ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಅಗ್ನಿ ಪರೀಕ್ಷೆ!
Recommended Video
ಬೆಂಗಳೂರು, ಡಿಸೆಂಬರ್ 29 : ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನವರು ಬಿಜೆಪಿ ನೀರು ಕುಡಿಸುತ್ತಾರೋ ಅಥವಾ ಬಿಜೆಪಿಯವರು ಕಾಂಗ್ರೆಸ್ಸಿಗೆ ನೀರು ಕುಡಿಸುತ್ತಾರೋ ಗೊತ್ತಿಲ್ಲ, ಆದರೆ, ವಿವಾದ ಇತ್ಯರ್ಥವಾಗದಿದ್ದರೆ ಜನರಂತೂ ಎರಡೂ ಪಕ್ಷಕ್ಕೆ ನೀರು ಕುಡಿಸುವುದು ಗ್ಯಾರಂಟಿ.
ಮಹದಾಯಿಗೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಯಡಿಯೂರಪ್ಪನವರಿಗೆ ಬರೆದಿರುವ 'ಅನಗತ್ಯ'ದ ಓಲೆ ಎರಡೂ ಪಕ್ಷಗಳ ನಾಯಕರನ್ನು ಕಂಗೆಡಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ ಯಡಿಯೂರಪ್ಪನವರ ಕುತ್ತಿಗೆಯನ್ನು ಈ ವಿವಾದ ಸುತ್ತಿಕೊಂಡಿದೆ.
ಡಿ.31ರಂದು ಬೆಂಗಳೂರಿಗೆ ಅಮಿತ್ ಶಾ, ಹಲವು ಸಭೆ
ಬೆಂಗಳೂರಿನಲ್ಲಿ ಸತತ ಐದು ದಿನಗಳ ಕಾಲ ಉತ್ತರ ಕರ್ನಾಟಕದ ರೈತರು, ಅವರ ಕುಟುಂಬಸ್ಥರು ಬಿಜೆಪಿ ಕಚೇರಿಯ ಎದಿರು ಪ್ರತಿಭಟನೆ ನಡೆಸಿ, ಬಿಜೆಪಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರಿಗೆ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದ್ದಾರೆ. ಯಡಿಯೂರಪ್ಪ ರೈತರೊಡನೆ ನಡೆಸಿದ ಸಂಧಾನ ವಿಫಲವಾಗಿತ್ತು.
ಈ ವಿವಾದದಿಂದ ಹೊರಬರುವುದು ಹೇಗೆ? ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುವುದರೊಳಗಾಗಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಹೇಗೆ? ಉಗ್ರ ಪ್ರತಿಭಟನೆಗೆ ಇಳಿದಿರುವ ಉತ್ತರ ಕರ್ನಾಟಕ ರೈತರಿಗೆ ಮನವರಿಕೆಯಾಗುವಂತೆ ಉತ್ತರ ನೀಡುವುದು ಹೇಗೆ?
ಬಹುಮತ ಪಡೆಯಲು ಪವಾಡವೇ ನಡೆಯಬೇಕಾದೀತು
ಈ ಪ್ರಶ್ನೆಗಳಿಗೆ ಶೀಘ್ರವೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪರಿಹಾರ ಕಂಡುಕೊಳ್ಳದಿದ್ದರೆ, ಕರ್ನಾಟಕದಲ್ಲಿ 150 ಕ್ಷೇತ್ರಗಳಿರಲಿ 80 ಕ್ಷೇತ್ರಗಳಲ್ಲಿ ಗೆಲ್ಲಲು ಪವಾಡವೇ ನಡೆಯಬೇಕಾದೀತು. ಇದೆಲ್ಲದರ ಬಗ್ಗೆ ಚರ್ಚಿಸಲು, ತಂತ್ರಗಾರಿಕೆ ಹೆಣೆಯುವುದರಲ್ಲಿ ನಿಸ್ಸೀಮರಾಗಿರುವ ಅಮಿತ್ ಅವರು ಬೆಂಗಳೂರಿಗೆ ಡಿಸೆಂಬರ್ 31ರಂದು ಆಗಮಿಸಲಿದ್ದಾರೆ.
ರಾಜಕೀಯ ತಾಕಲಾಟಗಳ ವಸ್ತುಸ್ಥಿತಿ
ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಉದ್ಭವವಾಗಿರುವ ರಾಜಕೀಯ ತಾಕಲಾಟಗಳ ವಸ್ತುಸ್ಥಿತಿಯೇನು, ಇದನ್ನು ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಮತ್ತು ಕೇಂದ್ರದ ಉಸ್ತುವಾರಿ ನಾಯಕರು ಹೇಗೆ ನಿಭಾಯಿಸಿದ್ದಾರೆ, ಮುಂದೆ ಕಂಡುಕೊಳ್ಳಬೇಕಾದ ಕ್ರಮಗಳೇನು ಎಂಬ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಸಂಘಟನೆ ಬಲಪಡಿಸಲು ಶಾಸಕರಿಗೆ ಜವಾಬ್ದಾರಿ
ಇದಲ್ಲದೆ, ಬಿಜೆಪಿಯ ಶಾಸಕರಿಗೆ, ಸಂಸದರಿಗೆ ಮತ್ತು ಮೇಲ್ಮನೆ ಸದಸ್ಯರಿಗೆ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಜವಾಬ್ದಾರಿಗಳನ್ನು ನೀಡಲಾಗಿದೆ. ಪ್ರತಿಯೊಬ್ಬ ಶಾಸಕ, ಸಂಸದನಿಗೆ ಎರಡೆರಡು ಕ್ಷೇತ್ರಗಳನ್ನು ನೀಡಲಾಗಿದ್ದರೆ, ಎಂಎಲ್ಸಿಗಳಿಗೆ ಒಂದೊಂದು ಕ್ಷೇತ್ರಗಳನ್ನು ವಹಿಸಲಾಗಿದೆ. ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಅಮಿತ್ ಶಾ ಪರಿಶೀಲಿಸಲಿದ್ದಾರೆ.
ಅಮಿತ್ ಶಾ ಕೂಡ ಪ್ರತಿಭಟನೆ ಎದುರಿಸಬೇಕಾದೀತು
ಬಿಜೆಪಿಯಿಂದ ಸಂತಸದ ಸುದ್ದಿಗಾಗಿ ಎದುರು ನೋಡುತ್ತಿರುವ ಉತ್ತರ ಕರ್ನಾಟಕದ ರೈತರನ್ನು ಅಮಿತ್ ಶಾ ಅವರು ಮತ್ತೆ ನಿರಾಶೆಗೊಳಿಸಿದರೆ, ಅವರು ಕೂಡ ಯಡಿಯೂರಪ್ಪನವರು ಎದುರಿಸಿದಂಥ ಪ್ರತಿಭಟನೆಯನ್ನೇ ಎದುರಿಸಬೇಕಾದೀತು ಎಂದು, ನವಲಗುಂದದಲ್ಲಿ ರೈತರ ಹೋರಾಟದ ನೇತೃತ್ವ ವಹಿಸಿರುವ ಜೆಡಿಎಸ್ ಶಾಸಕ ಕೋನ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಐದು ನಿಮಿಷಗಳಲ್ಲಿ ಬಗೆಹರಿಸಬಹುದಾದ ಸಮಸ್ಯೆ
ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ನಿರ್ದೇಶನ ನೀಡಿದರೆ ಕೇವಲ 5 ನಿಮಿಷದಲ್ಲಿ ಮಹದಾಯಿ ವಿವಾದ ಬಗೆಹರಿಯುತ್ತದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಷ್ಟೊಂದು ಬಾರಿ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯುವ ಅಗತ್ಯವೇ ಇರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಅವರು ಹೇಳಿಕೆ ನೀಡಿದ್ದಾರೆ.