ಅಮಿತ್ ಶಾ ದೆಹಲಿಗೆ ವಾಪಸ್, ಬಸವರಾಜ ಬೊಮ್ಮಾಯಿ ಸೇಫ್!
ಬೆಂಗಳೂರು, ಮೇ 03; ಕೇಂದ್ರ ಗೃಹ ಸಚಿವ, ಬಿಜೆಪಿಯ ಚುನಾವಣಾ ಚಾಣಾಕ್ಯ ಎಂದೇ ಖ್ಯಾತಿ ಪಡೆದಿರುವ ಅಮಿತ್ ಶಾ ಒಂದು ದಿನದ ಕರ್ನಾಟಕ ಪ್ರವಾಸ ಮುಕ್ತಾಯವಾಗಿದೆ. 2023ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿತ್ತು.
ಅಮಿತ್ ಶಾ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳವಾರ ರಾತ್ರಿ ದೆಹಲಿಗೆ ಮರಳಿದ್ದಾರೆ. ಸೋಮವಾರ ರಾತ್ರಿ ಅವರು ಬೆಂಗಳೂರಿಗೆ ಆಗಮಿಸಿದ ಬಳಿಕ ಆರಂಭವಾಗಿದ್ದ ನಾಯಕತ್ವ ಬದಲಾವಣೆಗೆ ಚರ್ಚೆಗೆ ಫುಲ್ಸ್ಟಾಪ್ ಬಿದ್ದಿದೆ.
ಅಮಿತ್ ಶಾ ಉದ್ಘಾಟಿಸಿದ ಬಳ್ಳಾರಿ FSL ಲ್ಯಾಬ್ ವಿಶೇಷತೆಗಳು
ಮಂಗಳವಾರದ ಅಮಿತ್ ಶಾ ಬೆಂಗಳೂರಿನ ಭೇಟಿ ಯಾವುದೇ ಫಲಿತಾಂಶವನ್ನು ನೀಡಲಿಲ್ಲವೇ?. ರಾಜ್ಯ ಬಿಜೆಪಿ ನಾಯಕರು, ಬಿಜೆಪಿ ಕೋರ್ ಕಮಿಟಿ ಪಕ್ಷದ ಸಭೆ ರದ್ದಾಗಿದ್ದು ಏಕೆ?, ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿದೆಯೇ? ಮುಂತಾದ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಪಕ್ಷದ ನಾಯಕರಿಂದಲೇ ತಿಳಿಯಬೇಕಿದೆ.
Breaking; ಕೋರ್ ಕಮಿಟಿ ಸಭೆ ನಡೆಸದೇ ಅಮಿತ್ ಶಾ ವಾಪಸ್
ಕರ್ನಾಟಕ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಹಲವು ದಿನದಿಂದ ಗುಸುಗುಸು ಚರ್ಚೆ ಆಗುತ್ತಿತ್ತು. ಮುಖ್ಯಮಂತ್ರಿಯಾಗಿ ಇನ್ನೂ ಒಂದು ವರ್ಷ ಪೂರೈಸದ ಬಸವರಾಜ ಬೊಮ್ಮಾಯಿ ಬದಲಾವಣೆ ಆಗಲಿದ್ದಾರೆ ಎಂಬ ಊಹಾಪೋಹಗಳು ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಮಳೆಯಲ್ಲಿ ಕೊಚ್ಚಿ ಹೋಗಿವೆ.
'ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ'- ಬಿಎಸ್ವೈ
ಮುಖ್ಯಮಂತ್ರಿಗಳ ನಿವಾಸದಲ್ಲಿ ಭೋಜನ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿ ಸಚಿವರು, ಶಾಸಕರು ಮತ್ತು ಸಂಸದರ ಜೊತೆ ಮಧ್ಯಾಹ್ನ ಊಟ ಮಾಡಿದರು. ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ನಳಿನ್ ಕುಮಾರ್ ಕಟೀಲ್ ಒಂದೇ ಟೇಬಲ್ನಲ್ಲಿ ಕುಳಿತು ಬೆಳ್ಳಿತಟ್ಟೆಯಲ್ಲಿ ಭೋಜನ ಸವಿದರು.
