ರಾಜ್ಯ ಸರಕಾರ ಕೆಡವಲು ಅಮಿತ್ ಶಾ, ಮೋದಿ ನೇರ ಭಾಗಿ: ಸಿದ್ದರಾಮಯ್ಯ
ಬೆಂಗಳೂರು, ಜುಲೈ 2: ಕರ್ನಾಟಕದಲ್ಲಿ ಇರುವ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಸರಕಾರವನ್ನು ಕೆಡವಲು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇರವಾಗಿ ಭಾಗಿ ಆಗಿದ್ದಾರೆ. ಅವರ ಜತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಇದ್ದಾರೆ ಎಂದು ಮೈತ್ರಿ ಕೂಟದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಬಿಜೆಪಿಗೆ ನಮ್ಮ ಶಾಸಕರನ್ನು ಸೆಳೆಯುವ ಸಲುವಾಗಿ ಅವರು ಹಣ ಹಾಗೂ ಅಧಿಕಾರದ ಆಮಿಷ ಒಡ್ಡುತ್ತಿದ್ದಾರೆ. ಏನಾದರೂ ಆಗಲಿ, ರಾಜ್ಯ ಸರಕಾರವನ್ನು ಉರುಳಿಸಬೇಕು ಎಂಬುದು ಅವರ ಉದ್ದೇಶ. ಆದರೆ ಈ ಪ್ರಯತ್ನದಲ್ಲಿ ಅವರು ಖಂಡಿತಾ ಸಫಲರಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದ ಜನಕ್ಕೆ ರಾಜಕೀಯ ದೊಂಬರಾಟ ನೋಡೋ ಅನಿವಾರ್ಯತೆ!
ರಾಜ್ಯ ಸರಕಾರಕ್ಕೆ ಯಾವುದೇ ಆತಂಕ ಇಲ್ಲ. ಆ ಇಬ್ಬರು ಶಾಸಕರು ಬಿಜೆಪಿಯನ್ನು ಸೇರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಸೋಮವಾರದಂದು ಬಳ್ಳಾರಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ಗೋಕಾಕ್ ನ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನಷ್ಟು ಅಸಮಾಧಾನಿತರು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ರಾಜೀನಾಮೆ ಸಲ್ಲಿಸಬಹುದು ಎಂಬ ಸುದ್ದಿ ಹರಿದಾಡುತ್ತಿದ್ದು, ಇದನ್ನು ಸಿದ್ದರಾಮಯ್ಯ ನಿರಾಕರಿಸಿದ್ದಾರೆ.