ಹಿಂದೂಗಳ ಪಾಲಿಗೆ ಸರಕಾರ ಸತ್ತಿದೆ: ಶಾಸಕ ಸುನಿಲ್ ಕುಮಾರ್ ಸಂದರ್ಶನ
Recommended Video
ಉಡುಪಿ ಜಿಲ್ಲೆ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿದ್ಯಾರ್ಥಿ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು.
2004ರಲ್ಲಿ ಮೊದಲ ಬಾರಿಗೆ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸುನಿಲ್ ಕುಮಾರ್, ತಮ್ಮ ಸಮೀಪದ ಪ್ರತಿಸ್ಪರ್ಧಿಯ ವಿರುದ್ದ ಜಯಗಳಿಸಿ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದಿದ್ದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಗೋಪಾಲ ಭಂಡಾರಿಯವರ ವಿರುದ್ದ ಕೇವಲ 1537 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಉಡುಪಿ ಜಿಲ್ಲಾ ಉಸ್ತುವಾರಿ, ಕ್ರೀಡಾ ಸಚಿವ, ಪ್ರಮೋದ್ ಮಧ್ವರಾಜ್ ಸಂದರ್ಶನ
ಕಳೆದ, ಅಂದರೆ 2013ರ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಸುನಿಲ್ ಕುಮಾರ್ ಜಯಭೇರಿ ಬಾರಿಸಿದ್ದರು ಮತ್ತು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದ ಕ್ಷೇತ್ರ ಇದೊಂದೇ ಆಗಿತ್ತು.
ಬಿಜೆಪಿ ಶಾಸಕರಾಗಿ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ (Chief Whip) ಕೆಲಸ ಮಾಡುತ್ತಿರುವ ಸುನಿಲ್ ಕುಮಾರ್, 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಮುಂಬರುವ ಚುನಾವಣೆ, ಅನಂತ್ ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಮುಂತಾದ ಪಕ್ಷದ ನಾಯಕರ ಹೇಳಿಕೆಯ ಬಗ್ಗೆ ಸುನಿಲ್ ಕುಮಾರ್ ಸಂದರ್ಶನದಲ್ಲಿ ವಿವರಿಸಿದ್ದಾರೆ.
1. ಪ್ರ: ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟ ಅನುದಾನಗಳು ಸರಿಯಾಗಿ ಬರ್ತಾ ಇದೆಯಾ?
ಸುನಿಲ್: ನಾವು ನಿರೀಕ್ಷೆ ಮಾಡಿದಷ್ಟು ಅನುದಾನಗಳು ಸರಕಾರದ ಬೇರೆ ಬೇರೆ ಇಲಾಖೆಯಿಂದ ಬಂದಿಲ್ಲ. ವಿಶೇಷವಾಗಿ ಗ್ರಾಮೀಣಾಭಿವೃದ್ದಿಗೆ ಸರಕಾರ ಒತ್ತನ್ನು ನೀಡಬೇಕಾಗಿತ್ತು, ಆ ಅನುದಾನಗಳು ಬಂದಿಲ್ಲ. ಈ ಅನುದಾನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸರಕಾರ ಕಡಿತವನ್ನು ಮಾಡಿದೆ. ಹಿಂದಿನ ಬಿಜೆಪಿ ಸರಕಾರದಲ್ಲಿ 'ನಮ್ಮ ಗ್ರಾಮ ನಮ್ಮ ರಸ್ತೆ' ಯೋಜನೆಯಡಿ 30ಕಿ.ಮೀ ನಿರ್ಮಿಸಲು ಅನುದಾನ ಬರುತ್ತಿತ್ತು. ಸುವರ್ಣ ಯೋಜನೆಯಡಿಯಲ್ಲೂ ಈಗಿನ ಸರಕಾರ ಅನುದಾನ ನೀಡುತ್ತಿಲ್ಲ. ಮುಂದೆ ಓದಿ..
ಪರಿವರ್ತಾನ ಯಾತ್ರೆಗೆ ಉಡುಪಿ ಜಿಲ್ಲೆಯಲ್ಲಿ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು
2. ಪ್ರ: ಚುನಾವಣಾ ವರ್ಷದಲ್ಲಿ ಕಾರ್ಕಳದಲ್ಲಿ ಹೇಗಿದೆ ರಾಜಕೀಯ?
