ರಾಜ್ಯಕ್ಕೆ ಅಮಿತ್ ಶಾ: ಯಾರ ಯಾರ ತಲೆದಂಡ ಖಚಿತ?
ಬೆಂಗಳೂರು, ಮೇ 3: ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವ ಸಂದರ್ಭದಲ್ಲಿಯೇ ಬಿಜೆಪಿಯೊಳಗೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಡಿಸಿಷನ್ ಮೇಕರ್ ಆಗಿರುವ ಅಮಿತ್ ಶಾ ರಾಜ್ಯಕ್ಕೆ ಬಂದಿಳಿದಿದ್ದಾರೆ. ಈ ಮಧ್ಯೆ ಯಾರು ಯಾರ ತಲೆದಂಡ ಆಗುತ್ತದೆ ಎಂಬುದು ನಿರ್ಧಾರವಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಈಗಾಗಗಲೇ ಸರ್ಕಾರದೊಳಗೆ ಮತ್ತು ಬಿಜೆಪಿ ಪಕ್ಷದೊಳಗೆ ಅಧಿಕಾರ ಬದಲಾವಣೆಯ ಕೂಗು ಎದ್ದಿದೆ. ಈ ಮಧ್ಯೆಯೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ.ಎಲ್. ಸಂತೋಷ್ 'ನಾಯಕತ್ವ ಬದಲಾವಣೆ ಮತ್ತು ಹೊಸ ಮುಖಗಳಿಗೆ ಮಣೆ ಬಿಜೆಪಿಯ ಶಕ್ತಿ' ಎಂದು ಹೇಳಿರುವುದು ಬಿಜೆಪಿಯಲ್ಲಿ ಬಹುದೊಡ್ಡ ಬದಲಾವಣೆ ನಡೆಯಬಹುದು ಎಂಬುದಕ್ಕೆ ನಾಂದಿ ಹಾಡಿದಂತಿದೆ.
ನಾಯಕತ್ವ ಬದಲಾವಣೆಯತ್ತ ಗಮನ, ರಾಜ್ಯಕ್ಕೆ ಅಮಿತ್ ಶಾ ಆಗಮನ
ನಾಯಕತ್ವ ಬದಲಾವಣೆ ಅಥವಾ ತಲೆದಂಡ ಎಂಬುದು ಯಾವುದೋ ಒಂದೆರಡು ಸ್ಥಾನಗಳಿಗೆ ಸೀಮಿತವಾಗಿಲ್ಲ. ಚುನಾವಣೆಯ ರಣತಂತ್ರದ ಭಾಗವಾಗಿ ಬಿಜೆಪಿಯ ಸರ್ಕಾರದೊಳಗೆ ಮತ್ತು ಆ ಪಕ್ಷದೊಳಗೆ ಸಂಪೂರ್ಣ ಬದಲಾವಣೆ ತರುವತ್ತ ಯೋಚಿಸಲಾಗುತ್ತದೆ. ಈ ಕಾರಣದಿಂದಲೇ ಸ್ವತಃ ಅಮಿತ್ ಶಾ ರಾಜ್ಯಕ್ಕೆ ಬಂದು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಯಾರ ಯಾರ ತಲೆದಂಡ:
ಮುಂದಿನ ಚುನಾವಣೆಯ ದೃಷ್ಟಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಾನ ಬದಲಾವಣೆ ಆಗಬೇಕು ಎಂಬ ಕೂಗು ಹಲವು ತಿಂಗಳಿನಿಂದ ಕೇಳಿಬರುತ್ತಿದೆ. ಬೊಮ್ಮಾಯಿ ಅಧಿಕಾರಕ್ಕೆ ಬಂದು ಒಂಬತ್ತು ತಿಂಗಳು ಕಳೆದಿದೆ. ಈ ಮಧ್ಯೆ ಅವರನ್ನು ಬದಲಾಯಿಸಿ ಸಂಘ ಪರಿವಾರದ ಹಿನ್ನೆಲೆ ಇರುವವರನ್ನು ಮುಖ್ಯಮಂತ್ರಿ ಮಾಡಬೇಕು. ಆ ಮೂಲಕ ಚುನಾವಣೆಗೆ ಹೋದರೆ ಬಿಜೆಪಿಗೆ ಹೆಚ್ಚಿನ ಬಲ ಬಂದಂತಾಗುತ್ತದೆ. ಈಗಾಗಾಗಲೇ ಉತ್ತರಾಖಂಡ ಮತ್ತು ಗುಜರಾತ್ಗಳಲ್ಲಿ ಈ ಮಾದರಿ ಅನುಸರಿಸಲಾಗಿದೆ. ಅದೇ ಇಲ್ಲೂ ಪುನರಾವರ್ತನೆಯಾದರೆ ಮುಂದೆಯೂ ಅಧಿಕಾರ ಖಚಿತ ಎಂಬ ಮಾತು ಕೇಳಿಬರುತ್ತಿವೆ.
