ಕರ್ನಾಟಕದಲ್ಲಿ ಬಿಜೆಪಿ ಸ್ಥಿತಿ-ಗತಿ : ಅಮಿತ್ ಶಾ ಕೈಯಲ್ಲಿ ಮೂರು ವರದಿ
ಬೆಂಗಳೂರು, ಅ.12 : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮೂರು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಪಕ್ಷ ಬಲವರ್ಧನೆಗೆ 110 ದಿನಗಳ ದೇಶವ್ಯಾಪಿ ಪ್ರವಾವನ್ನು ಅವರು ಕೈಗೊಂಡಿದ್ದು, ಇದರ ಭಾಗವಾಗಿಯೇ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
ಮೂರು ದಿನಗಳ ಅಮಿತ್ ಶಾ ರಾಜ್ಯ ಪ್ರವಾಸದ ವಿವರ
ಕರ್ನಾಟಕಕ್ಕೆ ಆಗಮಿಸುತ್ತಿರುವ ಅಮಿತ್ ಶಾ ಮೂರು ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ವರದಿಗಳನ್ನು ತಮ್ಮೊಂದಿಗೆ ತರುತ್ತಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಮಾತ್ರ ಬಾಕಿ ಇದ್ದು, ಈ ವರದಿಗಳ ಆಧಾರದ ಮೇಲೆ ಚುನಾವಣಾ ರಣತಂತ್ರ ರೂಪಿಸಲಿದ್ದಾರೆ.
ಪಕ್ಷದ ವಿವಿಧ ನಾಯಕರ ಜೊತೆ ಅಮಿತ್ ಶಾ 2018ರ ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಲಿದ್ದಾರೆ. ಪಕ್ಷದ ಕೋರ್ ಕಮಿಟಿ ಸದಸ್ಯರು, ಶಾಸಕರು, ಸಂಸದರು, ಜಿಲ್ಲಾ ಅಧ್ಯಕ್ಷರ ಜೊತೆ ಅಮಿತ್ ಶಾ ಸಭೆಗಳನ್ನು ನಡೆಸಲಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಮುನಿಸಿ ಕಾರಣದಿಂದಾಗಿ ಅಮಿತ್ ಶಾ ಭೇಟಿ ಮಹತ್ವ ಪಡೆದಿದೆ. ಈಗಾಗಲೇ ಮುಂದಿನ ಚುನಾವಣೆಗೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಆದ್ದರಿಂದ, ಪಕ್ಷದ ನಾಯಕರ ನಡುವೆ ಸಮನ್ವಯ ಸಾಧಿಸುವ ಕೆಲಸವನ್ನು ಅವರು ಮಾಡಬೇಕಿದೆ.
ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ
ಮೂರು ದಿನಗಳ ಭೇಟಿಯ ವೇಳೆ ಅಮಿತ್ ಕೆಲವು ನಾಯಕರು ಮತ್ತು ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ವಿವಿಧ ಏಜೆನ್ಸಿಗಳ ಮೂಲಕ ಸಮೀಕ್ಷೆಗಳನ್ನು ಮಾಡಿಸಲಾಗಿದ್ದು, ಅಮಿತ್ ಶಾ ಮೂರು ವರದಿಗಳನ್ನು ತಮ್ಮ ಜೊತೆ ತರಲಿದ್ದಾರೆ.
Live : ಬೆಂಗಳೂರಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ
ಈ ವರದಿಗಳ ಆಧಾರದ ಮೇಲೆಯೇ ರಾಜ್ಯ ನಾಯಕರ ಜೊತೆ ಮುಂದಿನ ವಿಧಾನಸಭೆ ಚುನಾವಣೆ ಬಗ್ಗೆ ಸಭೆ ನಡೆಸಲಿದ್ದಾರೆ. 224 ಕ್ಷೇತ್ರಗಳ ಸಮಗ್ರ ವರದಿ ಅಮಿತ್ ಶಾ ಅವರ ಕೈಯಲ್ಲಿ ಇದ್ದು, ಅದರಲ್ಲಿ ಪಕ್ಷದ ಬಲ ಮತ್ತು ವಿಫಲತೆ ಬಗ್ಗೆ ಮಾಹಿತಿ ಇದೆ. ಯಾವ ಕ್ಷೇತ್ರದತ್ತ ಹೆಚ್ಚು ಗಮನ ನೀಡಬೇಕು ಎಂದು ಅಮಿತ್ ಶಾ ರಾಜ್ಯ ನಾಯಕರಿಗೆ ಸೂಚನೆ ನೀಡಲಿದ್ದಾರೆ.
ತಮ್ಮ ಮೂರು ದಿನಗಳ ಪ್ರವಾಸದ ವೇಳೆ ಅಮಿತ್ ಶಾ ಕಾರ್ಯಕರ್ತರು ಮುಂದಿನ ಆರು ತಿಂಗಳಿನಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಯೋಜನೆ ತಯಾರು ಮಾಡಿಕೊಡಲಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಅಮಿತ್ ಶಾ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.