ಮಂಡ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸುತ್ತಿದೆ ಅಂಬರೀಶ್ ನಡೆ!
Recommended Video
ಮಂಡ್ಯ, ಜನವರಿ 06: ಇದುವರೆಗೆ ತಟಸ್ಥವಾಗಿದ್ದ ಮಾಜಿ ಸಚಿವ, ಶಾಸಕರೂ ಆಗಿರುವ ನಟ ಅಂಬರೀಶ್ ಅವರು ವಿಧಾನಸಭಾ ಚುನಾವಣೆ ಬರುತ್ತಿದ್ದಂತೆಯೇ ಚುರುಕಾಗಿದ್ದಾರೆ. ಇದೀಗ ಮಂಡ್ಯದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆರಂಭಿಸಿದ್ದು ಎಲ್ಲರೂ ಅಚ್ಚರಿಯಿಂದ ನೋಡುವಂತಾಗಿದೆ.
ಮಂಡ್ಯದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಅವರನ್ನು ಸಂಪುಟ ಪುನರ್ರಚನೆ ವೇಳೆ ಕೈಬಿಡಲಾಗಿತ್ತು. ಇದರಿಂದ ಮುನಿಸಿಕೊಂಡಿದ್ದ ಅವರು ದೂರವಾಗಿಯೇ ಉಳಿದು ಬಿಟ್ಟಿದ್ದರು. ಸದನಕ್ಕೂ ಹೋಗದೆ, ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸದೆ ತಟಸ್ಥ ಧೋರಣೆಯನ್ನು ತಳೆದು ಬಿಟ್ಟಿದ್ದರು. ಇದು ಕ್ಷೇತ್ರದ ಜನರ ಅಸಮಾಧಾನಕ್ಕೂ ಕಾರಣವಾಗಿತ್ತು.
4 ಪ್ರಶ್ನೆ ಕೇಳಿದ ಅಂಬರೀಶಣ್ಣಂಗೆ ಇಪ್ಪತ್ತೆಂಟು ಪ್ರಶ್ನೆ
ಆದರೆ ಈಗ ಎಲ್ಲವನ್ನೂ ಕೊಡವಿಕೊಂಡು ಮೇಲೆದ್ದಿರುವ ಅಂಬರೀಶ್ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ. ಶುಕ್ರವಾರ ಮಂಡ್ಯದ ನಗರಸಭೆ ಆವರಣದಲ್ಲಿ ನಗರಸಭೆ ವತಿಯಿಂದ ನಡೆದ ಅಮೃತ ಭವನ ಶಂಕುಸ್ಥಾಪನೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಸವಲತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದಿದ್ದಾರೆ.
ಹೊಗಳಿದರೆ ಹಿಗ್ಗೋಲ್ಲ, ತೆಗಳಿದರೆ ಕುಗ್ಗೋಲ್ಲ!
ಕಾರ್ಯಕ್ರಮದಲ್ಲಿ ಮಾತನಾಡಿದ ರೆಬೆಲ್ ಸ್ಟಾರ್ ಅಂಬರೀಶ್, 'ಚುನಾವಣೆ ಹಿನ್ನೆಲೆಯಲ್ಲಿ ಶಂಕುಸ್ಥಾಪನೆ ಮಾಡಲು ಬಂದಿದ್ದೇನೆ ಎಂದು ತಿಳಿಯಬೇಡಿ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನೂ ಮಾಡಿಸುವೆ' ಎಂದು ಚಟಾಕಿ ಹಾರಿಸಿದ್ದಾರೆ! 'ಅಭಿವೃದ್ಧಿ ವಿಚಾರದಲ್ಲಿ ನನ್ನನ್ನು ಬೈಯ್ಯುವವರೂ ಇದ್ದಾರೆ. ಹೊಗಳುವವರೂ ಇದ್ದಾರೆ. ಬೈಯ್ದಾಗ ಕುಗ್ಗಿಲ್ಲ, ಹೊಗಳಿದಾಗ ಹಿಗ್ಗಿಲ್ಲ. ನನ್ನ ಕೈಲಾದ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ' ಎಂದರು!
ಟೀಕಿಸುವವರಿಗೆ ತಿರುಗೇಟು!
ಜಿಲ್ಲೆಯ ಅಭಿವೃದ್ಧಿ ಕೆಲಸಗಳಲ್ಲಿ ನನ್ನ ಪಾಲೂ ಇದೆ. ಸಂಸದನಾಗಿ, ಶಾಸಕನಾಗಿ ನನ್ನ ಕೈಲಾದಷ್ಟು ಕೊಡುಗೆಗಳನ್ನು ಜಿಲ್ಲೆಗೆ ನೀಡಿದ್ದೇನೆ. ಅದನ್ನು ಪಟ್ಟಿ ಮಾಡುವುದಿಲ್ಲ. ನಾನು ಮಾಡಿರುವ ಕೆಲಸಗಳು ಜನರಿಗೆ ಗೊತ್ತಾದರೆ ಸಾಕು. ಬೇರೆಯವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರನ್ನು ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಅಂಬರೀಶ್, ರಮ್ಯಾ ಮುಖಾಮುಖಿ ಸ್ಪರ್ಧೆ?
ಎಲ್ಲವನ್ನೂ ನಾನೇ ಮಾಡಿದರೆ ದೇವರಾಗುತ್ತೇನೆ!
"ಜನರು ನನ್ನನ್ನು ಮೂರು ಬಾರಿ ಲೋಕಸಭೆಗೆ ಆಯ್ಕೆ ಮಾಡಿ, ಕೇಂದ್ರ ಸಚಿವ ಹುದ್ದೆಗೇರಿಸಿದ್ದರು. ವಿಧಾನಸಭೆಗೂ ಆಯ್ಕೆ ಮಾಡಿ ಸಚಿವ ಸ್ಥಾನ ದೊರಕಿಸಿಕೊಟ್ಟು ಪ್ರೀತಿ ತೋರಿಸಿದ್ದಾರೆ. ಆ ಜನರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿರುವ ನಾನು ಅವರಿಗೋಸ್ಕರ ಸರ್ಕಾರದ ನೆರವಿನೊಂದಿಗೆ ಹಲವು ಅನುಕೂಲಗಳನ್ನು ಕಲ್ಪಿಸಿಕೊಟ್ಟಿದ್ದೇನೆ. ಆದರೂ ಅವರ ಋಣ ತೀರಿಸಲಾಗಿಲ್ಲ ಎಂಬ ಬೇಸರವಿದೆ. ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನನ್ನೊಬ್ಬನಿಂದ ಮಾಡಲು ಸಾಧ್ಯವಿಲ್ಲ. ಎಲ್ಲವನ್ನೂ ನಾನೇ ಮಾಡಿದರೆ ದೇವರಾಗಿ ಬಿಡುತ್ತೇನೆ" ಎಂದು ಅಭಿಮಾನಿಗಳ ಸಿಳ್ಳೆಗಿಟ್ಟಿಸಿಕೊಂಡರು!
ಹೊಸ ಬೆಳವಣಿಗೆಯ ಅರ್ಥವೇನು?
ಅಂಬರೀಶ್ ಮತ್ತೆ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಬೆಳವಣಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅಂಬರೀಶ್ ಕೂಡ ಆಕಾಂಕ್ಷಿ ಎಂಬುದನ್ನು ತೋರಿಸುತ್ತಿದೆ. ಅವರ ಈಗಿನ ನಡೆಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಚಟುವಟಿಕೆಯನ್ನು ಇನ್ನಷ್ಟು ಚುರುಕುಗೊಳಿಸುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.