ಕೃಷ್ಣಮಠಕ್ಕೆ ರಾಹುಲ್, ಸುತ್ತೂರು ಮಠಕ್ಕೆ ಅಮಿತ್ ಶಾ? ಇದು ಮಠ ಪಾಲಿಟಿಕ್ಸ್
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜನವರಿ 25ಕ್ಕೆ ಕರ್ನಾಟಕಕ್ಕೆ ಆಗಮಿಸುತ್ತಿದ್ದರೆ, ಫೆಬ್ರವರಿ 10ರಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯೂ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ರಾಜ್ಯಕ್ಕೆ ಇವರೆಲ್ಲಾ ಬರಲೇಬೇಕು, ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 'ಮಠ ಪಾಲಿಟಿಕ್ಸ್' ಶುರುವಾಗುತ್ತಾ ಎನ್ನುವುದೇ ಇಲ್ಲಿ ಪ್ರಶ್ನೆ.
ಬಿಜೆಪಿಯವರು ಮಠ, ದೇವಸ್ಥಾನ ಸುತ್ತುವುದು ಹೊಸದೇನಲ್ಲ, ಆದರೆ ರಾಹುಲ್ ಗಾಂಧಿಯ 'ಟೆಂಪಲ್ ರೌಂಡ್' ಅನ್ನೋದು ಶುರುವಾಗಿದ್ದೇ ಗುಜರಾತ್ ಅಸೆಂಬ್ಲಿ ಚುನಾವಣೆಯ ವೇಳೆ. ಇದು ಮೊನ್ನೆಮೊನ್ನೆಯ ಉತ್ತರಪ್ರದೇಶ ಭೇಟಿ ವೇಳೆಯೂ ಮುಂದುವರಿದಿತ್ತು.
ರಾಷ್ಟ್ರಪತಿಗಳ ಉಡುಪಿ ಭೇಟಿ: ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ
ಕರ್ನಾಟಕ ಅಸೆಂಬ್ಲಿ ಚುನಾವಣೆಯ ಈ ವರ್ಷದಲ್ಲಿ ರಾಹುಲ್ ಗಾಂಧಿಗಿಂತ ಮೊದಲೇ ರಾಜ್ಯಕ್ಕೆ ಆಗಮಿಸುತ್ತಿರುವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರೂರು ವ್ಯಾಪ್ತಿಯಲ್ಲಿ ಬರುವ ನಾಡಿನ ಪ್ರಮುಖ ಮಠಗಳಲ್ಲೊಂದಾದ ಸುತ್ತೂರು ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇತ್ತ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕರ್ನಾಟಕ ಭೇಟಿಯ ವೇಳೆ, ಶಕ್ತಿಪೀಠ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಲಿದ್ದು ಅಲ್ಲಿಂದ ಉಡುಪಿ ಕೃಷ್ಣಮಠಕ್ಕೆ ಬಂದು ದೇವರ ದರ್ಶನ ಪಡೆದು, ನಂತರ ಅಲ್ಲೇ ತಂಗಲಿದ್ದಾರೆ ಎನ್ನಲಾಗುತ್ತಿದೆ.
ರಾಹುಲ್ ಗಾಂಧಿಯವರ ಈ ಪ್ರವಾಸ ಬಹುತೇಕ ಅಂತಿಮವಾಗಿದ್ದು, ಉಡುಪಿಗೆ ಬಂದರೂ ಕೃಷ್ಣಮಠಕ್ಕೆ ಭೇಟಿ ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ಏನಿರಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮುಂದೆ ಓದಿ..
ಸುತ್ತೂರು ಮಠಕ್ಕೆ ಭೇಟಿ ನೀಡಲಿರುವ ಅಮಿತ್ ಶಾ?
ಈ ಹಿಂದೆ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆದಿಚುಂಚನಗಿರಿ ಮಠಕ್ಕೆ ತೆರಳಿ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಜನವರಿ 25ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ಬಹುತೇಕ ಅಂತಿಮವಾಗಿದೆ. ಅಂದು ಮೈಸೂರಿನಲ್ಲಿ ಬೃಹತ್ ಪರಿವರ್ತನಾ ಸಮಾವೇಶದಲ್ಲಿ ಶಾ ಪಾಲ್ಗೊಳ್ಳಲಿದ್ದಾರೆ.
ಶೃಂಗೇರಿ ದೇವಸ್ಥಾನಕ್ಕೆ ರಾಹುಲ್ ಗಾಂಧಿ
ಫೆಬ್ರವರಿ 20 ಮತ್ತು 21ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಶೃಂಗೇರಿ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ, ಕರ್ನಾಟಕ ಚುನಾವಣೆಯಲ್ಲೂ ರಾಹುಲ್ ಟೆಂಪಲ್ ರೌಂಡ್ ಮುಂದುವರಿಯಲಿದೆ.
ಸಿದ್ದರಾಮಯ್ಯ ಸರ್ಕಾರವನ್ನು ಕಾಡಿದ 10 ವಿವಾದಗಳು
ಉಡುಪಿ ಶ್ರೀಕೃಷ್ಣಮಠಕ್ಕೆ ಕಾಂಗ್ರೆಸ್ ಅಧ್ಯಕ್ಷ
ಇದಾದ ನಂತರ, ಉಡುಪಿ ಶ್ರೀಕೃಷ್ಣಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಉಡುಪಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನುವ ಮಾಹಿತಿಯಿದೆ. ರಾಹುಲ್ ಗಾಂಧಿ ರಾಜ್ಯ ಪ್ರವಾಸದ ವೇಳೆ, ಮುಖ್ಯಮಂತ್ರಿ, ಪರಮೇಶ್ವರ್, ಕೆ ಸಿ ವೇಣುಗೋಪಾಲ್ ಇರಲಿದ್ದಾರೆ ಎನ್ನುವ ಸುದ್ದಿಯಿದೆ.
ಮೂರ್ನಾಲ್ಕು ಬಾರಿ ಉಡುಪಿಗೆ ಸಿದ್ದರಾಮಯ್ಯ
ಮುಖ್ಯಮಂತ್ರಿಯಾದ ನಂತರ ಕನಿಷ್ಠ ಮೂರ್ನಾಲ್ಕು ಬಾರಿ ಉಡುಪಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ದರೂ ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ. ರಾಷ್ಟ್ರಪತಿ ಭೇಟಿಯ ವೇಳೆಯೂ ಸಿಎಂ ಅವರ ಜೊತೆಗಿರಲಿಲ್ಲ. ಮೊನ್ನೆ ಮುಕ್ತಾಯಗೊಡ ಪರ್ಯಾಯ ಮಹೋತ್ಸವದಲ್ಲೂ ಸಿಎಂ ಭಾಗವಹಿಸಿರಲಿಲ್ಲ. ಆದರೆ, ಈ ಬಾರಿ ರಾಹುಲ್ ಭೇಟಿ ನೀಡುತ್ತಿರುವುದರಿಂದ ಸಿದ್ದರಾಮಯ್ಯ ನಡೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಉಡುಪಿ ಜಿಲ್ಲೆಗೆ ಸಿದ್ದರಾಮಯ್ಯ ಏನು ಕಾಣಿಕೆ ನೀಡಿದ್ದಾರೆ?
ಹಿಂದುತ್ವದ ಆಧಾರದಲ್ಲೇ ಚುನಾವಣೆ
ಜನವರಿ 25ರ ನಂತರ ಕರ್ನಾಟಕ ಅಸೆಂಬ್ಲಿ ಚುನಾವಣಾ ಪ್ರಚಾರ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಗುಜರಾತ್ ಚುನಾವಣೆಯ ವೇಳೆ ರಾಹುಲ್ ಗಾಂಧಿ ಹಲವಾರು ದೇವಾಲಯಕ್ಕೆ ಭೇಟಿ ನೀಡಿದ್ದರೂ, ಮಸೀದಿ ಕಡೆ ಹೋಗಿರಲಿಲ್ಲ. ಅವರ ಈ ಹಿಂದುತ್ವ ರಾಜ್ಯದಲ್ಲೂ ಮುಂದುವರಿಯುವ ಸಾಧ್ಯತೆಯಿದೆ. ಬಿಜೆಪಿಗೂ ಈ ಚುನಾವಣೆ ಹಿಂದುತ್ವದ ಆಧಾರದಲ್ಲೇ ನಡೆಯಬೇಕೆನ್ನುವುದು ರಾಜಕೀಯ ಲೆಕ್ಕಾಚಾರ.