ಪೇಜಾವರ ಮಠಾಧಿಪತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಂದರ್ಶನ
ನಾಡಿನ ಹಿರಿಯ ಯತಿಗಳೂ, ಉಡುಪಿ ಅಷ್ಠಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರು, ಶ್ರೀವಾದಿರಾಜ ಗುರು ಪರಂಪರೆಯನ್ವಯ ದಾಖಲೆಯ ಐದನೇ ಬಾರಿಗೆ ಕೃಷ್ಣಮಠದ ಪರ್ಯಾಯ ಸರ್ವಜ್ಞ ಪೀಠವನ್ನು ಏರಲು ಸಜ್ಜಾಗುತ್ತಿದ್ದಾರೆ.
ಬೆಂಗಳೂರಿನ ವಿದ್ಯಾಪೀಠದಲ್ಲಿ ಚಾತುರ್ಮಾಸ ವೃತದಲ್ಲಿದ್ದ ಶ್ರೀಗಳ ಜೊತೆ 'ಒನ್ ಇಂಡಿಯಾ ಕನ್ನಡ' ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಪ್ರೊ. ಭಗವಾನ್, ನೇತ್ರಾವತಿ ತಿರುವು, ಮೌಢ್ಯ ನಿಷೇಧ ಕಾನೂನು ಬಗ್ಗೆ ಶ್ರೀಗಳ ಅಭಿಪ್ರಾಯ ಇಂತಿದೆ. (ಪೇಜಾವರ ಸಂದರ್ಶನದ ವಿಡಿಯೋ)
ಪ್ರ: ನಿಮ್ಮ 2 ವರ್ಷದ ಪರ್ಯಾಯದ ಅವಧಿಯಲ್ಲಿ ಹಲವಾರು ಸಮಾಜಮುಖಿ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳ ಯೋಜನೆ ರೂಪಿಸಿದ್ದೀರಿ. ಈ ಎಲ್ಲಾ ಯೋಜನೆಗಳ ಪೈಕಿ ನಿಮ್ಮ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎನ್ನುವ ನಿಮ್ಮ ಕನಸಿನ ಯೋಜನೆ ಯಾವುದು?
ಶ್ರೀಗಳು: ಸರಕಾರ ನಮಗೆ ಉಡುಪಿ ಹೊರವಲಯದ ಪಾಜಕ ಕ್ಷೇತ್ರದಲ್ಲಿ (ಆಚಾರ್ಯ ಮಧ್ವರ ಜನ್ಮಸ್ಥಳ) 40 ಎಕರೆ ಜಮೀನು ನೀಡಿದೆ. ಧರ್ಮ ಸಂಸ್ಕೃತಿಯ ರೆಸಿಡೆನ್ಸ್ ಶಾಲೆ ಸ್ಥಾಪನೆ ಮಾಡಬೇಕೆನ್ನುವುದು ನಮ್ಮ ಕನಸು. ಅದರಲ್ಲಿ ಬಡಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಊಟದ ವ್ಯವಸ್ಥೆಯನ್ನು ಮಾಡಬೇಕೆಂದಿದ್ದೇವೆ. (ಭಗವಾನ್ ಯಾರು, ಎತ್ತ)
ಆನಂದತೀರ್ಥ ವಿದ್ಯಾಲಯ ಎನ್ನುವ ಹೆಸರಿನಲ್ಲಿ ಇದು ಈಗಾಗಲೇ ಆರಂಭವಾಗಿದೆ. ಅದನ್ನು ಅಭಿವೃದ್ದಿ ಪಡೆಸಿ, ಧರ್ಮ ಸಂಸ್ಕೃತಿಯ ಬಗ್ಗೆ ಎಲ್ಲಾ ಜಾತಿಯವರಿಗೆ ಶಿಕ್ಷಣ ಕೊಡಿಸಿ, ಕರ್ನಾಟಕದಲ್ಲಿ ಒಂದು ಉತ್ತಮ ವಸತಿ ವಿದ್ಯಾಕೇಂದ್ರ ಮಾಡಬೇಕೆನ್ನುವುದು ನಮ್ಮ ಪರ್ಯಾಯದ ಅವಧಿಯಲ್ಲಿನ ಕನಸು.
ಇದರ ಜೊತೆಗೆ ಪರಿಸರ ಅಭಿವೃದ್ದಿ ಪಡಿಸಿ ಬರುವ ಭಕ್ತಾದಿಗಳಿಗೆ ಉತ್ತಮ ಸುಸಜ್ಜಿತ ವಸತಿ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಕೊಡಬೇಕೆಂದಿದ್ದೇವೆ. ಇದಲ್ಲದೇ, ಬರುವ ಎಲ್ಲಾ ಭಕ್ತಾದಿಗಳಿಗೆ ವಿವಿಧ ಭಾಷೆಗಳಲ್ಲಿ ನಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ಪುಸ್ತಕ ಪ್ರಕಾಶನ ಮಾಡಿಸಲಾಗುವುದು. ಮುಂದೆ ಓದಿ..
ಪ್ರ: ಕೃಷ್ಣಮಠದಲ್ಲಿ ಇದುವರೆಗೆ ನಡೆದುಕೊಂಡು ಬರುತ್ತಿದ್ದ ಸಂಪ್ರದಾಯಗಳಲ್ಲಿ ಬದಲಾವಣೆ ಇದೆಯಾ?
ಶ್ರೀಗಳು: ಕೃಷ್ಣಮಠದ ಇತಿಹಾಸದಲ್ಲಿ ನಡೆದುಕೊಂಡು ಬರುತ್ತಿರುವ ಪದ್ದತಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಪ್ರ: ಸಿಎಂ ಆದ ಮೇಲೆ ಸಿದ್ದು ಅವರ ಭೇಟಿಯಾಗಿದ್ರಾ, ಪರ್ಯಾಯಕ್ಕೆ ಆಮಂತ್ರಣ ಕಳುಹಿಸುತ್ತೀರಾ?
ಶ್ರೀಗಳು: ಒಮ್ಮೆ ಸಭೆಯೊಂದರಲ್ಲಿ ಅವರನ್ನು ಭೇಟಿಯಾಗಿದ್ದೆ. ಪರ್ಯಾಯಗೆ ಈಗಾಗಲೇ ಅವರಿಗೆ ಆಮಂತ್ರಿಸಿದ್ದೇವೆ. ನಮ್ಮ ಮೂರನೇ ಪರ್ಯಾಯದಲ್ಲಿ ರಾಮಕೃಷ್ಣ ಹೆಗಡೆ, ನಾಲ್ಕನೇ ಪರ್ಯಾಯದಲ್ಲಿ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದರು, ಅವರು ಪರ್ಯಾಯಕ್ಕೆ ಬಂದಿದ್ದರು. ಇದನ್ನು ಉಲ್ಲೇಖಿಸಿ, ನೀವು ಬರಬೇಕೆಂದು ಸಿದ್ದರಾಮಯ್ಯನವರಿಗೆ ಆಮಂತ್ರಿಸಿದ್ದೇವೆ. ನೋಡುವ ಎಂದಿದ್ದಾರೆ.
ಪ್ರ: ಸಮುದ್ರೋಲ್ಲಂಘನದ ವಿಚಾರದಲ್ಲಿ ನಿಮ್ಮಲ್ಲಿ ಭಿನ್ನಾಭಿಪ್ರಾಯಯಿದೆಯಾ, ಪುತ್ತಿಗೆ ಶ್ರೀಗಳಿಗೆ ಪರ್ಯಾಯಕ್ಕೆ ಆಹ್ವಾನಿಸುತ್ತೀರಾ?
ಶ್ರೀಗಳು: ಅದು ಈಗ ಅಪ್ರಸ್ತುತ. ಈ ಬಗ್ಗೆ ಏನೂ ಹೇಳಲು ಇಷ್ಟ ಪಡುವುದಿಲ್ಲ. ಪುತ್ತಿಗೆ ಸುಗಣೇಂದ್ರ ಶ್ರೀಗಳಿಗೆ ಪರ್ಯಾಯ ಆಹ್ವಾನ ಕಳುಹಿಸಲಿದ್ದೇವೆ.
ಪ್ರ: ಸಹಪಂಕ್ತಿ ಭೋಜನದ ವಿಚಾರದಲ್ಲಿ ನಿಮ್ಮ ನಿಲುವಿನಲ್ಲಿ ಬದಲಾವಣೆಯಿದೆಯಾ?
ಶ್ರೀಗಳು: ಸಹಪಂಕ್ತಿ ಭೋಜನಕ್ಕೆ ಮುಕ್ತ ಅವಕಾಶವಿದೆ. ಸಹಪಂಕ್ತಿ ಭೋಜನಕ್ಕೆ ಯಾರಿಗೆ ಇಷ್ಟವಿಲ್ಲ, ಸಂಪ್ರದಾಯದಂತೆ ಪ್ರತ್ಯೇಕವಾಗಿ ಊಟ ಮಾಡುತ್ತಿದ್ದಾರೆ ಅವರಿಗೂ ಭೋಜನದ ವ್ಯವಸ್ಥೆ ಮಾಡುತ್ತೇವೆ. ಸಹಪಂಕ್ತಿ ಭೋಜನ, ಸಾಂಪ್ರದಾಯಿಕ ಭೋಜನ ಎರಡಕ್ಕೂ ಅವಕಾಶವನ್ನು ಕೊಡುತ್ತೇವೆ. ಊಟದ ವಿಚಾರದಲ್ಲಿ ಬಲವಂತ ಮಾಡುವುದಿಲ್ಲ, ಅವರವರ ಇಷ್ಟದಂತೆ ನಡೆಯಲಿದೆ.
ಪ್ರ: ನೇತ್ರಾವತಿ ತಿರುವು, ತುಳುನಾಡಿನ ಬೇಡಿಕೆ ಬಗ್ಗೆ?
ಶ್ರೀಗಳು: ಪ್ರತ್ಯೇಕ ತುಳುನಾಡಿಗೆ ನಮ್ಮ ಬೆಂಬಲವಿಲ್ಲ, ತುಳುನಾಡು ಕರ್ನಾಟಕ ರಾಜ್ಯದಲ್ಲೇ ಇರಬೇಕು. ಎತ್ತಿನಹೊಳೆ ಯೋಜನೆಯಲ್ಲಿ ಸರಕಾರ ಸಮರ್ಪಕವಾದ ವಿಚಾರವನ್ನು ಮಾಡಿಲ್ಲ. ಎರಡೂ ಕಡೆಯವರನ್ನು ಕರೆಸಿ, ಸಾದಕಭಾದಕ ಚರ್ಚಿಸಿ, ಪರಿಸರಕ್ಕಾಗುವ ತೊಂದರೆಯೇನು ಎನ್ನುವುದನ್ನು ಅರಿತು ಸರಕಾರ ಮುಂದಿನ ಕ್ರಮ ಕೈಗೊಳ್ಳಬೇಕು. ಸರಕಾರ ಸರಿಯಾದ ಹೆಜ್ಜೆಯಿಡದಿದ್ದರೆ ಎರಡೂ ಕಡೆ ನೀರಿಲ್ಲದಂತೇ ಆಗುತ್ತದೆ.ಸರಕಾರ ಅಸಡ್ಡೆ ಮಾಡಬಾರದು. ಪರಿಸರವಾದಿಗೊಳ ಜೊತೆ ಚರ್ಚಿಸಿ, ಎರಡೂ ಕಡೆಯುವರ ಜೊತೆ ಮಾತುಕತೆ ನಡೆಸಬೇಕೆಂದು ಹೇಳುತ್ತಲೇ ಬಂದಿದ್ದೇನೆ. ಇದು ಗಂಭೀರ ವಿಚಾರ, ಇಡೀ ಕರ್ನಾಟಕಕ್ಕೆ ಸಂಬಂಧ ಪಟ್ಟಿದ್ದು. ಕರಾವಳಿ ಮತ್ತು ಕೋಲಾರ ಭಾಗದವರು ಇಬ್ಬರೂ ನಮ್ಮವರೇ, ನಾನು ಪೀಠಾಧಿಪತಿಯಾಗಿ ಇಬ್ಬರನ್ನೂ ಒಂದೇ ರೀತಿಯಲ್ಲಿ ನೋಡುತ್ತೇನೆ.
ಪ್ರ: ಬ್ರಾಹ್ಮಣ ಪೀಠಾಧಿಪತಿಯಾ, ಹಿಂದೂ ಸಮುದಾಯದ ಪೀಠಾಧಿಪತಿಯೋ?
ಶ್ರೀಗಳು: ನಾನು ಬ್ರಾಹ್ಮಣ ಸಮುದಾಯದ ಮತ್ತು ಹಿಂದೂ ಸಂಪ್ರದಾಯದ ಎರಡರದ್ದೂ ಪೀಠಾಧಿಪತಿ. ಹಿಂದೂ ಸಮಾಜದ ಕಲ್ಯಾಣದ ಬಗ್ಗೆ ವಿಶೇಷ ಗಮನಕೊಡುತ್ತೇನೆ. ಬ್ರಾಹ್ಮಣ ಸಂಪ್ರದಾಯ, ಪೂಜಾ ಪದ್ದತಿ ಅದೂ ಉಳಿಯಬೇಕು. ಬ್ರಾಹ್ಮಣ ಮತ್ತು ಹಿಂದೂ ಸಂಪ್ರದಾಯ ಎರಡರದ್ದೂ ರಕ್ಷಣೆಯಾಗಬೇಕು.ದಲಿತರನ್ನು ನೋಡುವ ದೃಷ್ಟಿಕೋನದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಅಸ್ಪ್ರಶ್ಯ ಆಚರಣೆ ಈಗಲೂ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಐವತ್ತು ವರ್ಷದ ಹಿಂದೆ ಮತ್ತು ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಬಹಳಷ್ಟು ಬದಲಾವಣೆಯಾಗಿದೆ, ಸಂಪೂರ್ಣ ಬದಲಾವಣೆಯಾಗಿದೆ ಎಂದು ನಾನು ಹೇಳುವುದಿಲ್ಲ.
ಪ್ರ: ಭಗವಾನ್ ಅವರಿಗೆ ಸರಕಾರ ಅಕಾಡೆಮಿ ಪ್ರಶಸ್ತಿ ಕೊಟ್ಟ ಬಗ್ಗೆ, ನಿಮ್ಮ ನಿಲುವು?
ಶ್ರೀಗಳು: ನಾನು ಈ ಬಗ್ಗೆ ತಟಸ್ಥ ನಿಲುವು ತಾಳುತ್ತೇನೆ ಎಂದಿದ್ದೆ. ಆದರೆ ಈ ಸಂದರ್ಭದಲ್ಲಿ ಅವರಿಗೆ ಪ್ರಶಸ್ತಿ ಕೊಡಬಾರದಿತ್ತು. ಅವರು ರಾಮ, ಕೃಷ್ಣ, ಮಹಾಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅವರ ಸಾಹಿತ್ಯ ಎಷ್ಟು ಉತ್ತಮ ಎನ್ನುವುದು ನಮಗೆ ಗೊತ್ತಿಲ್ಲ. ಆ ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ್ದಕ್ಕೆ ನಮ್ಮ ವಿರೋಧವಿದೆ.
ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿದ್ದು, ಜನರ ಭಾವನೆ ಕೆರಳಲು ಕಾರಣವಾಗಿದೆ. ಬೇಕಬೇಕೆಂದೇ ಹಿಂದೂ ಸಮುದಾಯವನ್ನು ಕೆರಳಿಸುವ ಕೆಲಸವನ್ನು ಭಗವಾನ್ ಅವರು ಮಾಡಿದ್ದಾರೆ. ಬಹಿರಂಗ ಚರ್ಚೆಗೆ ಮಠಕ್ಕೆ ಬನ್ನಿ ಎಂದು ಅವರಿಗೆ ಹೇಳಿದ್ದೆ, ಬಂದಿಲ್ಲ.
ಮಧ್ವಾಚಾರ್ಯ, ಶಂಕರಾಚಾರ್ಯರ ಬಗ್ಗೆ ಭಗವಾನ್ ಕೆಟ್ಟದಾಗಿ ಪುಸ್ತಕದಲ್ಲಿ ಬರೆದಿದ್ದಾರೆ. ಅದನ್ನು ರುಜುವಾತು ಪಡಿಸಿ ಎಂದು ಅವರಿಗೆ ಚಾಲೆಂಜ್ ನೀಡಿದ್ದೇನೆ, ಅದಕ್ಕೆ ಉತ್ತರ ಕೊಟ್ಟಿಲ್ಲ. ಭಗವಾನ್ ಅವರಲ್ಲಿ ಯಾವತ್ತೂ ಅವರು ಹೇಳಿದ್ದನ್ನು ಸಮರ್ಥನೆ ಮಾಡಿಕೊಳ್ಳುವ ಶಕ್ತಿ ಅವರಲ್ಲಿಲ್ಲ.
ಭಗವಾನ್ ಅವರ ವರ್ತನೆ ಸಭ್ಯವ್ಯಕ್ತಿಗೆ ಒಪ್ಪುವ ವರ್ತನೆಯಲ್ಲ. ವಿಚಾರವಾದಿ ಅಂತಾದರೆ ವಿಚಾರ ಸಮರ್ಥನೆಗೆ ತಯಾರಿರಬೇಕು. ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲು ಅವರಿಗೆ ಸಾಮರ್ಥ್ಯವಿಲ್ಲ, ನಿರಾಕರಣೆ ಮಾಡಲು ಅವರಿಗೆ ಶಕ್ತಿಯಿಲ್ಲ. ಜಾರಿಕೊಳ್ಳುವ ವ್ಯಕ್ತಿತ್ವದವರು ಭಗವಾನ್ ಅವರು.
ಪ್ರ: ಮೌಢ್ಯ ನಿಷೇಧ ಮಸೂದೆಯ ಬಗ್ಗೆ?
ಶ್ರೀಗಳು: ಮೌಢ್ಯ ನಿಷೇಧ ಕಾನೂನಿನಲ್ಲಿ ಸರಕಾರ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎನ್ನುವ ಬೇಧಬಾವ ಮಾಡಬಾರದು. ಮೌಢ್ಯ ಯಾವುದು ಎನ್ನುವುದೇ ದೊಡ್ಡ ಸಮಸ್ಯೆ, ಮುಸಲ್ಮಾನರಲ್ಲಿ ಬಹಳಷ್ಟು ಪದ್ದತಿಗಳು ಜಾರಿಯಲ್ಲಿವೆ, ಆ ಬಗ್ಗೆ ಸರಕಾರದ ಕ್ರಮವೇನು? ಸಮಾಜಕ್ಕೆ ಮತ್ತು ಮಾನವೀಯತೆಗೆ ವಿರುದ್ದವಾದ ನಂಬಿಕೆಯನ್ನು ಸರಕಾರ ನಿಷೇಧಿಸಲಿ.ಬುದ್ದಿಜೀವಿಗಳ ದೃಷ್ಟಿಯಲ್ಲಿ ದೇವಾಲಯಕ್ಕೆ ಹೋಗುವುದೂ ಮೂಢನಂಬಿಕೆ. ಹಾಗಂತ, ದೇವಾಲಯಕ್ಕೆ ಹೋಗಬಾರದು ಎಂದರೆ ಸುಮ್ಮನಿರಲು ಆಗುವುದಿಲ್ಲ. ಉಡುಪಿ ಭೋಜನಶಾಲೆಯಲ್ಲಿ ಸ್ವಚ್ಚವಾದ ನೆಲದ ಮೇಲೆ ಊಟ ಮಾಡುವ ಪದ್ದತಿಯಿದೆ. ಇದರಿಂದ ಯಾರಿಗೂ ಏನೂ ತೊಂದರೆಯಿಲ್ಲ, ಇನ್ನು ಮಡೆಸ್ನಾನದ ವಿಚಾರದಲ್ಲಿ ಎಡೆಸ್ನಾನ ಮಾಡಬಹುದೆಂದು ನಮ್ಮ ನಿಲುವನ್ನು ಸರಕಾರಕ್ಕೆ ಈಗಾಗಲೇ ತಿಳಿಸಿದ್ದೇವೆ.
ಗಂಗಾನದಿ ಶುದ್ಧಿಕರಣ ಯೋಜನೆ, ಈ ಬಗ್ಗೆ?
ಶ್ರೀಗಳು: ಸರಕಾರ ತೀವ್ರಗತಿಯಿಂದ ಕೆಲಸ ಮಾಡಬೇಕಿದೆ. ಸಮಯಾವಕಾಶ ಬೇಕು ಎಂದಿದ್ದಾರೆ, ನಾಲ್ಕೈದು ವರ್ಷದಲ್ಲಿ ಏನು ಬದಲಾವಣೆ ಆಗುತ್ತದೆ ನೋಡೋಣ. ಗಂಗಾನದಿ ಪ್ರವಾಹಕ್ಕೆ ಅಲ್ಲಲ್ಲಿ ತಡೆ ನೀಡಬೇಕು, ನಗರದ ಕಶ್ಮಲ ಗಂಗಾನದಿಗೆ ಹೋಗಬಾರದು.