. ವರುಣದಲ್ಲಿ ಮಗನಿಗೆ ಯಾಕೆ ಟಿಕೆಟ್ ಕೊಡಿಸಕ್ಕೆ ಹೋರಾಟ ಮಾಡುತ್ತಿದ್ದಾರೆ?' ಎಂದು ಪ್ರಶ್ನಿಸಿದರು.