ಸುನಿಲ್: ಅಭಿವೃದ್ದಿಯ ವಿಷಯವನ್ನು ಇಟ್ಟುಕೊಂಡೇ ನಾವು ಚುನಾವಣೆಗೆ ಹೋಗುತ್ತಿದ್ದೇವೆ. ಕಾಂಗ್ರೆಸ್ ಶಾಸಕರು ಕಾರ್ಕಳದಲ್ಲಿ 36ವರ್ಷ ಕಳೆದಿದ್ದರು. ಜನರಿಗೆ ಕಾಂಗ್ರೆಸ್ ಶಾಸಕರು ಮಾಡಿದ ಕೆಲಸ ಮತ್ತು ನನ್ನ ನಾಲ್ಕೂವರೆ ವರ್ಷದ ಅವಧಿಯಲ್ಲಿ ಆದಂತಹ ಅಭಿವೃದ್ದಿ ಕೆಲಸದ ಬಗ್ಗೆ ಗೊತ್ತಿದೆ. ಅಭಿವೃದ್ದಿ ಕೆಲಸವನ್ನು ನೋಡಿ, ನಿಶ್ಚಿತವಾಗಿ ಕಾರ್ಕಳದಲ್ಲಿ ಬಿಜೆಪಿಯನ್ನು ಜನರು ಬೆಂಬಲಿಸುತ್ತಾರೆ ಎನ್ನುವ ನಂಬಿಕೆ ನಮ್ಮಲ್ಲಿದೆ.
3. ಪ್ರ: ಯಡಿಯೂರಪ್ಪನವರ ಪರಿವರ್ತಾನ ಯಾತ್ರೆಗೆ ಉಡುಪಿ ಜಿಲ್ಲೆಯಲ್ಲಿ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು?
ಸುನಿಲ್: ದೊಡ್ಡ ಮಟ್ಟದಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಯಾತ್ರೆ ಯಶಸ್ವಿಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಭಾಗವಹಿಸಿದ್ದರು.
ಬಿಜೆಪಿ ನಾಯಕರುಗಳ ಹೇಳಿಕೆಗಳು ಪಕ್ಷಕ್ಕೆ ಹಿನ್ನಡೆ ತರಲಿದೆಯಾ
4. ಪ್ರ: ಶೋಭಾ, ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಮುಂತಾದ ನಾಯಕರುಗಳ ಹೇಳಿಕೆಗಳು ಪಕ್ಷಕ್ಕೆ ಹಿನ್ನಡೆ ತರಲಿದೆಯಾ?
ಸುನಿಲ್: ವಾಸ್ತವತೆಯನ್ನು ಹೇಳಿದರೆ, ಅದು ಪ್ರಚೋದನಕಾರಿಯಾಗುತ್ತದೆ ಅಂದರೆ ಏನೂ ಮಾಡಲು ಸಾಧ್ಯವಿಲ್ಲ. ರಾಜ್ಯದ ಒಟ್ಟು ಪರಿಸ್ಥಿತಿ, ಸರಕಾರ ನಡೆದುಕೊಳ್ಳುತ್ತಿರುವ ರೀತಿ, ಇದನ್ನೆಲ್ಲಾ ನೋಡಿದಾಗ ಜನರ ತಾಳ್ಮೆಯ ಕಟ್ಟೆ ಒಡೆಯುತ್ತಿದೆ ಎಂದು ನಮಗೆ ಅನಿಸ್ತಾ ಇದೆ. ಗೃಹ ಇಲಾಖೆ ಸಂಪೂರ್ಣ ಸತ್ತುಹೋಗಿದೆ, ಎಲ್ಲಾ ಕಡೆ ಹತ್ಯೆಗಳು ನಡೆಯುತ್ತಾ ಇರುವಂತದ್ದು, ರಾಜ್ಯದಲ್ಲಿ ಸರಕಾರ ಇದೆ ಎಂದು ಅನಿಸುತ್ತಿಲ್ಲ. ಹಾಗಾಗಿ, ಇವೆಲ್ಲಾ ಪ್ರಚೋದನಾಕಾರಿ ಹೇಳಿಕೆಗಳು ಅಂದರೆ ನಾವೇನೂ ಮಾಡಲು ಸಾಧ್ಯವಿಲ್ಲ.
ಕೇಂದ್ರದಿಂದ ದೊಡ್ಡ ಪ್ರಮಾಣದ ಅನುದಾನವನ್ನು ತರುವಲ್ಲಿ ಯಶಸ್ವಿ
5. ಪ್ರ: ಈಗಿನ ಅವಧಿಯಲ್ಲಿ ನೀವು ಏನೇನು ಯೋಜನೆಗಳನ್ನು ಹಾಕಿಕೊಂಡಿದ್ದೀರೋ, ಅದೆಲ್ಲಾ ಕ್ಷೇತ್ರದಲ್ಲಿ ನಡೆದಿದೆಯಾ?