ಈ ಸಭೆಯ ಬಳಿಕ ಅಮಿತ್ ಶಾ ರಾಜ್ಯ ಕೋರ್ ಕಮಿಟಿ ಸಭೆ, ಪಕ್ಷದ ಪದಾಧಿಕಾರಿಗಳು ಮತ್ತು ಪಕ್ಷದ ವಿವಿಧ ಘಟಕಗಳ ಪ್ರತ್ಯೇಕ ಸಭೆಗಳನ್ನು ನಡೆಸಬೇಕಿತ್ತು. ಆದರೆ ಈ ಸಭೆಗಳು ಕೊನೆ ಕ್ಷಣದಲ್ಲಿ ರದ್ದುಗೊಂಡವು.
ಬದಲಾವಣೆಗಳು ಆಗಲಿಲ್ಲ
2023ರ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹಿರಿಯ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, ಪಕ್ಷ ಸಂಘಟನೆ ಹೊಣೆ ನೀಡಲಾಗುತ್ತದೆ. ಚುನಾವಣೆ ಮುಂದಿಟ್ಟುಕೊಂಡು ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಅಮಿತ್ ಶಾ ಭೇಟಿ ಇಂತಹ ಯಾವುದೇ ಮ್ಯಾಜಿಕ್ ಮಾಡಿಲ್ಲ ಎಂಬುದು ಮಂಗಳವಾರ ರಾತ್ರಿಯ ತಾಜಾ ಸುದ್ದಿ.
ಬಸವರಾಜ ಬೊಮ್ಮಾಯಿ ನಿವಾಸದಲ್ಲಿನ ಊಟದ ನಂತರ ನಡೆಯಬೇಕಿದ್ದ ವಿವಿಧ ಸಭೆ ದಿಢೀರ್ ರದ್ದುಗೊಳಿಸಲಾಯಿತು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಪಕ್ಷದ ನಾಯಕರಲ್ಲಿಯೇ ಇನ್ನೂ ಒಮ್ಮತವಿಲ್ಲ ಎಂಬ ಸುದ್ದಿಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಬಸವರಾಜ ಬೊಮ್ಮಾಯಿ ಕೆಲವು ದಿನಗಳ ಹಿಂದೆ ಹೇಳಿದಂತೆ ಸ್ಟ್ರಿಕ್ ಆಡಳಿತ ನಡೆಸಲು ಅಡ್ಡಿಯಿಲ್ಲ.
ನಾಯಕತ್ವ ಬದಲಾವಣೆ ಇಲ್ಲ
ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಆರ್. ಅಶೋಕ ಸೇರಿದಂತೆ ಹಲವು ಬಿಜೆಪಿ ನಾಯಕರು ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಸಚಿವ ಸಂಪುಟ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಸಂಪೂರ್ಣ ಸಚಿವ ಸಂಪುಟ ಬದಲಾವಣೆ ಆಗಲಿದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ. ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ಇಂತಹ ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಪುಟ ವಿಸ್ತರಣೆ ಆಗಲಿದೆಯೇ?
ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಮೈಸೂರಿನಲ್ಲಿ ನೀಡಿದ್ದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಸುಳಿವು ನೀಡಿತ್ತು. ಆದರೆ ಅಂತಹ ಯಾವುದೇ ಬದಲಾವಣೆ ನಡೆಯದೇ ಅಮಿತ್ ಶಾ ವಾಪಸ್ ಆಗಿದ್ದಾರೆ.
ಮೇ 8 ಅಥವ 9ರಂದು ಸಂಪುಟ ವಿಸ್ತರಣೆ ನಡೆಯಬಹುದು ಎಂಬ ಸುದ್ದಿಗಳು ಹಬ್ಬಿವೆ. ಆದರೆ ಇದಕ್ಕೂ ಮೊದಲು ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆಯೇ? ಕಾದು ನೋಡಬೇಕು.