ಆಂಬಿಡೆಂಟ್ ಪ್ರಕರಣ ಇಂದು ಮಹತ್ವದ ವಿಚಾರಣೆ, ರೆಡ್ಡಿಗೆ ಮತ್ತೆ ಭೀತಿ?
ಬೆಂಗಳೂರು, ನವೆಂಬರ್ 15: ಆಂಬಿಡೆಂಟ್ ಪ್ರಕರಣವನ್ನು ಸಿಸಿಬಿ ಬೆನ್ನು ಬಿಡುವ ಯಾವ ಲಕ್ಷಣವೂ ಇಲ್ಲ. ಇಂದು ಸಹ ಪ್ರಕರಣಕ್ಕೆ ಸೇರಿದ ಇಬ್ಬರು ಪ್ರಮುಖರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಮಹತ್ವದ ಸಾಕ್ಷ್ಯ ಕಲೆ ಹಾಕಿದ್ದಾರೆ.
ಜನಾರ್ದನ ರೆಡ್ಡಿ ಅವರು ಆಂಬಿಡೆಂಟ್ ಪ್ರಕರಣದಲ್ಲಿ ಲಂಚ ಪಡೆದಿದ್ದಾರೆ ಎಂಬ ಆರೋಪದಲ್ಲಿ ಪ್ರಮುಖ ಸಾಕ್ಷ್ಯಿ ಆಗಿರುವ ಬಳ್ಳಾರಿಯ ರಾಜ್ಮಹಲ್ ಜ್ಯುವೆಲರ್ಸ್ ಮಾಲೀಕ ರಮೇಶ್ ಹಾಗೂ ಅವರ ಅಣ್ಣನನ್ನು ಸಿಸಿಬಿ ಇಂದು ವಿಚಾರಣೆಗೆ ಒಳಪಡಿಸಿದರು.
ವಿಚಾರಣೆ ಮಾತ್ರವಲ್ಲದೆ ರಮೇಶ್ ಅವರ ಅಣ್ಣನಿಂದ ಆಂಬಿಡೆಂಟ್ ಪ್ರಕರಣಕ್ಕೆ ಸೇರಿದ್ದು ಎನ್ನಲಾದ 1.5 ಕೋಟಿ ಹಣವನ್ನೂ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಷ್ಟೆ ಅಲ್ಲದೆ ರೆಡ್ಡಿ ಅವರು ಪಡೆದಿದ್ದಾರೆ ಎನ್ನಲಾಗಿರುವ ಭಾರಿ ಮೊತ್ತದ ಚಿನ್ನದ ಬಗ್ಗೆಯೂ ರಮೇಶ್ ಮಹತ್ವದ ಸುಳಿವು ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ.
ಬ್ರಿಜೇಶ್ ರೆಡ್ಡಿ ರಿಟ್ ವಾಪಸ್
ಮತ್ತೊಂದೆಡೆ ಪ್ರಕರಣದ ಮತ್ತೊಬ್ಬ ಆರೋಪಿ ಬ್ರಿಜೇಷ್ ರೆಡ್ಡಿ, ಸಿಸಿಬಿ ಮೇಲೆ ಹಾಕಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯದಲ್ಲಿ ವಾಪಸ್ ಪಡೆದಿದ್ದಾರೆ. ಸಿಸಿಬಿ ತನಗೆ ಕಿರುಕುಳ ನೀಡುತ್ತಿದೆ ಎಂದು ಅವರು ರಿಟ್ ಹಾಕಿದ್ದರು. ಅದರ ವಿಚಾರಣೆ ಇಂದು ನಡೆಯಿತು ಈ ನಡುವೆ ಅವರು ಸ್ವಯಂ ಪ್ರೇರಿತವಾಗಿ ರಿಟ್ ವಾಪಸ್ ಪಡೆದು ವಿಚಾರಣೆಗೆ ಸಹಕರಿಸುವುದಾಗಿ ಹೇಳಿದ್ದಾರೆ.
ಅಲಿಖಾನ್ನಿಂದ ಚಿನ್ನ ಪಡೆದಿದ್ದೇನೆ ಎಂದ ರಮೇಶ್?
ಇಂದು ವಿಚಾರಣೆ ಎದುರಿಸಿದ ರಮೇಶ್ ಅವರು ತಾವು ಅಲಿಖಾನ್ ನಿಂದ ಚಿನ್ನ ಪಡೆದಿರುವುದು ನಿಜ ಎಂದು ಸಿಸಿಬಿ ಮುಂದೆ ಹೇಳಿಕೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಅಲಿಖಾನ್ ರೆಡ್ಡಿ ಅವರ ಆಪ್ತರಾಗಿದ್ದು, ಹೇಳಿಕೆ ನಿಜವೇ ಆಗಿದ್ದರೆ ರೆಡ್ಡಿ ಅವರಿಗೆ ಮತ್ತೆ ಭೀತಿ ಶುರುವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಅಫಿಡವಿಟ್ ಬರೆದುಕೊಟ್ಟಿರುವ ಅಲಿಖಾನ್
ಆಂಬಿಡೆಂಟ್ ಮಾಲೀಕ ಫರೀದ್ ಅವರ ಬಳಿಯಿಂದ ಆಂಬಿಡೆಂಟ್ ಹಣವಾದ 18 ಕೋಟಿ ಹಣವನ್ನು ತಾನು ಪಡೆದಿರುವುದಾಗಿ ಅಲಿಖಾನ್ ಅಫಿಡವಿಟ್ ಬರೆದುಕೊಟ್ಟಿದ್ದು ಅದನ್ನು ಹತ್ತು ದಿನಗಳ ಒಳಗಾಗಿ ವಾಪಸ್ ನೀಡುವುದಾಗಿಯೂ ಹೇಳಿದ್ದಾರೆ. ಆ ಹಣವನ್ನು ಹರಕೆ ತೀರಿಸಲು ಬಳಸಿರುವುದಾಗಿ ಅಲಿಖಾನ್ ಸಿಸಿಬಿ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.
ಅಲಿಖಾನ್ ಹರಕೆಯ ಕುರಿ
ಪ್ರಕರಣದ ತನಿಖೆ ಆಳಕ್ಕಿಳಿದಷ್ಟೂ ಲಂಚ ಪಡೆದ ಮುಖ್ಯ ಆರೋಪಿಯನ್ನು ಬಚಾವ್ ಮಾಡಲು ಅಲಿಖಾನ್ ಅವರನ್ನು ಹರಕೆಯ ಕುರಿ ಮಾಡಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ರೆಡ್ಡಿ ಆಪ್ತನಾಗಿರುವ ಅಲಿಖಾನ್ ತಾನೇ ಹಣವನ್ನು ಸ್ವ ಇಚ್ಛೆಯಿಂದ ಪಡೆದಿರುವುದಾಗಿ ಹೇಳಿಕೆ ನೀಡಿದ್ದಾರೆ ಅಷ್ಟೆ ಅಲ್ಲದೆ ಹಣವನ್ನು ವಾಪಸ್ ಮಾಡುವುದಾಗಿಯೂ ಹೇಳಿರುವುದು ಈ ಅನುಮಾಣಕ್ಕೆ ಕಾರಣವಾಗಿದೆ.