ಸುನಿಲ್: ನಾನು ಎಲ್ಲದನ್ನೂ ಮಾಡಿದ್ದೇನೆಂದು ಹೇಳುವುದಿಲ್ಲ, ವಿರೋಧ ಪಕ್ಷದ ಶಾಸಕನಾಗಿ ಎಷ್ಟು ಸಾಧ್ಯವೋ ಅಷ್ಟು ಮಾಡಿದ್ದೇನೆ. ರಸ್ತೆಯ ಅಭಿವೃದ್ದಿಗೆ ಕೇಂದ್ರದಿಂದ ದೊಡ್ಡ ಪ್ರಮಾಣದ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದೇನೆ. CRF ಯೋಜನೆಯಡಿ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ, 250 ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಮೊದಲ ಬಾರಿಗೆ ನನ್ನ ಕ್ಷೇತ್ರಕ್ಕೆ ತಂದಿದ್ದೇನೆ. ಕಿಂಡಿ ಅಣೆಕಟ್ಟು, ಆಸ್ಪತ್ರೆಗಳು ಮುಂತಾದವು ಇಲ್ಲಿ ಆಗಿದೆ. ಕಾರ್ಕಳದಲ್ಲಿ ಉದ್ಯೋಗ ಮೇಳೆ ನಡೆಸಿ, ಆರು ನೂರಕ್ಕೂ ಹೆಚ್ಚು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗವನ್ನು ಕೊಡಿಸಿದ್ದೇವೆ. ಸಿಗಡಿ ಕೆರೆಯನ್ನು ಜನರ ಸಹಭಾಗಿತ್ವದಿಂದ ಹೂಳೆತ್ತಿದ್ದು, ಆಟೋ ಚಾಲಕರಿಗೆ ಹೆಲ್ತ್ ಕಾರ್ಡ್, ಪರಿಸರ ಉತ್ಸವ ಮುಂತಾದ ಕೆಲಸಗಳನ್ನು ಮಾಡಿದ್ದೇವೆ.
ನಮಗೆ ಕೂಲಿ ಕೊಡಿ ಎಂದು ಸಿಎಂ ಜನರಲ್ಲಿ ಕೇಳ್ತಾ ಇದ್ದಾರಲ್ಲಾ
6. ಪ್ರ: ಪ್ರಣಾಳಿಕೆಯಲ್ಲಿ ಹೇಳಿದ್ದನ್ನೆಲ್ಲಾ ಮಾಡಿದ್ದೇವೆ, ನಮಗೆ ಕೂಲಿ ಕೊಡಿ ಎಂದು ಸಿಎಂ ಜನರಲ್ಲಿ ಕೇಳ್ತಾ ಇದ್ದಾರಲ್ಲಾ?
ಸುನಿಲ್: ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ದುರಂಹಕಾರಿ ಮುಖ್ಯಮಂತ್ರಿ. ವಿರೋಧ ಪಕ್ಷದವರ, ಜನರ ಮಾತಿಗೆ ಬೆಲೆಕೊಡದೇ ತಾನು ಮಾಡಿದ್ದೆಲ್ಲಾ ಸರಿ ಎನ್ನುವ ಸಿಎಂ. ಅವರ ಯೋಜನೆಗಳು ಅನುಷ್ಟಾನಕ್ಕೆ ಬಂದು, ಎಷ್ಟು ಜನರನ್ನು ತಲುಪಿದೆ ಎನ್ನುವುದು ಮುಖ್ಯ. ತಾಂತ್ರಿಕ ಕೊರತೆಯ ಹಿನ್ನಲೆಯಲ್ಲಿ ಕೆಲವೊಂದು ಯೋಜನೆಗಳು ಚಾಲನೆಯನ್ನೇ ಪಡೆದಿಲ್ಲ, ಉ.ದಾಗೆ ಹಕ್ಕುಪತ್ರವನ್ನು ಇನ್ನೂ ವಿತರಿಸಲೇ ಇಲ್ಲ.
ಈ ಬಾರಿ ಐದಕ್ಕೆ ಐದನ್ನೂ ಗೆಲ್ಲುತ್ತೇವೆ
7. ಪ್ರ: ಕಳೆದ ಚುನಾವಣೆಯಲ್ಲಿ ಐದಕ್ಕೆ ಒಂದನ್ನು ಮಾತ್ರ ಬಿಜೆಪಿ ಗೆದ್ದಿತ್ತು, ಈ ಬಾರಿ ಹೇಗಿದೆ?
