ಭಾರೀ ಕುತೂಹಲಕ್ಕೀಡು ಮಾಡಿದ ಪ್ರಲ್ಹಾದ್ ಜೋಶಿ ನಡೆ!
ಕೊನೆಯ ಕ್ಷಣದವರೆಗೂ ಬಿಜೆಪಿ ವರಿಷ್ಠರು ರಹಸ್ಯವನ್ನು ಬಿಟ್ಟುಕೊಡದೇ ಇರುವುದರಿಂದ, ಯಡಿಯೂರಪ್ಪನವರು ರಾಜೀನಾಮೆ ನೀಡುತ್ತಾರಾ, ಒಂದು ವೇಳೆ ರಾಜೀನಾಮೆ ನೀಡಿದರೆ ಅವರ ಸ್ಥಾನಕ್ಕೆ ಯಾರು ಸಿಎಂ ಆಗಿ ನಿಯೋಜಿತಗೊಳ್ಳಲಿದ್ದಾರೆ ಎನ್ನುವ ಕುತೂಹಲ ಹಾಗೇ ಮುಂದುವರಿದಿದೆ.
ಸಿಎಂ ಸ್ಥಾನಕ್ಕೆ ನಾಲ್ಕು ಜನರ ಹೆಸರು ಕೇಳಿ ಬರುತ್ತಿತ್ತು, ಈಗ ಅದು ಆರಕ್ಕೇರಿದೆ. ಎಲ್ಲಾ ಅನಧಿಕೃತ ಸುದ್ದಿಗಳಾಗಿರುವುದರಿಂದ, ಮುಂದಿನ ವರಿಷ್ಠರ ನಡೆಯ ಸಸ್ಪೆನ್ಸ್ ಏನೆಂದು ಯಾರಿಗೂ ತಿಳಿದಿಲ್ಲ.
ಪ್ರಹ್ಲಾದ್ ಜೋಶಿ ಭೇಟಿಯಾದ ಬಸವರಾಜ ಬೊಮ್ಮಾಯಿ!
ರಾಜ್ಯದ ಮುಂದಿನ ರಾಜಕೀಯ ಚಿತ್ರಣ ಏನು ಎನ್ನುವುದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರಾಧ್ಯಕ್ಷ ನಡ್ಡಾ, ಈ ಮೂವರಿಗೆ ಬಿಟ್ಟರೆ, ಬೇರೆ ಯಾರಿಗೂ ತಿಳಿದಿಲ್ಲ ಎನ್ನುವುದು ವಾಸ್ತವತೆ.
ಬೆಳಗಾವಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ, ಭಾನುವಾರ (ಜುಲೈ 25) ಸಂಜೆಯೊಳಗೆ ವರಿಷ್ಠರಿಂದ ಸಂದೇಶ ಬರಲಿದೆ ಎಂದು ಹೇಳಿದ್ದಾರೆ. ಈ ನಡುವೆ, ನೂತನ ಸಿಎಂ ಹೆಸರಿನ ಪಟ್ಟಿಯಲ್ಲಿ ಮಂಚೂಣಿಯಲ್ಲಿರುವ ಪ್ರಲ್ಹಾದ್ ಜೋಶಿ ಭಾರೀ ಕುತೂಹಲಕ್ಕೀಡು ಮಾಡಿದೆ.
ಸಿಎಂ ರೇಸಿನಲ್ಲಿ ನನ್ನ ಹೆಸರೂ ಇದೆ ಎಂದು ಮಾಧ್ಯಮದವರ ಸುದ್ದಿಯ ನಂತರ ಗೊತ್ತಾಗಿದೆ
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಪ್ರಲ್ಹಾದ್ ಜೋಶಿ, "ನನಗೆ ಹೈಕಮಾಂಡಿನಿಂದ ಯಾವುದೇ ಸೂಚನೆ ಬಂದಿಲ್ಲ. ಸಿಎಂ ರೇಸಿನಲ್ಲಿ ನನ್ನ ಹೆಸರೂ ಇದೆ ಎಂದು ಮಾಧ್ಯಮದವರ ಸುದ್ದಿಯ ನಂತರವಷ್ಟೇ ನನಗೆ ಗೊತ್ತಾಗಿದೆ"ಎಂದು ಪ್ರಲ್ಹಾದ್ ಜೋಶಿ ಹೇಳಿದ್ದರು. ಹೀಗೆ ಹೇಳುವಾಗ ಅವರ ನಗು, ಹಲವು ಸಂದೇಹಕ್ಕೆ ಕಾರಣವಾಗಿತ್ತು.
ಬಸವರಾಜ ಬೊಮ್ಮಾಯಿ ದಿಢೀರ್ ಎಂದು ಜೋಶಿ ಹುಬ್ಬಳ್ಳಿಯಲ್ಲಿ ಭೇಟಿ
ಇದರ ಜೊತೆಗೆ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ದಿಢೀರ್ ಎಂದು ಜೋಶಿಯವರನ್ನು ಹುಬ್ಬಳ್ಳಿಯಲ್ಲಿ ಭೇಟಿಯಾಗಿದ್ದರು. ಅಧಿವೇಶನದ ನಡುವಿನ ರಜೆಯ ವೇಳೆ ತಮ್ಮ ಸ್ವಕ್ಷೇತ್ರ ಹುಬ್ಬಳ್ಳಿಗೆ ಆಗಮಿಸಿರುವ ಜೋಶಿ, ತಮ್ಮ ಲೋಕಸಭಾ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಿಂದ ಬೆಂಗಳೂರಿನತ್ತ ದಿಢೀರ್ ಪ್ರಯಾಣ
ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಿಂದ ಬೆಂಗಳೂರಿನತ್ತ ದಿಢೀರ್ ಪ್ರಯಾಣ ಬೆಳೆಸಿದ್ದಾರೆ. ಸಂಜೆಯೊಳಗೆ ವರಿಷ್ಠರ ಸಂದೇಶ ಬರಲಿದೆ ಎಂದು ಬಿಎಸ್ವೈ ಹೇಳಿರುವುದು, ಸಿಎಂ ರೇಸಿನಲ್ಲಿ ಮಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರು ಜೋಶಿಯವರದ್ದಾಗಿರುವುದರಿಂದ, ಜೋಶಿಯವರ ನಡೆ ಕುತೂಹಲಕ್ಕೀಡು ಮಾಡಿದೆ.
ನನಗೇನು ಮಾಹಿತಿಯಿಲ್ಲ ಎಂದೇ ಗೌಪ್ಯತೆಯನ್ನು ಕಾಪಾಡಿದ ಜೋಶಿ
ಬೆಂಗಳೂರಿಗೆ ತೆರಳುವ ವೇಳೆ ಮಾಧ್ಯಮದವರ ಪ್ರಶ್ನೆಗೆ ಪ್ರಲ್ಹಾದ್ ಜೋಶಿ ಸರಿಯಾಗಿ ಉತ್ತರಿಸಲಿಲ್ಲ. ನನಗೇನು ಮಾಹಿತಿಯಿಲ್ಲ ಎಂದೇ ಗೌಪ್ಯತೆಯನ್ನು ಕಾಪಾಡುವುದಕ್ಕೆ ಜೋಶಿ ಮುಂದಾಗಿರುವುದು ಅತ್ಯಂತ ಸ್ಪಷ್ಟವಾಗಿದೆ. ಒಟ್ಟಿನಲ್ಲಿ, ಬಿಎಸ್ವೈ ಹೇಳಿದಂತೆ ಹೈಕಮಾಂಡ್ ಸಂದೇಶ ಬಂದರೆ ಎಲ್ಲವೂ ತಿಳಿಯಾಗಲಿದೆ.
Recommended Video