ಆದರೆ, ಹಿಂದೊಮ್ಮೆ ಅಮಿತ್ ಶಾ ಅವರೇ. '2023ರ ವಿಧಾನಸಭಾ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಎದುರಿಸಲಾಗುವುದು' ಎಂದು ಹೇಳಿಕೆ ನೀಡಿದ್ದೂ ಸಹ ಇದೆ. ಹೀಗಾಗಿ ಬೊಮ್ಮಾಯಿ ಅವರ ತಲೆದಂಡ ಆಗುತ್ತದೋ ಅಥವಾ ಅವರ ನೇತೃತ್ವದಲ್ಲಿಯೇ ಸರ್ಕಾರ ಮತ್ತು ಪಕ್ಷದೊಳಗೆ ಬದಲಾವಣೆ ಮಾಡಿ ಚುನಾವಣೆಗೆ ಹೋಗಲಾಗುತ್ತದೆಯೇ ಎಂಬುದನ್ನು ನೋಡಬೇಕು.
ಸಚಿವರಿಗೆ ಢವಢವ:
ಈ ಮಧ್ಯೆ ಬಸವರಾಜ ಬೊಮ್ಮಾಯಿ ಸಂಪುಟದ ಎಲ್ಲಾ ಸದಸ್ಯರ ಆಡಳಿತ ವೈಖರಿ ಮತ್ತು ಸಾಧನೆಯ ಬಗ್ಗೆ ಪ್ರತ್ಯೇಕ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಯಾರು ಪಾಸು, ಯಾರು ನಪಾಸು ಎಂಬುದು ಈಗಾಗಲೇ ಬಹುತೇಕ ಖಚಿತವಾದಂತಿದೆ. ದಕ್ಷ ಆಡಳಿತ ನಡೆಸದ, ಹೊಸ ಯೋಜನೆಗಳನ್ನು ಪರಿಚಯಿಸದ, ಪಕ್ಷವನ್ನು ಸಮರ್ಥಿಸದ, ಹುರುಪಿನಿಂದ ಕೆಲಸ ಮಾಡದ ಮತ್ತು ಜನಸಾಮಾನ್ಯರಿಗೆ ಆಪ್ತವಾಗಿರದ ಕೆಲವು ಸಚಿವರನ್ನು ಪಟ್ಟಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಅಂತವರನ್ನು ಕೈಬಿಟ್ಟು ಹೊಸದಾಗಿ ಪಕ್ಷವನ್ನು ಬಲಪಡಿಸುವ ಸಾಮಾರ್ಥ್ಯ ಇರುವಂತವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಆಲೋಚನೆ ಬಿಜೆಪಿ ನಾಯಕರಿಗೆ ಇದೆ.
ಕರ್ನಾಟಕದಲ್ಲಿ ಗುಜರಾತ್ ಮಾದರಿ ಪ್ರಯೋಗ, ಮುಗಿಯಿತೆ ಬೊಮ್ಮಾಯಿಗೆ ಸಿಎಂ ಯೋಗ
ಸದ್ಯ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇವೆ. ಈ ಮಧ್ಯೆ 10-12 ಅಸಮರ್ಥ ಸಚಿವರನ್ನು ಕೈಬಿಟ್ಟು ಒಟ್ಟಾರೆ 15 ಹೊಸ ಮುಖಗಳಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂಬ ಕೂಗು ಸಹ ಇದೆ. ಅದಕ್ಕೆ ಇಂದು ಅಮಿತ್ ಶಾ ಮುದ್ರೆ ಒತ್ತುತ್ತಾರಾ ಎಂಬುದನ್ನು ಕಾದು ನೋಡಬೇಕು.
ನಳಿನ್ ಕುಮಾರ್ ಕಟೀಲು ತಲೆದಂಡ?
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆಯೂ ಬಹುದಿನಗಳಿಂದ ಇದೆ. ಸದ್ಯ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಪ್ರಭಾವ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತ ಆಗುತ್ತಿದ್ದು, ಇಡೀ ರಾಜ್ಯದಲ್ಲಿ ಛಾಪು ಮೂಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು ಮತ್ತು ಆ ಸ್ಥಾನವನ್ನು ಹಿಂದುಳಿದ ವರ್ಗದವರಿಗೆ ನೀಡಬೇಕು. ಆಗ ಸಮತೋಲಿತ ಆಗಬಹುದು ಎಂಬ ಲೆಕ್ಕಾಚಾರ ಇದೆ.
ಅಭಿಪ್ರಾಯವಷ್ಟೇ ಸಂಗ್ರಹಿಸುವ ಅಮಿತ್ ಶಾ
ಈ ಮಧ್ಯೆ ಅಮಿತ್ ಶಾ ಅವರು ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿದ್ದು, ಮಂಗಳವಾರ ರಾತ್ರಿ ಮರಳಲಿದ್ದಾರೆ. ಈ ಮಧ್ಯೆ ಸರ್ಕಾರ ಮತ್ತು ಪಕ್ಷದೊಳಗೆ ಆಗಬೇಕಿರುವ ಬದಲಾವಣೆಗಳ ಬಗ್ಗೆ ಅಭಿಪ್ರಾಯ ಸಂಗ್ರಹವನ್ನಷ್ಟೇ ಮಾಡುತ್ತಾರೆ. ಇಂದು ಯಾವುದೇ ನಿರ್ಧಾರ ಇಲ್ಲ. ದೆಹಲಿಯಿಂದಲೇ ಎಲ್ಲವೂ ಘೋಷಣೆಯಾಗುವ ಸಾಧ್ಯತೆ ಇದೆ.