ಸುನಿಲ್: ಈ ಬಾರಿ ಐದಕ್ಕೆ ಐದನ್ನೂ ಗೆಲ್ಲುತ್ತೇವೆ, ಕಳೆದ ಚುನಾವಣೆಯಲ್ಲಿ ನಮಗೆ ಸ್ವಲ್ಪ ಹಿನ್ನಡೆಯಾಗಿದ್ದದ್ದು ನಿಜ. ಅದಾದ ನಂತರ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಗೆ ಗೆದ್ದಿದೆ. ವಿ ಎಸ್ ಆಚಾರ್ಯ ಜಿಲ್ಲಾ ಉಸ್ತುವಾರಿಯಾಗಿ ಇದ್ದಾಗ ನಡೆದ ಅಭಿವೃದ್ದಿ ಕೆಲಸಗಳು ಆ ನಂತರ ಸಂಪೂರ್ಣವಾಗಿ ಕುಸಿದಿದೆ. ಇದನ್ನೆಲ್ಲಾ ಜನ ಗಮನಿಸಿದ್ದಾರೆ, ಹಾಗಾಗಿ ಎಲ್ಲಾ ಐದು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎನ್ನುವ ವಿಶ್ವಾಸವಿದೆ.
8. ಪ್ರ: ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಪಕ್ಷದ ಟಿಕೆಟಿಗೆ ಪೈಪೋಟಿಯಿದೆಯಾ?
ಸುನಿಲ್: ಇದು ರಾಜಕಾರಣ, ನಮ್ಮಲ್ಲಿ ಆರೋಗ್ಯಕರ ಪೈಪೋಟಿಯಿದೆ. ಗೆಲ್ಲುವ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಲಿದೆ, ಅವರನ್ನು ಗೆಲ್ಲಿಸುವಂತಹ ಕೆಲಸವನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡಲಿದ್ದಾರೆ.
ಹಿಂದೂಗಳ ಪಾಲಿಗೆ ಈ ಸರಕಾರ ಸತ್ತುಹೋಗಿದೆ
9. ಪ್ರ: ದಕ್ಷಿಣಕನ್ನಡದಲ್ಲಿನ ಕೋಮು ಅಶಾಂತಿಯ ಬಗ್ಗೆ?
ಸುನಿಲ್: ದೊಡ್ಡ ಪ್ರಮಾಣದಲ್ಲಿ ಗೃಹ ಇಲಾಖೆ ಕೈಕಟ್ಟಿ ಕೂತಿದೆ, ಹಿಂದೂಗಳ ಪಾಲಿಗೆ ಈ ಸರಕಾರ ಸತ್ತುಹೋಗಿದೆ. ಪೊಲೀಸ್ ಇಲಾಖೆಯನ್ನು ಸರಕಾರವೇ ಕೈಕೊಟ್ಟಿ ಕೂರುವಂತೆ ಮಾಡಿದೆ. ರಾಜ್ಯ ಸರಕಾರದ ತಪ್ಪು ನಿರ್ಧಾರಗಳು, ಏಕಪಕ್ಷೀಯವಾಗಿ ಓಲೈಸುವಂತ ಕ್ರಮ ಕೋಮು ಅಶಾಂತಿಗೆ ಕಾರಣ. ಸಿದ್ದರಾಮಯ್ಯ ಮತ್ತು ಉಸ್ತುವಾರಿ ರಮಾನಾಥ್ ರೈ ಇದಕ್ಕೆ ಜವಾಬ್ದಾರರು. ಇದು ಸರಿಹೋಗಬೇಕೆಂದಿದ್ದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು.
ಕಾರ್ಕಳದ ಜನತೆಗೆ ನಿಮ್ಮ ಮನವಿ
10. ಪ್ರ: RSS ಪಕ್ಷದ ಚಟುವಟಿಕೆಗಳಲ್ಲಿ ಮೂಗುತೂರಿಸುತ್ತಿದೆಯಾ?
ಸುನಿಲ್: ನಮ್ಮದು ಪಾರಿವಾರಿಕ ಸಂಘಟನೆ, ಎಲ್ಲರೂ ಒಟ್ಟಾಗಿ ಕೂತು ನಿರ್ಧರಿಸುತ್ತೇವೆ. ಸೈದ್ದಾಂತಿಕ ವಿಚಾರಗಳನ್ನು ಯಾವ ರೀತಿ ನಿಭಾಯಿಸಬೇಕು, ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದನ್ನು ಚರ್ಚಿಸುತ್ತೇವೆ.
11. ಪ್ರ: ಕಾರ್ಕಳದ ಜನತೆಗೆ ನಿಮ್ಮ ಮನವಿ?
ಸುನಿಲ್: ಅಭಿವೃದ್ದಿ ಚಟುವಟಿಕೆಯ ವೇಗಗಳನ್ನು ಕಾಯ್ದುಕೊಳ್ಳಲು, ಒಂದು ಉತ್ತಮ ಕಾರ್ಕಳವನ್ನು ನಿರ್ಮಿಸಲು ನನಗೆ ಮತ್ತು ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ.