ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
ಬೆಂಗಳೂರು, ಏಪ್ರಿಲ್ 14: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ರೆಮ್ಡೆಸಿವಿರ್ ಔಷಧಿಗಳೆಲ್ಲ ಖಾಲಿ ಆಗುತ್ತಿದ್ದು, ತೀವ್ರ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಔಷಧಿ ಅಭಾವದ ಕುರಿತು ಇಂಡಿಯಾ ಟುಡೆ ವಿಶೇಷವಾಗಿ ವರದಿ ಮಾಡಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಆಫ್ತಾಬ್ ಎಂಬ ವ್ಯಕ್ತಿಯ ಚಿಕಿತ್ಸೆಗೆ ರೆಮ್ಡೆಸಿವಿರ್ ಔಷಧಿ ಇಲ್ಲದಂತಾಗಿದೆ. "ನಿಮ್ಮ ಬಳಿ ಔಷಧಿ ಇದೆಯೇ? ದಯವಿಟ್ಟು ನನಗೆ ತಿಳಿಸಿ, 10000 ರೂಪಾಯಿ ಕೊಟ್ಟಾದರೂ ನಾನು ಅದನ್ನು ಖರೀದಿಸುತ್ತೇನೆ" ಎಂದು ವ್ಯಕ್ತಿ ಹೇಳಿದ್ದಾರೆ.
Explained: ಭಾರತದಲ್ಲಿ ಭಯ ಹುಟ್ಟಿಸುತ್ತಿರುವುದೇಕೆ ಕೊರೊನಾವೈರಸ್?
ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಕೊರೊನಾವೈರಸ್ ಸೋಂಕಿನ ಹರಡುವಿಕೆ ಆತಂಕದ ನಡುವೆ ರೆಮ್ಡೆಸಿವಿರ್ ಔಷಧಿ ಅಭಾವ ಎದ್ದು ಕಾಣುತ್ತಿದೆ. 12000ಕ್ಕೂ ಹೆಚ್ಚು ರೆಮ್ಡೆಸಿವಿರ್ ಔಷಧಿಯ ಬಾಟಲಿಗಳು ಬೇಕಾಗಿರುವ ಸ್ಥಳಗಳಲ್ಲಿ ಕೇವಲ 578 ಔಷಧಿಯ ಬಾಟಲಿಗಳು ಲಭ್ಯವಿದೆ.
ಸಿಲಿಕಾನ್ ಸಿಟಿಯಲ್ಲಿ ರೆಮ್ಡೆಸಿವಿರ್ ಔಷಧಿಗೆ ಹೆಚ್ಚಿದ ಬೇಡಿಕೆ
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆ ನಡುವೆ ರೆಮ್ಡೆಸಿವಿರ್ ಔಷಧಿಗೆ ಬೇಡಿಕೆ ಹೆಚ್ಚಾಗಿದೆ. ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇಸ್ಮಾಯಿಲ್ ಎಂಬುವವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿನಿತ್ಯ 15-20 ರೋಗಿಗಳಿಗೆ ರೆಮ್ಡೆಸಿವಿರ್ ಔಷಧಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ನಗರದಲ್ಲಿ ಅಷ್ಟೊಂದು ಪ್ರಮಾಣದ ಔಷಧಿಯು ಲಭ್ಯವಿಲ್ಲ. ಕೊರೊನಾವೈರಸ್ ಸೋಂಕಿತರ ಪ್ರಾಣ ಉಳಿಸುವ ಔಷಧಿಗಳನ್ನು ರಾಯಚೂರು ಮತ್ತು ಬೀದರ್ ಜಿಲ್ಲೆಗಳಿಂದ ಪಡೆದುಕೊಳ್ಳಲಾಗುತ್ತಿದೆ.
8-10 ದಿನಗಳ ಮೊದಲೇ ಲಸಿಕೆ ಅಭಾವದ ಬಗ್ಗೆ ಮುನ್ಸೂಚನೆ
ಬೆಂಗಳೂರಿನಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ನಂತರದಲ್ಲಿ ಏನು ಮಾಡುವುದು ಎಂಬ ಬಗ್ಗೆ ಗೊತ್ತಾಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಸಂಘ(PHANA)ದ ಕಾರ್ಯದರ್ಶಿ ಡಾ. ರಾಜಶೇಖರ್ ವೈ ಎಲ್ ತಿಳಿಸಿದ್ದಾರೆ. 8-10 ದಿನಗಳ ಹಿಂದೆ ಫಾನಾ ಸರ್ಕಾರಕ್ಕೆ ಔಷಧಿಗಳ ಬಿಕ್ಕಟ್ಟು ಸೃಷ್ಟಿಯಾಗುವ ಬಗ್ಗೆ ಮನವರಿಕೆ ಮಾಡಿತ್ತು. ಬೆಂಗಳೂರಿನ 60 ಆಸ್ಪತ್ರೆಗಳಲ್ಲಿ 12000 ಬಾಟಲಿಗಳ ಅಗತ್ಯತೆ ಇರುವ ಸ್ಥಳದಲ್ಲೇ ಕೇವಲ 578 ಲಸಿಕೆ ಬಾಟಲಿಗಳಿವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೂರು ಕಂಪನಿಗಳು ಔಷಧಿ ಉತ್ಪಾದಿಸುತ್ತಿವೆ
ಕರ್ನಾಟಕದಲ್ಲಿ ರೆಮ್ಡೆಸಿವಿರ್ ಔಷಧಿಗೆ ಯಾವುದೇ ರೀತಿ ಅಭಾವವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. ರಾಜ್ಯದಲ್ಲಿ ಮೂರು ಕಂಪನಿಗಳು ಈ ಔಷಧಿಯನ್ನು ಉತ್ಪಾದಿಸುತ್ತಿವೆ. ಸರ್ಕಾರವು ಅಗತ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಗಳಿಗೂ ಔಷಧಿಯನ್ನು ಪೂರೈಕೆ ಮಾಡಲಾಗುವುದು. ಯಾರಿಗೆ ರೆಮ್ಡೆಸಿವಿರ್ ಔಷಧಿಯು ಅಗತ್ಯವಿದೆ ಎಂಬುದರ ಬಗ್ಗೆ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 11265 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1094912ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಒಂದೇ ದಿನ 38 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 13046ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 4364 ಸೋಂಕಿತರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 996367 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 85480 ಸಕ್ರಿಯ ಪ್ರಕರಣಗಳಿವೆ.
Recommended Video
ರಾಜ್ಯ ರಾಜಧಾನಿಯಲ್ಲಿ ಮುಂದುವರಿದೆ ಕೊರೊನಾ ಆರ್ಭಟ
ಕರ್ನಾಟಕದಲ್ಲಿ ಪತ್ತೆಯಾದ ಒಟ್ಟು ಹೊಸ ಪ್ರಕರಣಗಳ ಪೈಕಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ಬೆಂಗಳೂರಿನಲ್ಲೇ ದೃಢಪಟ್ಟಿವೆ. ಒಂದು ದಿನದಲ್ಲಿ ಸಿಲಿಕಾನ್ ಸಿಟಿಯಲ್ಲೇ 8155 ಮಂದಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಮಹಾಮಾರಿಗೆ 23 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 4933ಕ್ಕೆ ಏರಿಕೆಯಾಗಿದೆ. ರಾಜ್ಯ ರಾಜಧಾನಿಯೊಂದರಲ್ಲೇ 63167 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.