ಅಂಬರೀಶ್ ನಿಧನ: ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ
ಬೆಂಗಳೂರು, ನ 25: ಮಾಜಿ ಕೇಂದ್ರ ಸಚಿವ ಮತ್ತು ನಟ ಅಂಬರೀಶ್ ನಿಧನದ ಹಿನ್ನಲೆಯಲ್ಲಿ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯದ ಅಂಗಡಿಗಳನ್ನು ನಿಷೇಧಿಸಿ ಬೆಂಗಳೂರು ನಗರ ಕಮಿಷನರ್ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಸಂಖ್ಯೆ ಗು.ವಾ/ಎಸ್ಬಿ/ಮದ್ಯ ಮಾರಾಟ ನಿಷೇಧ/47/2018 ದಿನಾಂಕ 25.11.2018, ಆದೇಶದ ಮೂಲಕ, ಕಮಿಷನರ್ ಈ ಆದೇಶ ಹೊರಡಿಸಿದ್ದಾರೆ. ದಿನಾಂಕ 25.11.2018 ಬೆಳಗ್ಗೆ ಆರು ಗಂಟೆಯಿಂದ, 26.11.2018ರ ಮಧ್ಯರಾತ್ರಿಯವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ.
LIVE: ಅಂಬರೀಶ್ ನಿಧನದಿಂದ ನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ
ಅಂಬರೀಶ್ ಅವರ ಅಂತ್ಯಕ್ರಿಯೆಯ ಸಂಬಂಧ, ಸಾವಿರಾರು ಜನರು ಸೇರುತ್ತಿದ್ದು, ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಈ ಆದೇಶವನ್ನು ಜಾರಿಗೆ ತರಲಾಗಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಅಂತಿಮಯಾತ್ರೆಯ ವೇಳೆ, ಕಿಡಿಗೇಡಿಗಳು, ಮದ್ಯಪಾನದ ಅಮಲಿನಲ್ಲಿ, ದುಷ್ಕೃತ್ಯವನ್ನು ನಡೆಸಿ, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವವಿರುವುದಾಗಿ ಗುಪ್ತವಾರ್ತಾ ವಿಭಾಗದ ಮಾಹಿತಿಯಿಂದ ತಿಳಿದುಬಂದಿರುವುದರಿಂದ, ಈ ಆದೇಶವನ್ನು ಹೊರಡಿಸಲಾಗಿದೆ.
ಅಂಬರೀಶ್ ಅಭಿಮಾನಿಗಳಿಗೆ ಮನವಿ ಮಾಡಿದ ಕುಮಾರಸ್ವಾಮಿ
ಗುಪ್ತಚರ ಇಲಾಖೆಯ ಮಾಹಿತಿಯಲ್ಲಿ ಸತ್ಯಾಂಶವಿರುವುದರಿಂದ, ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಎರಡು ದಿನ ನಿಷೇಧಿಸಿ, ಆದೇಶವನ್ನು ಹೊರಡಿಸುತ್ತಿದ್ದೇವೆ ಎಂದು ಕಮಿಷನರ್ ಹೇಳಿದ್ದಾರೆ.